'ರೌಡಿಗಳಿಂದ, ರೌಡಿಗಳಿಗಾಗಿ, ರೌಡಿಗಳಿಗೋಸ್ಕರ' ಇದು ಬಿಜೆಪಿಯ ಹೊಸ ಧ್ಯೇಯವಾಕ್ಯ-ಕಾಂಗ್ರೆಸ್
ಬೆಂಗಳೂರು, ಡಿಸೆಂಬರ್ 4: ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಪಕ್ಷಕ್ಕೆ ಅನೇಕರು ಸೇರ್ಪಡೆಯಾಗುತ್ತಿದ್ದು, ಇದೀಗ ರೌಡಿಶೀಟರ್ಗಳು ಬಿಜೆಪಿ ಸೇರುತ್ತಿದ್ದಾರೆ ಎಂದು ಕಾಂಗ್ರೆಸ್ ಬಿಜೆಪಿ ವಿರುದ್ಧ ಲೇವಡಿ ಮಾಡಿದೆ.
ಬಿಜೆಪಿ ರೌಡಿ ಮೋರ್ಚಾ ಸೇರಲು ಬೇಡಿಕೆ ಹೆಚ್ಚುತ್ತಿದೆ. ಒಬ್ಬರ ಮೇಲೆ ಒಬ್ಬರಂತೆ ಬಿಜೆಪಿ ನಾಯಕರು ರೌಡಿಗಳ ಸಮರ್ಥನೆಗೆ ಇಳಿದಿರುವಾಗ ರೌಡಿಗಳಿಗೂ ಬಿಜೆಪಿ ಮೇಲೆ ಪ್ರೇಮ ಉಕ್ಕಿ ಹರಿಯುತ್ತಿದೆ. ಬಿಜೆಪಿ, ರೌಡಿ ಮೋರ್ಚಾದ ಉದ್ಘಾಟನೆ ಯಾವಾಗ..? ಉದ್ಘಾಟನೆಗೆ ಅಮಿತ್ ಶಾ ಬರುವರೇ, ಅಥವಾ ಬೊಮ್ಮಾಯಿಯವರೇ ಟೇಪ್ ಕಟ್ ಮಾಡುತ್ತಾರಾ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ವ್ಯಂಗ್ಯವಾಡಿದೆ.
Breaking; ಖ್ಯಾತ ವೈದ್ಯ ಧನಂಜಯ ಸರ್ಜಿ ಬಿಜೆಪಿ ಸೇರ್ಪಡೆ
'ನಾನು ರೌಡಿಶೀಟರ್, ನನಗೂ ನಿಮ್ಮ ಪಕ್ಷದಲ್ಲಿ ಸ್ಥಾನ ಕೊಡುವಿರಾ..? ಮಂಜು ಅಲಿಯಾಸ್ ಪಾನಿಪುರಿ ಮಂಜ' ಎನ್ನುವ ಫೋಟೋವನ್ನು ಕಾಂಗ್ರೆಸ್ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ಹಲ್ಲೆಗಳನ್ನು ಹೆಚ್ಚಿಸಲೆಂದೇ ರೌಡಿ ಮೋರ್ಚಾ ಕಟ್ಟುತ್ತಿದ್ದೀರಾ..?
ಪ್ರಜಾಪ್ರಭುತ್ವ ಹಾಗೂ ಸಾಂವಿಧಾನಿಕ ಆಶಯಗಳನ್ನು ಮುಗಿಸಲೆಂದೇ ಬಿಜೆಪಿ ರೌಡಿ ಮೋರ್ಚಾ ಕಟ್ಟುತ್ತಿದೆ. ಸಾಂವಿಧಾನಿಕ ಆಶಯದ ಮಾದರಿಯಲ್ಲಿ ಪ್ರತಿಭಟಿಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲು ಮುಂದಾಗಿದೆ ಬಿಜೆಪಿಯ ರೌಡಿ ಮೋರ್ಚಾ ಪಡೆ. ಇಂತಹ ಹಲ್ಲೆಗಳನ್ನು ಹೆಚ್ಚಿಸಲೆಂದೇ ರೌಡಿ ಮೋರ್ಚಾ ಕಟ್ಟುತ್ತಿದ್ದೀರಾ ಎಂದು ಕಾಂಗ್ರೆಸ್ ಬಿಜೆಪಿಯನ್ನು ಪ್ರಶ್ನಿಸಿದೆ.
