ಬಾದಾಮಿಯಿಂದಲೂ ಸ್ಪರ್ಧಿಸುತ್ತಾರಂತೆ ಸಿದ್ದರಾಮಯ್ಯ... ನಿಜವೇ?
ಬೆಂಗಳೂರು, ಏಪ್ರಿಲ್ 18: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರ ಮಾತ್ರವಲ್ಲದೆ, ಬಾಗಲಕೋಟೆಯ ಬಾದಾಮಿ ಕ್ಷೇತ್ರದಿಂದಲೂ ಸ್ಪರ್ಧಿಸುತ್ತಾರಾ ಎಂಬ ಕುರಿತು ಇದ್ದ ಅನುಮಾನವನ್ನು ಇತ್ತೀಚೆಗೆ ಬಿಡುಗಡೆಯಾದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಶಮನಗೊಳಿಸಿತ್ತು.
ಯಾರ್ ಹೇಳಿದ್ದು ಬಾದಾಮಿಯಿಂದ ಸ್ಪರ್ಧಿಸ್ತೇನಂತ? ಸಿದ್ದು ಗುದ್ದು
"ನಾನು ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂದಿದ್ದು ಯಾರ್ರಿ?" ಎಂದು ಸ್ವತಃ ಸಿದ್ದರಾಮಯ್ಯ ಅವರೂ ಪ್ರಶ್ನಿಸಿ, ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸೂಚ್ಯವಾಗಿ ಹೇಳಿದ್ದರು.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಆದರೆ ಕೆಲವು ಮೂಲಗಳ ಪ್ರಕಾರ ಬಾದಾಮಿ ಕ್ಷೇತ್ರದ ಮೇಲೆ ಈಗಲೂ ಸಿದ್ದರಾಮಯ್ಯ ಅವರ ಕಣ್ಣಿದೆ. ಚಾಮುಂಡೇಶ್ವರಿಯಲ್ಲಿ ಸ್ಪರ್ಧೆ ಅಷ್ಟು ಸುಲಭವಲ್ಲದ ನಿಟ್ಟಿನಲ್ಲಿ ಅವರು ಬಾದಾಮಿಯನ್ನೂ 'ಬ್ಯಾಕ್ ಅಪ್' ಆಗಿ ಆರಿಸಿಕೊಳ್ಳುವ ಸಾಧ್ಯತೆಗಳು ನಿಚ್ಚಳವಾಗಿವೆ! ಅದಕ್ಕೆ ಪುಷ್ಠಿ ನೀಡುವಂಥ ಸಿದ್ದರಾಮಯ್ಯನವರ ಕೆಲವು ನಡೆ ಅವರ ಬಾದಾಮಿ ಸ್ಪರ್ಧೆಯ ಸುದ್ದಿ ಸತ್ಯಕ್ಕೆ ಹತ್ತಿರ ಎಂಬುದನ್ನು ಸಾಬೀತುಪಡಿಸಿವೆ.
ಬಿ ಬಿ ಚಿಮ್ಮನಕಟ್ಟಿ ಅವರಿಗೆ ಟಿಕೆಟ್ ನೀಡದಿದ್ದುದು ಏಕೆ?
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆಯೇ ಕಣ್ಣು ಮೊದಲು ಹುಡುಕಿದ್ದೇ ಬಾದಾಮಿ ಅಭ್ಯರ್ಥಿಯ ಹೆಸರನ್ನು! ಸಿದ್ದರಾಮಯ್ಯ ಅವರ ಹೆಸರಿಲ್ಲದಿದ್ದರೆ ಸರಿ, ಕೊನೇ ಪಕ್ಷ ಹಾಲಿ ಶಾಸಕ ಬಿ ಬಿ ಚಿಮ್ಮನಕಟ್ಟಿ ಅವರ ಹೆಸರಾದರೂ ಇದ್ದೀತು ಎಂದುಕೊಂಡರೆ ಅದೂ ಸುಳ್ಳಾಯ್ತು. ಸಿದ್ದರಾಮಯ್ಯ ಅವರ ಆಪ್ತ ದೇವರಾಜ್ ಪಾಟೀಲ್ ಅವರನ್ನು ಬಾದಾಮಿ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿತ್ತು. ಇದು ನಿಜಕ್ಕೂ ಅಚ್ಚರಿಯ ಬೆಳವಣಿಗೆ.
