ರಾಜ್ಯ ರಾಜಕಾರಣಕ್ಕೆ ಶನಿ ಕಾಟವಂತೆ!
ಬೆಂಗಳೂರು, ಜ. 25: ರಾಜ್ಯ ರಾಜಕಾರಣಕ್ಕೆ ಒಂದು ರೀತಿಯಲ್ಲಿ ಶನಿಕಾಟ ಶುರುವಾಗಿದೆ. ಎರಡೂ ರಾಷ್ಟ್ರೀಯ ಪಕ್ಷಗಳು ತಮ್ಮ ಆಂತರಿಕ ಸಮಸ್ಯೆಗಳಿಂದ ಬಳಲುತ್ತಿವೆ. ಅಧಿಕೃತ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ನಲ್ಲಿ ಸಾರಥಿಯೆ ಇಲ್ಲದಂತಾಗಿದೆ. ಮತ್ತೊಂದೆಡೆ ಸಂಪುಟ ವಿಸ್ತರಣೆ ಸಂಕಟ ಆಡಳಿತ ಪಕ್ಷ ಬಿಜೆಪಿಯನ್ನು ಕಾಡುತ್ತಿದೆ. ಇನ್ನು ಜೆಡಿಎಸ್ ಮಾತ್ರ ಸಧ್ಯಕ್ಕೆ ಆಂತರಿಕವಾಗಿ ಯಾವುದೇ ಗೊಂದಲಗಳಿಲ್ಲ.
ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಆಂತರಿಕ ಕಚ್ಚಾಟದ ನೇರ ಪರಿಣಾಮ ರಾಜ್ಯದ ಜನತೆಯೆ ಮೇಲೆ ಆಗುತ್ತಿದೆ. ಕೇವಲ 17 ಜನರು ಮಾತ್ರ ಅಧಿಕಾರ ನಡೆಸುತ್ತಿದ್ದು, ಸರ್ಕಾರವನ್ನು ಪ್ರಶ್ನಿಸಲು ಅಧಿಕೃತ ವಿರೋಧ ಪಕ್ಷ ಕಾಂಗ್ರೆಸ್ನಲ್ಲಿ ಸಾರಥಿಯೆ ಇಲ್ಲ. ವಿರೋಧ ಪಕ್ಷ ನಾಯಕರೂ ಇಲ್ಲ, ಕೆಪಿಸಿಸಿ ಅಧ್ಯಕ್ಷರ ನೇಮಕವೂ ಆಗುತ್ತಿಲ್ಲ. ದೆಹಲಿ ಚುನಾವಣೆಯ ಎಫೆಕ್ಟ್ ರಾಜ್ಯದ ಮೇಲಾಗುತ್ತಿದೆ. ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ತಲೆಕೆಡಿಕೊಂಡಿಲ್ಲ. ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ವಿರೋಧ ಪಕ್ಷದ ನಾಯಕರ ಸ್ಥಾನಕ್ಕೆ ಕಾಂಗ್ರೆಸ್ ಹೈಕಮಾಂಡ್ ನೇಮಕಾತಿ ಮಾಡುತ್ತಿಲ್ಲ.
ಬೆಂಗಳೂರಿಗೆ ಬರ್ತಿದ್ದಂತೆ ಬ್ರೇಕಿಂಗ್ ನ್ಯೂಸ್ ಕೊಟ್ಟ ಯಡಿಯೂರಪ್ಪ
ಒಂದು ರೀತಿಯಲ್ಲಿ ಉಪ ಚುನಾವಣೆಯಲ್ಲಿ ಗೆದ್ದು ಬೀಗಿದ್ದ ಬಿಜೆಪಿ ಹಾಗೂ ಸೋತು ಸುಣ್ಣವಾಗಿದ್ದ ಕಾಂಗ್ರೆಸ್ ಪಕ್ಷ, ಎರಡೂ ಪಕ್ಷಗಳ ಸ್ಥಿತಿ ಒಂದೇ ಆಗಿದೆ.
