Get Updates
Get notified of breaking news, exclusive insights, and must-see stories!

ಬಿಜೆಪಿ,ಕಾಂಗ್ರೆಸ್ ರಾಜಕೀಯ ಮೇಲಾಟದಲ್ಲಿ ಬಡವಾದ ಹಸಿದ ಹೊಟ್ಟೆಗಳು

ಸಿದ್ದರಾಮಯ್ಯನವರ ಸರಕಾರ ಅಧಿಕಾರಕ್ಕೆ ಬಂದ ನಾಲ್ಕು ವರ್ಷಗಳ ನಂತರ, ದಕ್ಷಿಣಕನ್ನಡ ಜಿಲ್ಲೆಯಲ್ಲಿರುವ ಕಲ್ಲಡ್ಕ ಪ್ರಭಾಕರ ಭಟ್ ಅವರ ಎರಡು ಶಾಲೆಗಳಿಗೆ ಅನುದಾನ ರದ್ದು ಮಾಡಿರುವುದು ರಾಜಕೀಯ ಪ್ರೇರಿತ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ರಾಜ್ಯದ ಸಾವಿರಾರು ಶಾಲೆಗಳಿಗೆ ಮಧ್ಯಾಹ್ನದ ಊಟ ನೀಡುತ್ತಿರುವ ಸಿದ್ದರಾಮಯ್ಯ ಸರಕಾರಕ್ಕೆ ಕಲ್ಲಡ್ಕ ಪ್ರಭಾಕರ ಭಟ್ ಅವರ ಎರಡು ಶಾಲೆಗಳಿಗೆ ಊಟ ನೀಡಲು ಸಾಧ್ಯವಿಲ್ಲವೇ? ಅದು ಕಾನೂನು ರೀತಿಯಲ್ಲಿ ತಪ್ಪು, ಹಾಗಾಗಿ ಅನುದಾನ ನಿಲ್ಲಿಸಲಾಗಿದೆ ಎನ್ನುವ ನೀವು, ಇಷ್ಟು ದಿನ ಏನು ಮಾಡುತ್ತಿದ್ದೀರಿ ಎನ್ನುವುದು 'ಹುಲಿ ವಂಶದ' ಖ್ಯಾತಿಯ ಅರಣ್ಯ ಸಚಿವ ರಮಾನಾಥ್ ರೈ ಅವರಲ್ಲೊಂದು ಪ್ರಶ್ನೆ.

ಜೊತೆಗೆ, ಚಿಕ್ಕಬಳ್ಳಾಪುರದಲ್ಲಿ ಶುಕ್ರವಾರ (ಆ 11) ಮಾತನಾಡುತ್ತಿದ್ದ ಮುಖ್ಯಮಂತ್ರಿಗಳು, ಸಿದ್ದರಾಮಯ್ಯನೇ ಇರಲಿ, ಪ್ರಭಾಕರ ಭಟ್ ಇರಲಿ, ಅಮಿತ್ ಶಾ ಇರಲಿ ಕಾನೂನು ಎಲ್ಲರಿಗೂ ಒಂದೇ ಎಂದಿದ್ದಾರೆ. ಹಾಗಾದರೆ, ಸುಮಾರು ಐವತ್ತು ತಿಂಗಳಿನಿಂದ ಅಧಿಕಾರದಲ್ಲಿರುವ ನೀವು ಪ್ರಭಾಕರ್ ಭಟ್ ಒಡೆತನದ ಶಾಲೆಗಳಿಗೆ ಕಾನೂನಿನ ವಿರುದ್ದವಾಗಿ ಇಷ್ಟುದಿನ ಅನುದಾನ ನೀಡಿದ್ದೇಕೆ ಎನ್ನುವುದು ಮುಖ್ಯಮಂತ್ರಿಗಳಲ್ಲೂ ಪ್ರಶ್ನೆ.

