ಜಾತಿ ಬಣ್ಣಕ್ಕೆ ತಿರುಗಿತು ಯೋಗಿ ವಿರುದ್ದದ ದಿನೇಶ್ ಗುಂಡೂರಾವ್ ಹೇಳಿಕೆ
Recommended Video

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಉತ್ತರಪ್ರದೇಶದ ಮುಖ್ಯಮಂತ್ರಿ ಮತ್ತು ಗೋರಖಪುರ ಮಠದ ಪೀಠಾಧಿಪತಿ ಯೋಗಿ ಆದಿತ್ಯನಾಥ್ ವಿರುದ್ದ ನೀಡಿದ ಕೀಳು ಮಟ್ಟದ ಹೇಳಿಕೆ, ಜಾತಿ ಬಣ್ಣ ಪಡೆಯಲಾರಂಭಿಸಿದೆ.
ಯೋಗಿ ಆದಿತ್ಯನಾಥ್ ಅವರು ಕರ್ನಾಟಕಕ್ಕೆ ಬಂದರೆ ಚಪ್ಪಲಿಯಲ್ಲಿ ಹೊಡೀರಿ ಎಂದು ದಿನೇಶ್ ಗುಂಡೂರಾವ್ ನೀಡಿದ ಹೇಳಿಕೆ, ನಾಥ ಮತ್ತು ಒಕ್ಕಲಿಗ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಬಿಜೆಪಿ ಮತ್ತು ಸಮುದಾಯದವರು ತಿರುಗಿ ಬೀಳಲಾರಂಭಿಸಿದ್ದಾರೆ.
ಈಗಾಗಲೇ ಬಿಜೆಪಿ, ಭಾನುವಾರ (ಏ 15) ಬೃಹತ್ ಪ್ರತಿಭಟನೆಯನ್ನು ನಡೆಸಿ, ದಿನೇಶ್ ಗುಂಡೂರಾವ್ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದೆ. ಜೊತೆಗೆ, ದೇಶದ ಅತಿದೊಡ್ಡ ರಾಜ್ಯದ ಮುಖ್ಯಮಂತ್ರಿಗೆ ಗೌರವ ಕೊಡಲು ಗೊತ್ತಿಲ್ಲದ ದಿನೇಶ್, ತಾನು ಬೆಳೆದ ಬಂದ ಸಂಸ್ಕೃತಿಯನ್ನು ಅನಾವರಣಗೊಳಿಸಿದ್ದಾರೆಂದು ಬಿಜೆಪಿ ಮುಖಂಡರು ವಾಗ್ದಾಳಿ ನಡೆಸಿದ್ದಾರೆ.
ನಾಥ ಪರಂಪರೆಯೂ ಒಂದೇ, ಒಕ್ಕಲಿಗ ಪರಂಪರೆಯೂ ಒಂದೇ. ದಿನೇಶ್ ಗುಂಡೂರಾವ್ ಅವರ ಹೇಳಿಕೆ ಇಡೀ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಸಾಮಾಜಿಕ ತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಉತ್ತರಪ್ರದೇಶ ಮತ್ತು ಕಾಶ್ಮೀರದಲ್ಲಿ ನಡೆದ ಅತ್ಯಾಚಾರ ಘಟನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ದಿನೇಶ್ ಗುಂಡೂರಾವ್, ಯೋಗಿ ವಿರುದ್ದ ಏಕವಚನದಲ್ಲಿ ಟೀಕಾ ಪ್ರಹಾರ ನಡೆಸಿದ್ದರು. ದಿನೇಶ್ ಹೇಳಿಕೆ, ಈಗ ಭಾರೀ ಟೀಕೆಗೆ ಗುರಿಯಾಗುತ್ತಿದೆ. ಮುಂದೆ ಓದಿ..

ಆದಿಚುಂಚನಗಿರಿ ಮಠವೂ ನಾಥ ಪರಂಪರೆಯದ್ದು
ಆದಿಚುಂಚನಗಿರಿ ಮಠವೂ ನಾಥ ಪರಂಪರೆಯದ್ದು. ಯೋಗಿ ಆದಿತ್ಯನಾಥ್ ಅವರೂ ನಾಥ ಸಂಪ್ರದಾಯದ ಪೀಠಾಧಿಪತಿ. ಅವರನ್ನು ಅವಮಾನಿಸುವುದೂ ಒಂದೇ ಒಕ್ಕಲಿಗ ಮಠಗಳನ್ನು ಅವಮಾನಿಸುವುದೂ ಒಂದೇ. ದಿನೇಶ್ ಗುಂಡೂರಾವ್ ಹೇಳಿಕೆ, ಇಡೀ ಒಕ್ಕಲಿಗ ಸಮುದಾಯಕ್ಕೆ ಮಾಡಿದ ಅವಮಾನ ಎನ್ನುವ ಆಕ್ರೋಶ ಆರಂಭವಾಗಿದೆ.

ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವ ಯೋಗಿ
ಒಂದು ರಾಜ್ಯದ ಮುಖ್ಯಮಂತ್ರಿ ಜೊತೆಗೆ ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವ ಪುರಾತನ ಮಠದ ಪೀಠಾಧಿಪತಿಯೊಬ್ಬರನ್ನು ಅವಮಾನಿಸುವುದು ದಿನೇಶ್ ಗುಂಡೂರಾವ್ ಅವರ ಯೋಗ್ಯತೆಯನ್ನು ತೋರಿಸುತ್ತದೆ. ಇಂತಹ ನಾಯಕರನ್ನು ಹೊಂದಿರುವ ಕಾಂಗ್ರೆಸ್ಸಿನ ಸಂಸ್ಕೃತಿಯನ್ನೂ ಇದು ಅನಾವರಣ ಮಾಡಿದೆ ಎನ್ನುವ ಚರ್ಚೆ ಸಾಮಾಜಿಕ ತಾಣದಲ್ಲಿ ನಡೆಯುತ್ತಿದೆ.

ಯೋಗಿ ವಿರುದ್ದ ದಿನೇಶ್ ಏಕವಚನದಲ್ಲಿ ಕೀಳುಮಟ್ಟದ ಪದ ಬಳಸಿ ಟೀಕೆ
ಶನಿವಾರ (ಏ14) ಬೆಂಗಳೂರಿನಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ದಿನೇಶ್ ಗುಂಡೂರಾವ್, ಅವನೂಬ್ಬ ಡೋಂಗಿ ನಾಯಕ. ಸಿಎಂ ಹುದ್ದೆಯಲ್ಲಿ ಇರಲು ನಾಲಾಯಕ್ ಆದಂತಹ ವ್ಯಕ್ತಿ. ರಾಜ್ಯಕ್ಕೆ ಅವನು ಬಂದಾಗ ಅವನಿಗೆ ಬುದ್ದಿ ಕಲಿಸಬೇಕಿದೆ, ಇಲ್ಲಿಗೆ ಬಂದಾಗ ಚಪ್ಪಲಿಯಿಂದ ಅವನಿಗೆ ಹೊಡಿಯಬೇಕು ಎಂದು ಯೋಗಿ ವಿರುದ್ದ ದಿನೇಶ್ ಏಕವಚನದಲ್ಲಿ ಕೀಳುಮಟ್ಟದ ಪದ ಬಳಸಿ ಟೀಕಿಸಿದ್ದರು.

ಜಾತಿಬಣ್ಣಕ್ಕೆ ತಿರುಗಿರುವ ದಿನೇಶ್ ಗುಂಡೂರಾವ್ ಹೇಳಿಕೆ
ದಿನೇಶ್ ಹೇಳಿಕೆ ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿರುವುದು ಒಂದೆಡೆಯಾದರೆ, ಜಾತಿಬಣ್ಣಕ್ಕೆ ತಿರುಗಿರುವುದು ಇನ್ನೊಂದೆಡೆ. ದಿನೇಶ್ ಗುಂಡೂರಾವ್ ನೀಡಿರುವ ಹೇಳಿಕೆ ಒಕ್ಕಲಿಗ ಸಮುದಾಯದ ಕೋಪಕ್ಕೆ ಗುರಿಯಾಗಲಾರಂಭಿಸಿದೆ. ಚುನಾವಣಾ ಈ ಹೊತ್ತಿಲಲ್ಲಿ ಬಿಜೆಪಿ ಈ ವಿಷಯವನ್ನು ಜೀವಂತವಾಗಿರಿಸುವ ಸಾಧ್ಯತೆಯಿದೆ. ಈಗಾಗಲೇ ಬಿಜೆಪಿ ಪ್ರತಿಭಟನೆ ಜೋರಾಗಿಯೇ ನಡೆದಿದೆ.

ನಿಮ್ಮ ಹೆಂಡ್ತಿಯೇ ನಿಮಗೆ ಹೊಡೀತಿದ್ರು ಎಂದ ಪ್ರತಾಪ್ ಸಿಂಹ
ಶೋಭಾ ಕರಂದ್ಲಾಜೆ, ಸದಾನಂದ ಗೌಡ, ಪ್ರತಾಪ್ ಸಿಂಹ, ಸಿ ಟಿ ರವಿ ಮುಂತಾದ ನಾಯಕರು, ದಿನೇಶ್ ಗುಂಡೂರಾವ್ ಹೇಳಿಕೆಯ ವಿರುದ್ದ ತೀಕ್ಷ್ನ ಪ್ರತಿಕ್ರಿಯೆ ನೀಡಿದ್ದಾರೆ. ಯೋಗಿ ಬಗ್ಗೆ ಮಾತನಾಡುವ ಯೋಗ್ಯತೆ ಭೋಗಿಗೆ (ದಿನೇಶ್) ಇಲ್ಲ ಎಂದು ಸದಾನಂದ ಗೌಡ ವಾಕ್ ಪ್ರಹಾರ ನಡೆಸಿದ್ದಾರೆ. ಮುಲ್ಲಾ ಅಥವಾ ಮೌಲ್ವಿಗೆ ಹೊಡೀಬೇಕು ಅಂತ ಹೇಳಿದ್ರೆ, ನಿಮ್ಮ ಹೆಂಡ್ತಿಯೇ ನಿಮಗೆ ಹೊಡೀತಿದ್ರು ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.












Click it and Unblock the Notifications