ಸರ್ಕಾರದ ಭರವಸೆ: ಪ್ರತಿಭಟನೆ ಕೈಬಿಟ್ಟ ಸರ್ಕಾರಿ ವೈದ್ಯರು!
ಬೆಂಗಳೂರು, ಸೆ. 18: ಕೊರೊನಾ ವೈರಸ್ ಸಂಕಷ್ಟದಲ್ಲಿ ಎದುರಾಗಿದ್ದ ಸವಾಲನ್ನು ರಾಜ್ಯ ಸರ್ಕಾರ ಪರಿಹರಿಸಿದೆ. ಹಲವು ಬೇಡಿಕೆಗಳನ್ನು ಇಟ್ಟುಕೊಂಡು ಮುಷ್ಕರಕ್ಕೆ ಇಳಿದಿದ್ದ ರಾಜ್ಯದ ಸರ್ಕಾರ ವೈದ್ಯರು ಮುಷ್ಕರ ಕೈಬಿಟ್ಟಿದ್ದಾರೆ. ಆರೋಗ್ಯ ಸಚಿವ ಶ್ರೀರಾಮುಲು ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಸಂಧಾನ ಸಭೆ ಸಫಲವಾಗಿದೆ. ಹೀಗಾಗಿ ತಕ್ಷಣವೆ ಮುಷ್ಕರ ಕೈಬಿಟ್ಟು ಸೇವೆಗೆ ಹಾಜರಾಗಲು ವೈದ್ಯರು ಒಪ್ಪಿದ್ದಾರೆ.
ಸರ್ಕಾರ ಬೇಡಿಕೆ ಈಡೇರಿಸುವ ಭರವಸೆ ಕೊಟ್ಟಿದ್ದರಿಂದ ಕಳೆದ ಮೂರು ದಿನಗಳಿಂದ ಸೇವೆ ನಿಲ್ಲಿಸಿದ್ದ ವೈದ್ಯರು ಕರ್ತವ್ಯಕ್ಕೆ ಮರಳಿದ್ದಾರೆ. ಈ ಹಿಂದೆ ವಿಧಾನಸೌಧದಲ್ಲಿ ನಡೆದಿದ್ದ ಸಂಧಾನ ಸಭೆ ವಿಫಲವಾಗಿತ್ತು. ಹೀಗಾಗಿ ಇವತ್ತು ಮತ್ತೆ ಸಂಧಾನ ಸಭೆ ನಡೆಸಲಾಯಿತು. ವೈದ್ಯರ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು. ಸಭೆಯ ಬಳಿಕ ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು ಅವರು, ವೈದ್ಯರು ಕೆಲಸಕ್ಕೆ ಮರಳಲಿದ್ದಾರೆಂದು ಹೇಳಿದ್ದಾರೆ.

ಪ್ರತಿಭಟನೆ ವಾಪಸ್
ವಿಧಾನಸೌಧದಲ್ಲಿ ನಡೆದ ಸಂಧಾನ ಸಭೆಯ ಬಳಿಕ ಮಾತನಾಡಿದ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ. ಗುಳೂರು ಶ್ರೀನಿವಾಸ್ ಅವರು, ನಮ್ಮ ಎಲ್ಲಾ ಬೇಡಿಕೆಗಳಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದಿದ್ದಾರೆ. ಸರ್ಕಾರಿ ವೈದ್ಯರ ವೇತನ ಪರಿಷ್ಕರಣೆ ಕೂಡ ಮಾಡಲು ಸರ್ಕಾರ ಒಪ್ಪಿದೆ. ಹೀಗಾಗಿ ನಾವು ನಮ್ಮ ಪ್ರತಿಭಟನೆ ವಾಪಸ್ ಪಡೆಯುತ್ತಿದ್ದೇವೆ.
ನಮ್ಮ ಕೆಲಸಕ್ಕೆ ನಾವು ಈಗಿನಿಂದಲೇ ಹಾಜರಾಗುತ್ತೇವೆ. ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂದು ಹಿಂದಕ್ಕೆ ಪಡೆಯುತ್ತಿದ್ದೇವೆ ಎಂದಿದ್ದಾರೆ.

