ಚುನಾವಣೆಗೆ ಪಟ್ಟು ಹಿಡಿದಿದ್ದ ಈಶ್ವರಪ್ಪಗೆ ಸಿದ್ದರಾಮಯ್ಯ ತೋರಿಸಿದ ಭರ್ಜರಿ ಶಕ್ತಿ ಪ್ರದರ್ಶನ
ರಾಜಕೀಯ ಎಲ್ಲಿ ಮಾಡಬೇಕೋ ಅಲ್ಲಿ ಮಾಡಬೇಕು, ಎಲ್ಲಿ ಒಗ್ಗಟ್ಟಿನಿಂದ ಸಮುದಾಯದ ಪರ ನಿಲ್ಲಬೇಕೋ, ಅಲ್ಲಿ ಎಲ್ಲಾ ರಾಜಕೀಯವನ್ನು ಬಿಡಬೇಕು ಎನ್ನುವ ಮಾಜಿ ಸಿಎಂ ಸಿದ್ದರಾಮಯ್ಯ ಮಾತಿಗೆ ಈಶ್ವರಪ್ಪ ಬೆಲೆ ಕೊಡಲಿಲ್ಲ.
ರಾಜ್ಯ ರಾಜಕಾರಣದಲ್ಲಿ ಮಾಸ್ ಲೀಡರ್ ಎಂದು ಕರೆಸಿಕೊಳ್ಳುವ ಮೂವರು ನಾಯಕರಲ್ಲಿ ಸಿದ್ದರಾಮಯ್ಯ ಕೂಡಾ ಒಬ್ಬರು. ತನ್ನ ಎದುರಾಳಿ ಆಡಳಿತ ಪಕ್ಷದಲ್ಲಿದ್ದರೂ, ಸರಕಾರ ಬಿಜೆಪಿಯವರದ್ದೇ ಆಗಿದ್ದರೂ, ಚುನಾವಣೆ ಬೇಡ ಎಂದು ಸಿದ್ದರಾಮಯ್ಯ ಮಾತುಕತೆ ನಡೆಸಿದ್ದರು.
ಆದರೆ. ಅವಿರೋಧ ಆಯ್ಕೆ ಬೇಡವೇ ಬೇಡ ಎಂದು ಪಟ್ಟು ಹಿಡಿದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪನವರಿಗೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭರ್ಜರಿ ಶಾಕ್ ನೀಡಿದ್ದಾರೆ.
ಚುನಾವಣೆಯಲ್ಲಿ ರಾಜ್ಯ ಆಡಳಿತದ ಗದ್ದುಗೆ ಯಾವ ಪಕ್ಷಕ್ಕೆ ಎಂದು ಷರಾ ಬರೆಯುವ ಪ್ರಮುಖ ಸಮುದಾಯಗಳಲ್ಲಿ ಒಂದಾದ ಕುರುಬ ಸಮುದಾಯಕ್ಕೆ ಸಂಬಂಧ ಪಟ್ಟ ಚುನಾವಣೆಯಲ್ಲಿ, ಈಶ್ವರಪ್ಪನವರ ಬಣ, ಹೇಳ ಹೆಸರಿಲ್ಲದಂತೆ ಸೋತು ಸುಣ್ಣವಾಗಿದೆ.

ಸಂಧಾನ ಮಾತುಕತೆಗಳು ಫಲಪ್ರದವಾಗಲಿಲ್ಲ
ರಾಜ್ಯ ಕುರುಬರ ಸಂಘದ ಚುಕ್ಕಾಣಿ ಹಿಡಿಯಲು ಸಿದ್ಧರಾಮಯ್ಯ ಮತ್ತು ಸಚಿವ ಕೆ.ಎಸ್.ಈಶ್ವರಪ್ಪ ಬಣಗಳ ನಡುವೆ ಇನ್ನಿಲ್ಲದ ಪೈಪೋಟಿ ನಡೆದಿತ್ತು. ತೆರೆಮರೆಯಲ್ಲಿ ನಡೆದ ಸಂಧಾನ ಮಾತುಕತೆಗಳು ಫಲಪ್ರದವಾಗದ ಹಿನ್ನೆಲೆಯಲ್ಲಿ ಶುಕ್ರವಾರ, ಜೂನ್ 26ರಂದು ಚುನಾವಣೆ ನಡೆದಿತ್ತು.

