ಕರ್ನಾಟಕ ಚುನಾವಣೆ ಓಟದಲ್ಲಿ ಅಪ್ಪ-ಮಕ್ಕಳು, 2G, 3G !
ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು 2ಜಿ, 3ಜಿ ಎಲೆಕ್ಷನ್ ಅಂತ ಧಾರಾಳವಾಗಿ ಕರೆಯಬಹುದು. ಯಾಕೆಂದರೆ ಪ್ರಭಾವಿ ರಾಜಕೀಯ ಮುಖಂಡರ ಮಕ್ಕಳು ಹಾಗೂ ಮೊಮ್ಮಕ್ಕಳು ಚುನಾವಣೆ ಅಖಾಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಪ್ಪ-ಮಕ್ಕಳು ಒಟ್ಟಿಗೆ ಚುನಾವಣೆ ಎದುರಿಸುವ ಸಾಧ್ಯತೆಗಳಿವೆ.
ಇನ್ನೂ ಕೆಲವರು ತಮ್ಮ ಮಕ್ಕಳಿಗೆ ಅವಕಾಶ ದೊರಕಿಸಲಿದ್ದಾರೆ. ಈ ರೀತಿ ಸ್ಪರ್ಧೆಗೆ ಅಖಾಡದಲ್ಲಿ ಇಳಿಯಬಹುದಾದವರ ಪಟ್ಟಿಯನ್ನು ಮಾಡಲಾಗಿದೆ. ಇವುಗಳ ಪೈಕಿ ಸಂಭವನೀಯ ಅಭ್ಯರ್ಥಿಗಳು, ಈಗಾಗಲೇ ಟಿಕೆಟ್ ಖಾತ್ರಿ ಆಗಿರುವವರು, ಹೈ ಕಮಾಂಡ್ ನಿರ್ಧಾರ ಎಂದಿರುವವರು, ನನಗೆ ಸ್ಪರ್ಧೆಯ ಬಗ್ಗೆ ಆಸಕ್ತಿ ಇದೆ ಎಂದವರು ಎಲ್ಲರ ಪಟ್ಟಿಯನ್ನೂ ಮಾಡಲಾಗಿದೆ.
ಹಾಗಂತ ಇದೇ ಆಖೈರು ಅಂತಲೂ ಅಲ್ಲ. ಚುನಾವಣೆ ದಿನಗಳು ಹತ್ತಿರವಾದಂತೆ ಈ ಪಟ್ಟಿ ಮತ್ತೂ ಬೆಳೆಯಬಹುದು. ಇಲ್ಲದಿದ್ದರೆ ಕೆಲವರು ಹಿಂದೆ ಕೂಡ ಸರಿಯಬಹುದು. ಆದರೆ ತಕ್ಷಣಕ್ಕೆ ಇವರೆಲ್ಲರ ಹೆಸರು ಹಾರಾಡುತ್ತಿದೆ, ಓಡಾಡುತ್ತಿದೆ ಅನ್ನೋದು ಸತ್ಯ. ಹಾಗಿರುವುದರಿಂದಲೇ ಈ ವರದಿ ನೀವು ಓದುತ್ತಿದ್ದೀರಿ. ಮುಂದಿನ ಸ್ಲೈಡ್ ಗಳಲ್ಲಿ 2ಜಿ, 3ಜಿಗಳ ಬಗ್ಗೆ.

