ಕಾಂಗ್ರೆಸ್ ಟಿಕೆಟಿನಿಂದ ಸ್ಪರ್ಧಿಸುತ್ತಿರುವ ಆರು ಬ್ರಾಹ್ಮಣರು
Recommended Video
ಹಲವು ಸುತ್ತಿನ ಮಾತುಕತೆ, ಕಸರತ್ತಿನ ನಂತರ ಅಳೆದುತೂಗಿ ಕಾಂಗ್ರೆಸ್ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. 224 ಕ್ಷೇತ್ರಗಳ ಪೈಕಿ 218 ಸೀಟಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಇನ್ನು ಐದು ಕ್ಷೇತ್ರಕ್ಕೆ ಮಾತ್ರ ಅಭ್ಯರ್ಥಿ ಅಂತಿಮವಾಗಬೇಕಿದೆ. ಮೇಲುಕೋಟೆಯಲ್ಲಿ ಕಾಂಗ್ರೆಸ್ ಸ್ಪರ್ಧಿಸುತ್ತಿಲ್ಲ.
ಬ್ರಾಹ್ಮಣರ ಈ ಬೇಡಿಕೆ ಈಡೇರಿಸುವವರಿಗೆ ಚುನಾವಣೆಯಲ್ಲಿ ಮತ
ಕಾಂಗ್ರೆಸ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಆರು ಬ್ರಾಹ್ಮಣರೂ ಸ್ಥಾನ ಪಡೆದಿದ್ದಾರೆ. ಉಳಿದಂತೆ ಲಿಂಗಾಯತ ಮತ್ತು ಹಿಂದುಳಿದ ವರ್ಗ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಕಾಂಗ್ರೆಸ್ ಟಿಕೆಟಿನಿಂದ ಸ್ಪರ್ಧಿಸುತ್ತಿರುವ ಆರು ಬ್ರಾಹ್ಮಣರಲ್ಲಿ ಕಳೆದ ಚುನಾವಣೆಯಲ್ಲಿ ಜಯ ಸಾಧಿಸಿದ್ದವರು ಐವರು ಮತ್ತು ಒಬ್ಬರು ಹೊಸಬರು.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಆರು ಅಭ್ಯರ್ಥಿಗಳು ಸ್ಪರ್ಧಿಸುತ್ತಿರುವ ಕ್ಷೇತ್ರದಲ್ಲಿ ಬ್ರಾಹ್ಮಣರು ಬಹುಸಂಖ್ಯಾತರಂದೇನಲ್ಲ, ಆದರೆ ಕ್ಷೇತ್ರದಲ್ಲಿ ಅವರಿಗಿರುವ ಹಿಡಿತವನ್ನು ಆಧರಿಸಿ ಟಿಕೆಟ್ ನೀಡಲಾಗಿದೆ ಎನ್ನುತ್ತವೆ ಕಾಂಗ್ರೆಸ್ ವಲಯಗಳು. ಕಳೆದ ಬಾರಿ ಗೆದ್ದವರನ್ನು ಬಿಟ್ಟು, ಒಬ್ಬರು ಹೊಸಬರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.
ಒಟ್ಟು ಘೋಷಣೆಯಾಗಿರುವ ಕಾಂಗ್ರೆಸ್ ಪಟ್ಟಿಯ 218 ಅಭ್ಯರ್ಥಿಗಳಲ್ಲಿ, ಅಲ್ಪಸಂಖ್ಯಾತ ಮತ್ತು ಮುಸ್ಲಿಮರಿಗೆ 20, ಬ್ರಾಹ್ಮಣ 06, ಎಸ್ ಸಿ 31, ಒಬಿಸಿ 27, ಎಸ್ಟಿ 24, ಕುರುಬ 17, ಇತರರು 6, ಒಕ್ಕಲಿಗ 42, ವೀರಶೈವ ಮತ್ತು ಲಿಂಗಾಯತ ಸಮುದಾಯಕ್ಕೆ 45 ಸೀಟು ಹಂಚಲಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಟಿಕೆಟ್ ರಾಜಕೀಯ
ಕಾಂಗ್ರೆಸ್ಸಿನಿಂದ ಇನ್ನೂ ಐದು ಕ್ಷೇತ್ರಗಳಿಗೆ ( ಶಾಂತಿನಗರ, ನಾಗಠಾಣ, ಸಿಂಧಗಿ, ಕಿತ್ತೂರು ಮತ್ತು ರಾಯಚೂರು) ಅಭ್ಯರ್ಥಿಗಳ ಹೆಸರು ಅಂತಿಮವಾಗಬೇಕಾಗಿದ್ದು, ಈ ಕ್ಷೇತ್ರಗಳಲ್ಲಿ ಬ್ರಾಹ್ಮಣ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡುವ ಸಾಧ್ಯತೆ ಕಮ್ಮಿ. ಕಾಂಗ್ರೆಸ್ ಟಿಕೆಟ್ ಪಡೆದ 6 ಬ್ರಾಹ್ಮಣ ಸಮುದಾಯದ ಅಭ್ಯರ್ಥಿಗಳು, ಮುಂದೆ ಓದಿ..
