ಅಂಕಿತ್ ಬಯೋ ಫ್ಯೂಯಲ್ ಕಂಪನಿ ವಿರುದ್ಧ ಸಿಬಿಐ ಎಫ್ಐಆರ್ ದಾಖಲು
ಬೆಂಗಳೂರು, ನ. 12: ಜೈವಿಕ ಇಂಧನ ಕಚ್ಚಾ ವಸ್ತು ತಯಾರಿಕಾ ಘಟಕ ಸ್ಥಾಪನೆ ಮಾಡುವ ಹೆಸರಿಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಹದಿನೈದು ಕೋಟಿ ರೂ. ವಂಚನೆ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ಈ ಸಂಬಂಧ ಏಳು ಮಂದಿಯ ವಿರುದ್ಧ ಸಿಬಿಐ ಬೆಂಗಳೂರು ಘಟಕದ ಅಧಿಕಾರಿಗಳು ಎಫ್ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಅಂಕಿತಾ ಬಯೋ ಫ್ಯೂಯಲ್ ಕಂಪನಿ ಹಾಗೂ ಕಂಪನಿಯ ಏಳು ನಿರ್ದೇಶಕರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಸಿಬಿಐ ಅಧಿಕಾರಿಗಳು ಕೇಸು ದಾಖಲಿಸಿದ್ದಾರೆ.
ತುಮಕೂರಿನಲ್ಲಿ ಜೈವಿಕ ಇಂಧನ ಕಚ್ಚಾವಸ್ತು ತಯಾರಿಸುವ ಉತ್ಪಾದನಾ ಘಟಕ ಆರಂಭಿಸುವ ಪ್ರಸ್ತಾವನೆ ಮುಂದಿಟ್ಟಿದ್ದ ಅಂಕಿತ ಬಯೋ ಫ್ಯೂಯಲ್ ಕಂಪನಿ ರಾಜಾಜಿನಗರ ಕೈಗಾರಿಕಾ ಪ್ರದೇಶದಲ್ಲಿರುವ ಎಸ್ಬಿಐ ಬ್ಯಾಂಕ್ನಲ್ಲಿ ಸಾಲ ಪಡೆಯಲು ಅರ್ಜಿ ಸಲ್ಲಿಸಿತ್ತು. 2015ರಲ್ಲಿ ಹದಿನೈದು ಕೋಟಿ ಸಾಲ ಕೋರಿ ಅರ್ಜಿ ಸಲ್ಲಿಸಿತ್ತು. ಹದಿನೈದು ಕೋಟಿ ಸಾಲ ನೀಡಲು ಭದ್ರತೆಗೆಂದು ಅಂಕಿತಾ ಬಯೋ ಫ್ಯೂಯಲ್ ಕಂಪನಿ 56 ಎಕರೆ ಭೂಮಿಯನ್ನು ಭದ್ರತೆಗಾಗಿ ಅಡಮಾನವಿಟ್ಟಿತ್ತು. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಕೆ ಸುಬ್ಬರಾಜು ಮತ್ತು ಪುಲ್ಲಂರಾಜು ಅವರ ಹೆಸರಿನಲ್ಲಿದ್ದ 56 ಎಕರೆ ಜಮೀನನ್ನು ನೀಡಿದ್ದರು. ಹದಿನೈದು ಕೋಟಿ ಸಾಲ ನೀಡಿದ್ದ ಬ್ಯಾಂಕ್ಗೆ ಎರಡು ವರ್ಷವಾದರೂ ಒಂದು ಪೈಸೆ ಕೂಡ ಕಟ್ಟಿರಲಿಲ್ಲ.
