ಸಿಎಂ ಸಿದ್ದರಾಮಯ್ಯ ವಿರುದ್ಧ ಪುನಃ ಸಿಡಿದೆದ್ದ ಶಾಸಕರು!
ಬೆಂಗಳೂರು, ಡಿ.14 : ಸಿಎಂ ಸಿದ್ದರಾಮುಯ್ಯ ಅವರ ಕಾರ್ಯವೈಖರಿ ಬಗ್ಗೆ ಕಾಂಗ್ರೆಸ್ ಶಾಸಕರು ಮತ್ತೊಮ್ಮೆ ಅಸಮಾಧಾನಗೊಂಡಿದ್ದಾರೆ. ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ನೇಮಕಕ್ಕೆ ಸಂಬಂಧಿಸಿದಂತೆ ಸದ್ಯ ವಿವಾದ ಬುಗಿಲೆದಿದ್ದು, ಶಾಸಕರ ದೂರಿನ ಪತ್ರ ಬೆಂಗಳೂರಿಗೆ ಆಗಮಿಸಿರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಕೈ ಸೇರಿದೆ.
ಕೆಪಿಸಿಸಿ ಚುನಾವಣೆ ಸಮಿತಿ ಸಭೆಯಲ್ಲಿ ಭಾವಹಿಸಲು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಬೆಂಗಳೂರಿಗೆ ಶನಿವಾರ ಆಗಮಿಸಿದ್ದು, ಈ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿದ ಹಲವು ಶಾಸಕರು ಸಿಎಂ ಸಿದ್ದರಾಮಯ್ಯ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ. [ಸಿದ್ದು ಕಾರ್ಯವೈಖರಿ ಬಗ್ಗೆ ಹೈಕಮಾಂಡ್ ಗೆ ಪತ್ರ]

ಭ್ರಷ್ಟಾಚಾರ ಆರೋಪದಲ್ಲಿ ಲೋಕಾಯುಕ್ತ ತನಿಖೆಯನ್ನು ಎದುರಿಸುತ್ತಿರುವ ಚಿಕ್ಕರಾಯಪ್ಪ ಅವರಿಗೆ ವಿರೋಧದ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಭಡ್ತಿ ನೀಡಿ, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿಯಾಗಿ ನೇಮಕ ಮಾಡಿರುವುದು ಶಾಸಕರಲ್ಲಿ ಅಸಮಾಧಾನ ಮೂಡಿದೆ. ಆದ್ದರಿಂದ ಸಿಎಂ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ದೂರಿನ ಪತ್ರದಲ್ಲಿ ಶಾಸಕರು ವಿವರಣೆ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಭಡ್ತಿ ನೀಡಿರುವ ಚಿಕ್ಕರಾಯಪ್ಪ ವಿರುದ್ಧ ಭ್ರಷ್ಟಾಚಾರದ ಆರೋಪವಿದ್ದು, ಅವರು ಲೋಕಯುಕ್ತ ತನಿಖೆ ಎದುರಿಸುತ್ತಿದ್ದಾರೆ. ಅವರ ವಿರುದ್ಧದ ತನಿಖೆ ಮುಗಿಯುವವರೆಗೆ ಅವರಿಗೆ ಯಾವುದೇ ಭಡ್ತಿ ನೀಡಬಾರದು ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗಡೆ ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು.
ಆದರೆ, ಇವುಗಳನ್ನು ಗಮನಿಸದೇ ಸಿಎಂ ಸಿದ್ದರಾಮಯ್ಯ ಅವರು ಚಿಕ್ಕರಾಯಪ್ಪ ಅವರಿಗೆ ಭಡ್ತಿ ನೀಡಿ, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ ಎಂದು ಶಾಸಕರು ದಿಗ್ವಿಜಯ್ ಸಿಂಗ್ ಅವರಿಗೆ ಬರೆದ ಪತ್ರದಲ್ಲಿ ವಿವರಣೆ ನೀಡಿದ್ದಾರೆ. ಸಿಎಂ ಈ ನಿರ್ಧಾರದಿಂದ ಕಾಂಗ್ರೆಸ್ ಪಕ್ಷ ಮುಜುಗರ ಅನುಭವಿಸುವಂತಾಗಿದೆ ಎಂದು ಹೇಳಿದ್ದಾರೆ.
ಸಮನ್ವಯ ಸಮಿತಿ ಸಭೆ ರದ್ದು : ದಿಗ್ವಿಜಯ್ ಸಿಂಗ್ ಶನಿವಾರ ಚುನಾವಣಾ ಸಮಿತಿ ಸಭೆ ಮತ್ತು ಸಮನ್ವಯ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಬೇಕಾಗಿತ್ತು. ಆದರೆ, ದೆಹಲಿಯಲ್ಲಿ ಸರ್ಕಾರ ರಚನೆ ಪ್ರಕ್ರಿಯೆ ಬಿರುಸುಗೊಂಡಿರುವುದರಿಂದ ಚುನಾವಣ ಸಮಿತಿ ಸಭೆ ಮುಗಿಸಿಕೊಂಡು ದೆಹಲಿಗೆ ಮರಳಲಿದ್ದಾರೆ. ಆದ್ದರಿಂದ ಸಮನ್ವಯ ಸಮತಿ ಸಭೆ ರದ್ದುಗೊಳಿಸಲಾಗಿದ್ದು, ಜ.6ರಂದು ನಡೆಸಲು ತೀರ್ಮಾನಿಸಲಾಗಿದೆ.[ಸರ್ಕಾರ ರಚನೆಗೆ ಹತ್ತುದಿನ ಟೈಂ ಕೋಡಿ : ಕೇಜ್ರಿವಾಲ್]












Click it and Unblock the Notifications