ಮಧು ಬಂಗಾರಪ್ಪ, ಬೇಳೂರು ಸೋಲಿಸುವುದೇ ಗುರಿ : ಹಾಲಪ್ಪ
Recommended Video

ಶಿವಮೊಗ್ಗ, ಫೆಬ್ರವರಿ 24 : 'ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರೂ ಬೇಳೂರು ಗೋಪಾಲಕೃಷ್ಣಗೆ ಬೆಂಬಲ ಕೊಡುವುದಿಲ್ಲ. ಸಾಗರ ಕ್ಷೇತ್ರದಿಂದ ನಾನೇ ಚುನಾವಣೆಗೆ ಸ್ಪರ್ಧಿಸುತ್ತೇನೆ' ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಘೋಷಣೆ ಮಾಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರು? ಎಂಬ ಬಗ್ಗೆ ಭಾರೀ ಚರ್ಚೆ ನಡೆಯುತ್ತಿತ್ತು. ಸೊರಬ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದ ಹರತಾಳು ಹಾಲಪ್ಪ ಅವರು ಸಾಗರದಿಂದ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.
ಶುಕ್ರವಾರ ರಾತ್ರಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹರತಾಳು ಗ್ರಾಮದಲ್ಲಿ ಅಭಿಮಾನಿಗಳ ಸಭೆ ನಡೆಸಿದ ಹರತಾಳು ಹಾಲಪ್ಪ ಸೊರಬ ಕ್ಷೇತ್ರದ ಜೆಡಿಎಸ್ ಶಾಸಕ ಮಧು ಬಂಗಾರಪ್ಪ ಮತ್ತು ಸಾಗರ ಕ್ಷೇತ್ರದ ಮಾಜಿ ಶಾಸಕ, ಬಿಜೆಪಿ ನಾಯಕ ಬೇಳೂರು ಗೋಪಾಲಕೃಷ್ಣ ವಿರುದ್ಧ ವಾಗ್ದಾಳಿ ನಡೆಸಿದರು.
'ಬೇಳೂರು ಗೋಪಾಲಕೃಷ್ಣ ಒಬ್ಬ ಅವಿವೇಕಿ. ದುಷ್ಟ, ನಾಲಾಯಕ್ ರಾಜಕಾರಣಿ.
ನನ್ನನ್ನು ರಾಜಕೀಯವಾಗಿ ಮುಗಿಸಲು, ನನ್ನ ಹೆಂಡತಿ ಮಕ್ಕಳನ್ನು ಬೀದಿಪಾಲು ಮಾಡಲು ಮುಂದಾಗಿದ್ದರು' ಎಂದು ಹಾಲಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಬ್ಬರಿಗೆ ಬಹಿರಂಗ ಸವಾಲು
'ಮಧು ಬಂಗಾರಪ್ಪ, ಬೇಳೂರು ಗೋಪಾಲಕೃಷ್ಣ ಇವರಿಬ್ಬನ್ನುಬಿಡುವ ಪ್ರಶ್ನೆಯೇ ಇಲ್ಲ. ಇವರಿಬ್ಬರು ಮೊದಲು ಎಲ್ಲಿದ್ದರೋ ಅಲ್ಲಿಗೆ ಕಳುಹಿಸುತ್ತೇನೆ' ಎಂದು ಹರತಾಳು ಹಾಲಪ್ಪ ಬಹಿರಂಗ ಸವಾಲು ಹಾಕಿದರು.

ಬೆಂಬಲ ಕೊಡುವುದಿಲ್ಲ
'ಸಾಗರ ಕ್ಷೇತ್ರದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರೂ ಬೇಳೂರು ಗೋಪಾಲಕೃಷ್ಣಗೆ ಬೆಂಬಲ ಕೊಡುವುದಿಲ್ಲ. ಸಾಗರ ಕ್ಷೇತ್ರದಿಂದ ನಾನೇ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ' ಎಂದು ಹಾಲಪ್ಪ ಘೋಷಣೆ ಮಾಡಿದರು.

ಮಧು ಬಂಗಾರಪ್ಪ ವಿರುದ್ಧ ಆಕ್ರೋಶ
'ಸೊರಬದ ಹಾಲಿ ಶಾಸಕರು, ಸಾಗರದ ಶಾಸಕರಾಗಿದ್ದ ಬೇಳೂರು ಗೋಪಾಲಕೃಷ್ಣ ಸೇರಿ ಷಡ್ಯಂತ್ರ ನಡೆಸಿ ನನ್ನ ವಿರುದ್ಧ ಕೇಸ್ ಹಾಕುವಂತೆ ಮಾಡಿದರು' ಎಂದು ಹೇಳಿದ ಹಾಲಪ್ಪ ಸಭೆಯಲ್ಲಿದುಃಖತಪ್ತರಾದರು. 'ನನ್ನ ಪತ್ನಿ, ಮಕ್ಕಳು ಪಟ್ಟ ಕಷ್ಟ ನನಗೆ ಮಾತ್ರ ಗೊತ್ತು' ಎಂದು ಹೇಳಿದರು.

