ಜಗದೀಶ್ ಶೆಟ್ಟರ್ ಟಿಪ್ಪು ವೇಷ ತೊಟ್ಟಿದ್ದು ನಿಜಾನಾ?
ಬೆಂಗಳೂರು, ಅಕ್ಟೋಬರ್ 24: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಟಿಪ್ಪು ಸುಲ್ತಾನ್ ರೀತಿಯಲ್ಲಿ ವೇಶಃ ತೊಟ್ಟಿರುವ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಇದು ಕಾಂಗ್ರೆಸ್ಸಿಗರಿಗೆ ಬಿಜೆಪಿ ವಿರುದ್ಧ ಹೂಡಲು ಶಕ್ತಿಶಾಲಿ ಬಾಣ ಎನ್ನಿಸಿದೆ.
ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸುತ್ತ ಬಂದಿರುವ ಬಿಜೆಪಿಯವರೇ ಟಿಪ್ಪು ವೇಷ ತೊಟ್ಟಿರುವ ಚಿತ್ರ ಬಿಜೆಪಿಗೆ ಆಡಿಕೊಳ್ಳುವವರ ಮುಂದೆ ಎಡವಿ ಬಿದ್ದಂಥ ಪರಿಸ್ಥಿತಿ ತಂದಿಟ್ಟಿದೆ.

ಇದರೊಟ್ಟಿಗೆ ಮಾಜಿ ಉಪಮುಖ್ಯಮಂತ್ರಿ ಆರ್ .ಅಶೋಕ್, ಮಾಜಿ ಸಂಸದ ಡಿ.ಬಿ.ಚಂದ್ರೇಗೌಡ ಸಹ ಟಿಪ್ಪು ವೇಷ ತೊಟ್ಟಿರುವುದು ಈ ಚಿತ್ರದಲ್ಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಗದೀಶ್ ಶೆಟ್ಟರ್, ತಾವು ಯಾವುದೋ ಅಲ್ಪಸಂಖ್ಯಾತರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಅವರು ನೀಡಿದ್ದ ಟೋಪಿ ಮತ್ತು ಖಡ್ಗ ಹಿಡಿದುಕೊಂದಿದ್ದನ್ನೇ ಈಗ ವಿವಾದ ಮಾಡಲಾಗುತ್ತಿದೆ. ನಾನು ಟಿಪ್ಪು ವೇಷ ತೊಟ್ಟಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.
ಶೇಖ್ ಅಲಿ ಎಂಬ ಇತಿಹಾಸಜ್ಞರೊಬ್ಬರು ಟಿಪ್ಪು ಒಬ್ಬ ದೇಶಭಕ್ತ ಎಂಬ ಪುಸ್ತಕ ಬರೆದಿದ್ದು, ಈ ಪುಸ್ತಕಕ್ಕೆ ಸ್ವತಃ ಜಗದೀಶ್ ಶೆಟ್ಟರ್ ಮುನ್ನುಡಿ ಬರೆದುಕೊಟ್ಟಿದ್ದಾರೆಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಟಿಪ್ಪುವನ್ನು ಹಿಂದು ವಿರೋಧಿ, ಕನ್ನಡ ವಿರೋಧಿ ಎನ್ನುವ ಬಿಜೆಪಿ ನಾಯಕರೇ ಟಿಪ್ಪುವಿನ ವೇಷ ತೊಟ್ಟಿರುವ ಚಿತ್ರ ಬಿಜೆಪಿಗೆ ಇರಿಸುಮುರಿಸುಂಟಾಗುವಂತೆ ಮಾಡಿರುವುದಂತೂ ಸುಳ್ಳಲ್ಲ.











Click it and Unblock the Notifications