ಲಿಂಗಾಯತ ಪ್ರತ್ಯೇಕ ಧರ್ಮ: ಪೇಜಾವರ ಶ್ರೀಗಳೇ ನಿಮ್ಮ ಸಲಹೆಯ ಅಗತ್ಯವಿಲ್ಲ
ಲಿಂಗಾಯತ ಮತ್ತು ವೀರಶೈವ ಧರ್ಮಗಳು ಬೇರೆ ಬೇರೆ ಧರ್ಮವಾಗುವುದಕ್ಕೆ ಕಳವಳ ವ್ಯಕ್ತಪಡಿಸುತ್ತಿರುವ ಉಡುಪಿ ಪೇಜಾವರ ಶ್ರೀಗಳ ಹೇಳಿಕೆಗೆ, ರಾಜ್ಯ ಜಲಸಂಪನ್ಮೂಲ ಖಾತೆಯ ಸಚಿವ ಎಂ ಬಿ ಪಾಟೀಲ್ ಕಿಡಿಕಾರಿದ್ದಾರೆ.
ಬೆಂಗಳೂರು, ಜುಲೈ 25: ಲಿಂಗಾಯತ ಮತ್ತು ವೀರಶೈವ ಧರ್ಮಗಳು ಬೇರೆ ಬೇರೆ ಧರ್ಮವಾಗುವ ವಿಚಾರದಲ್ಲಿನ ಕೂಗಿಗೆ ಕಳವಳ ವ್ಯಕ್ತಪಡಿಸುತ್ತಿರುವ ಉಡುಪಿ ಪೇಜಾವರ ಶ್ರೀಗಳ ಹೇಳಿಕೆಗೆ, ರಾಜ್ಯ ಜಲಸಂಪನ್ಮೂಲ ಖಾತೆಯ ಸಚಿವ ಎಂ ಬಿ ಪಾಟೀಲ್ ಕಿಡಿಕಾರಿದ್ದಾರೆ.
ನಮ್ಮ ಧರ್ಮದ ಮುಖಂಡರು ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ನಮಗೆ ನಿಮ್ಮ ಸಲಹೆಯ ಅಗತ್ಯವಿಲ್ಲ ಎಂದು ಸಚಿವ ಎಂ ಬಿ ಪಾಟೀಲ್, ಹಿಂದೂ ಧರ್ಮದ ಹಿರಿಯ ಯತಿ ಪೇಜಾವರ ಶ್ರೀಗಳಿಗೆ ಹೇಳಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಿದ್ದಾಂತವನ್ನು ಪಾಲಿಸುವ ಪೀಠಾಧಿಪತಿಗಳಿಂದ ಲಿಂಗಾಯತ/ವೀರಶೈವ ಧರ್ಮದ ಬಗ್ಗೆ ಪಾಠ ಕೇಳುವ ಅವಶ್ಯಕತೆ ನಮಗಿಲ್ಲ. ಪೇಜಾವರ ಶ್ರೀಗಳು ಈ ವಿಚಾರದಲ್ಲಿ ಮೂಗು ತೂರಿಸದೇ ಇರುವುದು ಸೂಕ್ತ ಎಂದು ಸಚಿವ ಪಾಟೀಲ್ ಹೇಳಿದ್ದಾರೆ.
ನಮ್ಮ ಮುಖ್ಯಮಂತ್ರಿಗಳು ಸಮಾಜ ಒಡೆಯುವ ಕೆಲಸವನ್ನು ಮಾಡುತ್ತಿಲ್ಲ, ಆ ಕೆಲಸವನ್ನು ಯಡಿಯೂರಪ್ಪನವರು ಮಾಡುತ್ತಿದ್ದಾರೆಂದು ಪಾಟೀಲ್ ಆರೋಪಿಸಿದ್ದಾರೆ.
ಸಮಾಜದಲ್ಲಿ ಜಾತಿ ವ್ಯವಸ್ಥೆ ಬೇಕು. ಆದರೆ ಎಲ್ಲರ ನಡುವೆ ಸಾಮರಸ್ಯ ಇರಬೇಕು. ಹಿಂದೂ ಧರ್ಮದ ವಿಭಜನೆ ಬೇಡ. ವೀರಶೈವ ಧರ್ಮದ ವಿಭಜನೆ ಸಲ್ಲದು. ಇದು ಸ್ವೀಕರಿಸಲು ಅರ್ಹ ವಿಚಾರವಲ್ಲ. ಪಂಚ ಪೀಠಾಧಿಪತಿಗಳಿಗೂ ವಿಭಜನೆ ಒಪ್ಪಿಗೆಯಿಲ್ಲ. ವಿರಕ್ತ ಮಠಾಧೀಶರಿಗೆ ಈ ಬೆಳವಣಿಗೆ ಸರಿ ಅನಿಸಿಲ್ಲ ಎಂದು ಪೇಜಾವರ ಶ್ರೀಗಳು ಹೇಳಿಕೆ ನೀಡಿದ್ದರು.
ನನ್ನ ಆಶಯದಲ್ಲಿ ರಾಜಕೀಯ ಉದ್ದೇಶ ಇಲ್ಲ. ಪಕ್ಷ, ರಾಜಕೀಯ ದೃಷ್ಟಿ ನನ್ನಲ್ಲಿ ಇಲ್ಲ. ಹಿಂದೂ ಸಮಾಜದ ಏಳಿಗೆಗೆ ಈ ಸಲಹೆ ಸೂಚನೆ ನೀಡುತ್ತಿದ್ದೇನೆ. ನಾನು ವೀರಶೈವ- ಲಿಂಗಾಯತ ಸಮಾಜದವ ಅಲ್ಲ. ನಾನು ಅವರ ಹಿತೈಷಿಯಾಗಿ ಈ ಸೂಚನೆ ನೀಡುತ್ತಿದ್ದೇನೆ ಎಂದು ಪೇಜಾವರ ಶ್ರೀಗಳು ಹೇಳಿದ್ದರು.












Click it and Unblock the Notifications