ಅಧಿಕೃತ ವಿರೋಧ ಪಕ್ಷದ ಸ್ಥಾನ ಎರಡು ತಿಂಗಳಿನಿಂದ ಖಾಲಿ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷಕ್ಕೆ ಇರುವಷ್ಟೆ ಮಹತ್ವ ವಿರೋಧ ಪಕ್ಷಕ್ಕಿದೆ. ಆದರೆ ಉಪ ಸಮರದ ಬಳಿಕ ವಿರೋಧ ಪಕ್ಷದ ನಾಯಕರ ಸ್ಥಾನವೆ ಖಾಲಿಯಿದೆ. ಉಪ ಸೋಲಿನ ನೈತಿಕ ಹೊಣೆಹೊತ್ತು ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ಕೊಟ್ಟಿದ್ದಾರೆ. ಮುಖ್ಯವಾಗಿ ವಿರೋಧ ಪಕ್ಷದ ನಾಯಕ ಸ್ಥಾನ ಖಾಲಿಯಿದೆ. ಸರ್ಕಾರವನ್ನು ಪ್ರಶ್ನೆ ಮಾಡಲು ಅಧಿಕೃತವಾಗಿ ವಿರೋಧ ಪಕ್ಷದ ನಾಯಕರೇ ಇಲ್ಲದಂತಾಗಿದೆ. ಮೂಲ-ವಲಸೆ ಕಾಂಗ್ರೆಸ್ ನಾಯಕರ ಕಿತ್ತಾಟದಲ್ಲಿ ರಾಜ್ಯದಲ್ಲಿ ಬಿಜೆಪಿ ಬಿಜೆಪಿ ಸರ್ಕಾರವನ್ನು ಪ್ರಶ್ನೆ ಮಾಡುವರೇ ಇಲ್ಲ ಎಂದು ಜನರು ಆಡಿಕೊಳ್ಳುವಂತಾಗಿದೆ.
ಬಿಜೆಪಿ ಸರ್ಕಾರ ಬರಲು ರಾಜೀನಾಮೆ ಕೊಟ್ಟವರ ಸ್ಥಿತಿ ಅಯೋಮಯ
ಬಿಜೆಪಿ ಸರ್ಕಾರ ರಾಜೀನಾಮೆ ಮೂಲಕ ತಮ್ಮ ಶಾಸಕ ಸ್ಥಾನ ತ್ಯಾಗ ಮಾಡಿ ಗೆದ್ದವರ ಸ್ಥಿತಿ ಅಯೋಮಯವಾಗಿದೆ. ಬಿಜೆಪಿ ಸರ್ಕಾರ ರಚನೆಗೆ ಸಹಾಯವಾಗುವಂತೆ 17 ಜನ ಕಾಂಗ್ರೆಸ್, ಜೆಡಿಎಸ್ ಶಾಸಕರು ರಾಜೀನಾಮೆ ಕೊಟ್ಟಿದ್ದರು. ಅದರಲ್ಲೂ ಮಾಜಿ ಸಚಿವ ಎಂಟಿಬಿ ನಾಗರಾಜ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು.ರಾಜೀನಾಮೆ ಕೊಟ್ಟಿದ್ದ 17 ಶಾಸಕರಲ್ಲಿ 12 ಜನರು ಮತ್ತೆ ಶಾಸಕರಾಗಿ ಆಯ್ಕೆ ಆದರೂ ಮಂತ್ರಿ ಆಗುವ ಭಾಗ್ಯ ಮಾತ್ರ ಇನ್ನೂ ಮರಿಚಿಕೆಯಾಗಿದೆ.
ಇನ್ನು ಸೋತವರಿಗೆ ಮಂತ್ರಿ ಪದವಿ ಇಲ್ಲ ಎಂದು ಸಿಎಂ ಯಡಿಯೂರಪ್ಪ ಹೇಳಿಕೆ ಕೊಟ್ಟಿರುವುದು ಗೆದ್ದವರಲ್ಲಿಯೂ ಆತಂಕವನ್ನುಂಟುಮಾಡಿದೆ. ಬಿಜೆಪಿ ಹೈಕಮಾಂಡ್ ಜೊತೆ ಮಾತನಾಡುವ ಸ್ಥಿತಿಯಲ್ಲಿಯೂ ಗೆದ್ದಿರುವ ಶಾಸಕರಿಲ್ಲ. ಹಾಗಾಗಿ ಮತ್ತೆ ಎಲ್ಲ 17 ಜನರೂ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ.