ಕಲ್ಲಡ್ಕ ಭಟ್ಟರ ಶಾಲೆಗಳಿಗೆ ಅನುದಾನ ನಿಂತಿದ್ದು ಕಾನೂನು ರೀತಿಯಲ್ಲಿ ತಪ್ಪು ಎನ್ನುವುದಕ್ಕಿಂತ ಹೆಚ್ಚಾಗಿ, ಬಿಜೆಪಿ-ಕಾಂಗ್ರೆಸ್ ಮತ್ತು ಪ್ರಭಾಕರ ಭಟ್ - ರಮಾನಾಥ ರೈ ನಡುವಿನ ಪ್ರತಿಷ್ಠೆಯ ಮೇಲಾಟ ಎನ್ನುವುದೇ ಹೆಚ್ಚು ಸೂಕ್ತ.
ಹಾಗಾಗಿ, ಈ ರಾಜಕೀಯ ಮೇಲಾಟದಲ್ಲಿ ಬಡವಾಗಿದ್ದು ಮಾತ್ರ ಶಾಲೆಯ ಮಕ್ಕಳು. ತಮ್ಮ ರಾಜಕೀಯಕ್ಕಾಗಿ ಮಕ್ಕಳ ಊಟದ ತಟ್ಟೆಗೂ ರಾಜಕಾರಣಿಗಳು ಕೈಹಾಕುತ್ತಾರೆಂದರೆ, ರಾಜ್ಯದ ರಾಜಕೀಯ ಯಾವ ಮಟ್ಟಿನ ಅಧೋಗತಿಗೆ ಇಳಿದಿದೆ ಎನ್ನುವುದಕ್ಕೆ ಇನ್ನೊಂದು ಉದಾಹರಣೆ ಬೇಕಿಲ್ಲ.

ಕಲ್ಲಡ್ಕ ಭಟ್ಟರ ಶ್ರೀರಾಮ ವಿದ್ಯಾನಿಕೇತನ ಟ್ರಸ್ಟಿನ ಎರಡು ಶಾಲೆಗಳಿಗೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಆರಂಭವಾಗಿದ್ದ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟಕ್ಕೆ ನೀಡುವ ಅನುದಾನವನ್ನು ಸಿದ್ದರಾಮಯ್ಯ ನಿಲ್ಲಿಸಿದ್ದಾರೆ.
ಈ ಶಾಲೆಯಲ್ಲಿ ನಾಲ್ಕುವರೆ ಸಾವಿರಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ.

ಬಂಟ್ವಾಳದ ಶಾಸಕ ಮತ್ತು ರಾಜ್ಯ ಅರಣ್ಯ ಸಚಿವ ರಮಾನಾಥ ರೈ ಮತ್ತು ಸಂಘ ಪರಿವಾರದಲ್ಲಿ ಗುರುತಿಸಿಕೊಂಡಿರುವ ಕಲ್ಲಡ್ಕ ಪ್ರಭಾಕರ ಭಟ್ ನಡುವಿನ ವೈಮನಸ್ಸು ಇಂದು ನಿನ್ನೆಯದಲ್ಲ. ಈ ಭಾಗದಲ್ಲಿ ನಡೆಯುವ ಕೋಮು ಗಲಭೆಯ ಹಿಂದಿನ ದುಷ್ಟ ಶಕ್ತಿಗಳ ಹೆಸರು ಕೊನೆಗೆ ಬಂದು ನಿಲ್ಲುವುದು ಈ ಇಬ್ಬರು ಮುಖಂಡರ ಪಡಶಾಲೆಯಲ್ಲೇ.. ಆದರೆ ಇವರಿಬ್ಬರ ನಡುವಣ ನಾನಾ..ನೀನಾ.. ಮೇಲಾಟ ಮಕ್ಕಳ ಉಟದ ತಟ್ಟೆಯ ತನಕ ಬಂದಿದ್ದು ಮಾತ್ರ ದುರಂತ. ಮುಂದೆ ಓದಿ..

ಕೊಲ್ಲೂರು ಮೂಕಾಂಬಿಕಾ ದೇಗುಲದಿಂದ ಅನುದಾನ

ಕೊಲ್ಲೂರು ಮೂಕಾಂಬಿಕಾ ದೇಗುಲದಿಂದ ಅನುದಾನ

ರಾಜ್ಯದ ಮುಜರಾಯಿ ವ್ಯಾಪ್ತಿಯಲ್ಲಿ ಬರುವ ಎರಡನೇ ಶ್ರೀಮಂತ ದೇವಾಲಯ (ಮೊದಲ ಸ್ಥಾನ, ಕುಕ್ಕೆ ಸುಬ್ರಮಣ್ಯ ದೇವಾಲಯ) ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕಾ ಅಮ್ಮನವರ ದೇವಸ್ಥಾನದಿಂದ ಕಲ್ಲಡ್ಕ ಪ್ರಭಾಕರ ಭಟ್ಟರ ಶಾಲೆಯ ವಿದ್ಯಾರ್ಥಿಗಳ ಮಧ್ಯಾಹ್ನದ ಊಟಕ್ಕೆ ಯಡಿಯೂರಪ್ಪನವರ ಅವಧಿಯಿಂದ ಮತ್ತು ಸಿದ್ದರಾಮಯ್ಯ ಸಿಎಂ ಆದ ನಾಲ್ಕು ವರ್ಷಗಳ ನಂತರವೂ ಅನುದಾನ ಬರುತ್ತಿತ್ತು.

