ಶಿವಾಜಿನಗರದಿಂದ ಕಟ್ಟಾ ಸುಬ್ರಮಣ್ಯ ನಾಯ್ಡು ಸ್ಪರ್ಧೆ?
ಬೆಂಗಳೂರು, ಜನವರಿ 10 : ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು 2018ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಶಿವಾಜಿನಗರ ಕ್ಷೇತ್ರದಿಂದ ಅವರು ಕಣಕ್ಕಿಯಲಿದ್ದಾರೆ ಎಂಬ ಸುದ್ದಿ ಹಬ್ಬಿದ್ದು, ಭಾರೀ ಚರ್ಚೆ ನಡೆಯುತ್ತಿದೆ.
ಶಿವಾಜಿನಗರ ಕ್ಷೇತ್ರದ ಶಾಸಕರು ಸಚಿವ ರೋಷನ್ ಬೇಗ್. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾದ ಅವರು, ನಗರಾಭಿವೃದ್ಧಿ, ಮಾಹಿತಿ ಮತ್ತು ಹಜ್ ಸಚಿವರು. ಈ ಬಾರಿ ಅವರು ಸ್ಪರ್ಧಿಸಲಿದ್ದಾರೆಯೇ? ಅಥವ ಪುತ್ರನನ್ನು ಕಣಕ್ಕಿಳಿಸಲಿದ್ದಾರೆಯೇ? ಎಂಬುದು ಸದ್ಯದ ಪ್ರಶ್ನೆ.
ಮಂಡ್ಯದಿಂದ ಅಂಬರೀಶ್, ಬಸವನಗುಡಿಯಿಂದ ರಮ್ಯಾ ಸ್ಪರ್ಧೆ?
2008ರಲ್ಲಿ ಹೆಬ್ಬಾಳದಿಂದ ಸ್ಪರ್ಧಿಸಿ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಕಟ್ಟಾ ಸುಬ್ರಮಣ್ಯ ನಾಯ್ಡು ಅವರಿಗೆ 2013ರಲ್ಲಿ ಟಿಕೆಟ್ ಕೈ ತಪ್ಪಿತ್ತು. ಆದರೆ, ತಮ್ಮ ಆಪ್ತ ಆರ್.ಜಗದೀಶ್ ಕುಮಾರ್ ಅವರಿಗೆ ಟಿಕೆಟ್ ಕೊಡಿಸಿ, ಗೆಲ್ಲಿಸಿದ್ದರು.
ಹೃದಯಾಘಾತದಿಂದ ಜಗದೀಶ್ ಅವರು 2016ರಲ್ಲಿ ಮೃತಪಟ್ಟರು. ನಂತರ ನಡೆದ ಉಪಚುನಾವಣೆಯಲ್ಲಿ ವೈ.ಎ.ನಾರಾಯಣ ಸ್ವಾಮಿ ಜಯಗಳಿಸಿದ್ದಾರೆ. ಈ ಬಾರಿಯೂ ಅವರಿಗೆ ಟಿಕೆಟ್ ಸಿಗುವುದು ಖಚಿತವಾಗಿದೆ. ಆದ್ದರಿಂದ, ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಹೆಬ್ಬಾಳ ಬಿಟ್ಟು ಶಿವಾಜಿನಗರ ಕ್ಷೇತ್ರದತ್ತ ಗಮನಹರಿಸಿದ್ದಾರೆ...
ಶಿವಾಜಿನಗರದಲ್ಲಿ ಸ್ಪರ್ಧಿಸಿದ್ದರು
ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಮೊದಲು ಶಿವಾಜಿನಗರ ಕ್ಷೇತ್ರದಿಂದಲೇ ಚುನಾವಣೆಗೆ ಸ್ಪರ್ಧಿಸುತ್ತಿದ್ದರು. ಆದರೆ, ಕ್ಷೇತ್ರ ಪುನರ್ ವಿಂಗಡನೆ ಬಳಿಕ ಹೆಬ್ಬಾಳಕ್ಕೆ ವಲಸೆ ಬಂದಿದ್ದರು.
ಕಳೆದ ಬಾರಿ ಟಿಕೆಟ್ ಕೈ ತಪ್ಪಿತ್ತು
ಕೆಐಎಡಿಬಿ ಹಗರಣದಲ್ಲಿ ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಜೈಲುವಾಸ ಅನುಭವಿಸಿದ್ದರು. ಆದ್ದರಿಂದ, 2013ರ ಚುನಾವಣೆಯಲ್ಲಿ ಅವರಿಗೆ ಹೆಬ್ಬಾಳ ಕ್ಷೇತ್ರದ ಟಿಕೆಟ್ ಕೈ ತಪ್ಪಿತ್ತು. ತಮ್ಮ ಬೆಂಬಲಿಗ ಆರ್.ಜಗದೀಶ್ ಅವರಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿದ್ದರು.
ಮತ್ತೆ ಶಿವಾಜಿನಗರದತ್ತ ಚಿತ್ತ
2018ರ ಚುನಾವಣೆಗೆ ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಶಿವಾಜಿನಗರದಿಂದ ಸ್ಪರ್ಧಿಸಲಿದ್ದಾರೆ. ಈಗಾಗಲೇ ಅವರು ಸಿದ್ಧತೆ ಆರಂಭಿಸಿದ್ದಾರೆ ಎಂಬುದು ಸದ್ಯದ ಸುದ್ದಿ.
ರೋಷನ್ ಬೇಗ್ ಸ್ಪರ್ಧೆ ಇಲ್ಲ?
ಶಿವಾಜಿನಗರ ಕ್ಷೇತ್ರದ ಶಾಸಕರು ಸಚಿವ ರೋಷನ್ ಬೇಗ್. ಆದರೆ, ಈ ಬಾರಿ ಅವರು ಸ್ಪರ್ಧೆ ಮಾಡುವುದಿಲ್ಲ. ಪುತ್ರ ರುಮನ್ ಬೇಗ್ ಅವರನ್ನು ಕಣಕ್ಕಿಳಿಸಲಿದ್ದಾರೆ ಎಂಬುದು ಸದ್ಯದ ಸುದ್ದಿ.
2013ರ ಚುನಾವಣಾ ಫಲಿತಾಂಶ
ಆರ್.ರೋಷನ್ ಬೇಗ್ 49,649 ಮತಗಳನ್ನು ಪಡೆದು ಜಯಗಳಿಸಿದ್ದರು. ಬಿಜೆಪಿಯ ನಿರ್ಮಲ್ ಸುರಾನಾ 28,794 ಮತಗಳನ್ನು ಪಡೆದಿದ್ದರು. ಜೆಡಿಎಸ್ನ ಅಬ್ಬಾಸ್ ಅಲಿ ಬೋರಾ 5, 983 ಮತ ಪಡೆದಿದ್ದರು.