ಉಪಚುನಾವಣೆಯಲ್ಲಿ ಸೈಲೆಂಟ್: ಒಂದೊಂದಾಗಿ ಕಾರಣ ಬಿಚ್ಚಿಟ್ಟ ಡಿ.ಕೆ.ಶಿವಕುಮಾರ್
"ಡಿ.ಕೆ.ಶಿವಕುಮಾರ್ ಹಿಂದಿನ ಫಾರಂನಲ್ಲಿದ್ದಿದ್ದರೆ ಉಪಚುನಾವಣೆಯ ರಂಗೇ ಬೇರೆಯಿರುತ್ತಿತ್ತು" ಇದು, ಮೂರೂ ಪಕ್ಷಗಳ ಕಾರ್ಯಕರ್ತರ ವಲಯದಲ್ಲಿ ಕೇಳಿಬರುತ್ತಿರುವ ಸಾಮಾನ್ಯ ಮಾತು.
ಜೈಲಿಗೆ ಹೋಗುವ ಮುನ್ನ, ಖುದ್ದು ಡಿಕೆಶಿಯೇ ಅನರ್ಹ ಶಾಸಕರ ವಿರುದ್ದ ತೊಡೆತಟ್ಟಿದ್ದರು. ಆದರೆ, ಬದಲಾದ ಪರಿಸ್ಥಿತಿಯಲ್ಲಿ ಡಿ.ಕೆ.ಶಿವಕುಮಾರ್ ಹಿಂದಿನಂತಿಲ್ಲ.
ಹದಿನೈದು ಕ್ಷೇತ್ರಗಳ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಸೋಮವಾರ (ನ 18) ಕೊನೆಯ ದಿನವಾಗಿತ್ತು. ಚಿಕ್ಕಬಳ್ಳಾಪುರದಲ್ಲಿ ಪಕ್ಷದ ಅಭ್ಯರ್ಥಿ ಎಂ.ಅಂಜನಪ್ಪ ನಾಮಪತ್ರ ಸಲ್ಲಿಸುವಾಗ ಡಿಕೆಶಿ ಅಲ್ಲಿ ಹಾಜರಿದ್ದರು.
ನೀವ್ಯಾಕೆ, ನೀವಾಯಿತು ನಿಮ್ಮ ಕೆಲಸವಾಯಿತು ಎನ್ನುವ ಹಾಗೆ ಸೈಲೆಂಟ್ ಆಗಿದ್ದೀರಾ ಎನ್ನುವ ಪ್ರಶ್ನೆಗೆ, ಡಿ.ಕೆ.ಶಿವಕುಮಾರ್ ಉತ್ತರ ನೀಡಿದ್ದಾರೆ. "ಎಲ್ಲವೂ ಕಾಂಗ್ರೆಸ್ ಹೈಕಮಾಂಡಿಗೆ ತಿಳಿದಿದೆ" ಎಂದು ಹೇಳುತ್ತಾ, ಡಿಕೆಶಿ ಕಾರಣವನ್ನು ಬಿಚ್ಚಿಟ್ಟಿದ್ದಾರೆ.

ನನ್ನ ಆರೋಗ್ಯದ ಕಡೆ ಗಮನಕೊಡಬೇಕಿದೆ
"ಸದ್ಯ ನಾನು ನನ್ನ ಆರೋಗ್ಯದ ಕಡೆ ಗಮನಕೊಡಬೇಕಿದೆ. ಹಿಂದಿನ ಹಾಗೇ ಕೆಲಸ ಮಾಡಲು, ಆರೋಗ್ಯ ಪರ್ಮಿಟ್ ಮಾಡುತ್ತಿಲ್ಲ. ನೀವು ಮಾಧ್ಯಮದವರು ಸುಮ್ಮನಿದ್ದರೆ, ನಾನೂ ಸುಮ್ಮನಿರುತ್ತೇನೆ" ಎಂದು ಡಿ.ಕೆ.ಶಿವಕುಮಾರ್, ನಗುತ್ತಾ ಹೇಳಿದರು.