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಕಾಯ್ದೆ

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಕಾಯ್ದೆ

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಕಾಯ್ದೆ ಅಡಿ, ಮುಜರಾಯಿ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಿಂದ, ಯಾವುದೇ ಖಾಸಗಿ ಶಾಲೆಗಳಿಗೆ ಅನುದಾನ ನೀಡುವ ಕಾನೂನು ಇಲ್ಲ. ಒಂದು ವೇಳೆ ಅನುದಾನ ನೀಡಿದರೂ ಅದು, ಮಧ್ಯಾಹ್ನ ಊಟ ತಯಾರಿಸಲು ಬೇಕಾದ ಪರಿಕರಗಳನ್ನು ಖರೀದಿಸಲು ಇರಬಹುದೇ ಹೊರತು, ನೇರವಾಗಿ ಮಧ್ಯಾಹ್ನದ ಊಟ ತಯಾರಿಸಲು ಅಲ್ಲ ಎನ್ನುವ ಮೂಲಕ ರಮಾನಾಥ ರೈ ಸರಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಆರಂಭವಾದ ಅನುದಾನ

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಆರಂಭವಾದ ಅನುದಾನ

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ (2007ರಲ್ಲಿ) ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ, ದಕ್ಷಿಣಕನ್ನಡ ಜಿಲ್ಲೆ ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರ ಮತ್ತು ಬಂಟ್ವಾಳದ ಪುಣಚ ಶ್ರೀದೇವಿ ವಿದ್ಯಾಕೇಂದ್ರವನ್ನು ದತ್ತು ತೆಗೆದುಕೊಳ್ಳಲಾಗಿತ್ತು. ಇವುಗಳಿಗೆ ದೇವಸ್ಥಾನದ ದತ್ತು ಯೋಜನೆಯಡಿ ಕಳೆದ ಹತ್ತು ವರ್ಷದಲ್ಲಿ 2,82,72,000 ರೂಪಾಯಿ ಅನುದಾನ ಲಭಿಸಿತ್ತು.

ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಾಲ್ಕು ವರ್ಷಗಳ ನಂತರ ರದ್ದು

ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಾಲ್ಕು ವರ್ಷಗಳ ನಂತರ ರದ್ದು

ಯಡಿಯೂರಪ್ಪ ಅವಧಿಯಲ್ಲಿ ನೀಡಲಾಗಿದ್ದ ಅನುದಾನವನ್ನು ಸಿದ್ದರಾಮಯ್ಯ ತಮ್ಮ ಅಧಿಕಾರದ ನಾಲ್ಕು ವರ್ಷಗಳ ನಂತರ ರದ್ದುಗೊಳಿಸಿದ್ದೇ ಹಲವು ಸಂಶಯಗಳಿಗೆ ಕಾರಣವಾಗಿರುವುದು. ಇದು ಪ್ರಭಾಕರ ಭಟ್ಟರ ಮೇಲಿನ ದ್ವೇಷಕ್ಕಾಗಿ ರಮಾನಾಥ ರೈ ಮಾಡಿಸಿರುವ ಕೆಲಸ ಎಂದು ನೇರವಾಗಿ ಆಪಾದಿಸಲಾಗುತ್ತಿದೆ.