ಬಾದಾಮಿ ಕ್ಷೇತ್ರದ ಟಿಕೆಟ್ ಘೋಷಣೆ : ದೇವರಾಜ್ ಹೇಳಿದ್ದೇನು?
ದೇವರಾಜ್ ಪಾಟೀಲ್ ಗೆ ಟಿಕೆಟ್ ನೀಡಿದ್ದೇಕೆ?
ಚಿಮ್ಮನಕಟ್ಟಿ ಅವರಿಗೆ ಟಿಕೆಟ್ ನೀಡದೆ ಸಿದ್ದರಾಮಯ್ಯ ಅವರೇ ಬಾದಾಮಿ ಅಭ್ಯರ್ಥಿ ಎಂದು ಘೋಷಣೆಯಾಗಿದ್ದರೆ ಒಂದು ಲೆಕ್ಕ. ಆದರೆ ಹಾಗಾಗಲಿಲ್ಲ. ದೇವರಾಜ್ ಪಾಟೀಲ್ ಅವರಿಗೆ ಈ ಕ್ಷೇತ್ರದ ಟಿಕೇಟ್ ನೀಡಲಾಗಿದೆ. ಚಿಮ್ಮನಕಟ್ಟಿ ಅವರು ಒಲ್ಲದ ಮನಸ್ಸಿನಿಂದ ಈ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದು ಸಿದ್ದರಾಮಯ್ಯನವರಿಗಾಗಿ. ಆದರೆ ದೇವರಾಜ್ ಪಾಟೀಲ್ ಅಭ್ಯರ್ಥಿಯಾಗುತ್ತಾರೆ ಎಂದಾದರೆ ಇದಕ್ಕೆ ಚಿಮ್ಮನಕಟ್ಟಿ ಒಪ್ಪುವುದಕ್ಕೆ ಸಾಧ್ಯವೇ ಇಲ್ಲ. ಆದರೂ ಆ ಕ್ಷೇತ್ರದ ಟಿಕೆಟ್ ಅನ್ನು ಪಾಟೀಲರಿಗೆ ಕೊಟ್ಟಿದ್ದೇಕೆ? ಕೆಲವು ಮೂಲಗಳ ಪ್ರಕಾರ ಪಾಟೀಲರು ಸಿದ್ದರಾಮಯ್ಯ ಅವರಿಗೆ ಆಪ್ತ. ಅವರಿಗೆ ಸದ್ಯಕ್ಕೆ ಟಿಕೆಟ್ ನೀಡಿದ್ದರೂ ನಂತರ ಹೈಕಮಾಂಡ್ ನಿರ್ಧಾರ ಬದಲಿಸಿದರೂ ಅಚ್ಚರಿಯಿಲ್ಲ. ಅದಕ್ಕೆ ಪಾಟೀಲರೂ ಒಪ್ಪದೆ ಇರುವುದಿಲ್ಲ. ಆದರೆ ಚಿಮ್ಮನಕಟ್ಟಿ ಅವರಿಗೆ ಟಿಕೆಟ್ ನೀಡಿ, ನಂತರ ವಾಪಸ್ ಪಡೆಯುವುದು ಸುಲಭವಲ್ಲ. ಆದ್ದರಿಂದಲೇ ಸಿದ್ದರಾಮಯ್ಯ ಪಾಟೀಲರಿಗೆ ಟಿಕೆಟ್ ನೀಡಿದ್ದಾರೆ ಎಂಬುದು ರಾಜಕೀಯ ಪಂಡಿತರ ಅಂಬೋಣ.
