ನಿಮ್ಮ ಉಸ್ತುವಾರಿಯೇ ಹೀಗಿರುವಾಗ, ಬಿಜೆಪಿ ಬ್ಲೂಫಿಲಂ ವಿಚಾರ ಏಕೆ?
Recommended Video

ಬೆಂಗಳೂರು ವಿಜಯನಗರದಲ್ಲಿನ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಧಿವೇಶನದ ವೇಳೆ ಬಿಜೆಪಿಯ ಮಹಾನುಭಾವರು ನೀಲಿಚಿತ್ರ ವೀಕ್ಷಿಸಿದ್ದನ್ನು ಮತ್ತೆ ಜನರಿಗೆ ನೆನೆಪಿಸಿದ್ದಾರೆ. ಆದರೆ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಯ ಮೇಲೆ ಲೈಂಗಿಕ ದೌರ್ಜನ್ಯದ ಕೇಸ್ ದಾಖಲಾಗಿದೆಯಲ್ಲಾ ಅದರೆ ಕಥೆ ಏನು ಎನ್ನುವುದೀಗ ಸಿಎಂ ಸೇರಿ, ಕಾಂಗ್ರೆಸ್ ಮುಖಂಡರಲ್ಲಿ ಪ್ರಶ್ನೆ?
In Pics: Bjp ಪರಿವರ್ತನಾ ಯಾತ್ರೆಗೆ ಭಾರೀ ಜನ ಬೆಂಬಲ
ಅತ್ತ ಬಿಜೆಪಿಯ ಪರಿವರ್ತನಾ ಯಾತ್ರೆಯ ವೇಳೆ, ಸೋಲಾರ್ ಹಗರಣದ ಹೀರೋಯಿನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಅವರನ್ನು ರಾಜ್ಯಕ್ಕೆ ಕಾಲಿಡಲು ಬಿಡುವುದಿಲ್ಲ ಎಂದು ಬಿಜೆಪಿ ಮುಖಂಡರು ಅಬ್ಬರಿಸಿದ್ದಾರೆ.
ಇತ್ತ ಸಿದ್ದರಾಮಯ್ಯನವರು ಬಿಜೆಪಿಗೆ ಮಾನಮರ್ಯಾದೆ ಅನ್ನೋದು ಇಲ್ಲ ಎಂದು ಹೇಳಿಕೆ ನೀಡಿದರೆ, ಅತ್ತ ಕರಾವಳಿಯಲ್ಲಿರುವ ಬಿಜೆಪಿ ಮುಖಂಡರು, ಸಿದ್ದರಾಮಯ್ಯಗೆ ಯೋಗ್ಯತೆ ಅನ್ನೋದೇ ಇಲ್ಲ ಎಂದು ಅಬ್ಬರಿಸಿದ್ದಾರೆ. ಇಬ್ಬರ ಈ ರಾಜಕೀಯ ಮೇಲಾಟ ನೋಡಿದರೆ, ಮಾಡೋದೆಲ್ಲಾ..ಅನಾಚಾರ.. ಮನೆಮಂದೆ ಬೃಂದಾವನ ಎನ್ನುವಂತಾಗಿದೆ.
ಇನ್ನು ಕೆಲವೇ ತಿಂಗಳಲ್ಲಿ ಚುನಾವಣೆ ನಡೆಯಲಿರುವ ಕರ್ನಾಟಕದಲ್ಲಿ, ನಮ್ಮದೇನಿದ್ದರೂ 'ಅಭಿವೃದ್ದಿ ಮಂತ್ರ' ಎಂದು ಸಿದ್ದರಾಮಯ್ಯನವರು ಹೇಳಿದರೆ, ಕಾಂಗ್ರೆಸ್ಸಿನ ಐದು ವರ್ಷದ ಅಧಿಕಾರದಲ್ಲಿ ಬರೀ 'ಹಗರಣ ಮಂತ್ರ' ಎಂದು ಬಿಜೆಪಿ ಲೇವಡಿ ಮಾಡಿದೆ. ಬಿಜೆಪಿ ಆರೋಪಕ್ಕೆ ಜೆಡಿಎಸ್ ಧ್ವನಿಗೂಡಿಸಿದೆ.
ಲೈಂಗಿಕ ದೌರ್ಜನ್ಯದ ಬಗ್ಗೆ ಬಿಜೆಪಿಯವರು ಅದ್ಯಾವ ಮುಖ ಇಟ್ಕೊಂಡು ಮಾತಾಡ್ತಾರೋ ಎಂದು ಸಿದ್ದರಾಮಯ್ಯ ತನ್ನ ಎಂದಿನ ಸ್ಟೈಲಿನಲ್ಲಿ ಹೇಳಿಕೆ ನೀಡಿದರೆ, ನಿಮ್ಮ ಉಸ್ತುವಾರಿಯೇ ಹೀಗಿರುವಾಗ ನಮ್ಮತ್ತ ಬೊಟ್ಟು ತೋರಿಸಲು ನಿಮಗೆ ಯಾವ ಮುಖಯಿದೆ ಎಂದು ಬಿಜೆಪಿ ಮುಖಂಡರು ತಿರುಗೇಟು ನೀಡಿದ್ದಾರೆ. ಇಬ್ರದ್ದು ಇನ್ನೂ ಇದೆ, ಮುಂದೆ ಓದಿ..

