ದಲಿತ ನಾಯಕ ಕೆ.ಶಿವರಾಂಗೆ ಬಿಜೆಪಿ ರೆಡ್ ಕಾರ್ಪೆಟ್!
ಬೆಂಗಳೂರು, ಅಕ್ಟೋಬರ್. 14 : ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸಮ್ಮುಖದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ದಲಿತ ನಾಯಕನೆಂದೆ ಬಿಂಬಿತರಾಗಿರುವ ಕೆ.ಶಿವರಾಂ ಅವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.
ಶುಕ್ರವಾರ (ಅಕ್ಟೋಬರ್ 14) ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ನಡೆಯಲಿರುವ ಬಿಜೆಪಿಯ ಬೃಹತ್ ಸಮಾವೇಶದಲ್ಲಿ ಛಲವಾದಿ ಸಮುದಾಯದ ನಾಯಕ ಕೆ.ಶಿವರಾಂ ಅವರು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. [ಈಶ್ವರಪ್ಪ ವಿರುದ್ದ 'ದಲಿತ ಬ್ರಹ್ಮಾಸ್ತ್ರ' ಪ್ರಯೋಗಿಸಲು ಬಿಎಸ್ವೈ ಸಜ್ಜು?]
ಕೆ.ಶಿವರಾಂ ಅವರು ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷದಿಂದ ಕಳೆದ ಲೋಕಸಭಾ ಚುನಾವಣೆಯಲ್ಲಿ ವಿಜಯಪುರ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿಯ ರಮೇಶ್ ಜಿಗಜಿಣಗಿ ಅವರ ವಿರುದ್ಧ ಸೋಲುಕಂಡಿದ್ದರು.
ಬಿಜೆಪಿಗೆ ಶಿವರಾಂ ಸೇರ್ಪಡೆ ರಾಜಕೀಯವಾಗಿ ಭಾರೀ ಮಹತ್ವ ಪಡೆದಿದ್ದು. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಸ್.ಸಿ/ಎಸ್.ಟಿ ನಾಯಕರು ಸೇರಲು ನಾವು ನಿರೀಕ್ಷಿಸುತ್ತಿದ್ದೇವೆ. ಶಿವರಾಂ ಅವರ ಸೇವೆಯನ್ನು ದಲಿತರು, ಹಿಂದುಳಿದವರ ಸಂಘಟನೆಗೆ ಬಳಸಿಕೊಳ್ಳಲಾಗುವುದು.
2018ರ ವಿಧಾನಸಭೆ ಚುನಾವಣೆಯಲ್ಲಿ ಶಿವರಾಂ ಅವರು ದಲಿತ ಸಮುದಾಯವನ್ನು ತಲುಪಲು ಪ್ರಮುಖ ಪಾತ್ರ ವಹಿಸಲಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 150 ಸೀಟುಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.