Bengaluru Expressway: ಆಂಧ್ರ ಲಾಬಿ ಸಿಲಿಕಾನ್ ಸಿಟಿಗೆ ಹೊಸ ಎಕ್ಸ್ಪ್ರೆಸ್ ವೇ: 17 ಗ್ರಾಮಗಳ ರೈತರಿಗೆ ಆತಂಕ
Bengaluru Expressway: ಬೆಂಗಳೂರು ಕೇಂದ್ರಿತವಾಗಿ ನೆರೆಯ ರಾಜ್ಯಗಳು ಲಾಬಿ ಮಾಡುವುದು ಮುಂದುವರಿದಿದೆ. ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ವಿಚಾರದಲ್ಲಿ ಕೇರಳ ಹಾಗೂ ಆಂಧ್ರಪ್ರದೇಶ ಸರ್ಕಾರಗಳು ಲಾಬಿ ಮಾಡಿದ್ದವು. ಇದೀಗ ಆಂಧ್ರದ ಕುಪ್ಪಂನಿಂದ ಬಂಗಾರಪೇಟೆ ಮಾರ್ಗ - ಹೊಸೂರು ಹೈವೇ ರಸ್ತೆಯ ಮೂಲಕ ಬೆಂಗಳೂರಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ರಸ್ತೆ ನಿರ್ಮಾಣ ಮಾಡುವುದಕ್ಕೆ ಕೇಂದ್ರ ಸರ್ಕಾರವು ಮುಂದಾಗಿದೆ. ಈ ಯೋಜನೆಗೆ ಕೇಂದ್ರ ಸರ್ಕಾರವು ಭಾರೀ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ ಇದರಿಂದ ಕರ್ನಾಟಕದ ರೈತರಿಗೆ ಸಂಕಷ್ಟ ಸಿಲುಕುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರಕ್ಕೆ ಆಂಧ್ರಪ್ರದೇಶ ತೆಲುಗು ದೇಶಂ ಪಾರ್ಟಿಯು ಬೆಂಬಲ ಕೊಟ್ಟಿದೆ. ಅಲ್ಲದೆ ಆಂಧ್ರಪ್ರದೇಶದಲ್ಲೂ ಸಮ್ಮಿಶ್ರ ಸರ್ಕಾರವಿದೆ. ಹೀಗಾಗಿ, ಆಂಧ್ರಪ್ರದೇಶ ಕಾಮಗಾರಿಗಳು ವೇಗ ಪಡೆದುಕೊಳ್ಳುತ್ತಿವೆ. ಇದೀಗ ಬಂಗಾರಪೇಟೆ ತಾಲ್ಲೂಕಿನ ಗಡಿಭಾಗಕ್ಕೆ ಅಂಟಿಕೊಂಡಿರುವ ಆಂಧ್ರದ ಕುಪ್ಪಂನಿಂದ ಬಂಗಾರಪೇಟೆ ಮಾರ್ಗ ಎಕ್ಸ್ಪ್ರೆಸ್ ವೇ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತವಾಗುತ್ತಿದೆ.
ಈಚೆಗೆ ಕರ್ನಾಟಕದ ಬೆಂಗಳೂರಿನಿಂದ ತಮಿಳುನಾಡಿನ ಚೆನ್ನೈಗೆ ಎಕ್ಸ್ಪ್ರೆಸ್ ವೇ ರಸ್ತೆ ನಿರ್ಮಾಣ ಮಾಡಲಾಗಿತ್ತು. ಈ ಎಕ್ಸ್ಪ್ರೆಸ್ವೇ ನಿರ್ಮಾಣದಿಂದ ಬೆಂಗಳೂರು - ಚೆನ್ನೈ ನಗರಗಳ ನಡುವೆ ಸಂಚಾರ ಸುಗಮವಾಗಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಪ್ರತಿನಿಧಿಸುತ್ತಿರುವ ಕುಪ್ಪಂ ವಿಧಾನಸಭಾ ಕ್ಷೇತ್ರದಿಂದ ಸಾವಿರಾರು ಜನ ಬೆಂಗಳೂರಿಗೆ ಬರುತ್ತಾರೆ. ಇದನ್ನು ಗಮನದಲ್ಲಿ ಇರಿಸಿಕೊಂಡು ಹೊಸ ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನಾಲ್ಕು ಪಥಗಳ ರಸ್ತೆ ನಿರ್ಮಾಣಕ್ಕೆ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ನೀಲಿ ನಕ್ಷೆ ಸಿದ್ಧಪಡಿಸಲಾಗುತ್ತಿದೆ. ಆಂಧ್ರ ಪ್ರದೇಶದ ಐಟಿ - ಬಿಟಿ ಸಚಿವ ಲೋಕೇಶ್ ಅವರು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಈ ಯೋಜನೆಗಾಗಿ 3 ಸಾವಿರ ಕೋಟಿ ರೂ. ಅನುದಾನ ಮಂಜೂರು ಮಾಡುವಂತೆ ಚರ್ಚಿಸಿದ್ದಾರೆ.
