ಮೈತ್ರಿ ಸರ್ಕಾರದ ನಾಯಕರಲ್ಲೇ ನಡೆಯುತ್ತಿದೆ ಮುಸುಕಿನ ಗುದ್ದಾಟ!
Recommended Video
ಮೈಸೂರು, ಸೆಪ್ಟೆಂಬರ್.25: ಕೇವಲ ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ತಳಮಟ್ಟದಲ್ಲಿ ತಮ್ಮ ನಾಯಕರು ಮತ್ತು ಕಾರ್ಯಕರ್ತರನ್ನು ಒಂದು ಮಾಡಲು ಸಾಧ್ಯವಾಗದ ಕಾರಣದಿಂದಾಗಿ ಒಳಗೊಳಗೆ ಶೀತಲ ಸಮರ ನಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ವಿಧಾನಸೌಧದಲ್ಲಿ ಕುಳಿತು ಆಡಳಿತ ನಡೆಸುತ್ತಿರುವ ನಾಯಕರು ಮೇಲ್ನೋಟಕ್ಕೆ ನಾವೆಲ್ಲ ಒಂದಾಗಿ ಸುಭದ್ರ ಸರ್ಕಾರವನ್ನು ನೀಡುತ್ತೇವೆ ಎಂದು ಹೇಳುತ್ತಿದ್ದರೂ ಒಳಗೊಳಗೆ ಅಸಮಾಧಾನ ಹೊಗೆಯಾಡುತ್ತಲೇ ಇದೆ. ಇನ್ನು ತಳಮಟ್ಟದಲ್ಲಿ ಸಣ್ಣಪುಟ್ಟ ನಾಯಕರು, ಕಾರ್ಯಕರ್ತರು ಈಗಾಗಲೂ ಹಾವು ಮುಂಗುಸಿಯಂತೆ ಕಚ್ಚಾಡುತ್ತಲೇ ಇದ್ದಾರೆ.
ರಾಜ್ಯ ರಾಜಕೀಯ ಮೇಲಾಟಕ್ಕೆ ವಿರಾಮ ಎಂದು?
ಅವರು ಯಾವುದೇ ಕಾರಣಕ್ಕೂ ಒಗ್ಗೂಡಿ ಮುನ್ನಡೆಯುವ ಸಾಧ್ಯತೆ ಕಡಿಮೆಯೇ. ಇದೀಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸಾರಥ್ಯದಲ್ಲಿ ಸರ್ಕಾರ ನಡೆಯುತ್ತಿದ್ದು, ಯಾವುದೇ ಯೋಜನೆಗಳನ್ನು ಜಾರಿಗೆ ತಂದರೂ ಅದನ್ನು ತಮ್ಮದೇ ಎಂಬಂತೆ ಬಿಂಬಿಸಿಕೊಳ್ಳುವಲ್ಲಿ ಜೆಡಿಎಸ್ ಸಮರ್ಥವಾಗಿರುವುದರಿಂದ ಕಾಂಗ್ರೆಸ್ನ ನಾಯಕರಿಗೆ ಅದು ನಮ್ಮದೇ ಯೋಜನೆ ಎಂದು ಹೇಳಿಕೊಳ್ಳಲು ಅವಕಾಶವೇ ಇಲ್ಲದಂತಾಗಿದೆ.
ಇವತ್ತು ಜೆಡಿಎಸ್ ನ 38 ಮಂದಿ ಶಾಸಕರು ಗೆದ್ದಿದ್ದರೂ ಅವರಲ್ಲಿ ಹೆಚ್ಚಿನವರು ಕಾಂಗ್ರೆಸ್ ನಾಯಕರಿಗೆ ಪೈಪೋಟಿ ನೀಡಿ ಗೆದ್ದವರು ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಸೋತ ನಾಯಕರು ಅಷ್ಟು ಸುಲಭವಾಗಿ ಜೆಡಿಎಸ್ ಅನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅವರು ಈಗಿನಿಂದಲೇ ಮುಂದಿನ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದಾರೆ.
