Rajat Patidar: ಆರ್ಸಿಬಿಗೆ ಹೋಗಲೇಬಾರದು ಅಂದುಕೊಂಡಿದ್ದೆ: ನಾಯಕ ಪಾಟಿದಾರ್ ಹಿಂಗ್ ಹೇಳಿದ್ಯಾಕೆ?
Rajat Patidar: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರಜತ್ ಪಾಟಿದಾರ್ ನಾಯಕತ್ವದಲ್ಲಿ ಸತತ (2025, 2026) ಎರಡು ಬಾರಿ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿದಿದೆ. ಈ ಬಾರಿಯ ಫೈನಲ್ ಪಂದ್ಯದಲ್ಲಿ ಬಲಿಷ್ಠ ಗುಜರಾಟ್ ಟೈಟಾನ್ಸ್ ಅನ್ನು ಮಣಿಸುವ ಮೂಲಕ ಈ ಸಾಧನೆ ಮಾಡಿದೆ. ಆದರೆ ಇದರ ಬೆನ್ನಲ್ಲೇ ನಾಯಕ ಪಾಟಿದಾರ್ ಅಚ್ಚರಿ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಹಾಗಾದ್ರೆ ಅದೇನು ಅಂತೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ರಜತ್ ಪಾಟಿದಾರ್ ಆರ್ಸಿಬಿ ತಂಡಕ್ಕೆ ಮೊದಲ ಐಪಿಎಲ್ ಪ್ರಶಸ್ತಿ ತಂದುಕೊಟ್ಟ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೊತೆಗೆ ಐಪಿಎಲ್ 2026ರ ಟ್ರೋಫಿ ಗೆಲ್ಲುವ ಮೂಲಕ ಸತತ ಎರಡನೇ ಬಾರಿಗೆ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿ ಗಮನ ಸೆಳೆದಿದ್ದಾರೆ. ಇದರ ಬೆನ್ನಲ್ಲೇ ಅವರು ನೀಡಿರುವ ಹೇಳಿಕೆ ಭಾರಿ ವೈರಲ್ ಆಗುತ್ತಿದೆ.

'ಆರ್ಸಿಬಿ ಸೇರುವುದಕ್ಕೆ ಹಿಂಜರಿಕೆ ಇತ್ತು'
ಯೂಟ್ಯೂಬ್ನ ರೋಟೋರಿಸ್ ಚಾನೆಲ್ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಪಾಟಿದಾರ್, 'ನನಗೆ ಆರ್ಸಿಬಿ ತಂಡವನ್ನು ಮರಳಿ ಸೇರಲು ಇಷ್ಟವಿರಲಿಲ್ಲ. ಅವರು ನನ್ನನ್ನು ಕೇವಲ ಒಬ್ಬ ಬದಲಿ ಆಟಗಾರನಾಗಿ ಕರೆಯುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿ ತಂಡದಲ್ಲಿ ಆಡಲು ಹೆಚ್ಚಿನ ಅವಕಾಶಗಳು ಸಿಗುವುದಿಲ್ಲ ಎಂಬ ಸಣ್ಣ ಹಿಂಜರಿಕೆ ಇತ್ತು. ತಂಡದ ತರಬೇತಿ ಶಿಬಿರಕ್ಕೆ ಸೇರಿದಾಗಲೂ ನನಗೆ ಅಲ್ಲಿನವರಿಂದ ಇದೇ ರೀತಿಯ ಪ್ರತಿಕ್ರಿಯೆ ಸಿಕ್ಕಿತ್ತು,' ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
'ಆರ್ಸಿಬಿಗೆ ಹೋಗಬಾರದು ಅಂದುಕೊಂಡಿದ್ದೆ'
ಮುಂದುವರಿದು ಮಾತನಾಡಿದ ಅವರು, 'ನಾವು ನಿನ್ನನ್ನು ಬದಲಿ ಆಟಗಾರನಾಗಿ ತಂದಿದ್ದೇವೆ, ಆದ್ದರಿಂದ ಆರಾಮಾಗಿ ಇರು. ಯಾರಾದರೂ ಪ್ರಮುಖ ಆಟಗಾರನಿಗೆ ಗಾಯವಾದರೆ ಮಾತ್ರ ನಿನಗೆ ಅವಕಾಶ ಸಿಗುತ್ತದೆ ಎಂದು ತಂಡದ ಮ್ಯಾನೇಜ್ಮೆಂಟ್ ನನಗೆ ಸ್ಪಷ್ಟವಾಗಿ ಹೇಳಿತ್ತು. ಅದೇ ಸಮಯದಲ್ಲಿ ನನ್ನ ಮದುವೆಯ ದಿನಾಂಕ ಕೂಡ ನಿಶ್ಚಯವಾಗಿತ್ತು. ಇಂತಹ ಸಂದರ್ಭದಲ್ಲಿ ನಾನು ಹಲವರ ಜೊತೆ ಚರ್ಚಿಸಿದೆ. ಇಡೀ ಸೀಸನ್ ಕೇವಲ ಬೆಂಚ್ ಮೇಲೆ ಕುಳಿತು ಕಾಲ ಕಳೆಯುವುದರಲ್ಲಿ ನನಗೆ ಆಸಕ್ತಿ ಇರಲಿಲ್ಲ. ಹಾಗಾಗಿ ನಾನು ಆರ್ಸಿಬಿಗೆ ಹೋಗಬಾರದು ಎಂದುಕೊಂಡಿದ್ದೆ,' ಎಂದು ಪಾಟಿದಾರ್ ಹೇಳಿದ್ದಾರೆ.
