ಕೊಡಗಿನ ಸುಂಟಿಕೊಪ್ಪದಲ್ಲಿ ಸುರಿದ ಮೊದಲ ಬೇಸಿಗೆ ಮಳೆ
ಮಡಿಕೇರಿ, ಮೇ 04 : ಕೊಡಗಿನ ಕೆಲವೆಡೆ ಮಂಗಳವಾರ ಸಂಜೆ ಭಾರೀ ಮಳೆ ಸುರಿದಿದೆ. ಬಿಸಿಲ ಬೇಗೆಯಿಂದ ಬಸವಳಿದಿದ್ದವರನ್ನು ತಂಪು ಮಾಡಿದೆ. ಆದರೆ, ಮಡಿಕೇರಿ ಸಮೀಪದ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಮಳೆಗಾಳಿಗೆ ಮರಗಳು ಧರೆಗುರುಳಿ ವಿದ್ಯುತ್ ಕಂಬಗಳು ನೆಲಸಮವಾಗಿದ್ದರಿಂದ ಜನ ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ.

ಕೆಲವೆಡೆ ಮರಗಳು ಹಾಗೂ ವಿದ್ಯುತ್ ತಂತಿಗಳು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಇದರಿಂದ ಚೆಸ್ಕಾಂಗೆ ಲಕ್ಷಾಂತರ ರೂ.ಗಳು ನಷ್ಟವಾಗಿದೆ. ಮಿಂಚು, ಗುಡುಗು, ಸಿಡಿಲಿನೊಂದಿಗೆ ಆರ್ಭಟಿಸಿದ ಮಳೆ ರಭಸವಾಗಿ ಸುರಿದಿದ್ದು, ನೀರು ಚರಂಡಿಗಳಲ್ಲಿ ಉಕ್ಕಿ ಹರಿಯಿತು. ಮಳೆಯಿಲ್ಲದೆ ಗಿಡಮರಗಳು ಒಣಗುವ ಸ್ಥಿತಿಗೆ ತಲುಪಿತ್ತು. ಮಳೆ ಬಿದ್ದಿದ್ದರಿಂದ ಗಿಡಮರಗಳಿಗೆ ಜೀವ ಬಂದಂತಾಗಿದೆ. [ಬೆಂದು ಬಸವಳಿದ ಕರ್ನಾಟಕಕ್ಕೆ ಅಲ್ಲಲ್ಲಿ ಮಳೆ ಸಿಂಚನ]

ಸಾಮಾನ್ಯವಾಗಿ ಈ ರೀತಿಯ ಮಳೆ ಮಾರ್ಚ್ನಲ್ಲೇ ಸುರಿಯುತ್ತಿತ್ತಾದರೂ ಈ ಬಾರಿ ಮೇ ತನಕ ಕಾಯುವಂತಾಗಿದೆ. ಮಳೆಗೆ ಬೇರು ಕ್ಷೀಣಗೊಂಡಿದ್ದ ಹಲವು ಮರಗಳು ನೆಲಕ್ಕೆ ಬಿದ್ದಿವೆ. ಸುಂಟಿಕೊಪ್ಪ ಸಮೀಪದ ಕೆಚ್ಚೆಟ್ಟಿ ತೋಟದ ಬಳಿಯಲ್ಲಿ ರಸ್ತೆಗೆ ಅಡ್ಡಲಾಗಿ ಮರಗಳು ಬಿದ್ದಿದ್ದರಿಂದ 5 ವಿದ್ಯುತ್ ಕಂಬ ಹಾಗೂ ತಂತಿಗಳು ತುಂಡಾಗಿವೆ. ಆದರೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.

ಸುಂಟಿಕೊಪ್ಪ-ಮಾದಾಪುರ ಸಂಪರ್ಕ ರಸ್ತೆಯಲ್ಲಿ ಮರಬಿದ್ದಿದ್ದರಿಂದ ಅದನ್ನು ತೆರವುಗೊಳಿಸಲು ಹರಸಾಹಸ ಪಡಬೇಕಾಯಿತು. ಇದರಿಂದ ಎರಡು ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಚೆಸ್ಕಾಂ ಇಲಾಖೆಯ ಕಿರಿಯ ಅಭಿಯಂತರ ಬಸವರಾಜ್ ಹಾಗೂ ಸಿಬ್ಬಂದಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳ ಘಟನಾ ಸ್ಥಳಕ್ಕೆ ತೆರಳಿ ವಿದ್ಯುತ್ ಕಂಬ ಹಾಗೂ ತಂತಿಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. [ಮಳೆರಾಯನ ಓಲೈಕೆಗೆ ಎಚ್ಡಿ ಕೋಟೆಯಲ್ಲಿ ಕಪ್ಪೆ ಮೆರವಣಿಗೆ]

ಮೊದಲ ಮಳೆ ಅಬ್ಬರಿಸಿದ್ದರಿಂದ ಹಲವು ಗ್ರಾಮಗಳಲ್ಲಿ ವಿದ್ಯುತ್ ಕಂಬ ಹಾಗೂ ತಂತಿಗಳು ನಾಶವಾಗಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿರುವುದಾಗಿ ಈ ವಿಭಾಗದ ಚೆಸ್ಕಾಂ ಕಿರಿಯ ಅಭಿಯಂತರ ಬಸವರಾಜ್ ಒನ್ಇಂಡಿಯಾ ಕನ್ನಡಕ್ಕೆ ಹೇಳಿದ್ದಾರೆ.











Click it and Unblock the Notifications