ಸಾಗರ, ಸೊರಬ ಎಲ್ಲೂ ಇರಬಾರದು
'ದುಷ್ಟರು ಸಾಗರದಲ್ಲೂ ಇರಬಾರದು, ಸೊರಬದಲ್ಲೂ ಇರಬಾರದು. ಅವರು ಇರಲು ನಾನು ಬಿಡುವುದಿಲ್ಲ' ಎಂದು ಸವಾಲು ಹಾಕಿದ ಹಾಲಪ್ಪ ಅವರು, 'ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಹೇಳಿದರೂ ನಾನು ಸಾಗರದಲ್ಲಿ ಬೇಳೂರು ಗೋಪಾಲಕೃಷ್ಣನನ್ನು ಗೆಲ್ಲಲು ಬಿಡುವುದಿಲ್ಲ' ಎಂದರು.

ಟಿಕೆಟ್ಗಾಗಿ ದಂಬಾಲು ಬಿದ್ದಿದ್ದಾರೆ
ಬೇಳೂರು ಗೋಪಾಲಕೃಷ್ಣ ಅವರು ಯಡಿಯೂರಪ್ಪ, ಈಶ್ವರಪ್ಪ ವಿರುದ್ಧ ನೀಡಿದ್ದ ಹೇಳಿಕೆ ಗಳನ್ನು ಪ್ರದರ್ಶಿಸಿದ ಹಾಲಪ್ಪ ಅವರು, 'ಇಂತಹವರು ಈಗ ಬಿಜೆಪಿ ಟಿಕೆಟ್ ಗಾಗಿ ದಂಬಾಲು ಬಿದ್ದಿದ್ದಾರೆಂದು' ಲೇವಡಿ ಮಾಡಿದರು.

ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದೆ
'ನನ್ನ ಮಾನಹಾನಿ, ಸ್ಥಾನಹಾನಿ, ಕೊನೆಗೆ ನನ್ನ ಪ್ರಾಣಹಾನಿಗೂ ಪ್ರಯತ್ನಿಸಿದ ಬೇಳೂರು ಅಂತವರಿಗೆ ನಾನು ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ. ಸತ್ಯಕ್ಕೆ ಜಯ ಸಿಕ್ಕಿದೆ. ನಾನು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದೆ, ನನ್ನನ್ನು ಜನತಾ ನ್ಯಾಯಾಲಯ ಉಳಿಸಿದೆ' ಎಂದು ಹಾಲಪ್ಪ ಹೇಳಿದರು.

ಹೈಕಮಾಂಡ್ ಗೆ ದೂರು
‘2 ಬಾರಿ ಶಾಸಕನಾದ ಮೂರ್ಖ, ಅವಿವೇಕಿ ಬೇಳೂರು ಮಾಡಿದ ಪಕ್ಷ ವಿರೋಧಿ ಚಟುವಟಿಕೆಗಳ ಬಗ್ಗೆ ಪಕ್ಷದ ಹೈಕಮಾಂಡ್ಗೆ ದೂರು ನೀಡುವೆ. ನಾನು ಮಾತ್ರ ಬೇಳೂರುನನ್ನು ಬಿಡುವುದಿಲ್ಲ' ಎಂದು ಕವನ, ಗಾದೆ ಮಾತುಗಳ ಮೂಲಕ ಹಾಲಪ್ಪ ವಿರೋಧಿ ಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಅಭ್ಯರ್ಥಿ ಯಾರು ಎಂಬುದು ನಿಗೂಢ
ಸಾಗರದಲ್ಲಿ ಡಿ.28ರಂದು ಪರಿವರ್ತನಾಯಾತ್ರೆ ಸಮಾವೇಶ ನಡೆದಿತ್ತು. ಸಮಾವೇಶದಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಅವರು, 'ಯುವಕರು ಮತ್ತು ಕ್ಷೇತ್ರದ ನಾಯಕರು ಬೂತ್ಗಳನ್ನು ಬಲಪಡಿಸಿ. ಯಾರೇ ಅಭ್ಯರ್ಥಿಯಾಗಲಿ, ಅವರನ್ನು ಗೆಲ್ಲಿಸಲೇಬೇಕು ಎಂಬ ಜವಾಬ್ದಾರಿಯನ್ನು ತೆಗೆದುಕೊಳ್ಳಿ' ಎಂದು ಕರೆ ನೀಡಿದ್ದರು.












Click it and Unblock the Notifications