ರಾಜ್ಯದಲ್ಲಿ ಮೈತ್ರಿ ಸರ್ಕಾರವಿದೆ ಎಂಬ ಕಾರಣಕ್ಕೆ ಒಂದು ವೇಳೆ ತಮ್ಮ ಎದುರಾಳಿ ಜೆಡಿಎಸ್ ಶಾಸಕರ ವಿರುದ್ಧ ಮಾತನಾಡದೆ ಸುಮ್ಮನಾದರೆ ಮುಂದಿನ ಚುನಾವಣೆ ವೇಳೆಗೆ ತಾವು ಮೂಲೆ ಗುಂಪಾಗಿ ತಮ್ಮ ರಾಜಕೀಯ ಭವಿಷ್ಯವೇ ಕಳೆದುಕೊಳ್ಳುವ ಎಂಬ ಭಯ ಬಹುತೇಕರನ್ನು ಕಾಡತೊಡಗಿದೆ. ಹೀಗಾಗಿ ಅವರು ರಾಜಕೀಯ ಮಾಡಲೇಬೇಕಾಗಿದೆ.
ರಾಜ್ಯ ರಾಜಕೀಯದಲ್ಲಿ ಮಳೆ ನಿಂತು ಹೋದ ಮೇಲೆ ಆಗಿದ್ದೇನು?
ಇನ್ನೊಂದೆಡೆ ಎಚ್.ಡಿ.ಕುಮಾರಸ್ವಾಮಿ ನಡೆಸುವ ಆಡಳಿವನ್ನು ಕಣ್ಮುಚ್ಚಿ ತಲೆಯಾಡಿಸಿ ಒಪ್ಪಿಕೊಳ್ಳುತ್ತಾ ಹೋದರೂ ಮುಂದೆ ರಾಜಕೀಯವಾಗಿ ಕಾಂಗ್ರೆಸ್ಗೆ ತೊಂದರೆ ತಪ್ಪಿದಲ್ಲ. ಇದೆಲ್ಲವನ್ನು ಅರಿತ ಬಹುತೇಕ ಕಾಂಗ್ರೆಸ್ ನಾಯಕರು ಮುಂದೇನು ಎಂಬ ಚಿಂತೆಯಲ್ಲಿದ್ದಾರೆ.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ಮಾಡದೆ ಸ್ಪರ್ಧೆಯನ್ನು ಎದುರಿಸಿ ಅಧಿಕಾರ ಹಿಡಿಯುವಾಗ ಮೈತ್ರಿ ಅಸ್ತ್ರವನ್ನು ಬಳಕೆ ಮಾಡಿಕೊಂಡಿದ್ದಾರೆ. ಇನ್ನು ಮುಂದೆ ಇರುವುದು ಲೋಕಸಭಾ ಚುನಾವಣೆ. ಈ ಚುನಾವಣೆಗೆ ಈಗಿನಿಂದಲೇ ಬಿಜೆಪಿ ತಯಾರಾಗಿದೆ.
ಆದರೆ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡೇ ಕಣಕ್ಕಿಳಿಯಬೇಕಾ? ಅಥವಾ ಪ್ರತ್ಯೇಕವಾಗಿ ಚುನಾವಣೆಯನ್ನು ಎದುರಿಸಬೇಕಾ ಎಂಬುದರ ಬಗ್ಗೆ ಈಗಾಗಲೇ ಚರ್ಚೆಗಳು ನಡೆದಿವೆ ಮುಂದೆ ಓದಿ...
ಜೆಡಿಎಸ್, ಕಾಂಗ್ರೆಸ್ ಒಂದಾಗಬೇಕೆಂಬ ಅಭಿಪ್ರಾಯ
ದೇಶದಲ್ಲಿ ಮಹಾಮೈತ್ರಿ ಸ್ಥಾಪಿಸುವ ಸಲುವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಒಂದಾಗಬೇಕೆಂಬ ಅಭಿಪ್ರಾಯಗಳು ಕೇಳಿಬಂದಿವೆ. ಆ ಪ್ರಕಾರದಲ್ಲಿಯೇ ಚುನಾವಣಾ ಕಣಕ್ಕಿಳಿದರೆ ಕಾಂಗ್ರೆಸ್ಗೆ 20, ಜೆಡಿಎಸ್ ಗೆ 8 ಸ್ಥಾನವನ್ನು ಬಿಟ್ಟುಕೊಡಲು ಮಾತುಕತೆಗಳು ನಡೆದಿವೆ ಎನ್ನಲಾಗುತ್ತಿದೆ.
