ಕಾವೇರಿ ವಿವಾದ : ಸೆ.19ರಂದು ಹೊಸೂರು-ಕರ್ನಾಟಕ ಗಡಿ ಬಂದ್
ಬೆಂಗಳೂರು, ಸೆಪ್ಟೆಂಬರ್ 18 : 'ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ನಿಲ್ಲಿಸುವಂತೆ ಆಗ್ರಹಿಸಿ ಸೆ.19ರಂದು ಹೊಸೂರು-ಕರ್ನಾಟಕ ಗಡಿ ರಸ್ತೆ ಬಂದ್ ಮಾಡಲಾಗುತ್ತದೆ' ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಶನಿವಾರ ಬೆಂಗಳೂರಿನಲ್ಲಿ ಮಾತನಾಡಿದ ವಾಟಾಳ್ ನಾಗರಾಜ್ ಅವರು, 'ತಮಿಳುನಾಡಿಗೆ ಕಾವೇರಿ ನೀರು ಹರಿಯುತ್ತಿದ್ದರೂ ವಿನಾ ಕಾರಣ ತಮಿಳುನಾಡು ಬಂದ್ ಮಾಡಲಾಗಿದೆ. ಜಯಲಲಿತಾ ಅವರು ನೀರಿಗಿಂತ ಹೆಚ್ಚಾಗಿ ರಾಜಕಾರಣ ಮಾಡುತ್ತಿದ್ದಾರೆ' ಎಂದು ದೂರಿದರು.[ಕಾವೇರಿ ಗಲಭೆ : ಕರ್ನಾಟಕ, ತಮಿಳುನಾಡು ಕಿವಿ ಹಿಂಡಿದ ಕೋರ್ಟ್]

'ನೀರು ಹರಿಸುವುದನ್ನು ನಿಲ್ಲಿಸುವಂತೆ ಆಗ್ರಹಿಸಿ ಎರಡು ದಿನ ಗಡಿ ಬಂದ್ ಹೋರಾಟ ಹಮ್ಮಿಕೊಳ್ಳಲಾಗಿದೆ. ಸೆ.19ರಂದು ಹೊಸೂರು-ಕರ್ನಾಟಕ ಗಡಿ, ಸೆ.20ರಂದು ಚಾಮರಾಜನಗರ ಗಡಿ ಬಂದ್ ಮಾಡುವುದಾಗಿ' ಹೇಳಿದರು.[ಕಾವೇರಿ ವಿವಾದ : ಪಕ್ಷ, ಸರ್ಕಾರದ ನಡುವೆ ಹೊಂದಾಣಿಕೆ ಇಲ್ಲ?]
ಕರ್ನಾಟಕದ ಸಂಸದರು ಮತ್ತು ರಾಜಕೀಯ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ವಾಟಾಳ್ ನಾಗರಾಜ್ ಅವರು, 'ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ರೈತರ ಸಮಸ್ಯೆ ಬೇಕಿಲ್ಲ. ಕುಡಿಯುವ ನೀರಿಗೆ ಮುಂದಿನ ದಿನಗಳಲ್ಲಿ ಆಗುವ ತೊಂದರೆಯ ಅರಿವಿಲ್ಲ' ಎಂದರು.[ತಮಿಳುನಾಡಿಗೆ ನೀರು, ನೆಲಕಚ್ಚುತ್ತಿದೆ ಕೆಆರ್ ಎಸ್ ನೀರಿನ ಮಟ್ಟ]
'ಕಾವೇರಿ ವಿಚಾರದಲ್ಲಿ ಪ್ರಧಾನಿ ಮಧ್ಯಪ್ರವೇಶಿಸಬೇಕು ಎಂದು ಪತ್ರ ಬರೆಯಲಾಗಿದೆ. ಬಿಜೆಪಿಯ ಸಂಸದರು ಪ್ರಧಾನಿ ಏಕೆ ಮಧ್ಯಪ್ರವೇಶಿಸಬೇಕು ಎಂದು ಪ್ರಶ್ನಿಸಿ ರಾಜಕೀಯ ಮಾಡುತ್ತಿದ್ದಾರೆ. ರಾಜ್ಯದ ಸಂಸದರು, ಕೇಂದ್ರ ಸಚಿವರು ಪ್ರಧಾನಿಗಳ ಮನವೊಲಿಸಬೇಕು' ಎಂದು ಒತ್ತಾಯಿಸಿದರು.
ಸೆ.19ರಂದು ಮೇಲುಸ್ತುವಾರಿ ಸಭೆ : ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಮೇಲುಸ್ತುವಾರಿ ಸಮಿತಿ ಸಭೆ ಸೆ.19ರ ಸೋಮವಾರ ನಡೆಯಲಿದೆ. ರಾಜ್ಯದ ಬರ ಪರಿಸ್ಥಿತಿ, ಅಂತರ್ಜಲ ಸ್ಥಿತಿ, ಜಲಾಶಯಗಳಲ್ಲಿನ ನೀರಿನ ಕೊರತೆ ಮುಂತಾದ ವಿಚಾರಗಳ ಕುರಿತು ವಾದ ಮಂಡಣೆ ಮಾಡಲು ಕರ್ನಾಟಕ ಸಿದ್ಧವಾಗಿದೆ.












Click it and Unblock the Notifications