Bengaluru Expressway: 17 ಗ್ರಾಮದ ರೈತರಿಗೆ ಆತಂಕ
ಕುಪ್ಪಂ ತಾಲ್ಲೂಕಿನ ಮೂಲಕ ಬೆಂಗಳೂರಿಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಗುಡ್ನ್ಯೂಸ್ ಎಂದೇ ಹೇಳಲಾಗುತ್ತಿದೆ. ಆದರೆ, ಕುಪ್ಪಂನಿಂದ ದೋಣಿಮಡಗು ಗ್ರಾಮ ಪಂಚಾಯಿತಿ ಮೂಲಕ ಮಾಲೂರು ತಾಲ್ಲೂಕು ಮೂಲಕ ಹೊಸೂರು ಹೈ ವೇ ರಸ್ತೆ ಮಾರ್ಗವಾಗಿ ಬೆಂಗಳೂರು ತಲುಪುವಂತೆ ಯೋಜನೆ ರೂಪಿಸಲಾಗಿದೆ. ಈ ರಸ್ತೆಗೆ ಕಾಮಸಮುದ್ರ ಹಾಗೂ ಬೂದಿಕೋಟೆ ಹೋಬಳಿಯ 17 ಗ್ರಾಮಗಳ ರೈತರು ತಮ್ಮ ಜಮೀನುಗಳನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಈ ಭಾಗದಲ್ಲಿ ಕೃಷಿಯನ್ನೇ ಹಲವು ರೈತರು ನಂಬಿಕೊಂಡಿದ್ದಾರೆ.
Bengaluru Expressway: ಈ ಭಾಗದ ರೈತರಿಗೆ ಸಂಕಷ್ಟ
ಇನ್ನು ಈ ಉದ್ದೇಶಿತ ಎಕ್ಸ್ಪ್ರೆಸ್ ವೇ ದೋಣಿಮಡಗು ಗ್ರಾಮ ಪಂಚಾಯಿತಿ, ತನಿಮಡಗು, ಬತ್ತಲಾಯೂರು, ಗುಂಡಾರ್ಲಹಳ್ಳಿ, ಬುವನಹಳ್ಳಿ, ಚಿನ್ನಕಾಮನಹಳ್ಳಿ, ತಪಲ್ಲನಹಳ್ಳಿ ಗ್ರಾಪಂ ಕಳವಂಚಿ, ಮಿಟ್ಟಹಳ್ಳಿ, ಬಂದಾರ್ಲಹಳ್ಳಿ, ಕೀರಮಂದೆ, ಬೂದಿಕೋಟೆ ಹೋಬಳಿಯ ಬಲಮಂದೆ ಕದಿರೇನಹಳ್ಳಿ, ಗಂದೋಡಿತಿಮ್ಮನಹಳ್ಳಿ, ನಾಗೇನಹಳ್ಳಿ, ಗುಲ್ಲಹಳ್ಳಿ, ಗೊಡಗುಮಂದೆ, ಬೊಪ್ಪನಹಳ್ಳಿ ಮತ್ತು ಪಾತರಾಮಗುಳ್ಳಿ ಗ್ರಾಮಗಳ ಮೂಲಕ ನಾಲ್ಕು ಪಥಗಳ ರಸ್ತೆ ನಿರ್ಮಾಣವಾಗಲಿದೆ ಎಂದು ಹೇಳಲಾಗಿದೆ.












Click it and Unblock the Notifications