ಚುನಾವಣೆಯ ಹೊಸ್ತಿಲಲ್ಲಿ ಎಲ್ಲಿಗೆ ಬಂದು ನಿಲ್ಲುತ್ತೋ ಈ ವಿಚಾರ
ಈ ಎರಡು ರಾಷ್ಟ್ರೀಯ ಪಕ್ಷಗಳ ಕೆಸೆರೆರೆಚಾಟ ನೋಡಿ, ಮುಸಿಮುಸಿ ನಗುತ್ತಾ ಮಜಾ ತೆಗೆದುಕೊಳ್ಳುತ್ತಿರುವ ಸಾರ್ವಜನಿಕರಿಗೆ ಇದರಿಂದ ಪುಕ್ಸಟೆ ಮನೋರಂಜನೆಯಂತೂ ಸಿಗುತ್ತಿದೆ. ಚುನಾವಣೆಗೆ ಇನ್ನೂ ಐದಾರು ತಿಂಗಳು ಇರುವಾಗಲೇ ಹೀಗೆ, ಇನ್ನು ಚುನಾವಣೆಯ ಹೊಸ್ತಿಲಲ್ಲಿ ಎರಡು ಪಕ್ಷದವರು ಲೈಂಗಿಕ ದೌರ್ಜನ್ಯ, ಬ್ಲೂಫಿಲಂನ ಸಿಡಿ ಏನಾದರೂ ಇದ್ದರೆ, ಅದನ್ನು ಮತದಾರರಿಗೆ ಹಂಚದಿದ್ದರೆ ಸಾಕು ಅಂದರೆ ಎರಡೂ ಕಡೆಯವರು ಬೇಸರಿಸಿಕೊಳ್ಳಬಾರದು.

ಮಗ ಪ್ರಿಯಾಕೃಷ್ಣ ಅವರ ತಂದೆಗಿಂತ ಫೇಮಸ್ ಎಂದ ಸಿಎಂ
ಬೆಂಗಳೂರು ಮಹಾನಗರ ವ್ಯಾಪ್ತಿಯ ವಿಜಯನಗರ ಮತ್ತು ಗೋವಿಂದರಾಜ ನಗರ ಅಸೆಂಬ್ಲಿ ಕ್ಷೇತ್ರದ ಅಭಿವೃದ್ದಿ ಕಾಮಗಾರಿ ಮತ್ತು ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದ ಸಿಎಂ, ಲೇಔಟ್ ಕೃಷ್ಣಪ್ಪನಷ್ಟು ನಾನು ಶ್ರೀಮಂತನಲ್ಲ. ಅವರ ಮಗ ಪ್ರಿಯಾಕೃಷ್ಣ ಅವರ ತಂದೆಗಿಂತ ಫೇಮಸ್ ಎಂದು ತಮ್ಮ ಪಕ್ಷದ ಇಬ್ಬರು ಶಾಸಕರ ಬೆನ್ನುತಟ್ಟಿ, ಬಿಜೆಪಿ ಟೀಕಿಸುವ ವೀಕ್ಷಕವಿವರಣೆಗೆ ಇಳಿದರು.

