ಲೋಕಾಯುಕ್ತ ನ್ಯಾ.ಶೆಟ್ಟಿಗೆ ಸಿಎಂ ಸಿದ್ದರಾಮಯ್ಯ ಅವರದೇ ಮೊದಲ ಪ್ರಕರಣ
ಬೆಂಗಳೂರು, ಫೆಬ್ರವರಿ 1: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ಆರಂಭದಲ್ಲೇ ಸವಾಲು ಎದುರಾಗಿದೆ. ಕರ್ನಾಟಕ ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಎರಡು ದಿನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಪ್ರ್ರಕರಣ ಕೈಗೆತ್ತಿಕೊಳ್ಳಬೇಕಾಗಿದೆ. ಯಾವ ವ್ಯಕ್ತಿ ಶೆಟ್ಟಿ ಅವರನ್ನು ನೇಮಿಸಿದರೋ ಅವರ ವಿರುದ್ಧದ ಪ್ರಕರಣವನ್ನು ಶೆಟ್ಟಿ ಅವರು ವಿಚಾರಣೆ ನಡೆಸಬೇಕಾಗಿದೆ.
ಮುಖ್ಯಮಂತ್ರಿ ವಿರುದ್ಧದ ದೂರು ಹೊಸದಲ್ಲ. ಕಳೆದ ವರ್ಷ ಅಗಸ್ಟ್ ನಲ್ಲಿ ಸಿದ್ದರಾಮಯ್ಯ ವಿರುದ್ಧದ ತನಿಖೆಗೆ ಅನುಮತಿ ನೀಡಬೇಕು ಎಂದು ಎಸ್.ಭಸ್ಕರನ್ ಎಂಬುವವರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ಆಗ ಲೋಕಾಯುಕ್ತರಿರಲಿಲ್ಲ. ಆದರೆ ರಾಜ್ಯಪಾಲರು ಆಗಸ್ಟ್ ನಲ್ಲಿ ಮನವಿ ನಿರಾಕರಿಸಿದ್ದರು.
ಉದ್ಯಮಿ ಎಲ್.ವಿವೇಕಾನಂದ ಎಂಬುವರನ್ನು ಬೆಂಗಳೂರು ಟರ್ಫ್ ಕ್ಲಬ್ ಗೆ ನಾಮ ನಿರ್ದೇಶನ ಮಾಡಿದ್ದ ಸಿದ್ದರಾಮಯ್ಯ, ಅವರಿಂದ ಸಾಲವಾಗಿ 1.30 ಕೋಟಿ 'ಸಾಲ' ಪಡೆದಿದ್ದರು ಎಂಬುದು ಭಾಸ್ಕರನ್ ಆರೋಪವಾಗಿತ್ತು. ಆದರೆ ಈ ಆರೋಪವನ್ನು ಉದ್ಯಮಿ ಹಾಗೂ ಸಿದ್ದರಾಮಯ್ಯ ಇಬ್ಬರೂ ನಿರಾಕರಿಸಿದ್ದರು.
ಇದೀಗ ಲೋಕಾಯುಕ್ತರಾಗಿ ವಿಶ್ವನಾಥ್ ಶೆಟ್ಟಿ ನೇಮಕವಾಗಿದ್ದಾರೆ. ರಾಮಮೂರ್ತಿ ಗೌಡ ಎಂಬುವವರು ಇದೇ ಪ್ರಕರಣದ ಬಗ್ಗೆ ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಅಂತಿಮವಾಗಿ ಶೆಟ್ಟಿ ಅವರೇ ತೀರ್ಮಾನ ನೀಡಬೇಕಿದೆ. ಸರಕಾರ ಮೂವರನ್ನು ಬೆಂಗಳೂರು ಟರ್ಫ್ ಕ್ಲಬ್ ಗೆ ನಾಮ ನಿರ್ದೇಶನ ಮಾಡುತ್ತದೆ.
ಆ ಪೈಕಿ ಒಬ್ಬರನ್ನು ಮುಖ್ಯಮಂತ್ರಿ ನಾಮ ನಿರ್ದೇಶನ ಮಾಡುತ್ತಾರೆ. ಹಾಗೆ 2013ರಲ್ಲಿ ಸೂಚಿಸಿದ್ದು ಉದ್ಯಮಿ ವಿವೇಕಾನಂದ ಹೆಸರು. ಅದಾದ ಮರುವರ್ಷ ಅಂದರೆ 2014ರ ಜುಲೈನಲ್ಲಿ ಸಿದ್ದರಾಮಯ್ಯ ಅವರೇ ಅದೇ ಉದ್ಯಮಿಯಿಂದ 1.3 ಕೋಟಿ ರುಪಾಯಿ 'ಸಾಲ' ಪಡೆದಿದ್ದರು ಎಂಬುದು ರಾಜ್ಯದಾದ್ಯಂತ ಪ್ರತಿಭಟನೆಗೆ ಕಾರಣವಾಗಿತ್ತು.
ರಾಮಮೂರ್ತಿ ಗೌಡ ಅವರು ದೂರಿನ ಜೊತೆಗೆ ಮುಖ್ಯಮಂತ್ರಿಗಳ ಆಸ್ತಿ ಹಾಗೂ ಸಾಲದ ವಿವರಗಳನ್ನು ಸಹ ಲೋಕಾಯುಕ್ತರಿಗೆ ಸಲ್ಲಿಸಿದ್ದಾರೆ. "ನಾನು ಮೈಸೂರು ರೇಸ್ ಕ್ಲಬ್ ನ ಸದಸ್ಯ. ಇದು ಲಾಭದಾಯಕ ಹುದ್ದೆಯೂ ಅಲ್ಲ. ಇದರಲ್ಲಿ ಸಂಬಳವೂ ಬರಲ್ಲ. ಮೈಸೂರಿನಿಂದ ಬೆಂಗಳೂರಿಗೆ ಹೋಗುವುದಕ್ಕೆ ಪ್ರಯಾಣ ಭತ್ಯೆಯನ್ನೂ ಪಡೆಯಲ್ಲ. ಕಚೇರಿಯ ಕಾರೊಂದನ್ನು ಮಾತ್ರ ಬಳಸ್ತೀನಿ" ಎಂದಿದ್ದಾರೆ ವಿವೇಕಾನಂದ.