ಯತೀಂದ್ರ- ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ್ಮ ದೊಡ್ಡ ಮಗ ರಾಕೇಶ್ ರನ್ನು ವಿಧಾನಸಭಾ ಚುನಾವಣೆ ಕಣಕ್ಕೆ ಇಳಿಸಬೇಕು ಎಂಬ ಆಕಾಂಕ್ಷೆ ಇತ್ತು. ಅದನ್ನು ಮುಖ್ಯಮಂತ್ರಿಗಳು ಕೂಡ ಸಾರ್ವಜನಿಕವಾಗಿಯೂ ಒಪ್ಪಿಕೊಂಡಿದ್ದಾರೆ. ಆದರೆ ರಾಕೇಶ್ ಅಕಾಲಿಕ ಸಾವು ಅಂಥ ಗಟ್ಟಿ ಮನುಷ್ಯ ಸಿದ್ದರಾಮಯ್ಯ ಅವರನ್ನೇ ಕಲುಕಿತು. ಆ ನಂತರ ಕೇಳಿಬಂದ ಹೆಸರೇ ಅವರ ಎರಡನೇ ಮಗ ಯತೀಂದ್ರರದು. ತುಂಬ ಸಂಕೋಚ ಸ್ವಭಾವದ, ತಮ್ಮಷ್ಟಕ್ಕೆ ತಾವಿದ್ದ ಯತೀಂದ್ರ ವರಣಾ ಕ್ಷೇತ್ರದಲ್ಲಿ ಭರ್ಜರಿ ಗ್ರೌಂಡ್ ವರ್ಕ್ ಮಾಡುತ್ತಿದ್ದಾರೆ. ಚಾಮುಂಡಿ ಕ್ಷೇತ್ರದಿಂದ ಸಿದ್ದರಾಮಯ್ಯನವರು ಸ್ಪರ್ಧಿಸಬಹುದು. ಒಟ್ಟಿನಲ್ಲಿ ಎಲ್ಲ ಅಂದುಕೊಂಡಂತೆ ನಡೆದರೆ ಮೈಸೂರು ಜಿಲ್ಲೆಯಿಂದಲೇ ಅಪ್ಪ-ಮಗ ಕಣಕ್ಕಿಳಿಯಲಿದ್ದಾರೆ.

ರಾಘವೇಂದ್ರ- ಯಡಿಯೂರಪ್ಪ
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಸದ್ಯಕ್ಕೆ ಸಂಸದರಾಗಿದ್ದಾರೆ. ಅವರ ಮಗ ರಾಘವೇಂದ್ರ ಶಿಕಾರಿಪುರದಲ್ಲಿ ಶಾಸಕರು. ಈ ಬಾರಿ ಯಡಿಯೂರಪ್ಪನವರು ಬೇರೆ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂಬ ಮಾತಿದೆ. ಆದರೆ ಇವರಿಬ್ಬರ ವಿಚಾರವಾಗಿ ಹಲವು ಊಹೆಗಳಿವೆ. ಒಂದೋ ಯಡಿಯೂರಪ್ಪನವರು ಶಿಕಾರಿಪುರದಿಂದ ಸ್ಪರ್ಧಿಸಿ, ಮಗನನ್ನು ಲೋಕಸಭೆಯಿಂದ ಸ್ಪರ್ಧಿಸಲು ಹೇಳಬಹುದು. ಅಥವಾ ಹಾವೇರಿಯಿಂದ ರಾಘವೇಂದ್ರ ಸ್ಪರ್ಧಿಸುವ ಸಾಧ್ಯತೆಯಿದೆ. ಹೀಗೆ ನಾನಾ ಬಗೆಯ ಸಾಧ್ಯತೆಗಳ ಬಗ್ಗೆ ಸುದ್ದಿ ಹರಿದಾಡುತ್ತಿವೆ.

ಸೌಮ್ಯಾ ರೆಡ್ಡಿ- ರಾಮಲಿಂಗಾ ರೆಡ್ಡಿ
ಗೃಹ ಸಚಿವರಾದ ರಾಮಲಿಂಗಾ ರೆಡ್ಡಿ ಅವರ ಮಗಳು ಸೌಮ್ಯಾ ರೆಡ್ಡಿ ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇರಾದೆಯಲ್ಲಿದ್ದಾರೆ. ಇನ್ನು ರಾ.ಲಿಂ. ರೆಡ್ಡಿಯವರು ಹೊಸ ಕ್ಷೇತ್ರಕ್ಕೆ ವಲಸೆ ಹೋಗುವ ಸಾಧ್ಯತೆ ಇದೆ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ತುಂಬ ಪ್ರಭಾವಿಯಾಗಿ ಬೆಳೆದಿರುವ ರೆಡ್ಡಿಯವರು ತಮ್ಮ ಮಗಳ ಗೆಲುವು ಸಲೀಸಾಗಿಸಲು ಬೇಕಾದ ವೇದಿಕೆ ಸಿದ್ಧಪಡಿಸುತ್ತಿದ್ದಾರೆ.

