ಕೋವಿಡ್ ಸಂಕಷ್ಟ: ರಾಜ್ಯ ಸರ್ಕಾರವೂ ಶುರು ಮಾಡಿತು ಕಾಸ್ಟ್ ಕಟ್ಟಿಂಗ್!
ಬೆಳಗಾವಿ, ಜೂ. 30: ಕೊರೊನಾ ವೈರಸ್, ಲಾಕ್ಡೌನ್ನಿಂದ ಕೇವಲ ಜನ ಸಾಮಾನ್ಯರು ಮಾತ್ರ ಸಂಕಷ್ಟಕ್ಕೆ ಸಿಲುಕಿಲ್ಲ. ಬದಲಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೂಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಹೀಗಾಗಿ ಆರ್ಥಿಕ ಶಿಸ್ತು ಕಾಯ್ದುಕೊಳ್ಳಲು ಕಟ್ಟುನಿಟ್ಟಿನ ಕ್ರಮಗಳನ್ನು ರಾಜ್ಯ ಬಿಜೆಪಿ ಸರ್ಕಾರ ಕೈಗೊಳ್ಳುತ್ತಿದೆ.
ಸಾಧ್ಯವಾದಷ್ಟು ಆರ್ಥಿಕ ಹೊರೆಯನ್ನು ಕಡಿಮೆ ಮಾಡುವಂತೆ ಹಣಕಾಸು ಸಚಿವರೂ ಆಗಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಆರ್ಥಿಕ ಇಲಾಖೆಗೆ ಸೂಚನೆ ಕೊಟ್ಟಿದ್ದಾರೆ. ಹೀಗಾಗಿ ಖಾಸಗಿ ಬಾಡಿಗೆ ಕಟ್ಟಡಗಳಲ್ಲಿದ್ದ 24 ಪ್ರಮುಖ ಸರ್ಕಾರಿ ಕಚೇರಿಗಳನ್ನು ಸರ್ಕಾರಿ ಕಟ್ಟಡಕ್ಕೆ ಸ್ಥಳಾಂತರಿಸಲು ಆದೇಶ ಮಾಡಲಾಗಿದೆ.
ಕೊರೊನಾ ವೈರಸ್ ಹಾವಳಿಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಸರ್ಕಾರ ತನ್ನ ನೌಕರರಿಗೆ ಕೊಡುತ್ತಿದ್ದ ತುಟ್ಟಿ ಭತ್ಯೆಯನ್ನು ರದ್ದು ಮಾಡಿತ್ತು. ಜೊತೆಗೆ ಗಳಿಕೆ ರಜೆಯನ್ನು ಕೂಡ ರದ್ದು ಮಾಡಿ ಆರ್ಥಿಕ ಇಲಾಖೆ ಆದೇಶ ಮಾಡಿತ್ತು. ಇದೀಗ ಮತ್ತೊಂದು ಹಂತದಲ್ಲಿ ಆರ್ಥಿಕ ಹೊರೆ ಕಡಿಮೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

ಬಾಡಿಗೆ ಕಟ್ಟಡ ತೆರವು
ಆರ್ಥಿಕ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 24 ಸರ್ಕಾರಿ ಕಚೇರಿಗಳನ್ನು ಸುವರ್ಣಸೌಧಕ್ಕೆ ಸ್ಥಳಾಂತರಿಸಲು ರಾಜ್ಯ ಸರ್ಕಾರದ ಆದೇಶ ಮಾಡಿದೆ. ಬೆಳಗಾವಿ ನಗರದ ವಿವಿಧ ಖಾಸಗಿ ಕಟ್ಟಗಳಲ್ಲಿ ಈ ಎಲ್ಲ ಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದವು.
ಸುವರ್ಣಸೌಧ ನಿರ್ಮಾಣವಾಗಿ ಉದ್ಘಾಟನೆಯಾಗಿ ಇದೇ ಅಕ್ಟೋಬರ್ 11ಕ್ಕೆ 8 ವರ್ಷಗಳು ತುಂಬಲಿವೆ. ಅಕ್ಟೋಬರ್ 11, 2012ರಂದು ಅಂದಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಸುವರ್ಣಸೌಧವನ್ನು ಉದ್ಘಾಟನೆ ಮಾಡಿ, ವಿಧಾನ ಮಂಡಲ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ್ದರು. ಅಂದಿನಿಂದ ಇಷ್ಟು ವರ್ಷಗಳಾದರೂ ಸುವರ್ಣಸೌಧ ಬೆಳಗಾವಿಯಿಂದ ದೂರವಿದೆ ಎಂಬ ಕಾರಣ ಕೊಟ್ಟು ಕಚೇರಿ ಸ್ಥಳಾಂತರಕ್ಕೆ ಅಧಿಕಾರಿಗಳು ಮುಂದಾಗಿರಲಿಲ್ಲ.
ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರದ ಮತ್ತೊಂದು ಶಾಕ್!
ಪೀಠೋಪಕರಣ ಖರೀದಿ ಇಲ್ಲ
ಆದರೆ ಈಗ ಕೊರೊನಾ ವೈರಸ್, ಲಾಕ್ಡೌನ್ ಹಿನ್ನೆಲೆಯಲ್ಲಿ ಅನಗತ್ಯ ವೆಚ್ಚ ತಗ್ಗಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಕಚೇರಿಗಳ ಸ್ಥಳಾಂತರ ಮಾಡಬೇಕು, ಜೊತೆಗೆ ಸ್ಥಳಾಂತರಗೊಳ್ಳುವ ಕಚೇರಿಗಳಲ್ಲಿ ಹೊಸದಾಗಿ ಪೀಠೋಪಕರಣಗಳನ್ನು ಖರೀದಿ ಮಾಡಬಾರದು ಎಂದು ಸರ್ಕಾರ ಆದೇಶ ಮಾಡಿದೆ. ಈಗ ಇರುವ ಪೀಠೋಪಕರಣಗಳನ್ನೇ ಸ್ಥಳಾಂತರಗೊಳ್ಳುವ ಹೊಸ ಕಚೇರಿಗಳಲ್ಲಿ ಬಳಸಬೇಕು. ಲೋಕೋಪಯೋಗಿ ಇಲಾಖೆ ಕೇವಲ ಪಾರ್ಟಿಶನ್ ಮಾಡಿಕೊಡಬೇಕು ಎಂದು ಸೂಚಿಸಲಾಗಿದೆ. ಸಂಚಾರಕ್ಕೆ NWKRTCಯ ಬಸ್ ಸೌಲಭ್ಯ ಪಡೆಯುವಂತೆ ಸಲಹೆ ಕೊಡಲಾಗಿದೆ.
ಹೀಗಾಗಿ ಧಾರವಾಡದ ಒಂದು ವಿಭಾಗ ಮಟ್ಟದ ಕಚೇರಿಯೂ ಸೇರಿದಂತೆ ಒಟ್ಟು 24 ಸರ್ಕಾರಿ ಕಚೇರಿಗಳನ್ನು ಬರುವ ಜುಲೈ ತಿಂಗಳಿನಲ್ಲಿ ಬೆಳಗಾವಿಯ ಖಾಸಗಿ ಕಟ್ಟಡಗಳಿಂದ ಸರ್ಕಾರಿ ಕಟ್ಟಡಕ್ಕೆ ಸ್ಥಳಾಂತರ ಮಾಡಲು ಸೂಚಿಸಿದೆ. ಎಲ್ಲ 24 ಕಚೇರಿಗಳು ಖಾಸಗಿ ಕಟ್ಟಡಗಳಲ್ಲಿ ಬಾಡಿಗೆ ಕೊಟ್ಟು ಕಾರ್ಯನಿರ್ವಹಿಸುತ್ತಿದ್ದವು ಎಂಬುದು ಗಮನಿಸಬೇಕಾದ ಅಂಶ.

ಜಿಲ್ಲಾ, ರಾಜ್ಯ ಮಟ್ಟದ ಕಚೇರಿಗಳು
ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕಚೇರಿಗಳನ್ನು ಸ್ಥಳಾಂತರ ಮಾಡುವಂತೆ ವಾಣಿಜ್ಯ, ಕೌಶಲ್ಯಾಭಿವೃದ್ಧಿ, ಇಂಧನ, ಸಹಕಾರ, ಸಿಬ್ಬಂದಿ ಆರ್ಥಿಕ ಸುಧಾರಣೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಲೋಕೋಪಯೋಗಿ, ಹಿಂದುಳಿದ ವರ್ಗಗಳ ಕಲ್ಯಾಣ, ಕಂದಾಯ, ನಗರಾಭಿವೃದ್ಧಿ, ಸಣ್ಣ ನೀರಾವರಿ ಹಾಗೂ ಯೋಜನೆ ಮತ್ತು ಕಾರ್ಯಕ್ರಮ ಸಂಯೋಜನೆ ಹಾಗೂ ಜಲಸಂಪನ್ಮೂಲ ಇಲಾಖೆಯ ಕಚೇರಿ ಸೇರಿದಂತೆ ಒಟ್ಟು 12 ಇಲಾಖೆಗಳ 24 ಕಚೇರಿಗಳು ಖಾಸಗಿ ಕಟ್ಟಡಗಳಲ್ಲಿ ಲಕ್ಷಾಂತರ ರೂ. ಬಾಡಿಗೆ ಕೊಟ್ಟು ಕಾರ್ಯನಿರ್ವಹಿಸುತ್ತಿದ್ದವು.