ಯಲ್ಲಾಪುರದಿಂದ ಶಿವರಾಮ ಹೆಬ್ಬಾರ್
ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ಕ್ಷೇತ್ರದಿಂದ ಕಾಂಗ್ರೆಸ್, ಅರಬೈಲು ಶಿವರಾಮ ಹೆಬ್ಬಾರ್ ಅವರಿಗೆ ಟಿಕೆಟ್ ನೀಡಿದೆ. ಕಳೆದ ಅಂದರೆ 2013ರ ಚುನಾವಣೆಯಲ್ಲಿ ಶಿವರಾಮ ಹೆಬ್ಬಾರ್, ಬಿಜೆಪಿಯ ಪಾಟೀಲ್ ವೀರಭದ್ರಗೌಡ ಶಿವನಗೌಡ ಪಾಟೀಲ್ ಅವರನ್ನು 24,492 ಮತಗಳ ಅಂತರದಿಂದ ಸೋಲಿಸಿ ಆಯ್ಕೆಯಾಗಿದ್ದರು. 2008ರ ಚುನಾವಣೆಯಲ್ಲಿ ಹೆಬ್ಬಾರ್, ಬಿಜೆಪಿಯ ವಿ ಎಸ್ ಪಾಟೀಲ್ ಎದುರು 2,485 ಮತಗಳ ಅಂತರದಿಂದ ಪರಾಭವಗೊಂಡಿದ್ದರು.
ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸನ್ನ ಕುಮಾರ್
ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ-ಕೆಜೆಪಿ ತೊಡಕಿನ ಭರ್ಜರಿ ಲಾಭವನ್ನು ಕಾಂಗ್ರೆಸ್ ಪಡೆದಿತ್ತು. ಪಕ್ಷದ ಅಭ್ಯರ್ಥಿ ಕೆ ಬಿ ಪ್ರಸನ್ನ ಕುಮಾರ್, ಕೆಜೆಪಿ ಅಭ್ಯರ್ಥಿ ಎಸ್ ರುದ್ರೇಗೌಡ ಅವರನ್ನು ಸೋಲಿಸಿದ್ದರು. ಅತ್ಯಂತ ಜಿದ್ದಾಜಿದ್ದಿಯಲ್ಲಿ ಮುಕ್ತಾಯಗೊಂಡ ಈ ಫಲಿತಾಂಶದಲ್ಲಿ ಪ್ರಸನ್ನ ಕುಮಾರ್, ರುದ್ರೇಗೌಡ ಅವರನ್ನು ಕೇವಲ 278 ಮತಗಳ ಅಂತರದಿಂದ ಸೋಲಿಸಿದ್ದರು. 2008ರ ಚುನಾವಣೆಯಲ್ಲಿ ಈಶ್ವರಪ್ಪ ಈ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು.
ರಮೇಶ್ ಕುಮಾರ್ - ಶ್ರೀನಿವಾಸಪುರ
ಕೋಲಾರ ಜಿಲ್ಲೆಯ ಪ್ರಭಾವಿ ರಾಜಕಾರಣಿ ಕೆ ಆರ್ ರಮೇಶ್ ಕುಮಾರ್ ಶ್ರೀನಿವಾಸಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಸಿದ್ದರಾಮಯ್ಯನವರ ಸರಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ರಮೇಶ್ ಕುಮಾರ್ ಈ ಹಿಂದೆ ಸ್ಪೀಕರ್ ಆಗಿಯೂ ಕೆಲಸ ಮಾಡಿದ್ದರು. ಕಳೆದ ಚುನಾವಣೆಯಲ್ಲಿ ರಮೇಶ್ ಕುಮಾರ್, ಜೆಡಿಎಸ್ ಅಭ್ಯರ್ಥಿ ವೆಂಕಟಶಿವರೆಡ್ಡಿಯವರನ್ನು 3,893 ಮತಗಳ ಅಂತರದಿಂದ ಸೋಲಿಸಿದ್ದರು. 2008ರ ಚುನಾವಣೆಯಲ್ಲಿ ರಮೇಶ್ ಕುಮಾರ್, ರೆಡ್ಡಿಯವರ ವಿರುದ್ದ 3,669 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.