ವಿಧಾನಸೌಧದಲ್ಲೇ ಬ್ಲೂಫಿಲಂ ನೋಡಿದ ಕುಖ್ಯಾತಿ ಬಿಜೆಪಿಯವರದ್ದು
ಬ್ಲೂಫಿಲಂ ಅಂದರೆ ಏನು, ನೀಲಿಚಿತ್ರ ಅಂದರೆ ಏನು ಎಂದು ಬಿಜೆಪಿಯವರನ್ನು ತರಾಟೆಗೆ ತೆಗೆದುಕೊಳ್ಳಲಾರಂಭಿಸಿದ ಸಿಎಂ, ವಿಧಾನಸೌಧದಲ್ಲೇ ಬ್ಲೂಫಿಲಂ ನೋಡಿದ ಕುಖ್ಯಾತಿ ಏನಾದರೂ ರಾಜ್ಯದ ಇತಿಹಾಸದಲ್ಲಿದ್ದರೆ, ಅದು ಬಿಜೆಪಿಯವರಿಗೆ ಸೇರಬೇಕು. ಹಾಲಪ್ಪ, ರೇಣುಕಾಚಾರ್ಯ .. ಒಂದಾ ಎರಡಾ ಇವರದ್ದು. ಹೀಗಿರುವಾಗ ಕಾಂಗ್ರೆಸ್ಸಿಗೆ ಹೇಳಲು ಬರ್ತಾರಲ್ಲಾ.. ಇವರಿಗೆ ಏನಾದರೂ ಬುದ್ದಿ ಇದೆಯಾ ಎಂದು ಕಮಲದ ಪಕ್ಷದ ವಿರುದ್ದ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.

ಎಚ್ ವೈ ಮೇಠಿ, ತನ್ವೀರ್ ಸೇಠ್ ಮಾಡಿದ್ದೇನು? ಬಿಜೆಪಿ ಪ್ರಶ್ನೆ
ಅತ್ತ ಅವಳಿ ಕರಾವಳಿ ಜಿಲ್ಲೆಯಲ್ಲಿ ಪರಿವರ್ತನಾ ಯಾತ್ರೆಯಲ್ಲಿರುವ ಬಿಜೆಪಿ ಮುಖಂಡರು, ಅವರ ಪಕ್ಷದ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಮನೆ ಗಂಭೀರ ಲೈಂಗಿಕ ದೌರ್ಜನ್ಯದ ಆರೋಪವಿದೆ. ಎಚ್ ವೈ ಮೇಠಿ, ತನ್ವೀರ್ ಸೇಠ್ ಮಾಡಿದ್ದೇನು? ಇವರದ್ದೇ ಸರಕಾರ, ಇವರದ್ದೇ ತನಿಖಾ ಆಯೋಗ, ಈ ವಿಚಾರದಲ್ಲಿ ಕ್ಲೀನ್ ಚಿಟ್ ಅಲ್ಲಾ.. ಏನ್ ಚಿಟ್ ಬೇಕಾದರೂ ಕೊಡ್ತಾರೆ ಅಂತ ಸಮುದ್ರದ ಅಲೆಯಂತೆ, ಬಿಜೆಪಿ ಮುಖಂಡರು ತಮ್ಮ ಹೇಳಿಕೆಯನ್ನು ತೇಲಿಬಿಟ್ಟಿದ್ದಾರೆ.

ಲೈಂಗಿಕ ದೌರ್ಜನ್ಯ ಮತ್ತು ನೀಲಿಚಿತ್ರ ವೀಕ್ಷಣೆಯ ವಿಚಾರ ಮತ್ತೆ ಮುನ್ನಲೆಗೆ
ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಮೇಲಿರುವ ಲೈಂಗಿಕ ದೌರ್ಜನ್ಯದ ಆರೋಪ ಇರುವುದರಿಂದ, ಅವರು ಭಾಗವಹಿಸುವ ಎಲ್ಲಾ ಕಾರ್ಯಕ್ರಮಗಳನ್ನು ನಮ್ಮ ಕಾರ್ಯಕರ್ತರು ಮುತ್ತಿಗೆ ಹಾಕಲಿದ್ದಾರೆಂದು ಬಿಜೆಪಿ ಮುಖಂಡರು ಈಗಾಗಲೇ ಹೇಳಿರುವುದರಿಂದ, ಲೈಂಗಿಕ ದೌರ್ಜನ್ಯ ಮತ್ತು ನೀಲಿಚಿತ್ರ ವೀಕ್ಷಣೆಯ ವಿಚಾರ ಮತ್ತೆ ಮುನ್ನಲೆಗೆ ಬಂದರೆ ಆಶ್ಚರ್ಯ ಪಡಬೇಕಾಗಿಲ್ಲ.












Click it and Unblock the Notifications