ಇದೀಗ ಎಲ್ಲ ಈ ಕಚೇರಿಗಳು ಸುವರ್ಣಸೌಧದಕ್ಕೆ ಸ್ಥಳಾಂತರವಾಗಲಿವೆ.

ಸ್ಥಳಾಂತರಗೊಳ್ಳುತ್ತಿರುವ ಕಚೇರಿಗಳು
* ಜಿಲ್ಲಾ ಉದಯೋಗ ವಿನಿಮಯ ಕಚೇರಿ - ಸದಾಶಿವನಗರ
* ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿ - ಚೆನ್ನಮ್ಮ ವೃತ್ತ
* ಹಿರಿಯ ಭೂವಿಜ್ಞಾನಿ, ಜಿಲ್ಲಾ ಅಂತರ್ಜಲ ಕಚೇರಿ - ಟಿಳಕವಾಡಿ
* ಉಪ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ - ಚವಾಟಗಲ್ಲಿ
* ಸಹಾಯಕ ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ - ಸದಾಶಿವನಗರ
* ವಿಶೇಷ ಜಿಲ್ಲಾಧಿಕಾರಿಗಳು, ಭೂಸ್ವಾಧೀನ ಪುನರ್ವಸತಿ ಮತ್ತು ಪುನರ್ ನಿರ್ಮಾಣ, ಬೃಹತ್ ನೀರಾವರಿ ಯೋಜನೆಗಳು - ಕ್ಲಬ್ ರಸ್ತೆ
* ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ - ನೆಹರು ನಗರ
* ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ - ನೆಹರು ನಗರ
* ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ - ನೆಹರು ನಗರ
* ನಿಜ ಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ - ನೆಹರು ನಗರ
* ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮ - ನೆಹರು ನಗರ
* ಸಹಾಯಕ ಆಯುಕ್ತರು (ಭೂ.ಸ್ವಾ) ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಉಪ ವಿಭಾಗ ನಂ.2 - ಸದಾಶಿವನಗರ
* ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ - ಶಿವಬಸವ ನಗರ
* ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ - ಬೆಳಗಾವಿ
* ಆಯುಕ್ತರು ಕರ್ನಾಟಕ ಮಾಹಿತಿ ಆಯೋಗ - ಬೆಳಗಾವಿ
* ಜಂಟಿ ನಿರ್ದೇಶಕರ ಕಚೇರಿ, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ - ಶಿವಬಸವ ನಗರ
* ಕಾರ್ಯನಿರ್ವಾಹಕ ಅಭಿಯಂತರ ಕಚೇರಿ, ಕರ್ನಾಟಕ ರಾಜ್ಯ ಕೃಷಿ ಮಹಾ ಮಂಡಳಿ - ಬೆಳಗಾವಿ
* ಸಹಾಯಕ ಕಾರ್ಯಾಲಕ ಅಭಿಯಂತರ ಕಚೇರಿ, ರ್ನಾಟಕ ರಾಜ್ಯ ಕೃಷಿ ಮಹಾ ಮಂಡಳಿ - ಬೆಳಗಾವಿ
* ಉಪ ಮುಖ್ಯ ವಿದ್ಯುತ್ ಪರಿವೀಕ್ಷಕರ ಕಚೇರಿ, ಬೆಳಗಾವಿ ವೃತ್ತ - ಬೆಳಗಾವಿ
* ಕರ್ನಾಟಕ ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ - ಆಟೊ ನಗರ
* ಕಯಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ - ಬೆಳಗಾವಿ
* ಜಂಟಿ ನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಪಶ್ಚಿಮ ವಲಯ ವಿಭಾಗ - ಕ್ಲಬ್ ರಸ್ತೆ
* ಜಿಲ್ಲಾ ವ್ಯವಸ್ಥಾಪಕ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗ ಅಭಿವೃದ್ಧಿ ನಿಗಮ - ಮಹಾಂತೇಶ ನಗರ
* ಜಿಲ್ಲಾ ವ್ಯವಸ್ಥಾಪಕ, ದೇವರಾಜ ಅರಸು ಅಭಿವೃದ್ಧಿ ನಿಗಮ - ನೆಹರು ನಗರ
* ಉಪ ಪ್ರಧಾನ ವ್ಯವಸ್ಥಾಪಕ, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ - ಮಹಾಂತೇಶ ನಗರ
* ಜಿಲ್ಲಾ ವ್ಯವಸ್ಥಾಪಕ, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ - ಮಹಾಂತೇಶ ನಗರ
* ಯೋಜನಾ ನಿರ್ದೇಶಕ, ನಿರ್ಮಿತಿ ಕೇಂದ್ರ - ಬೆಳಗಾವಿ
* ಕರ್ನಾಟಕ ನೀರಾವರಿ ನಿಗಮ ನಿಯಮಿತ - ಧಾರವಾಡ












Click it and Unblock the Notifications