ಬಾದಾಮಿಯನ್ನು ಸಿದ್ದರಾಮಯ್ಯಗೆ ಚಿಮ್ಮನಕಟ್ಟಿ ಬಿಟ್ಟು ಕೊಟ್ಟಿದ್ದೇಕೆ?
ಸಿದ್ದರಾಮಯ್ಯ ಏನಂತಾರೆ?
ಬಾದಾಮಿಯಿಂದ ಸ್ಪರ್ಧಿಸುವ ಕುರಿತು ಪ್ರಶ್ನೆ ಕೇಳಿದಾಗಲೆಲ್ಲ ಸಿದ್ದರಾಮಯ್ಯ ನೀಡುವುದು ಜಾರಿಕೊಳ್ಳುವ ಉತ್ತರವನ್ನೇ. 'ಯಾರ್ರೀ ಹೇಳಿದ್ದು ನಾನು ಅಲ್ಲಿಂದ ಸ್ಪರ್ಧೆ ಮಾಡ್ತೀನಿ ಅಂತ' ಎಂದು ಒಮ್ಮೆ ಪ್ರತಿಕ್ರಿಯೆ ನೀಡಿದ್ದರು. ಆದರೆ ನಂತರ 'ಬಾದಾಮಿ ಜನ ಬಹಳ ಒತ್ತಾಯ ಮಾಡುತ್ತಿದ್ದಾರೆ' ಎಂದಿದ್ದರು. ಚಾಮುಂಡೇಶ್ವರಿಯಿಂದಲೇ ನನ್ನ ಸ್ಪರ್ಧೆ ಎಂದು ಮೂರು ಬಾರಿ ಹೇಳಿದ್ದೇನೋ ನಿಜ. ಆದರೆ ಚಾಮುಂಡೇಶ್ವರಿಯಿಂದ 'ಮಾತ್ರ' ನನ್ನ ಸ್ಪರ್ಧೆ ಎಂದು ಹೇಳಿಲ್ಲ! ಅಂದರೆ ಸಿದ್ದರಾಮಯ್ಯ ಅವರಿಗೆ ಸಹ ಬಾದಾಮಿಯಿಂದ ಸ್ಪರ್ಧಿಸುವ ಇಂಗಿತ ಇದ್ದಂತಾಯ್ತು!
ಚಾಮುಂಡೇಶ್ವರಿಯಲ್ಲಿ ಸಿದ್ದು ಸೋಲಿಗೆ ಪಣತೊಟ್ಟವರು ಹಲವರು!
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸುವುದಕ್ಕೆ ಜೆಡಿಎಸ್ ಅಭ್ಯರ್ಥಿ ಜಿಟಿ ದೇವೇಗೌಡ ಮಾತ್ರವಲ್ಲದೆ, ಬಿಜೆಪಿ ಮುಖಂಡರಾದ ಪ್ರತಾಪ್ ಸಿಂಹ, ಶ್ರೀನಿವಾಸ್ ಪ್ರಸಾದ್ ಎಲ್ಲರೂ ಪಣತೊಟ್ಟಿದ್ದಾರೆ. ಎಷ್ಟೇ ವಿಶ್ವಾಸವಿದ್ದರೂ, ಹಾಲಿ ಶಾಸಕ ಜಿಟಿಡಿ ಅವರ ಬಗ್ಗೆ ಈ ಕ್ಷೇತ್ರದಲ್ಲಿ ಇರುವ ಉತ್ತಮ ಅಭಿಪ್ರಾಯ ಸಿದ್ದರಾಮಯ್ಯ ಅವರನ್ನು ಕೊಂಚ ನಡುಗಿಸಿದಂತಿದೆ. ಆದ್ದರಿಂದಲೇ ಇನ್ನೊಂದು ಕ್ಷೇತ್ರವನ್ನು ಅವರು ಆರಿಸಿಕೊಳ್ಳುವುದಕ್ಕೆ ಚಿಂತಿಸಿದ್ದಾರೆ ಎಂಬುದು ಕೆಲವು ಮೂಲಗಳ ಮಾಹಿತಿ.