ಉಪಚುನಾವಣೆಯಲ್ಲಿ ದೊಡ್ಡ ನಾಯಕರ ಪ್ರತಿಷ್ಠೆಯ ದಂಗಲ್
ಬೆಂಗಳೂರು, ಅಕ್ಟೋಬರ್ 8: ಲೋಕಸಭಾ ಚುನಾವಣೆಗೂ ಮುನ್ನ ಕರ್ನಾಟಕದಲ್ಲಿ ಪ್ರತಿಷ್ಠೆಯ ದಂಗಲ್ ನಡೆಯಲಿದೆ. ಐದು ಉಪ ಚುನಾವಣೆಯಲ್ಲಿ ಗೆಲ್ಲುವುದು ದೋಸ್ತಿ ಸರ್ಕಾರ ಹಾಗೂ ಬಿಜೆಪಿಗೆ ಅನಿವಾರ್ಯವಾಗಿದೆ.
ಈ ಹಣಾಹಣಿಯಲ್ಲಿ ನಡೆಯಲಿದೆ ಮತದಾರರ ಪಲ್ಸ್ ಟೆಸ್ಟ್, ಈ ಚುನಾವಣೆಯನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಪಕ್ಷಗಳು ಪ್ರತಿಷ್ಠೆಯಾಗಿ ಸ್ವೀಕರಿಸಿವೆ. ಹೀಗಾಗಿ ಎರಡೂ ಕಡೆ ಘಟಾನುಘಟಿ ನಾಯಕರೇ ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಪಣತೊಟ್ಟು ಕಣಕ್ಕಿಳಿಯಲಿದ್ದಾರೆ.
ರಾಮನಗರಕ್ಕೆ ಎಚ್ಡಿ ಕುಮಾರಸ್ವಾಮಿ ಉಸ್ತುವಾರಿಯಾಗಿದ್ದರೆ ಮಂಡ್ಯಕ್ಕೆ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಅದೇ ರೀತಿ ಜಮಖಂಡಿಗೆ ಸಿದ್ದರಾಮಯ್ಯ, ಬಳ್ಳಾರಿಗೆ ಡಿಕೆ ಶಿವಕುಮಾರ್, ಶಿವಮೊಗ್ಗಕ್ಕೆ ಡಾ. ಜಿ ಪರಮೇಶ್ವರ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಉಸ್ತುವಾರಿ ವಹಿಸಿಕೊಳ್ಳುವ ಸಾಧ್ಯತೆ ಇದೆ.
ಲೋಕಸಭಾ ಹಾಗೂ ವಿಧಾನಸಭಾ ಉಪ ಚುನಾವಣೆಯ ಫಲಿತಾಂಶ ನೋಡಿಕೊಂಡು ಬಿಜೆಪಿಯು 2019ರ ಚುನಾವಣೆಗೆ ರಾಜ್ಯದ 28 ಕ್ಷೇತ್ರಗಳಿಗೆ ತಂತ್ರಗಾರಿಕೆ ರೂಪಿಸಲಿದೆ ಎಂದು ಹೇಳಲಾಗುತ್ತಿದೆ.

ಪ್ರಚಾರಕ್ಕೆ ಜೆಡಿಎಸ್ ತಂಡ ಸಿದ್ಧ
ಉಪ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ನಲ್ಲಿ ಪ್ರಚಾರಕ್ಕಾಗಿ ದೇವೇಗೌಡ, ಕುಮಾರಸ್ವಾಮಿ, ಎಚ್ ವಿಶ್ವನಾಥ್, ಮಧು ಬಂಗಾರಪ್ಪ, ಪುಟ್ಟರಾಜು, ಡಿಸಿ ತಮ್ಮಣ್ಣ ಅವರನ್ನೊಳಗೊಂಡ ತಂಡ ಸಿದ್ಧತೆ ಮಾಡಿಕೊಂಡಿದೆ.

ಕಾಂಗ್ರೆಸ್ ನಿಂದ ಸಿದ್ದರಾಮಯ್ಯ ನೇತೃತ್ವದ ತಂಡ
ಕಾಂಗ್ರೆಸ್ ನಲ್ಲಿ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಾ. ಜಿ ಪರಮೇಶ್ವರ, ದಿನೇಶ್ ಗುಂಡೂರಾವ್, ಈಶ್ವರ ಖಂಡ್ರೆ, ಸಿ.ಎಂ ಇಬ್ರಾಹಿಂ ಅವರನ್ನೊಳಗೊಂಡ ತಂಡ ರಚನೆಯಾಗುತ್ತಿದೆ. ಉಪ ಚುನಾವಣೆ ಸಂಬಂಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕೆಸಿ ವೇಣುಗೋಪಾಲ್ ಅವರು ಎಚ್ಡಿ ದೇವೇಗೌಡ ಹಾಗೂ ಸಿಂಎ ಕುಮಾರಸ್ವಾಮಿ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.

ಜನರ ನಾಡಿಮಿಡಿತವರಿಯಲು ವೇದಿಕೆ ಸಿದ್ಧ
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಮುಂದಿನ ಲೋಕಸಭಾ ಚುನಾವಣೆಯನ್ನೂ ಎದುರಿಸಲು ನಿರ್ಧರಿಸಿರುವುದರಿಂದ ಮೂರೂ ಕ್ಷೇತ್ರಗಳ ಉಪ ಚುನಾವಣೆ ಒಂದು ರೀತಿಯಲ್ಲಿ ಪರೀಕ್ಷೆಯಂತಿದೆ. ಈ ಚುನಾವಣೆಯ ಫಲಿತಾಂಶದಿಂದ ಮತದಾರರ ನಾಡಿಮಿಡಿತ ಏನಿರಬಹುದು ಎಂಬುದು ತಿಳಿಯಲಿದೆ. ಬಿಜೆಪಿಯ ಕೇಂದ್ರ ನಾಯಕರು ಸಹ ಇಂಥದ್ದೊಂದು ನಾಡಿಮಿಡಿತವನ್ನು ಅರಿಯುವ ಸಲುವಾಗಿಯೇ ಮೂರು ಲೋಕಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಆಗಲಿ ಎಂದು ಬಯಸಿದ್ದಾರೆ.

ಲೋಕ ಉಪಚುನಾವಣೆಗೆ ಕಾಂಗ್ರೆಸ್, ಬಿಜೆಪಿ ಜೆಡಿಎಸ್ ಅಸಮಾಧಾನ
ನಾಲ್ಕು ತಿಂಗಳ ಅವಧಿ ಉಳಿದಿರುವ ಮೂರೂ ಲೋಕಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಿಸಿರುವ ಕೇಂದ್ರ ಚುನಾವಣಾ ಆಯೋಗದ ನಿರ್ಧಾರದ ಬಗ್ಗೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಬಹಿರಂಗವಾಗಿ ಅಸಮಾಧಾನ ಹೊರಹಾಕಿವೆ. ಲೋಕಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ಈಗ ಅಗತ್ಯವಿತ್ತೇ ಎಂಬ ವಿಷಯ ಸಾಮಾಜಿಕ ಜಾಲತಾಣದಲ್ಲೂ ತೀವ್ರ ಟೀಕೆಗೆ ಗುರಿಯಾಗಿದೆ.












Click it and Unblock the Notifications