ಸಿದ್ದರಾಮಯ್ಯನವರ ಆತ್ಮಸಾಕ್ಷಿಯನ್ನು ಬಡಿದೆಬ್ಬಿಸಿದರೇ ಯಡಿಯೂರಪ್ಪ?
Recommended Video
ಚುನಾವಣೆಯ ವೇಳೆ ಹಾವುಮುಂಗುಸಿಯಂತಿದ್ದ ನಾಯಕರು ಆಮೇಲೆ ಸಮಯಾಧಾರಿತ ರಾಜಕಾರಣ ಹೇಗೆ ಮಾಡುತ್ತಾರೆ ಎನ್ನುವುದಕ್ಕೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದಿರುವುದು ಒಂದು ಉದಾಹರಣೆ.
ಇನ್ನೊಂದು, ಜೈಲಿಗೆ ಹೋಗಿಬಂದವರು, ಲಂಚವನ್ನು ಚೆಕ್ ಮೂಲಕ ಪಡೆದ ಏಕೈಕ ಸಿಎಂ ಅಂದರೆ ಅದು ಯಡಿಯೂರಪ್ಪ ಎಂದೆಲ್ಲಾ ಚುನಾವಣಾ ಪ್ರಚಾರದ ವೇಳೆ ಬಿಎಸ್ವೈ ಅವರನ್ನು ಸಿದ್ದರಾಮಯ್ಯ ಅಣಕಿಸಿದ್ದರು. ಅದಕ್ಕೆ ಬಿಎಸ್ವೈ ಕೌಂಟರ್ ಅಟ್ಯಾಕ್ ಕೂಡಾ ಮಾಡಿದ್ದರು. ಈಗ ಅದೇ, ಸಿದ್ದರಾಮಯ್ಯನವರ ಮೇಲೆ, ಎಚ್ಡಿಕೆ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಮೇಲೆ, ಯಡಿಯೂರಪ್ಪನವರು ಸಾಫ್ಟ್ ಆದಂತೆ ಕಾಣಿಸುತ್ತಿದೆ.
ಅಪ್ಪಮಗನನ್ನು ಟೀಕಿಸುವ ಭರದಲ್ಲಿ ಬಿಎಸ್ವೈ ಮಾಡಿದ ದೊಡ್ಡ ಎಡವಟ್ಟು
ಎರಡು ದಿನದ ಹಿಂದೆಯೂ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಹೈಕಮಾಂಡ್ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎನ್ನುವ ಅಚ್ಚರಿಯ ಹೇಳಿಕೆಯನ್ನು ನೀಡಿದ್ದ ಯಡಿಯೂರಪ್ಪ, ಶುಕ್ರವಾರ (ಮೇ 25) ಸದನದಲ್ಲಿ ಮತ್ತೆ ಅದನ್ನು ಪುನರುಚ್ಚಿಸಿದರು.
ವಿಶ್ವಾಸಮತ ಗೊತ್ತುವಳಿಯ ವೇಳೆ ವಿರೋಧ ಪಕ್ಷದ ಮುಖಂಡನಾಗಿ ಯಡಿಯೂರಪ್ಪ ಅಕ್ಷರಸಃ ಅಪ್ಪಮಕ್ಕಳ (ಗೌಡ್ರು, ಎಚ್ಡಿಕೆ) ವಿರುದ್ದ ಟೀಕಾಪ್ರಹಾರ ನಡೆಸುತ್ತಿದ್ದರು. ಮಧ್ಯಮಧ್ಯದಲ್ಲಿ ಸಿದ್ದರಾಮಯ್ಯನವರನ್ನು ಹೈಕಮಾಂಡ್ ಸಂಪೂರ್ಣ ನಿರ್ಲಕ್ಷಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿಗಳ ಆತ್ಮಸಾಕ್ಷಿಯನ್ನು ಬಡಿದೆಬ್ಬಿಸುವ ಕೆಲಸವನ್ನು ಮಾಡಲು ಬಿಎಸ್ವೈ ಮುಂದಾದಂತಿತ್ತು.
