ಸಮವಸ್ತ್ರ ಕುರಿತು ಗೊಂದಲ ಹೇಳಿಕೆ: ಶಿಕ್ಷಣ ಸಚಿವರಿಗೆ ವಕೀಲರ ಸಂಘದಿಂದ ನೋಟಿಸ್
ಬೆಂಗಳೂರು, ಮಾ. 31: ಸಮವಸ್ತ್ರ ಕುರಿತು ಹೈಕೋರ್ಟ್ ಶಿಕ್ಷಣ ಸಚಿವ ಕೊಟ್ಟಿರುವ ವಿವಾದಾತ್ಮಕ ಹೇಳಿಕೆಯನ್ನು ವಾಪಸು ಪಡೆಯುವಂತೆ ಸೂಚಿಸಿ ಅಖಿಲ ಭಾರತ ವಕೀಲರ ಸಂಘ ಲೀಗಲ್ ನೋಟಿಸ್ ನೀಡಿದೆ.
ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪನ್ನು ಉಲ್ಲೇಖಿಸಿ ತಾವು ನೀಡಿರುವ ಹೇಳಿಕೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಹಿಜಾಬ್ ಸೇರಿದಂತೆ ಧರ್ಮ ಪ್ರತಿನಿಧಿಸುವ ಯಾವುದೇ ಬಟ್ಟೆಗಳನ್ನು ಧರಿಸಿ ಪರೀಕ್ಷಾ ಹಾಲ್ಗಳಿಗೆ ಬರುವಂತಿಲ್ಲ. ಬಂದ್ರೂ ಹಾಲ್ ಒಳಗೆ ಪ್ರವೇಶವಿಲ್ಲ. ಇಗೋ ಬಿಟ್ಟು ಪರೀಕ್ಷೆಗೆ ಹಾಜಾಗಿ, ಬಹುತೇಕ ವಿದ್ಯಾರ್ಥಿಗಳು ಹೈಕೋರ್ಟ್ ಆದೇಶ ಮತ್ತು ಸರ್ಕಾರದ ಅಧಿಸೂಚನೆಯನ್ನು ಪಾಲನೆ ಮಾಡುತ್ತಿದ್ದಾರೆ ಎಂದು ಹೇಳಿದ್ದೀರಿ.
ಆದರೆ, ವಾಸ್ತವದಲ್ಲಿ ನಿಮ್ಮ ಹೇಳಿಕೆಗೂ ಮಾ. 25, 2022 ರಂದು ಸರ್ಕಾರ ಸಮವಸ್ತ್ರ ಕುರಿತು ಹೊರಡಿಸಿರುವ ಅಧಿಸೂಚನೆಗೂ ಭಿನ್ನತೆ ಇದೆ. ಮಾತ್ರವಲ್ಲ ಹಿಜಾಬ್ ಕುರಿತ ಹೈಕೋರ್ಟ್ ಕೊಟ್ಟಿರುವ ತೀರ್ಪು ಬಗ್ಗೆ ಗೊಂದಲ ಹುಟ್ಟಿಸಿದ್ದೀರಿ. ಹಿಜಾಬ್ ಬ್ಯಾನ್ ಕುರಿತು ಹೈಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿಲ್ಲ.

ಮತ್ತೊಂದು ವಿಚಾರವೆಂದರೆ ಹೈಕೋರ್ಟ್ ಹಿಜಾಬ್ ಕುರಿತ ತೀರ್ಪಿನಲ್ಲಿ "ವಿದ್ಯಾರ್ಥಿಗಳು ಶೈಕ್ಷಣಿಕ ಹಕ್ಕು ಮೊಟಕು ಗೊಳಿಸುವಂತಿಲ್ಲ. ಆ ವಿಚಾರಕ್ಕೆ ಬಂದರೆ ತರಗತಿಯಿಂದ ಹೊರಗೆ ಬಂದ್ರೆ ಅವರಿಗೆ ಇಷ್ಟ ಬಂದ ಉಡುಪು ಧರಿಸಲು ಅವರು ಸರ್ವ ಸ್ವತಂತ್ರರು ಎಂದು ಹೇಳಿದೆ.
ನೀವು ಸಚಿವರಾಗಿ ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅಧಿಕಾರ ವಹಿಸಿಕೊಂಡಿದ್ದೀರ. ಈ ದೇಶದ ಕಾನೂನು ಮೇಲೆ ನಂಬಿಕೆ ಇಟ್ಟಿರುವುದಾಗಿ ಪ್ರಮಾಣ ಮಾಡಿದ್ದಿರಿ. ನಿಮ್ಮ ಹೇಳಿಕೆ ನೀವು ಸಂವಿಧಾನದ ಮೇಲೆ ನಂಬಿಕೆ ಇಟ್ಟು ಮಾಡಿದ ಪ್ರಮಾಣದ ವಿರುದ್ಧವಾಗಿದೆ. ಕೋಮು ಸೌಹಾರ್ದ ಹಾಳು ಮಾಡುವಂತಹ ಹೇಳಿಕೆ ನೀಡಿದ್ದೀರಿ. ನಿಮ್ಮ ಬೇಜವಾಬ್ದಾರಿತನ ಹೇಳಿಕೆಗಳು ಸಮಾಜದ ಸ್ವಾಸ್ತ್ಯ ಹಾಳು ಮಾಡುತ್ತಿವೆ.

ಗದಗದಲ್ಲಿ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟ ಏಳು ಶಿಕ್ಷಕರನ್ನು ಅಮಾನತು ಮಾಡಿರುವುದಾಗಿ ಹೇಳಿದ್ದೀರಿ. ಜಿಲ್ಲಾ ಡಿಡಿಪಿಐ ಕೂಡ ಹೈಕೋರ್ಟ್ ಆದೇಶ ಉಲ್ಲಂಘನೆ ಮಾಡಿದ ಕಾರಣಕ್ಕೆ ಶಿಕ್ಷಕರನ್ನು ಅಮಾನತು ಮಾಡಿರುವುದಾಗಿ ಹೇಳಿದ್ದಾರೆ. ಸರ್ಕಾರದ ಆದೇಶ ಗೊಂದಲ ಹುಟ್ಟು ಹಾಕಿದ್ದು, ಮುಸ್ಲಿಂ ಅಮಾಯಕ ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕು ಉಲ್ಲಂಘನೆಯಾಗಿದೆ. ನಿಮ್ಮ ಹೇಳಿಕೆಗಳು ಹೈಕೋರ್ಟ್ ಆದೇಶವನ್ನು ಮೀರಿಸಿದ್ದು, ಮುಸ್ಲಿಂ ಸಮುದಾಯದ ಮಕ್ಕಳ ಶಿಕ್ಷಣದ ಹಕ್ಕಿಗೆ ಧಕ್ಕೆ ತರುತ್ತಿವೆ. ಈ ಕೂಡಲೇ ನಿಮ್ಮ ಹೇಳಿಕೆಗಳನ್ನು ವಾಪಸು ಪಡೆದು, ಹೈಕೋರ್ಟ್ ಆದೇಶ ಮತ್ತು ಸರ್ಕಾರದ ಆದೇಶ ಕುರಿತು ಇರುವ ಗೊಂದಲಗಳನ್ನು ಸರಿಪಡಿಸಿ. ಇಲ್ಲಿದಿದ್ದರೆ ನಿಮ್ಮ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ವಕೀಲರ ಸಂಘ ಎಚ್ಚರಿಕೆ ಕೊಟ್ಟಿದೆ.












Click it and Unblock the Notifications