ಇದನ್ನು ಆಯಾಯ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು ಯಾವ ರೀತಿಯಲ್ಲಿ ಸ್ವೀಕರಿಸುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ. ಈಗಾಗಲೇ ಕಾಂಗ್ರೆಸ್ನ ಹಲವು ಶಾಸಕರು ಅತೃಪ್ತರಾಗಿದ್ದಾರೆ. ಜತೆಗೆ ನಮಗೂ ಸಚಿವ ಸ್ಥಾನ ಬೇಕೆಂದು ಬೇಡಿಕೆಯಿಟ್ಟಿದ್ದಾರೆ. ಅದು ಜಗಜ್ಜಾಹೀರಾಗಿದೆ.
ಸದ್ಯಕ್ಕೇನೋ ಶಾಂತವಾದಂತೆ ಕಾಣುತ್ತಿದ್ದರೂ ಸಚಿವ ಸಂಪುಟ ವಿಸ್ತರಣೆ ಮಾಡಿದ್ದೇ ಆದರೆ ಅಸಮಾಧಾನ ಮತ್ತೆ ಭುಗಿಲೇಳುವ ಲಕ್ಷಣಗಳು ಇದ್ದೇ ಇದೆ. ಒಂದು ವೇಳೆ ಸಚಿವ ಸಂಪುಟವನ್ನು ವಿಸ್ತರಣೆ ಮಾಡದೆ ಲೋಕಸಭಾ ಚುನಾವಣೆ ತನಕ ಹೀಗೆಯೇ ತಳ್ಳಿ ಬಿಡೋಣ ಎಂಬ ನಿರ್ಧಾರಕ್ಕೆ ಬಂದರೂ ಅದರಿಂದಲೂ ಸಮಸ್ಯೆ ತಪ್ಪಿದಲ್ಲ.
ಮಂಡ್ಯದಲ್ಲಿ ಜೆಡಿಎಸ್ ಗೆಲ್ಲಿಸುವಲ್ಲಿ ಯಶಸ್ವಿ
ಸದ್ಯದ ಮಟ್ಟಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಆಡಳಿತ ನಡೆಸುವುದಕ್ಕಿಂತಲೂ ತಮ್ಮ ಸುತ್ತಮುತ್ತ ಇರುವ ನಾಯಕರನ್ನು ಒಟ್ಟಾಗಿ ಮುಂದಕ್ಕೆ ಕರೆದೊಯ್ಯುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಸಿದ್ದರಾಮಯ್ಯ ಅವರನ್ನು ಕಾಡಿದ್ದ ರೈತರ ಆತ್ಮಹತ್ಯೆ ಪ್ರಕರಣಗಳು ಕುಮಾರಸ್ವಾಮಿ ಅವರಿಗೂ ಕಂಟಕವಾಗಿ ಪರಿಣಮಿಸಿದರೆ ಅಚ್ಚರಿ ಪಡಬೇಕಾಗಿಲ್ಲ.
ಹಾಗೆ ನೋಡಿದರೆ ಮಂಡ್ಯದಲ್ಲಿ ವಿಧಾನಸಭಾ ಚುನಾವಣೆಗೆ ಮೊದಲೇ ಅತಿ ಹೆಚ್ಚಿನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದು ಅಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಮುಳುವಾಗಿ ಪರಿಣಮಿಸಿತ್ತು. ಅದನ್ನೇ ಫ್ಲಸ್ ಪಾಯಿಂಟ್ ಮಾಡಿಕೊಂಡ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಜೆಡಿಎಸ್ ಗೆಲ್ಲಿಸುವಲ್ಲಿ ಯಶಸ್ವಿಯಾದರು.
ಚುನಾವಣಾ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ವೈಯಕ್ತಿಕ ಪರಿಹಾರ ನೀಡುವ ಮೂಲಕ ರೈತರ ಒಲವನ್ನು ಗಳಿಸಿಕೊಂಡರು. ಆಗ ರೈತರು ಕೂಡ ಮುಂದೆ ರಾಜ್ಯದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ತಮ್ಮ ಬದುಕು ಹಸನಾಗುತ್ತೆ ಎಂದು ನಂಬಿದ್ದರು.
