ವಿಧಾನಸಭೆ ಸ್ಪೀಕರ್: ಈವರೆಗೆ ಕಾಂಗ್ರೆಸ್ನವರೇ ಹೆಚ್ಚು!
ಬೆಂಗಳೂರು, ಮೇ 18: ರಾಜ್ಯದ 15ನೇ ವಿಧಾನಸಭೆ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಮುಖ್ಯಮಂತ್ರಿಗಳು ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಹೊಸ ಸ್ಪೀಕರ್ ಯಾರೆಂಬ ಬಗ್ಗೆ ಚರ್ಚೆ ಆರಂಭವಾಗಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಮ್ಮ ಬಹುಮತವನ್ನು ಸಾಬೀತುಪಡಿಸಿದ ಬೆನ್ನಲ್ಲೇ ಹೊಸ ಸ್ಪೀಕರ್ ಆಯ್ಕೆಗೆ ಚಾಲನೆ ಸಿಗಲಿದೆ.
ಈಗಾಗಲೇ ಸ್ಪೀಕರ್ ಆಯ್ಕೆ ಕುರಿತಂತೆ ಸ್ಪೀಕರ್ ಆಂತರಿಕ ವಲಯದಲ್ಲಿ ಚರ್ಚೆ ನಡೆದಿದೆ. ಮತ್ತೊಂದೆಡೆ ಯಡಿಯೂರಪ್ಪ ಸ್ಪಷ್ಟ ಬಹುಮತ ಸಾಬೀತುಪಡಿಸದಿದ್ದರೆ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು ಆಗ ಮೈತ್ರಿ ಪಕ್ಷದದಿಂದ ಆಯ್ಕೆಯಾದ ಶಾಸಕರು ಸ್ಪೀಕರ್ ಆಗುವ ಸಂಭವ ಹೆಚ್ಚು.
ಬಹುಮತ ಸಾಬೀತಿಗೂ ಮೊದಲೇ ಬಿಜೆಪಿಗೆ ಮತ್ತೊಂದು ಪರೀಕ್ಷೆ!
ಈ ಹಿನ್ನೆಲೆಯಲ್ಲಿ ಹೊಸ ಸ್ಪೀಕರ್ ಯಾರೆಂಬ ಕುತೂಹಲ ಮೂಡಿರುವ ಬೆನ್ನಲ್ಲೇ ಇತಿಹಾಸದಲ್ಲಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯಾರಾಗಿದ್ದರು ಎಂಬ ಮಾಹಿತಿ ಇಲ್ಲಿದೆ. ಕಾಂಗ್ರೆಸ್ ಆರ್.ವಿ.ದೇಶಪಾಂಡೆ ಅವರ ಹೆಸರನ್ನು ಸ್ಪೀಕರ್ ಹುದ್ದೆಗೆ ಸೂಚಿಸಿದೆ.
ಬಿಜೆಪಿ ಉಮೇಶ್ ಕತ್ತಿ ಅವರ ಹೆಸರನ್ನು ಶಿಫಾರಸು ಮಾಡಿದೆ. ವಿಧಾನಸಭೆಗೆ ಹಿರಿಯರಾದ, ಹೆಚ್ಚು ಬಾರಿ ಗೆದ್ದು ಬಂದಿರುವ ಶಾಸಕರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಬೇಕು. ಅಂತಿಮ ನಿರ್ಧಾರವನ್ನು ರಾಜ್ಯಪಾಲರು ತೆಗೆದುಕೊಳ್ಳಲಿದ್ದಾರೆ.
ಅಧಿವೇಶನ ಆರಂಭವಾದ ದಿನ ಎಲ್ಲಾ ಶಾಸಕರು ಪ್ರಮಾಣ ವಚನ ತೆಗೆದುಕೊಳ್ಳಲು ಹಂಗಾಮಿ ಸ್ಪೀಕರ್ ಕಾರ್ಯ ನಿರ್ವಹಿಸುತ್ತಾರೆ. ಬಳಿಕ ಸ್ಪೀಕರ್ ಆಯ್ಕೆ ನಡೆಯುತ್ತದೆ. ಹಂಗಾಮಿ ಸ್ಪೀಕರ್ ಬಹುಮತ ಸಾಬೀತು ಪಡಿಸುವ ಕೆಲಸ ನಿರ್ವಹಣೆ ಮಾಡಬಹುದೇ? ಎಂಬುದರ ಬಗ್ಗೆ ನಿಯಮಾವಳಿಗಳು ಸ್ಪಷ್ಟವಾಗಿಲ್ಲ.
ಸ್ಪೀಕರ್ ಹುದ್ದೆಗೆ ಜಗದೀಶ್ ಶೆಟ್ಟರ್ ಅಥವಾ ಕೆ.ಜಿ.ಬೋಪಯ್ಯ ಅವರನ್ನು ಬಿಜೆಪಿ ಆಯ್ಕೆ ಮಾಡುವ ಸಾಧ್ಯತೆ ಇದೆ. ಬಹುಮತ ಸಾಬೀತು ಪಡಿಸಬೇಕಾಗಿರುವ ಕಾರಣ ಸ್ಪೀಕರ್ ಆಯ್ಕೆ ಮಹತ್ವ ಪಡೆದಿದೆ. ಅಡ್ಡಮತದಾನ ನಡೆದರೆ ಮುಂದಿನ ತೀರ್ಮಾನವನ್ನು ಸ್ಪೀಕರ್ ಕೈಗೊಳ್ಳಬೇಕಾಗುತ್ತದೆ.