ದಿನೇಶ್ ಗುಂಡೂರಾವ್ - ಗಾಂಧಿನಗರ
ಸಿದ್ದರಾಮಯ್ಯನವರ ಸರಕಾರ ಅಧಿಕಾರಕ್ಕೆ ಬಂದಾಗ ಆಹಾರ ಮತ್ತು ನಾಗರೀಕ ಪೂರೈಕೆ ಖಾತೆಯ ಸಚಿವರಾಗಿದ್ದ ದಿನೇಶ್ ಗುಂಡೂರಾವ್ ಯಶಸ್ವಿ ಅನ್ನಭಾಗ್ಯ ಯೋಜನೆಯ ರೂವಾರಿ. ಬೆಂಗಳೂರು ಗಾಂಧಿನಗರ ಕ್ಷೇತ್ರದಿಂದ ಸತತವಾಗಿ ಪ್ರತಿನಿಧಿಸುತ್ತಿರುವ ದಿನೇಶ್ ಈ ಬಾರಿಯೂ ಅಲ್ಲಿಂದಲೇ ಸ್ಪರ್ಧಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಪಿ ಸಿ ಮೋಹನ್ ಅವರನ್ನು 22,607 ಮತಗಳ ಅಂತರದಿಂದ, 2008ರ ಚುನಾವಣೆಯಲ್ಲಿ ಪಿ ಸಿ ಮೋಹನ್ ಅವರನ್ನು 6,946 ಮತಗಳ ಅಂತರದಿಂದ ದಿನೇಶ್ ಸೋಲಿಸಿದ್ದರು.
ಆರ್ ವಿ ದೇಶಪಾಂಡೆ - ಹಳಿಯಾಳ
ಸಿದ್ದರಾಮಯ್ಯ ಸರಕಾರದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾಗಿರುವ ದೇಶಪಾಂಡೆ, ಕಳೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸುನಿಲ್ ಹೆಗ್ದೆ ಅವರನ್ನು 5,939 ಮತಗಳ ಅಂತರದಿಂದ ಸೋಲಿಸಿದ್ದರು. ಬ್ರಾಹ್ಮಣ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ಷೇತ್ರದಲ್ಲಿದ್ದಾರೆ. 2008ರ ಚುನಾವಣೆಯಲ್ಲಿ ದೇಶಪಾಂಡೆ ಇಲ್ಲಿ ಸೋಲು ಅನುಭವಿಸಿದ್ದರು.
ವಿಶ್ವಾಸ ವಸಂತ ವೈದ್ಯ - ಸೌಂದತ್ತಿ ಯಲ್ಲಮ್ಮ
ಬೆಳಗಾವಿ ಜಿಲ್ಲೆ ಸೌಂದತ್ತಿ ಯಲ್ಲಮ್ಮ (ಸವದತ್ತಿ) ಕ್ಷೇತ್ರದಿಂದ ಈ ಬಾರಿ ಕಾಂಗ್ರೆಸ್ ವಿಶ್ವಾಸ ವಸಂತ ವೈದ್ಯಗೆ ಟಿಕೆಟ್ ನೀಡಿದೆ. 2008ರಲ್ಲಿ ಕಾಂಗ್ರೆಸ್ಸಿನ ಸಿದ್ರಾಮಪ್ಪ ಕೌಜಲಗಿ, ಬಿಜೆಪಿ ವಿರುದ್ದ ಸೋಲು ಅನುಭವಿಸಿದ್ದರು. 2013ರಲ್ಲಿ ರವೀಂದ್ರ ಯಾಲಿಗರ್ ಸೋಲು ಅನುಭವಿಸಿದ್ದರು. ಎರಡೂ ಬಾರಿ ಬಿಜೆಪಿಯ ವಿಶ್ವನಾಥ್ ಚಂದ್ರಶೇಖರ ಮಾಮನಿ ಜಯಸಾಧಿಸಿದ್ದರು.