 ಶೇ. 90ರಷ್ಟು ಅಹಿಂದ ವರ್ಗದ ಮಕ್ಕಳು

ಶೇ. 90ರಷ್ಟು ಅಹಿಂದ ವರ್ಗದ ಮಕ್ಕಳು

ಸರಕಾರದ ಅನುದಾನ ರದ್ದತಿ ಕ್ರಮ ಈಗ ಮತ್ತೆ ರಾಜಕೀಯ ಮೇಲಾಟಕ್ಕೆ ವೇದಿಕೆಯಾಗಿದೆ. ಕಲ್ಲಡ್ಕ ಪ್ರಭಾಕರ ಭಟ್ಟರ ಶಾಲೆಯಲ್ಲಿ ಓದುತ್ತಿರುವ ಮಕ್ಕಳಲ್ಲಿ ಶೇ. 90ರಷ್ಟು ಅಹಿಂದ ವರ್ಗದ ಮಕ್ಕಳು ಎನ್ನುವ ಕಲ್ಲಡ್ಕ ಭಟ್ಟರ ಹೇಳಿಕೆ, ಈ ಘಟನೆ ಬೇರೆ ದಿಕ್ಕಿನತ್ತ ಸಾಗುತ್ತಾ ಎನ್ನುವ ಅನುಮಾನ ಕಾಡಲಾರಂಭಿಸಿದೆ.

ಮಕ್ಕಳಿಗಾಗಿ ಬೀದಿಬೀದಿಗೆ ಹೋಗಿ ಭಿಕ್ಷೆ ಬೇಡುತ್ತೇನೆ

ಮಕ್ಕಳಿಗಾಗಿ ಬೀದಿಬೀದಿಗೆ ಹೋಗಿ ಭಿಕ್ಷೆ ಬೇಡುತ್ತೇನೆ

ಮಕ್ಕಳಿಗಾಗಿ ಬೀದಿಬೀದಿಗೆ ಹೋಗಿ ಭಿಕ್ಷೆ ಬೇಡುತ್ತೇನೆಂದು ಹೇಳಿಕೆ ನೀಡಿರುವ ಕಲ್ಲಡ್ಕ ಭಟ್ಟರು, ಸಾಮಾಜಿಕ ತಾಣದಲ್ಲಿ ಮಕ್ಕಳ ಅನ್ನದಾನಕ್ಕೆ ಸಹಾಯಹಸ್ತ ಚಾಚಿದ 48ಗಂಟೆಯಲ್ಲಿ ಮುಂದಿನ ಹತ್ತು ದಿನಕ್ಕೆ ತಗಲುವ ಖರ್ಚು ದೇಣಿಗೆ ರೂಪದಲ್ಲಿ ಹರಿದುಬಂದಿದೆ ಎನ್ನಲಾಗುತ್ತಿದೆ. ಶುಕ್ರವಾರ, ಎರಡು ಶಾಲೆಯ ಮಕ್ಕಳು ಬಟ್ಟಲು ಹಿಡಿದು 'ಅನ್ನ ಕಸಿದ ಸಿದ್ದರಾಮಯ್ಯ, ರಮಾನಾಥ ರೈಗೆ ಧಿಕ್ಕಾರ' ಎನ್ನುವ ಘೋಷಣೆಯನ್ನು ಕೂಗಿ ಪ್ರತಿಭಟನೆ ನಡೆಸಿದ್ದೂ ಆಗಿದೆ.

ಇದು ರಾಜಕೀಯ ಪ್ರೇರಿತವಲ್ಲದೇ ಮತ್ತೇನು

ಇದು ರಾಜಕೀಯ ಪ್ರೇರಿತವಲ್ಲದೇ ಮತ್ತೇನು

ಕಾನೂನಿಗಿಂತ ಯಾರೂ ದೊಡ್ಡವರಲ್ಲ, ಮುಜರಾಯಿ ಇಲಾಖೆಯ ಕಾನೂನಿನಂತೆ ಸಿದ್ದರಾಮಯ್ಯ ಸರಕಾರ ನಡೆದುಕೊಂಡಿದ್ದರೂ, ಅಧಿಕಾರಕ್ಕೆ ಬಂದ ನಾಲ್ಕು ವರ್ಷದ ನಂತರ ಮತ್ತು ಕೋಮು ಗಲಭೆಯಿಂದ ಈಗತಾನೇ ಸುಧಾರಿಸಿಕೊಳ್ಳುತ್ತಿರುವ ಬಂಟ್ವಾಳದ ವ್ಯಾಪ್ತಿಯಲ್ಲಿ ಬರುವ ಈ ಎರಡು ಶಾಲೆಗಳಿಗೆ ಅನುದಾನ ನಿಲ್ಲಿಸಿದ್ದು 'ರಾಜಕೀಯ ಪ್ರೇರಿತ' ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+