ಆಕ್ರೋಶದ ಬದಲು ನಗೆಯುಕ್ಕಿಸಿದ ಯಡಿಯೂರಪ್ಪ ಮಾತುಗಳು
ತಮ್ಮ ವ್ಯಂಗ್ಯ ಮಿಶ್ರಿತ ಭಾಷಣದ ಮಧ್ಯೆ ಮುಖ್ಯಮಂತ್ರಿ ಕುಮಾರಸ್ವಾಮಿ ಅನ್ನುವ ಬದಲು, ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದಾಗ ಸದನ ಅವರ ತಪ್ಪನ್ನು ಎಚ್ಚರಿಸಿತು. ಅದಕ್ಕೆ ಅದೇ ದಾಟಿಯಲ್ಲಿ ಉತ್ತರಿಸಿದ ಬಿಎಸ್ವೈ, ಸಾರಿ.. ಸಾರಿ..ಏನ್ ಮಾಡೋದು ಸ್ವಾಮೀ.. ಅಭ್ಯಾಸ ಬಲ, ಸಿಎಂ ಕುಮಾರಸ್ವಾಮಿ ಅನ್ನೋದಕ್ಕೆ ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದಾಗ ಸಿದ್ದರಾಮಯ್ಯ ಸೇರಿ ಸದನ ನಗೆಗಡಲಲ್ಲಿ ತೇಲಿತು. ಮುಂದೆ ಓದಿ..
ಚುನಾವಣೆಗೆ ಮುನ್ನ ನೀವು ಎಷ್ಟು ಪ್ರಭಲರಾಗಿದ್ದೀರಿ
ಸಿದ್ದರಾಮಯ್ಯನವರೇ, ಚುನಾವಣೆಗೆ ಮುನ್ನ ನೀವು ಎಷ್ಟು ಪ್ರಭಲರಾಗಿದ್ದೀರಿ. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ನಿಮಗೆ ಎಷ್ಟು ಬೆಲೆಯನ್ನು ಕೊಡುತ್ತಿದ್ದರು. ಈಗ ಅದೇ ಬೆಲೆ ನಿಮಗೆ ಸಿಗುತ್ತಿದೆಯಾ? ಕುಮಾರಸ್ವಾಮಿಯವರನ್ನು ಸಿಎಂ ಮಾಡಲು ಅಥವಾ ಮಂತ್ರಿಮಂಡಲ ರಚನೆಯ ವಿಚಾರದಲ್ಲಿ ಯಾರ ಮೇಲೆಯೂ ವಿಶ್ವಾಸ ಇಡದೇ ಬರೀ ಕುಮಾರಸ್ವಾಮಿಯವರನ್ನು ಮಾತ್ರ ದೆಹಲಿಗೆ ನಿಮ್ಮ ಹೈಕಮಾಂಡ್ ಕರಿಸಿಕೊಂಡಿದ್ದು ಹೌದು ತಾನೇ ಎಂದಾಗ, ಸಿದ್ದರಾಮಯ್ಯನವರ ಮುಖಚಹರೆ ಬದಲಾಗಿದ್ದು ಸ್ಪಷ್ಟವಾಗಿತ್ತು.
ಇದೇ ಅಪ್ಪಮಕ್ಕಳು ನಿಮ್ಮನ್ನು ಹಠಕ್ಕೆ ಬಿದ್ದು ಸೋಲಿಸಲಿಲ್ಲವೇ
ರಾಹುಲ್ ಗಾಂಧಿ ಚುನಾವಣಾ ಪ್ರಚಾರಕ್ಕೆ ಬಂದಾಗ, ರಾಹುಲ್ ಭಾಷಣ ಮಾಡಿದ ಮೇಲೆ, ನೀವು ಭಾಷಣ ಮಾಡುತ್ತಿದ್ರಿ, ನಿಮಗಿದ್ದ ಜನಬೆಂಬಲವದು. ಕಾರಣಾಂತರದಿಂದ ನಿಮಗೆ ಸೋಲಾಗಿರಬಹುದು. ಅಪ್ಪಮಕ್ಕಳ ಬೆಂಬಲಕ್ಕೆ ನಿಮ್ಮ ಪಕ್ಷ ನಿಂತಿದೆಯಲ್ಲಾ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಇದೇ ಅಪ್ಪಮಕ್ಕಳು ನಿಮ್ಮನ್ನು ಹಠಕ್ಕೆ ಬಿದ್ದು ಸೋಲಿಸಲಿಲ್ಲವೇ - ಯಡಿಯೂರಪ್ಪ.