ಅವಿರೋಧ ಆಯ್ಕೆಗೆ ಸಿದ್ದರಾಮಯ್ಯ ಒಲವು ತೋರಿದ್ದರು
ಸಂಘದಲ್ಲಿ ರಾಜಕೀಯ ಬೇಡ ಎಂದು ಅವಿರೋಧ ಆಯ್ಕೆಗೆ ಸಿದ್ದರಾಮಯ್ಯ ಒಲವು ತೋರಿದ್ದರು. ಆದರೆ ಚುನಾವಣೆಗೆ ಸಚಿವ ಈಶ್ವರಪ್ಪ ಪಟ್ಟು ಹಿಡಿದಿದ್ದರು. ಆದರೆ, ಪದಾಧಿಕಾರಿಗಳ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಸಿದ್ಧರಾಮಯ್ಯ ಬಣಕ್ಕೆ ಭಾರೀ ಗೆಲುವು ಸಿಕ್ಕಿದ್ದು, ಈಶ್ವರಪ್ಪ ಬೆಂಬಲಿಗರು ಹೀನಾಯ ಸೋಲು ಅನುಭವಿಸಿದ್ದಾರೆ.

ಈಶ್ವರಪ್ಪ ಬಣ ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಲಿಲ್ಲ
ರಾಜ್ಯ ಕುರುಬರ ಸಂಘದ ಅಧ್ಯಕ್ಷರಾಗಿ ಸಿದ್ಧರಾಮಯ್ಯ ಬೆಂಬಲಿಗ, ಹಿರಿಯ ಮುಖಂಡ ಜಿ. ಕೃಷ್ಣ ಆಯ್ಕೆಯಾಗಿದ್ದಾರೆ. ಬಿಬಿಎಂಪಿ ಮಾಜಿ ಮೇಯರ್ ಡಿ.ವೆಂಕಟೇಶ್ ಮೂರ್ತಿ ಪ್ರಧಾನ ಕಾರ್ಯದರ್ಶಿಯಾಗಿ, ಕಾರ್ಯಾಧ್ಯಕ್ಷರಾಗಿ ಸುಬ್ರಮಣ್ಯ ಮತ್ತು ಖಜಾಂಚಿಯಾಗಿ ದೇವರಾಜ್ ಆಯ್ಕೆಯಾಗುವ ಮೂಲಕ ಸಿದ್ಧರಾಮಯ್ಯ ಬಣ ಸಂಪೂರ್ಣ ಮೇಲುಗೈ ಸಾಧಿಸಿದೆ. 34 ವಿವಿಧ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಈಶ್ವರಪ್ಪ ಬಣ ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಲಿಲ್ಲ.

ರಾಜ್ಯ ಕುರುಬರ ಸಂಘದ ಚುನಾವಣೆ
ಒಟ್ಟು ನಿರ್ದೇಶಕರು : 118
ಚಲಾವಣೆಯಾದ ಮತಗಳು : 118
ಸಂಘದ ಅಧ್ಯಕ್ಷರಾಗಿ ಬಳ್ಳಾರಿ ಕೃಷ್ಣ 83 ಮತಗಳು
ಪ್ರಧಾನ ಕಾರ್ಯದರ್ಶಿಯಾಗಿ ವೆಂಕಟೇಶ ಮೂರ್ತಿಗೆ 81 ಮತಗಳು
ಕಾರ್ಯಾಧ್ಯಕ್ಷರಾಗಿ ಮೈಸೂರು ಸುಬ್ಬಣ್ಣ 84 ಮತಗಳು
ಖಜಾಂಚಿಯಾಗಿ ದೇವರಾಜುಗೆ 84 ಮತಗಳು
ಸಿದ್ದರಾಮಯ್ಯ ಅವರ ಬೆಂಬಲಿಗರ ಪರವಾಗಿ ಚುನಾವಣೆ ಉಸ್ತುವಾರಿ ವಹಿಸಿದ್ದವರು ಮಾಜಿ ಸಚಿವರಾದ ಎಚ್.ಎಂ.ರೇವಣ್ಣ.












Click it and Unblock the Notifications