ಪಾಟಿದಾರ್ ಆರ್ಸಿಬಿ ಸೇರಿದ್ದು ಯಾವಾಗ?
2021ರ ಮಿನಿ ಹರಾಜಿನಲ್ಲಿ ಆರ್ಸಿಬಿ ತಂಡವು ಪಾಟಿದಾರ್ ಅವರನ್ನು 20 ಲಕ್ಷ ರೂಪಾಯಿಗೆ ಖರೀದಿಸಿತ್ತು. ಆದರೆ ಆ ಸೀಸನ್ನಲ್ಲಿ ಆಡಿದ 4 ಪಂದ್ಯಗಳಲ್ಲಿ ಕೇವಲ 71 ರನ್ ಗಳಿಸಿ ಅವರು ವೈಫಲ್ಯ ಅನುಭವಿಸಿದ್ದರು. ಇದರಿಂದಾಗಿ 2022ರ ಮೆಗಾ ಹರಾಜಿನಲ್ಲಿ ಅವರು ಅನ್ಸೋಲ್ಡ್ ಆಗಿ ಉಳಿದಿದ್ದರು. ಆದರೆ ಸೀಸನ್ ಮಧ್ಯದಲ್ಲಿ ಲವ್ನೀತ್ ಸಿಸೋಡಿಯಾ ಅವರಿಗೆ ಗಾಯವಾದಾಗ ಆರ್ಸಿಬಿ ಮತ್ತೆ ಪಾಟಿದಾರ್ ಅವರನ್ನು ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಂಡಿತು.
ಪಾಟಿದಾರ್ ಲಕ್ ಚೇಂಜ್ ಆಗಿದ್ದು ಯಾವಾಗ?
ಸಿಕ್ಕ ಈ ಎರಡನೇ ಅವಕಾಶವನ್ನು ರಜತ್ ಪಾಟಿದಾರ್ ಅಚ್ಚುಕಟ್ಟಾಗಿ ಬಳಸಿಕೊಂಡರು. ಆ ಸೀಸನ್ನ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಅಬ್ಬರದ ಅಜೇಯ 112 ರನ್ ಸಿಡಿಸಿ ಜಗತ್ತೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದರು. ಅಲ್ಲಿಂದ ರಜತ್ ಪಾಟಿದಾರ್ ಅವರ ವೃತ್ತಿಜೀವನ ಸಂಪೂರ್ಣವಾಗಿ ಬದಲಾಯಿತು.
ಐಪಿಎಲ್ 2025ರ ಮೆಗಾ ಹರಾಜಿನ ನಂತರ ಅವರಿಗೆ ಆರ್ಸಿಬಿ ತಂಡದ ನಾಯಕತ್ವದ ಜವಾಬ್ದಾರಿಯನ್ನು ನೀಡಲಾಯಿತು. ನಾಯಕನಾದ ಮೊದಲ ವರ್ಷದಲ್ಲೇ ಆರ್ಸಿಬಿಯ ಸುದೀರ್ಘ ವರ್ಷಗಳ ಟ್ರೋಫಿ ಬರವನ್ನು ನೀಗಿಸಿದ ಪಾಟಿದಾರ್, ಇದೀಗ ಐಪಿಎಲ್ 2026ರಲ್ಲೂ ಪ್ರಶಸ್ತಿ ಗೆಲ್ಲುವ ಮೂಲಕ ಸತತ ಎರಡು ಬಾರಿ ತಂಡವನ್ನು ಚಾಂಪಿಯನ್ ಮಾಡಿದ ಅಪ್ರತಿಮ ನಾಯಕನಾಗಿ ಇತಿಹಾಸದ ಪುಟ ಸೇರಿದ್ದಾರೆ. ಒಂದು ವೇಳೆ ಅಂದು ಅವರು ಆರ್ಸಿಬಿ ಆಫರ್ ತಿರಸ್ಕರಿಸಿದ್ದರೆ ಇಂದು ಆರ್ಸಿಬಿಯ ಚಿತ್ರಣವೇ ಬೇರೆಯಾಗಿರುತ್ತಿತ್ತು ಎನ್ನುವ ಮಾತುಗಳು ಕೇಳಿಬರುತ್ತಿವೆ.












Click it and Unblock the Notifications