ದೇಶದಲ್ಲೇ ಮೊದಲು ಕರ್ನಾಟಕದಲ್ಲಿ ವಿಶೇಷ ಯೋಜನೆ ಪರಿಚಯಿಸಿದ ಡಿಕೆಶಿ, ಹೊಸ ಯೋಜನೆ ಏನು
ದೇಶದಲ್ಲಿಯೇ ಯಾವುದೇ ರಾಜ್ಯದಲ್ಲೂ ಇಲ್ಲದ ವಿಶೇಷ ಇಲಾಖೆಯನ್ನು ಕರ್ನಾಟಕದಲ್ಲಿ ಪರಿಚಯಿಸಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹಂಚಿಕೊಂಡಿದ್ದಾರೆ. ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಈ ಪೋಸ್ಟ್ಗೆ ಕನ್ನಡಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಷ್ಟಕ್ಕೂ ಈ ಯೋಜನೆ ಏನು, ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹಂಚಿಕೊಂಡಿರುವ ಪೋಸ್ಟ್ ಏನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ಜನಸೇವೆಯೇ ಉತ್ತಮ ಆಡಳಿತದ ನಿಜವಾದ ಶಕ್ತಿ ಎನ್ನುವ ಸಾಲುಗಳೊಂದಿಗೆ ವಿಶೇಷವಾದ ಬರಹವನ್ನು ಹಂಚಿಕೊಂಡಿದ್ದಾರೆ. ಸಾರ್ವಜನಿಕರ ಅಹವಾಲುಗಳನ್ನು ಹಾಗೂ ಸಮಸ್ಯೆಗಳನ್ನು ಆಲಿಸಲು ಪ್ರಜಾಸೇವೆ ಇಲಾಖೆ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರು ತಿಂಗಳಿನ 1ನೇ ಹಾಗೂ 3ನೇ ಶನಿವಾರದಂದು ಪ್ರಜಾಸೇವೆ ಅಭಿಯಾನ ನಡೆಸಬೇಕಾಗುತ್ತದೆ. ದೂರುಗಳ ತ್ವರಿತ ಪರಿಹಾರದಿಂದ ಹಿಡಿದು ಪರಿಣಾಮಕಾರಿ ಸೇವಾ ವಿತರಣೆಯವರೆಗೆ ಪ್ರತಿಯೊಂದು ಹಂತದಲ್ಲೂ ಸರ್ಕಾರವನ್ನು ಜನಸ್ನೇಹಿ, ಜವಾಬ್ದಾರಿಯುತವಾಗಿಸುವ ನಿಟ್ಟಿನಲ್ಲಿ ನಾವು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ.

ಪ್ರಜಾ ಸೇವೆ ಅಭಿಯಾನ ಹಾಗೂ ಆಡಳಿತಾತ್ಮಕ ಸುಧಾರಣೆಗಳ ಮೂಲಕ ಜನರ ನಡುವೆಯೇ ಇದ್ದು, ಅವರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸುವುದೇ ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
ಪ್ರಜಾಸೇವೆ ಇಲಾಖೆ ಹೇಗೆ ಕಾರ್ಯನಿರ್ವಹಿಸಲಿದೆ ?
ಸಾರ್ವಜನಿಕರ ಕುಂದು - ಕೊರತೆಗಳನ್ನು ಆಲಿಸಲು ಮತ್ತು ತಕ್ಷಣ ಸ್ಪಂದಿಸಲು ನೂತನ "ಪ್ರಜಾಸೇವಾ ಇಲಾಖೆ"ಯನ್ನು ಸ್ಥಾಪಿಸಲಾಗಿದೆ. ಸಚಿವಾಲಯದ ವ್ಯಾಪ್ತಿಗೆ ಒಳಪಡುವ ಈ ಇಲಾಖೆಯ ವ್ಯವಸ್ಥಿತ ಕಾರ್ಯನಿರ್ವಹಣೆಗಾಗಿ ಹಿರಿಯ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಪ್ರಜಾಸೇವೆ ಇಲಾಖೆಯ ಮುಖ್ಯ ಉದ್ದೇಶಗಳು ಏನು
1. ಸಂಯೋಜಿತ ವ್ಯವಸ್ಥೆ: ಸಾರ್ವಜನಿಕರ ಎಲ್ಲಾ ದೂರು ಹಾಗೂ ಕುಂದುಕೊರತೆಗಳ ಪರಿಹಾರಕ್ಕೆ ಒಂದೇ ಸೂರಿನಡಿ ವ್ಯವಸ್ಥೆ
2. ಕಾಲಮಿತಿಯಲ್ಲಿ ಪರಿಹಾರ: ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ, ನಿಗದಿತ ಸಮಯದೊಳಗೆ ಜನರ ಸಮಸ್ಯೆಗಳಿಗೆ ಪರಿಹಾರ
3. ಪ್ರಜಾಸೇವೆ ಅಭಿಯಾನ: ಜಿಲ್ಲಾ ಉಸ್ತುವಾರಿ ಸಚಿವರಿಂದ ತಿಂಗಳಿಗೆ ಎರಡು ದಿನ (1 ಮತ್ತು 3ನೇ ಶನಿವಾರ) ಎರಡು ವಿಧಾನಸಭಾ ಕ್ಷೇತ್ರಗಳ ಪ್ರವಾಸ
4. ಜನರ ತೃಪ್ತಿಯೇ ಮಾನದಂಡ: ಕೇವಲ ಅರ್ಜಿ ವಿಲೇವಾರಿಯಷ್ಟೇ ಅಲ್ಲದೆ, ಸಾರ್ವಜನಿಕರ ತೃಪ್ತಿಯ ಆಧಾರದ ಮೇಲೆಯೇ ಕೆಲಸದ ಮೌಲ್ಯಮಾಪನ
5. ವಿಳಂಬಕ್ಕೆ ಮುಕ್ತಿ: ಸರ್ಕಾರಿ ಕೆಲಸಗಳಲ್ಲಿನ ಅನಗತ್ಯ ವಿಳಂಬ ಮತ್ತು ಗೊಂದಲಗಳನ್ನು ತಪ್ಪಿಸಲು ಹಾಲಿ ಇರುವ ನಿಯಮಗಳ ಸರಳೀಕರಣ
6. ಆಡಳಿತ ಸುಧಾರಣೆ: ಉತ್ತಮ ಪದ್ಧತಿಗಳ ಅನುಷ್ಠಾನದೊಂದಿಗೆ ಆಡಳಿತದಲ್ಲಿ ನಿರಂತರ ಕಲಿಕೆ ಮತ್ತು ನಾವೀನ್ಯತೆಗೆ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.













Click it and Unblock the Notifications