ಜಮೀರ್ ಅಹ್ಮದ್ ಆಡಿದ ಒಂದೇ ಮಾತಿಗೆ ಡಿ.ಕೆ.ಶಿವಕುಮಾರ್ ತಲ್ಲಣ!
ಕಾಂಗ್ರೆಸ್ ನಲ್ಲಿ ಇದೆ ಎನ್ನಲಾಗುತ್ತಿರುವ ಎರಡು ಬಣಗಳಿಗೆ ಉಪಚುನಾವಣೆಯ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆಯಾಗಿದೆಯೇ? ಈ ಫಲಿತಾಂಶ, ರಾಜ್ಯ ರಾಜಕಾರಣದಲ್ಲಿ ತಮ್ಮ ಹಿಡಿತವನ್ನು ಹೆಚ್ಚಿಸಿಕೊಳ್ಳಲು ಇತ್ತಂಡಗಳೂ ಇದನ್ನು ವೇದಿಕೆಯಾಗಿ ಬಳಸಿಕೊಳ್ಳುತ್ತಿದೆಯೇ?
ಇಂತಹ ಪ್ರಶ್ನೆಗೆ ನೇರವಾದ ಉತ್ತರ ಸಿಗುವುದಿಲ್ಲ, ಆದರೆ, ಪ್ರಮುಖ ನಾಯಕರು ಮತ್ತು ಅವರ ಬೆಂಬಲಿಗರ ಪರೋಕ್ಷ ಹೇಳಿಕೆಯಿಂದಾಗಿ, ಇದಕ್ಕೆ ಉತ್ತರ ಕಂಡುಕೊಳ್ಳಲು ಕಷ್ಟವೇನೂ ಆಗುವುದಿಲ್ಲ. ಉಪಚುನಾವಣೆಯ ಈ ಸಂದರ್ಭದಲ್ಲಿ, ಮುಂದೆ ರಾಜ್ಯ ಕಾಂಗ್ರೆಸ್ಸಿನ ನಾಯಕತ್ವ ಯಾರಿಗೆ ಎನ್ನುವ ಪ್ರಶ್ನೆ, ಆ ಪಕ್ಷದವರಲ್ಲೇ ಕಾಡಲಾರಂಭಿಸಿದೆ.
ಶಿರಾ ಉಪಚುನಾವಣೆಯ ಪ್ರಚಾರದ ವೇಳೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಡಿದ ಮಾತು ಇಂತಹ ಸಾಧ್ಯತೆಗಳಿಗೆ ಪುಷ್ಟಿ ನೀಡಿದೆ. ಇದಾದ ನಂತರ, ಅವರ ಆಪ್ತರು ನೀಡುತ್ತಿರುವ ಹೇಳಿಕೆ, ಕೆಪಿಸಿಸಿ ಅಧ್ಯಕ್ಷರಿಗೆ ಕಸಿವಿಸಿ ತರಲಾರಂಭಿಸಿದೆ ಎನ್ನುವುದು ಅವರ ಹೇಳಿಕೆಯಿಂದಲೇ ವ್ಯಕ್ತವಾಗಿದೆ.
ಕಾಂಗ್ರೆಸ್ ರಾಜ್ಯ ರಾಜಕೀಯದಲ್ಲಿ ಇಬ್ಬರು ಪ್ರಬಾವಿ ಮುಖಂಡರೆಂದರೆ, ಅದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್. ಇವರಿಬ್ಬರಲ್ಲಿ ಯಾರಿಗೆ ನಾಯಕತ್ವ ಪಟ್ಟ ಸಿಗಬೇಕು ಎನ್ನುವ ವಿಚಾರದಲ್ಲಿ, ಸಣ್ಣಮಟ್ಟಿನ ಕಿಡಿ ಹಿಂದಿನಿಂದಲೂ ಇದೆ. ಅದಕ್ಕೆ, ಉಪಚುನಾವಣೆಯ ಈ ವೇಳೆ, ಜಮೀರ್ ಅಹ್ಮದ್ ನೀಡಿದ ಹೇಳಿಕೆ, ಇನ್ನಷ್ಟು ತುಪ್ಪ ಸುರಿದಂತಾಯಿತೇ?