'ರೌಡಿಗಳನ್ನು ರೌಡಿಗಳೆನ್ನಬೇಡಿ' ಇದು ಮಾಜಿ ರೌಡಿಶೀಟರ್ ಸಿ.ಟಿ ರವಿ ಫಾರ್ಮಾನು. ರೌಡಿ ಮೋರ್ಚಾದ ತಯಾರಿ ನಡೆಸಿರುವ ಬಿಜೆಪಿ ಈಗ ರೌಡಿಗಳ ಪರವಾಗಿ ನಿರ್ಲಜ್ಜವಾಗಿ ಸಮರ್ಥನೆಗೆ ಇಳಿದಿದೆ. ತಾವೂ ರೌಡಿಗಳಾಗಿದ್ದೆವು ಎಂಬುದನ್ನೂ ಒಪ್ಪುತ್ತಿದ್ದಾರೆ. 'ರೌಡಿಗಳಿಂದ, ರೌಡಿಗಳಿಗಾಗಿ, ರೌಡಿಗಳಿಗೋಸ್ಕರ' ಇದು ಬಿಜೆಪಿಯ ಹೊಸ ಧ್ಯೇಯವಾಕ್ಯ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವಿರುದ್ಧ ಕಿಡಿಕಾರಿದೆ.
ಸಿಎಂ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ವ್ಯಂಗ್ಯ
ಪರೋಡಿಗಳಿಂದ ರೌಡಿಗಳ ಸಮರ್ಥನೆ. ಬಿಜೆಪಿ ಸೇರಿದರೆ ಸಮಾಜಘಾತುಕರಿಗೂ ಸಮಾಜ ಸೇವಕರ ಬಿರುದು ನೀಡಲಾಗುತ್ತದೆ ಎಂಬುದಕ್ಕೆ ಪ್ರತಾಪ್ ಸಿಂಹ ಅವರ ರೌಡಿಗಳ ಪರ ಸಮರ್ಥನೆಯೇ ಸಾಕ್ಷಿ. ಕೊಲೆ, ಸುಲಿಗೆ, ದರೋಡೆ ಮಾಡಿದವರಿಗೆ ರೆಡ್ ಕಾರ್ಪೆಟ್ ಹಾಕುತ್ತಿರುವ ಬಿಜೆಪಿ ನಿರ್ಲಜ್ಜತನದ ಪರಮಾವಧಿಯನ್ನು ತಲುಪಿದೆ ಬಿಜೆಪಿ. ಬಿಜೆಪಿಯ ಅಸಲಿ ಸಂಸ್ಕೃತಿ ಬೆತ್ತಲಾಗಿದೆ.
ನಿಮ್ಮ ಮಾತಿಗೆ ನಿಮ್ಮದೇ ಪಕ್ಷದ ಮಹಾರಾಷ್ಟ್ರ ಸರ್ಕಾರದಿಂದ ಕವಡೆ ಕಾಸಿನ ಕಿಮ್ಮತ್ತು ಸಿಗುತ್ತಿಲ್ಲ. ವೇದಿಕೆ ಮೇಲೆ ದಮ್ಮು, ತಾಕತ್ತು ಎಂಬ ರೌಡಿಸಂ ಭಾಷೆ ಬಳಸುವ ತಾವು ಮಹಾರಾಷ್ಟ್ರದ ಸಚಿವರ ಮುಂದೆ ಬಾಲ ಮುದುರಿದ ಬೆಕ್ಕಿನಂತೆ ಆಗಿರುವುದೇಕೆ..? ಈಗೇಕೆ ನಿಮ್ಮ ದಮ್ಮು, ತಾಕತ್ತಿನ ಪ್ರದರ್ಶನ ನಿಂತು ಹೋಗಿದೆ..? ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಲೇವಡಿ ಮಾಡಿದೆ.