ಈ ಕುರಿತು ಬ್ಯಾಂಕ್ ವತಿಯಿಂದ ತನಿಖೆ ನಡೆಸಿದಾಗ, ಬ್ಯಾಂಕ್ಗೆ ಅಡಮಾನ ವಿಟ್ಟಿದ್ದ ಆಸ್ತಿಗಳು ಪುಲ್ಲಂರಾಜು ಮತ್ತು ಸುಬ್ಬರಾಜು ಹೆಸರಿನಲ್ಲಿ ಇಲ್ಲದೇ ಇರುವುದು ಗೊತ್ತಾಗಿದೆ. ಕೇವಲ 32 ಎಕರೆ ಆಸ್ತಿಗೆ ಮಾತ್ರ ಮಾಲೀಕರಾಗಿರುವುದು ಗೊತ್ತಾಗಿದೆ. ಉಳಿದ ಜಮೀನಿಗೆ ನಕಲಿ ಪಟ್ಟಾ ಮತ್ತು ಅರ್ಟಿಸಿ ದಾಖಲೆಗಳನ್ನು ನೀಡಿರುವುದು ಬೆಳಕೆಗೆ ಬಂದಿದೆ. ಮಾತ್ರವಲ್ಲ ಇದೇ ಜಮೀನನ್ನು ಐಎಫ್ಸಿಐ ವೆಂಚುರ್ ಕ್ಯಾಪಿಟನಲ್ನಲ್ಲಿ 5.80 ಕೋಟಿ ರೂ. ಮೌಲ್ಯದ ಆಸ್ತಿ ಇದಾಗಿದ್ದು, 30 ಕೋಟಿ ರೂ. ಸಾಲ ಪಡೆದಿರುವುದು ಬೆಳಕಿಗೆ ಬಂದಿದೆ. ಆದರೆ, ಇದೇ ಕೊಟ್ಟಿ ದಾಖಲೆಗಳನ್ನು ಎಸ್ಬಿಐಗೆ ಸಲ್ಲಿಸಿ ಹದಿನೈದು ಕೋಟಿ ರೂ. ಸಾಲ ಪಡೆದು ಅದನ್ನು ವೈಯಕ್ತಿಕ ಖಾತೆಗಳಿಗೆ ಪರಭಾರೆ ಮಾಡಿರುವುದು ಗೊತ್ತಾಗಿದೆ.
ಬ್ಯಾಂಕ್ಗೆ ವಂಚನೆ ಮಾಡುವ ಉದ್ದೇಶದಿಂದ ನಕಲಿ ದಾಖಲೆಗಳನ್ನು ಸಲ್ಲಿಸಿ ಅಂಕಿತ್ ಬಯೋ ಫೀಯಲ್ ಕಂಪನಿ ರಾಜಾಜಿನಗರದಲ್ಲಿರುವ ಎಸ್ಬಿಐ ಬ್ಯಾಂಕ್ನಲ್ಲಿ ಸಾಲ ಪಡೆದು ವಂಚನೆ ಮಾಡಿದೆ. ಬಯೋ ಫೂಯಲ್ ಕಚ್ಚಾ ವಸ್ತು ಉತ್ಪಾದನಾ ಘಟಕ ಸ್ಥಾಪನೆ ಹೆಸರಿನಲ್ಲಿ ಸಾಲ ಪಡೆದು ಮೋಸ ಮಾಡಿರುವ ಅಂಕಿತಾ ಬಯೋ ಫ್ಯೂಯಲ್ನ ಎಂಟು ಮಂದಿಯ ವಿರುದ್ಧ ಎಸ್ಬಿಐ ಡ್ಯೆಪುಟಿ ಜನರಲ್ ಮ್ಯಾನೇಜರ್ ಮುರಳಿ ಕೃಷ್ಣ ದೂರು ನೀಡಿದ್ದಾರೆ. ದೂರನ್ನು ಆಧರಿಸಿ ಸಿಬಿಐ ಬೆಂಗಳೂರು ಭ್ರಷ್ಟಾಚಾರ ನಿಗ್ರಹ ದಳ ಎಂಟು ಮಂದಿ ಕಂಪನಿ ನಿರ್ದೇಶಕರು ಮತ್ತು ಅಪರಿಚಿತ ಬ್ಯಾಂಕ್ ಅಧಿಕಾರಿಗಳ ಮೇಲೆ ಎಫ್ಐಆರ್ ದಾಖಲಿಸಿದೆ.
Recommended Video
ಅಂಕಿತ್ ಬಯೋ ಫ್ಯೂಯಲ್ ಕಂಪನಿ, ಅದರ ಪಾಲುದಾರ ಕೆ. ವೆಂಕಟೇಶ್, ಜೆ. ಹಾಲೇಶ್, ಅರುಣ್ ಡಿ. ಕುಲಕರ್ಣಿ, ಪುಲ್ಲಂರಾಜು, ಸುಬ್ಬರಾಜು, ತಿರುಮಲಯ್ಯ, ಜಿ.ಬಿ. ಆರಾಧ್ಯ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಲಾಗಿದೆ. ಇನ್ನು ಮೊದಲೇ ಮಾರ್ಟ್ ಗೇಜ್ ಮಾಡಿರುವ ದಾಖಲೆಗಳನ್ನು ನಂಬಿ ಸಾಲ ಕೊಟ್ಟಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರಾಜಾಜಿನಗರ ಘಟಕದ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದ್ದು, ಬ್ಯಾಂಕ್ ಅಧಿಕಾರಿಗಳು ಕೂಡ ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗುವ ಸಾಧ್ಯತೆಯಿದೆ.