ಎ ಮಂಜುಗೆ ಮತ್ತೆ ನೋಟಿಸ್ ನೀಡಿದ ರೋಹಿಣಿ ಸಿಂಧೂರಿ
ಹಾಸನ, ಏಪ್ರಿಲ್ 10: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಅವರಿಗೆ ಮತ್ತೊಂದು ನೋಟಿಸ್ ನೀಡಲಾಗಿದೆ. ಈ ಹಿಂದೆ ಏಪ್ರಿಲ್ ಮೊದಲ ವಾರದಲ್ಲಿ ನೀಡಿದ್ದ ನೋಟಿಸ್ ಗೆ ಉತ್ತರಿಸಲು ಏಳು ದಿನಗಳ ಕಾಲಾವಕಾಶ ಕೇಳಿದ್ದರು.
ಬಗರ್ ಹುಕುಂ ಸಾಗುವಳಿದಾರರ ಭೂಮಿ ಸಕ್ರಮಕ್ಕೆ ಅಂಕಿತ ಹಾಕಿದ ಆರೋಪದ ಮೇಲೆ ಅರಕಲಗೂಡು ಚುನಾವಣಾ ಅಧಿಕಾರಿ ನೋಟಿಸ್ ನೀಡಿದ್ದು, 2 ದಿನಗಳ ಒಳಗಾಗಿ ಉತ್ತರ ನೀಡುವಂತೆ ಸೂಚಿಸಿದ್ದಾರೆ.
ಎ. ಮಂಜು ಅವರು ಸಭೆ ನಡೆಸದೆ 800 ಕ್ಕೂ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡಿದ ಆರೋಪ ಕೇಳಿ ಬಂದಿದೆ. ಜತೆಗೆ ಅರ್ಜಿಗಳನ್ನು ತಿದ್ದಿ ಅನರ್ಹರಿಗೆ ಸಾಗುವಳಿ ಚೀಟಿ ನೀಡಿರುವ ಶಂಕೆ ವ್ಯಕ್ತವಾಗಿದೆ. ಅಷ್ಟೇ ಅಲ್ಲದೆ ಹಿಂದಿನ ದಿನಾಂಕದಲ್ಲಿ ಸಭೆ ನಡೆಸಿರುವುದಾಗಿ ಸಹಿ ಮಾಡಿರುವುದು ತನಿಖೆಯಿಂದ ಬಯಲಾಗಿದೆ ಎಂದು ತಿಳಿದು ಬಂದಿದೆ.
ಇದಕ್ಕೂ ಮುನ್ನ ಲೋಕೋಪಯೋಗಿ ಇಲಾಖೆಗೆ ಸೇರಿರುವ ಪರಿವೀಕ್ಷಣಾ ಬಂಗಲೆ (ಐಬಿ) ಯನ್ನು ಎ ಮಂಜು ಅವರು ತಮ್ಮ ವಶದಲ್ಲಿರಿಸಿಕೊಂಡ ಆರೋಪ ಕೇಳಿ ಬಂದಿತ್ತು. ಎ ಮಂಜು ಅವರ ಬೆಂಬಲಿಗರು ಚುನಾವಣೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿದ್ದು ಕಂಡು ಬಂದಿತ್ತು. ಚುನಾವಣೆ ರಿಟರ್ನಿಗ್ ಅಧಿಕಾರಿ ರೋಹಿಣಿ ನೇತೃತ್ವದ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ , ಈ ಬಗ್ಗೆ ಪ್ರಶ್ನಿಸಿ, ಕಾರ್ಯಕರ್ತರನ್ನು ತೆರವುಗೊಳಿಸಲು ಯತ್ನಿಸಿದ್ದರು. ಆದರೆ, ಕಾರ್ಯಕರ್ತರು ಮಾತು ಕೇಳದಿದ್ದಾಗ, ಬಂಗಲೆಗೆ ಬೀಗ ಹಾಕಿ, ಸಚಿವ ಎ ಮಂಜುಗೆ ನೋಟಿಸ್ ಜಾರಿಗೊಳಿಸಲಾಗಿತ್ತು.