ಪ್ರಜ್ವಲ್- ರೇವಣ್ಣ
ಅಪ್ಪ-ಮಕ್ಕಳ ಪಕ್ಷ ಎಂಬುದು ಜೆಡಿಎಸ್ ಗೆ ಇರುವ 'ಕುಖ್ಯಾತಿ'. ಹಾಗೆ ನೋಡಿದರೆ ಜೆಡಿಎಸ್ ನ ಶಕ್ತಿ ಅಂದರೆ ಕುಮಾರಸ್ವಾಮಿ ಹಾಗೂ ರೇವಣ್ಣ ಎಂಬುದು ಕೂಡ ಅಷ್ಟೇ ಸತ್ಯ. ಮುಂಬರುವ ವಿಧಾನಸಭಾ ಚುನಾವಣೆಗೆ ಕುಮಾರಸ್ವಾಮಿ-ರೇವಣ್ಣ ಬಿಟ್ಟರೆ ಕುಟುಂಬದಿಂದ ಇನ್ಯಾರೂ ಸ್ಪರ್ಧೆ ಮಾಡಲ್ಲ ಎಂಬ ಮಾತಿತ್ತು. ಇದೀಗ ಪ್ರಜ್ವಲ್ ರೇವಣ್ಣ, ಅನಿತಾ ಕುಮಾರಸ್ವಾಮಿ ಹಾಗೂ ಭವಾನಿ ರೇವಣ್ಣ ಅವರ ಹೆಸರೂ ಕೇಳಿಬರುತ್ತಿದೆ. ಸದ್ಯಕ್ಕೆ ಎಚ್ ಡಿಕೆ ಸುದ್ದಿಯೇನೋ ನಿರಾಕರಿಸುತ್ತಿರಬಹುದು, ಅವರ ಮಗ ನಿಖಿಲ್ ಕೊನೆ ಕ್ಷಣದಲ್ಲಿ ಅಖಾಡಕ್ಕಿಳಿದರೂ ಆಶ್ಚರ್ಯವಿಲ್ಲ. ಆದರೆ ರಾಜ್ಯದಾದ್ಯಂತ ಸುದ್ದಿಯಾಗಿದ್ದ ಪ್ರಜ್ವಲ್ ಬೇಲೂರಿನಿಂದ ಹಾಗೂ ಅವರ ತಂದೆ ರೇವಣ್ಣ ಹೊಳೆನರಸೀಪುರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ.

ಮಹದೇವಪ್ಪ- ಸುನೀಲ್ ಬೋಸ್
ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಚಿವ ಎಚ್.ಸಿ.ಮಹದೇವಪ್ಪ ಬೆಂಗಳೂರಿನ ಸಿ.ವಿ.ರಾಮನ್ ನಗರದಿಂದ ಸ್ಪರ್ಧಿಸಿ, ಸ್ವಕ್ಷೇತ್ರವನ್ನು ಮಗ ಸುನೀಲ್ ಬೋಸ್ ಗೆ ಬಿಟ್ಟುಕೊಡುತ್ತಾರೆ ಎಂಬ ಮಾತಿದೆ. ನಂಜನಗೂಡು ಉಪಚುನಾವಣೆಯ ವೇಳೆ ಬೋಸ್ ಕಾಂಗ್ರೆಸ್ ಅಭ್ಯರ್ಥಿ ಆಗುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈ ಬಾರಿ ಬೋಸ್ ಸ್ಪರ್ಧೆ ಬಹುತೇಕ ಖಚಿತ ಅನ್ನುವಂತಿದೆ.