ಬಾದಾಮಿಯಲ್ಲಿ ಸಿದ್ದರಾಮಯ್ಯ ಆಡಿದ ಮಾತು
ತಮಗೆ ರಾಜ್ಯ ರಾಜಕಾರಣಕ್ಕೆ ಮರು ಹುಟ್ಟು ನೀಡಿದ ಬಾದಾಮಿಯಲ್ಲಿ ಸಿದ್ದರಾಮಯ್ಯ ಆಡಿದ ಮಾತು, ಕೆಪಿಸಿಸಿ ಅಧ್ಯಕ್ಷರ ಕಸಿವಿಸಿಗೆ ಕಾರಣವಾಗಿದೆ. "ಯಾರೂ ಹಸಿವಿನಿಂದ ಮಲಗಬಾರದು, ಹೊಟ್ಟೆ ತುಂಬ ಊಟ ಮಾಡಬೇಕು.ಬರಗಾಲ, ಪ್ರವಾಹ ಏನೇ ಬರಲಿ, ಜನ ಹೊಟ್ಟೆ ತುಂಬ ಊಟ ಮಾಡಿ ನೆಮ್ಮದಿಯಿಂದ ಇರಬೇಕು. ನಮ್ಮ ಸರಕಾರ ಮತ್ತೆ ಅಧಿಕಾರಕ್ಕೆ ಬಂದು, ನಾನು ಸಿಎಂ ಆದರೆ 10 ಕಿಲೋ ಅಕ್ಕಿ ಕೊಡುತ್ತೇನೆ" ಎನ್ನುವ ಮಾತನ್ನು ಸಿದ್ದರಾಮಯ್ಯ ಆಡಿದ್ದರು.

ಸಿದ್ದರಾಮಯ್ಯ ಅವರ ಆಪ್ತ ಜಮೀರ್ ಅಹ್ಮದ್ ಖಾನ್
ಸಿದ್ದರಾಮಯ್ಯನವರು ಬಾದಾಮಿಯಲ್ಲಿ ಆಡಿದ ಮಾತು ಮತ್ತೆ ಮುಖ್ಯಮಂತ್ರಿಯಾಗಬೇಕು ಎನ್ನುವ ಅವರಲ್ಲಿ ಕನಸು ಜೀವಂತವಾಗಿದೆ ಎನ್ನುವಂತಿತ್ತು. ಅವರ ಈ ಮಾತನ್ನು ಇಟ್ಟುಕೊಂಡು, ಅವರ ಬೆಂಬಲಿಗರು, ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂದು ಹೇಳಲಾರಂಭಿಸಿದರು. ಅದರಲ್ಲಿ, ಚಾಮರಾಜಪೇಟೆಯ ಶಾಸಕ ಮತ್ತು ಸಿದ್ದರಾಮಯ್ಯ ಅವರ ಆಪ್ತ ಜಮೀರ್ ಅಹ್ಮದ್ ಖಾನ್ ಕೂಡಾ ಒಬ್ಬರು. (ಸಂಗ್ರಹ ಚಿತ್ರ)

ಸಿದ್ದರಾಮಯ್ಯನವರು ಮತ್ತೆ ಮುಖ್ಯಮಂತ್ರಿಯಾಗಬೇಕು, ಜಮೀರ್
ಹೆಚ್ಚಾಗಿ ಸಿದ್ದರಾಮಯ್ಯನವರ ಹಿಂದೆಮುಂದೆ ಯಾವತ್ತೂ ಇರುವ ಜಮೀರ್ ಅಹ್ಮದ್, "ಸಿದ್ದರಾಮಯ್ಯನವರು ಮತ್ತೆ ಮುಖ್ಯಮಂತ್ರಿಯಾಗಬೇಕು, ಜನಸೇವೆ ಮಾಡಬೇಕು"ಎನ್ನುವ ಮಾತನ್ನು ಆಡಿದ್ದರು. ಇದು, ಡಿಕೆಶಿ ಸಿಟ್ಟಿಗೆ ಕಾರಣವಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಜೊತೆಗೆ, ಉಪಚುನಾವಣೆಯ ಈ ಸಂದರ್ಭದಲ್ಲಿ ವೃಥಾ ಗೊಂದಲ ತರಬಾರದು ಎಂದು ಡಿಕೆಶಿ, ಜಮೀರ್ ಗೆ ಎಚ್ಚರಿಕೆಯನ್ನು ನೀಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
Recommended Video

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್
ಸಿದ್ದರಾಮಯ್ಯನವರು ಮತ್ತೆ ಸಿಎಂ ಕನಸಿನ ಬಗ್ಗೆ ಆಡಿದ ಹೇಳಿಕೆ ಮತ್ತು ಅವರ ಆಪ್ತರು ಅದನ್ನು ಸಮರ್ಥಿಸಿಕೊಳ್ಳುತ್ತಿರುವುದಕ್ಕೆ ಡಿಕೆಶಿ ಮಾರ್ಮಿಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ. "ಮುಂದಿನ ಸಿಎಂ ಯಾರಾಗುತ್ತಾರೆ ಎನ್ನುವುದಕ್ಕೆ ಶಾಸಕಾಂಗ ಪಕ್ಷದ ನಾಯಕರು ಉತ್ತರಿಸುತ್ತಾರೆ. ಬಹುಷಃ ಸೋನಿಯಾ ಗಾಂಧಿಯವರೇ ಅವರಿಗೆ (ಸಿದ್ದರಾಮಯ್ಯ) ಹೇಳಿರಬಹುದೇನೋ"ಎಂದು ಉತ್ತರಿಸಿದ್ದಾರೆ.












Click it and Unblock the Notifications