ತುಳುನಾಡಿನ ಕಂಬಳ ಕ್ರೀಡೆಯ ಕಿಂಗ್ ಸದಾಶಿವ ಸಾಲ್ಯಾನ್ ವಿಧಿವಶ
ಮಂಗಳೂರು, ಅ 1: ತುಳುನಾಡಿನ ಜಾನಪದ ಕ್ರೀಡೆ ಕಂಬಳದ 'ಕಿಂಗ್' ಎಂದೇ ಹೆಸರಾಗಿದ್ದ ಪೊಯ್ಯೊಟ್ಟು ಸದಾಶಿವ ಸಾಲ್ಯಾನ್ ಗುರುವಾರ (ಅ 1) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
62 ವರ್ಷದ ಸದಾಶಿವ ಸಾಲ್ಯಾನ್ ಅವರನ್ನು ಒಂದು ವಾರದ ಹಿಂದೆ ಇಲ್ಲಿನ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮೃತರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಇವರ ಅಂತಿಮ ಸಂಸ್ಕಾರ ಶುಕ್ರವಾರ (ಅ2) ದಕ್ಷಿಣ ಕನ್ನಡ ಜಿಲ್ಲೆ ಮೂಲ್ಕಿಯಲ್ಲಿ ನಡೆಯಲಿದೆ.
ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಮೂಲ್ಕಿ ರಿಕ್ಷಾ ಯೂನಿಯನಿನ ಗೌರವಾಧ್ಯಕ್ಷ ಮತ್ತು ಜಿಲ್ಲಾ ಕಂಬಳ ಕಮಿಟಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಾಲ್ಯಾನ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದರು.

ಜಾನಪದ ಕ್ರೀಡೆ ಕಂಬಳ ಕೋಣಗಳನ್ನು ವಿಶೇಷ ಮುತುವರ್ಜಿಯಲ್ಲಿ ಸಾಕಿ ಸಲಹಿದ್ದ ಸಾಲಿಯಾನ್ ಅವರ ಕೋಣಗಳು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕಂಬಳಗಳಲ್ಲಿ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದವು.
ಜನಾನುರಾಗಿಯೂ ಮತ್ತು ಕೃಷಿ ಕ್ಷೇತ್ರದಲ್ಲೂ ತಮ್ಮದೇ ಆದ ಸಾಧನೆ ಮಾಡಿದ್ದ ಸಾಲ್ಯಾನ್, ಜಿಲ್ಲೆಯಲ್ಲಿ ಕಂಬಳ ಕ್ರೀಡೆಯ ಸಂಘಟನೆಯಲ್ಲಿ ವಿಶೇಷ ಪಾತ್ರ ವಹಿಸಿದ್ದರು
ಸಾಲ್ಯಾನ್ ಅವರ 'ನಾಗರಾಜ' ಎನ್ನುವ ಕೋಣವು ಕಂಬಳದಲ್ಲಿ ರಾಜನಾಗಿ ಮೆರೆದಿತ್ತು. ನಾಗರಾಜ ಕೋಣದ ಚಿತ್ರವನ್ನು ಭಾರತ ಸರ್ಕಾರದ ಅಂಚೆ ಇಲಾಖೆ 5 ಮತ್ತು 10 ರೂಪಾಯಿನ ಸ್ಟಾಂಪನಲ್ಲಿ ಬಳಸಿಕೊಂಡಿತ್ತು.
ಅಲ್ಲದೇ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಕಂಬಳ ಚಿತ್ರಣದ ಜಾಹೀರಾತಿನಲ್ಲಿ ಸಾಲ್ಯಾನ್ ಅವರ ನಾಗರಾಜ ಕೋಣದ ಫೋಟೋ ಇದೆ.
ಸಾಲ್ಯಾನ್ ನಿಧನಕ್ಕೆ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಸಚಿವ ಅಭಯಚಂದ್ರ ಜೈನ್ ಸೇರಿದಂತೆ ಹಲವಾರು ಮುಖಂಡರು ಕಂಬನಿ ಮಿಡಿದಿದ್ದಾರೆ.












Click it and Unblock the Notifications