ರಾಜೇಂದ್ರ-ರಾಜಣ್ಣ
ಮಧುಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಎನ್.ರಾಜಣ್ಣ ಅವರ ಮಗ ರಾಜೇಂದ್ರ ಅವರಿಗೆ ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಹಾಗೆ ನೋಡಿದರೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ನೆಲೆ ಇಲ್ಲ. ಏಕೆಂದರೆ ಕಳೆದ ಎರಡು ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ಎರಡನೇ ಸ್ಥಾನದಲ್ಲಿ ಜೆಡಿಎಸ್ ಇದೆ. ಆದರೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ರಾಜಣ್ಣ ಅವರ ಪ್ರಭಾವ ಬಳಸಿದರೆ ಇಲ್ಲಿ ಭಾರೀ ಸ್ಪರ್ಧೆ ನಿಶ್ಚಿತ. ಆದರೆ ರಾಜೇಂದ್ರಗೆ ಟಿಕೆಟ್ ಖಚಿವಾದರಷ್ಟೇ ಮುಂದಿನ ಮಾತು.

ಸಂತೋಷ್- ಟಿ.ಬಿ.ಜಯಚಂದ್ರ
ಸಚಿವ ಟಿ.ಬಿ.ಜಯಚಂದ್ರ ಅವರ ಮಗ ಸಂತೋಷ್ ಈ ಬಾರಿ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂಬ ಸುದ್ದಿಯಿದೆ. ಆ ಕಾರಣಕ್ಕೆ ತುಮಕೂರು ಜಿಲ್ಲೆಯೊಳಗೆ ತಮ್ಮ ಬಗ್ಗೆ ಪಕ್ಷದೊಳಗಿನವರಿಗೇ ಇರುವ ಅಸಮಾಧಾನ ಬಗೆಹರಿಸಿಕೊಳ್ಳುತ್ತಿದ್ದಾರೆ ಜಯಚಂದ್ರ ಎಂಬ ಮಾತಿದೆ. ಅದರಲ್ಲೂ ಶಾಸಕ ಕೆ.ಎನ್.ರಾಜಣ್ಣ ಜತೆಗೆ ಸಂಧಾನ ಮಾಡಿಕೊಳ್ಳುತ್ತಿದ್ದಾರೆ ಎಂಬುದು ರಾಜಕೀಯ ಆಸಕ್ತರ ಮಾತು.

ಯುವರಾಜ್- ದೇವರಾಜ್
ಮಾಜಿ ಸಚಿವ ಹಾಗೂ ಚಿಕ್ಕಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಆರ್.ವಿ.ದೇವರಾಜ್ ರ ಮಗ ಯುವರಾಜ್ ಈ ಬಾರಿ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸುತ್ತಾರೆ ಎಂಬುದು ದಟ್ಟವಾಗಿ ಹರಡಿರುವ ವದಂತಿ. ಈ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲವಾದರೂ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಈ ಬಗ್ಗೆ ಹೆಚ್ಚಿನ ಸ್ಪಷ್ಟತೆ ಇನ್ನೂ ಸಿಕ್ಕಿಲ್ಲ.

ರೂಪಕಲಾ-ಕೆ.ಎಚ್.ಮುನಿಯಪ್ಪ
ಕೋಲಾರ- ಚಿಕ್ಕಬಳ್ಳಾಪುರ ರಾಜಕಾರಣದಲ್ಲಿ ಕೇಂದ್ರದ ಮಾಜಿ ಸಚಿವ - ಕಾಂಗ್ರೆಸ್ ನ ಹಿರಿಯ ಮುಖಂಡ- ಸಂಸದ ಕೆ.ಎಚ್.ಮುನಿಯಪ್ಪ ಅವರ ಚಾಣಾಕ್ಷತೆ ಬಗ್ಗೆ ಹಲವಾರು ಕಥೆಗಳೇ ಇವೆ. ಮುಂಬರುವ ಚುನಾವಣೆಯಲ್ಲಿ ಅವರ ಮಗಳು ರೂಪಕಲಾ ಕೆಜಿಎಫ್ ನಿಂದ ಸ್ಪರ್ಧಿಸುವುದು ಬಹುತೇಕ ಖಚಿತ ಎನ್ನುವಂತಿದೆ. ಆಕೆ ಕೂಡ ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ಅವರ ನಾಯಕತ್ವ ಗುಣಗಳ ಬಗ್ಗೆ ಕೂಡ ಮಾತುಗಳು ಕೇಳಿಬರುತ್ತಿವೆ.












Click it and Unblock the Notifications