ಬಿಜೆಪಿ ಬಾಯಲ್ಲಿ ಗೋರಕ್ಷಣೆ ಎನ್ನುವುದು ಬರೀ ಬೂಟಾಟಿಕೆ
ಇನ್ನು ರಾಜ್ಯದಲ್ಲಿ ಚರ್ಮಗಂಟು ರೋಗದಿಂದ ಸಾವಿರಾರು ಜಾನುವಾರುಗಳು ಸಾವನ್ನಪ್ಪಿರುವ ಬಗ್ಗೆ ಸರ್ಕಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್, ಲಸಿಕೆ ಹಾಗೂ ಸಿಬ್ಬಂದಿ ಕೊರತೆಯಿಂದ ಚರ್ಮಗಂಟು ರೋಗದ ನಿರ್ವಹಣೆಯಲ್ಲಿ ಸೋತಿರುವ ಬಿಜೆಪಿ ಸರ್ಕಾರ, 'ಗೋಮಾತೆ' ಎಂದು ಪದ ಬಳಸುವುದೇ ಹಾಸ್ಯಾಸ್ಪದ. ಪಶು ವೈದ್ಯಕೀಯ ಕ್ಷೇತ್ರವನ್ನು ಗಟ್ಟಿಗೊಳಿಸಿ ಗೋರಕ್ಷಣೆಗೆ ಒತ್ತು ಕೊಡಬೇಕಾದ ಬಿಜೆಪಿ ಬಾಯಲ್ಲಿ ಗೋರಕ್ಷಣೆ ಎನ್ನುವುದು ಬರೀ ಬೂಟಾಟಿಕೆ. ಹುದ್ದೆ ಭರ್ತಿ ಮಾಡಲು ನಿರಾಸಕ್ತಿ ಏಕೆ..? ಎಂದು ಪ್ರಶ್ನಿಸಿದೆ.
ಮಗುವಿನ ಸಾವಿಗೆ ಬೇಜವಾಬ್ದಾರಿ ಸಚಿವ ಡಾ.ಕೆ ಸುಧಾಕರ್ ನೇರ ಹೊಣೆ
ಇನ್ನು ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ನಡೆದಿದೆ ನೀರಿನ ಸಂಪ್ನಲ್ಲಿ ಬಿದ್ದ ಮಗು ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಸಾವನ್ನಪ್ಪಿರುವ ಘಟನೆಯ ಕುರಿತು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, ಬೆಳಗಾವಿಯಲ್ಲಿ ವೆಂಟಿಲೇಟರ್ ಸಿಗದೆ ಸಾವು, ಹಾಸನದಲ್ಲಿ ಚಿಕಿತ್ಸೆ ನಿರಾಕರಿಸಿ ಸಾವು, ಈಗ ಮಧುಗಿರಿಯಲ್ಲಿ ವೈದ್ಯರ ಕರ್ತವ್ಯಲೋಪದಿಂದ ಸಾವು. ಈ ಎಲ್ಲದಕ್ಕೂ ಬೇಜವಾಬ್ದಾರಿ ಸಚಿವ ಡಾ.ಕೆ ಸುಧಾಕರ್ ನೇರ ಹೊಣೆ. ಆರೋಗ್ಯ ಇಲಾಖೆಯನ್ನು ಭ್ರಷ್ಟಾಚಾರದ ಕೊಂಪೆ ಮಾಡಿದ ಕೀರ್ತಿ ಸುಧಾಕರ್ರದ್ದು. ಜೀವ ಉಳಿಸುವ ಬದಲು ಜೀವ ತೆಗೆಯುತ್ತಿದೆ ಈ ಸರ್ಕಾರ ಎಂದು ಗುಡುಗಿದೆ.