ವೈದ್ಯರ ಬೇಡಿಕೆ
ಸರ್ಕಾರಿ ವೈದ್ಯರು ಪ್ರತಿಭಟನೆ ಕೈಬಿಟ್ಟಿದ್ದಾರೆ. ವೈದ್ಯರಿಗೆ ಇನ್ಸೆಟಿವ್ ಆಗಿ 120 ಕೋಟಿ ರೂ.ಗಳ ಬಿಡುಗಡೆಗೆ ಸರ್ಕಾರ ಅನುಮತಿ ನೀಡಲಾಗಿದೆ. ವೈದ್ಯರೊಂದಿಗೆ ಮಾತುಕತೆ ಯಶಸ್ವಿಯಾಗಿದ್ದು, ಪ್ರತಿಭಟನೆ ಮುಗಿದಿದೆ. ಮುಷ್ಕರ ಕೈಬಿಟ್ಟಿದ್ದಕ್ಕೆ ವೈದ್ಯರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸೂಚನೆಯಂತೆ ವೈದ್ಯರ ಬೇಡಿಕೆ ಈಡೇರಿಸಲಾಗಿದೆ.
ಕೊರೊನಾ ವೈರಸ್ ಸಂಬಂಧಿತ ಸೇವೆಗಳು ಅಬಾಧಿತವಾಗಿ ಮುಂದುವರೆಯುತ್ತಿವೆ. ಜನಸಾಮಾನ್ಯರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದು ಶ್ರೀರಾಮುಲು ಹೇಳಿದ್ದಾರೆ.

ವೈದ್ಯರ ಬೇಡಿಕೆಗಳು
ವೇತನ ತಾರತಮ್ಯ ಸರಿ ಪಡಿಸಿ ವೇತನ ಹೆಚ್ಚಳ ಮಾಡಬೇಕು ಎಂಬ ಪ್ರಮುಖ ಬೇಡಿಕೆಯಿಂದಿಗೆ ಸರ್ಕಾರಿ ವೈದ್ಯರು ಮುಷ್ಕರ ಆರಂಭಿಸಿದ್ದರು. ಬೆಂಗಳೂರಿನ 48 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಿಬಿಎಂಪಿಗೆ ವಹಿಸಿರುವುದನ್ನು ಪುನರ್ ಆರೋಗ್ಯ ಇಲಾಖೆಗೆ ಸೇರಿಸಬೇಕು. ಸರ್ಕಾರದಿಂದ ವೈದ್ಯರ ದಿನಾಚರಣೆ ಆಚರಿಸಬೇಕು. ಜಿಲ್ಲಾಸ್ಪತ್ರೆಗಳನ್ನು ಮೆಡಿಕಲ್ ಕಾಲೇಜು ವ್ಯಾಪ್ತಿಗೆ ಸೇರಿಸಕೂಡದು. ವೈದ್ಯರ ವಿರುದ್ಧ ಆರೋಪ ಬಂದಾಗ ತನಿಖೆಗೂ ಮುನ್ನ ಅಮಾನತು ಮಾಡಬಾರದು. ಕೋವಿಡ್ ಕಾಲದ ಕರ್ತವ್ಯದ ವೇಳೆ ಮೃತಪಟ್ಟಿರುವ ವೈದ್ಯರಿಗೆ ಸರ್ಕಾರದಿಂದ ಪರಿಹಾರ ಬಿಡುಗಡೆ ಮಾಡಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಇಟ್ಟುಕೊಂಡು ವೈದ್ಯರು ಮುಷ್ಕರ ಆರಂಭಿಸಿದ್ದರು.

ವೈದ್ಯಾಧಿಕಾರಿ ಆತ್ಮಹತ್ಯೆ
ಕಳೆದ ತಿಂಗಳು ಕೆಲಸದ ಒತ್ತಡದಿಂದ ಆತ್ಮಹತ್ಯೆಗೆ ಶರಣಾಗಿದ್ದ ನಂಜನಗೂಡಿನ ಟಿಹೆಚ್ಓ ಡಾ. ನಾಗೇಂದ್ರ ಪ್ರಕರಣದಲ್ಲಿ ವೈದ್ಯರು ಪ್ರತಿಭಟನೆ ಮಾಡಿದ್ದರು. ನಂತರ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮತ್ತೊಂದು ಪ್ರತಿಭಟನೆ ನಡೆಸಿದ್ದರು.
ವೈದ್ಯರು ಡೆಂಘಿ, ಹೆಚ್1ಎನ್1 ಸೇರಿದಂತೆ ಕೋವಿಡ್ ವರದಿಗಳನ್ನು ಕೊಡದಿರಲು ನಿರ್ಧರಿಸಿದ್ದರು. ಜೊತೆಗೆ ಬರುವ ಸಪ್ಟೆಂಬರ್ 21ರಂದು ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಓಪಿಡಿ ಸೇವೆ ಸ್ಥಗಿತಗೊಳಿಸಲು ತೀರ್ಮಾನಿಸಿದ್ದರು.












Click it and Unblock the Notifications