ರಾಜ್ಯ ಮತ್ತು ಕೇಂದ್ರದ ನಮ್ಮ ಪಕ್ಷದ ಮುಖಂಡರಿಗೆ ನನ್ನ ಪರಿಸ್ಥಿತಿಯ ಅರಿವಿದೆ
"ರಾಜ್ಯ ಮತ್ತು ಕೇಂದ್ರದ ನಮ್ಮ ಪಕ್ಷದ ಮುಖಂಡರಿಗೆ ನನ್ನ ಪರಿಸ್ಥಿತಿಯ ಅರಿವಿದೆ. ಹಾಗಾಗಿ, ಹೆಚ್ಚಿನ ಪರಿಶ್ರಮವನ್ನು ಅವರೇ ತೆಗೆದುಕೊಂಡಿದ್ದಾರೆ. ನನಗೆ ಎಷ್ಟು ಸಾಧ್ಯವೋ, ಪರಿಸ್ಥಿತಿಗೆ ತಕ್ಕಂತೆ ಮಾಡುತ್ತೇನೆ. ಪಕ್ಷ ನನಗೆ ತಾಯಿ ಸಮಾನ" ಎಂದು ಡಿಕೆಶಿ ಹೇಳಿದರು.

ಕಾಂಗ್ರೆಸ್ ಪಕ್ಷದ ಸಾಮಾನ್ಯವಾಗಿ ಕೆಲಸ ಮಾಡುತ್ತಿದ್ದೇನೆ
"ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಪಕ್ಷ ಏನು ಹೇಳುತ್ತದೋ ಅದನ್ನು ಮಾಡುತ್ತೇನೆ. ತಾಯಿಯಂತಿರುವ ಪಕ್ಷಕ್ಕೆ ದ್ರೋಹ ಬಗೆದವರಿಗೆ ಪಾಠ ಕಲಿಸಬೇಕಿದೆ" ಎನ್ನುವ ಡಿಕೆಶಿ ಹೇಳಿಕೆಯನ್ನು ಅವಲೋಕಿಸುವುದಾದರೆ, ಉಪಚುನಾವಣೆಯಲ್ಲಿ ಪಕ್ಷ ಅವರಿಗೆ ಏನೂ ಜವಾಬ್ದಾರಿಯನ್ನು ನೀಡಲಿಲ್ಲವೇ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ.

ಇಲ್ಲಿ ಒತ್ತುವ ವೋಟ್ ಮೆಷಿನಿನ ಶಬ್ದ ದೆಹಲಿಗೆ ಕೇಳಿಸಬೇಕು
ಚಿಕ್ಕಬಳ್ಳಾಪುರದಲ್ಲಿ ಮಾತನಾಡುತ್ತಿದ್ದ ಡಿಕೆಶಿ, "ಇಲ್ಲಿ ಒತ್ತುವ ವೋಟ್ ಮೆಷಿನಿನ ಶಬ್ದ ದೆಹಲಿಗೆ ಕೇಳಿಸಬೇಕು. ಬಡವರ ಪರ ನಿಲ್ಲುವ ಅಂಜನಪ್ಪ ಅವರನ್ನು ಗೆಲ್ಲಿಸಿ" ಎಂದು ಪಕ್ಷದ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ಡಿಕೆಶಿ ಹೇಳಿದ್ದಾರೆ.

ಸದ್ಯದ ಮಟ್ಟಿಗೆ ನನಗೆ ಯಾವ ರಾಜಕೀಯವೂ ಬೇಕಿಲ್ಲ
"ಸದ್ಯದ ಮಟ್ಟಿಗೆ ನನಗೆ ಯಾವ ರಾಜಕೀಯವೂ ಬೇಕಿಲ್ಲ. ನನಗೆ ನನ್ನದೇ ಆದ ಸಾಕಷ್ಟು ಸಮಸ್ಯೆಗಳಿವೆ. ಅದನ್ನು ನಿಭಾಯಿಸುವುದೇ ಸಾಕಾಗಿ ಹೋಗಿದೆ" ಎಂದು, ಡಿಕೆಶಿ, ಬಂಧನದಿಂದ ಬಿಡುಗಡೆಯಾದ ನಂತರ ಹೇಳಿದ್ದರು.












Click it and Unblock the Notifications