ಮಂಡ್ಯ ರಾಜಕೀಯದಲ್ಲಿ ಗೆದ್ದವನೇ 'ಗೌಡ', ಪ್ರಜ್ವಲ್ ರೇವಣ್ಣಗೆ ಅಲ್ಲೂ ಕಷ್ಟಕಷ್ಟ
ರೈತರ ಆತ್ಮಹತ್ಯೆಗಳು
ಚುನಾವಣೆ ನಡೆದು ಜೆಡಿಎಸ್ ಬಹುಮತವಿಲ್ಲದಿದ್ದರೂ ಕಾಂಗ್ರೆಸ್ ಸಹಕಾರದೊಂದಿಗೆ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಕಳೆದ ನಾಲ್ಕು ತಿಂಗಳಿಂದ ಸರ್ಕಾರ ನಡೆಯುತ್ತಿದ್ದು, ರೈತರ ಸಾಲ ಮನ್ನಾ ಘೋಷಣೆ ಮಾಡಿದ ಬಳಿಕವೂ ಮಂಡ್ಯದಲ್ಲಿ ರೈತರ ಆತ್ಮಹತ್ಯೆಗಳು ನಡೆಯುತ್ತಲೇ ಇವೆ.
ಅದರಲ್ಲೂ ಇದೀಗ ಪಾಂಡವಪುರ ಬಳಿಯ ಸುಂಕಾತೊಣ್ಣೂರು ಗ್ರಾಮದಲ್ಲಿ ಸಾಲಬಾಧೆಗೆ ಹೆದರಿ ಒಂದೇ ಕುಟುಂಬದ ನಾಲ್ವರು ಸಿಎಂಗೆ ಪತ್ರ ಬರೆದಿಟ್ಟು ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿರುವುದು ಸರ್ಕಾರಕ್ಕೆ ಮುಜುಗರ ತಂದಿದೆ. ಮೈಸೂರು ಮತ್ತು ಮಂಡ್ಯದಲ್ಲಿ ರೈತರು ಸಾವನ್ನಪ್ಪುತ್ತಿದ್ದಾರೆ.
ಕಳೆದ ಬಾರಿ ರೈತರ ಆತ್ಮಹತ್ಯೆ ವಿಚಾರವೇ ಪ್ರಮುಖವಾಗಿ ಬಿಂಬಿತವಾದ್ದರಿಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರ ಬಿಟ್ಟುಕೊಡುವಂತಾಗಿತ್ತು. ಈಗಲೂ ರೈತರ ಆತ್ಮಹತ್ಯೆ ಹಲವು ಕಾರಣಗಳಿಗೆ ನಡೆಯುತ್ತಿದ್ದರೂ ಅದರ ಪರಿಣಾಮ ಆಡಳಿತರೂಢ ಸರ್ಕಾರದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಮಗ್ಗುಲಲ್ಲೇ ಮುಳ್ಳಿದೆ
ಸರ್ಕಾರ ಉಳಿಸಿಕೊಳ್ಳಲು ಹೋರಾಡುತ್ತಿರುವ ಕುಮಾರಸ್ವಾಮಿ ಬಿಜೆಪಿ ವಿರುದ್ಧ ಹಲವು ಆರೋಪ ಮಾಡುತ್ತಾ ಸರ್ಕಾರವನ್ನು ಉರುಳಿಸಲು ತಂತ್ರ ನಡೆಸುತ್ತಿದ್ದಾರೆ ಎಂಬ ಹೇಳಿಕೆಯನ್ನು ನೀಡುತ್ತಾ ಬರುತ್ತಿದ್ದರೂ ಅವರಿಗೆ ಮಗ್ಗುಲಲ್ಲೇ ಮುಳ್ಳಿದೆ ಎಂಬ ಸತ್ಯವೂ ಗೊತ್ತಿಲ್ಲದ ವಿಚಾರವೇನಲ್ಲ.
ಮುಂದಿನ ದಿನಗಳಲ್ಲಿ ರಾಜ್ಯದ ಜನ ಇನ್ಯಾವ ರೀತಿಯ ರಾಜಕೀಯ ಮೇಲಾಟಗಳನ್ನು ನೋಡಬೇಕಾಗುತ್ತೋ?