ಕರ್ತವ್ಯ ನಿರತ ಸಾರಿಗೆ ನೌಕರರು ಮತದಾನದಿಂದ ವಂಚಿತ
ಬೆಂಗಳೂರು, ಏಪ್ರಿಲ್ 26: ಚುನಾವಣೆಯಲ್ಲಿ ಎಲ್ಲರೂ ತಪ್ಪದೆ ಮತದಾನ ಮಾಡಿ ಎಂದು ಲಕ್ಷಾಂತರ ಮಂದಿಗೆ ಹೇಳುವ ಸಾರಿಗೆ ನಿಗಮದ ಸಿಬ್ಬಂದಿಗಳೇ ಮತದಾನದಿಂದ ವಂಚಿತರಾಗುತ್ತಿದ್ದಾರೆ.
ಮತ ಚಲಾವಣೆ ಎಲ್ಲರ ಹಕ್ಕು, ಮೇ 125 ರಂದು ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ನಿಮ್ಮ ಹಕ್ಕು ಚಲಾಯಿಸಿ ಎಂದು ಲಕ್ಷಾಂತರ ಪ್ರಯಾಣಿಕರಿಗೆ ಹೇಳುತ್ತಾರೆ. ಹಬ್ಬ ಹರಿದಿನಗಳ ವೇಳೆ ಎಲ್ಲರೂ ಸಂಭ್ರಮದಲ್ಲಿದ್ದರೆ ಸಾರಿಗೆ ಸಿಬ್ಬಂದಿ ಸಾರ್ವಜನಿಕ ಸೇವೆಯಲ್ಲಿ ನಿರತರಾಗಿರುತ್ತಾರೆ.
ಕೆಎಸ್ಆರ್ ಟಿಸಿ ಟಿಕೆಟ್ ನಲ್ಲಿದೆ ಮತದಾನ ಮಾಡಿ ಎನ್ನುವ ಸಂದೇಶ!
ಅದೇ ರೀತಿ ಮತದಾನದ ದಿನವೂ ಸಾವಿರಾರು ಸಾರಿಗೆ ಸಿಬ್ಬಂದಿ ಚುನಾವಣಾ ಕರ್ತವ್ಯದಲ್ಲಿದ್ದು, ಅಗತ್ಯ ಸೇವೆಗಳಲ್ಲಿ ಒಂದಾದ ಸಾರಿಗೆ ಸೇವೆ ನೀಡುವುದರಲ್ಲೇ ಮಗ್ನರಾಗಿರುತ್ತಾರೆ. ಇದರಿಂದ ಪ್ರತಿ ಚುನಾವಣೆಯಲ್ಲೂ ಬಹಳಷ್ಟು ಸಿಬ್ಬಂದಿ ಮತದಾನದಿಂದ ವಂಚಿತಾಗುತ್ತಿದ್ದಾರೆ.
ಪ್ರಕ್ರಿಯೆಯೂ ಕಿರಿಕಿರಿ: ಚುನಾವಣಾ ಕರ್ತವ್ಯದಲ್ಲಿರುವ ಪ್ರತಿ ಸಿಬ್ಬಂದಿಗೆ ಅಂಚೆ ಮೂಲಕ ಮತ ಹಾಕುವ ಹಕ್ಕಿದೆ,. ಆದರೆ, ಈ ಹಕ್ಕಿನಿಂದಲೂ ಸಾರಿಗೆ ಸಿಬ್ಬಂದಿ ವಂಚಿತರಾಗುತ್ತಿದ್ದಾರೆ. ಪ್ರತಿ ಚುನಾವಣೆಯಲ್ಲೂ ಸಾವಿರಾರು ಸರ್ಕಾರಿ ಬಸ್ ಗಳನ್ನು ಆಯೋಗ ಪಡೆಯುತ್ತಿದೆ.
ಮತದಾನದ ದಿನದ ಹಿಂದಿನ ದಿನವೇ ನಿಗದಿತ ಪ್ರದೇಶಗಳಿಗೆ ಸಿಬ್ಬಂದಿ ತೆರಳುತ್ತಾರೆ. ಆ ವೇಳೆ ಕರ್ತವ್ಯ ನಿರತ ಸಿಬ್ಬಂದಿಗೆ ಅಂಚೆ ಮತ ಚಲಾವಣೆಗೆ ಅರ್ಜಿ ಮತ್ತು ಮತಪತ್ರ ನೀಡಲಾಗುತ್ತದೆ.
ಇನ್ನೂ ಕೆಲವೆಡೆ ಅರ್ಜಿಯನ್ನೇ ಚಾಲಕರಿಗೆ ನೀಡುವುದಿಲ್ಲ. ಮತಪತ್ರದ ಜತೆ ಸಲ್ಲಿಸುವ ಅರ್ಜಿಗೆ ಗೆಜೆಟೆಡ್ ಅಧಿಕಾರಿಗಳ ಸಹಿ ಅಗತ್ಯ. ಮತಪತ್ರವನ್ನು ಅಂಚೆ ಮುಖಾಂತರ ಆಯಾ ಮತಗಟ್ಟೆಯ ಅಧಿಕಾರಿಗಳಿಗೆ ಕಳುಹಿಸಬೇಕು ಅಥವಾ ಮಸ್ಟರಿಂಗ್ ದಿನ ಕಚೇರಿಯಲ್ಲಿ ಇಟ್ಟಿರುವ ಪೆಟ್ಟಿಗೆಗೆ ಹಾಕಬೇಕು. ಈ ಎಲ್ಲ ಪ್ರಕ್ರಿಯೆ ಕಿರಿಕಿರಿ ಎನಿಸುವುದರಿಂದ ಕೆಲ ಸಿಬ್ಬಂದಿ ಅಂಚೆ ಮತ ಚಲಾವಣೆಯಿಂದ ಹಿಂದೆ ಸರಿಯುತ್ತಿದ್ದಾರೆ.