ಎಲ್ಲರಿಗೂ ಮಂತ್ರಿ ಸ್ಥಾನ ಕೊಡಲೇ ಬೇಕು
ರಾಜ್ಯ ಬಿಜೆಪಿ ನಾಯಕರು ಹಿಂದೆ ಮಾತು ಕೊಟ್ಟಂತೆ ಎಲ್ಲರನ್ನು ಮಂತ್ರಿ ಮಾಡಲೇ ಬೇಕು ಎಂದು ಮಾಜಿ ಸಚಿವ ಆರ್. ಶಂಕರ್ ಈಗಾಗಲೇ ಬಹಿರಂಗ ಹೇಳಿಕೆ ಕೊಟ್ಟಿದ್ದಾರೆ. ಬಿಜೆಪಿ ಸರ್ಕಾರ ಬರಲು ನಾವು ರಾಜೀನಾಮೆ ಕೊಟ್ಟಿದ್ದೇವೆ. ನಮಗೆ ಮೊದಲು ಮಾತು ಕೊಟ್ಟಂತೆ ಎಲ್ಲನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಮಾಜಿ ಸಚಿವರಾದ ಎಚ್. ವಿಶ್ವನಾಥ್ ಹಾಗೂ ಎಂಟಿಬಿ ನಾಗರಾಜ್ ಅವರನ್ನು ಮಂತ್ರಿ ಮಂಡಲಕ್ಕೆ ಸೇರಸಿಕೊಳ್ಳಲು ಬಿಜೆಪಿ ಸೇರಿರುವ ಎಲ್ಲ 17 ಜನರೂ ಒತ್ತಾಯ ಮಾಡುತ್ತಿದ್ದಾರೆ.
ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳದಿದ್ದರೆ ಅವರು ಬಿಜೆಪಿಯಲ್ಲಿ ಉಳಿಯುವುದು ಕಷ್ಟ ಎನ್ನುತ್ತಾರೆ ರಾಜಕೀಯ ಪರಿಣಿತರು. ಹಾಗಾಗಿ ಉಳಿದಿರುವ 17 ಸ್ಥಾನಗಳನ್ನು ಬಿಜೆಪಿಗೆ ಬಂದಿರುವವರಿಗೆ ಕೊಟ್ಟರೆ ಬಿಜೆಪಿಯಲ್ಲಿನ ಹಿರಿಯ ಶಾಸಕರನ್ನು ಸಮಾದಾನ ಮಾಡುವುದು ಯಡಿಯೂರಪ್ಪ ಅವರಿಗೆ ಕಷ್ಟವಾಗಲಿದೆ.
ದೆಹಲಿ ಚುನಾವಣೆ ಮುಗಿಯುವ ವರೆಗೆ ರಾಜ್ಯದ ಸ್ಥಿತಿ ಹೀಗೆ
ಎರಡೂ ರಾಷ್ಟ್ರೀಯ ಪಕ್ಷಗಳು ದೆಹಲಿ ಚುನಾವಣೆಯತ್ತ ಗಮನ ಕೊಟ್ಟಿವೆ. ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಸಮಯ ಕೊಡುತ್ತಿಲ್ಲ. ಅದೇ ರೀತಿ ಕೆಪಿಸಿಸಿ ಅಧ್ಯಕ್ಷರ ನೇಮಕ, ವಿರೋಧ ಪಕ್ಷದ ನಾಯಕರ ಆಯ್ಕೆಗೆ ಕಾಂಗ್ರೆಸ್ ಹೈಕಮಾಂಡ್ ತಲೆ ಕೆಡಿಸಿಕೊಳ್ಳುತ್ತಿಲ್ಲ.
ಜೆಡಿಎಸ್ ಸಂಘಟನೆ ದೃಷ್ಟಿಯಿಂದ ಮೊನ್ನೆಯಷ್ಟೆ ಅರಮನೆ ಮಯದಾನದಲ್ಲಿ ಸಮಾವೇಶ ಮಾಡಿದೆ. ಚುನಾವಣೆಯ ಸೋಲಿನ ಪರಾಮರ್ಶೆ ನಡೆಸಿದೆ. ಜೊತೆಗೆ ಸಿಎಎ ಹಾಗೂ ಎನ್ಆರ್ಸಿ ವಿರೋಧಿಸಿ ತನ್ನ ನಿರ್ಣಯಗಳನ್ನು ಅಂಗೀಕರಿಸಿದೆ.
ಬಿಜೆಪಿ ಹಾಗೂ ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ಕಡೆಗೆ ಗಮನ ಕೊಡುತ್ತಿಲ್ಲ. ತಮ್ಮ ರಾಜಕೀಯ ಹಿತಾಸಕ್ತಿಯನ್ನು ಮಾತ್ರ ನೋಡುತ್ತಿವೆ. ರಾಜ್ಯದ ನಾಯಕರುಗಳಿಗೂ ಎರಡೂ ರಾಷ್ಟ್ರೀಯ ಪಕ್ಷಗಳ ವರಿಷ್ಠರು ಸಮಯ ಕೊಡುತ್ತಿಲ್ಲ. ರಾಷ್ಟ್ರೀಯ ಪಕ್ಷಗಳ ರಾಜಕೀಯ ಮೇಲಾಟದ ನೇರ ಪರಿಣಾಮ ರಾಜ್ಯದ ಅಭಿವೃದ್ಧಿಮೇಲೆ ಆಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.