ನೀವು ವೇದಿಕೆಯಲ್ಲಿ ಇರದೇ, ಎಲ್ಲೋ ಮೂಲೆಯಲ್ಲಿ ಕೂತಿದ್ರಿ
ಕುಮಾರಸ್ವಾಮಿಯವರು ಪ್ರಮಾಣವಚನ ಸ್ವೀಕರಿಸಿದಾಗ, ಇಡೀ ರಾಷ್ಟ್ರದ ಪ್ರಮುಖ ಮುಖಂಡರು ವೇದಿಕೆಯಲ್ಲಿ ಇದ್ದರು, ನೀವು ವೇದಿಕೆಯಲ್ಲಿ ಇರದೇ, ಎಲ್ಲೋ ಮೂಲೆಯಲ್ಲಿ ಕೂತಿದ್ರಿ. ಮಾಜಿ ಸಿಎಂ ಒಬ್ಬರಿಗೆ ಕೊಡುವ ಬೆಲೆನಾ ಇದು? ಅವರು ಪ್ರತಿನಿಧಿಸುವ ಸಮುದಾಯದವರು ಇದರ ನೇರಪ್ರಸಾರವನ್ನು ನೋಡುತ್ತಿರಲಿಲ್ಲವೇ, ಆ ಸಮುದಾಯಕ್ಕೆ ಇದರಿಂದ ಎಷ್ಟು ಬೇಸರವಾಗಿರಬಹುದು - ಯಡಿಯೂರಪ್ಪ.
ನಿಮ್ಮ ಮುಖಸ್ತುತಿ ಮಾಡಿ ನನಗೇನೂ ಆಗಬೇಕಿಲ್ಲ
ಸಿದ್ದರಾಮಯ್ಯನವರೇ, ನಿಮ್ಮ ಮುಖಸ್ತುತಿ ಮಾಡಿ ನನಗೇನೂ ಆಗಬೇಕಿಲ್ಲ, ಆದರೆ ವಾಸ್ತವಾಂಶವನ್ನು ಹೇಳುತ್ತಿದ್ದೇನೆ. ನೀವು ಸೇರಿ, ನಿಮ್ಮ ಪಕ್ಷದ ಯಾವುದೇ ಮುಖಂಡರನ್ನು ಕರೆಸದೇ, ಬರಿ ಕುಮಾರಸ್ವಾಮಿಯವರನ್ನು ಕರೆಸಿ, ನಿಮ್ಮ ಹೈಕಮಾಂಡ್ ಚರ್ಚಿಸುತ್ತಾರೆ ಅಂದರೆ ನೀವೇ ಅರ್ಥ ಮಾಡಿಕೊಳ್ಳಿ - ಯಡಿಯೂರಪ್ಪ.
ಸಿದ್ದರಾಮಯ್ಯನವರ ಆತ್ಮಸಾಕ್ಷಿಯನ್ನು ಕೆಣಕುವಂತೆ ಇದ್ದದ್ದಂತೂ ಹೌದು
ಮಾಜಿ ಸಿಎಂ ಸಿದ್ದರಾಮಯ್ಯನವರ ಬಗ್ಗೆ ಒಂದೈದು ನಿಮಿಷ ಯಡಿಯೂರಪ್ಪ ತಮ್ಮ ಭಾಷಣದಲ್ಲಿ ಪ್ರಸ್ತಾವಿಸಿದರೂ, ಯಡಿಯೂರಪ್ಪನವರ ಮಾತಿಗೆ ಸಿದ್ದರಾಮಯ್ಯ ಏನೂ ಪ್ರತಿಕ್ರಿಯಿಸದೇ ಸುಮ್ಮನೇ ಭಾಷಣ ಆಲಿಸುತ್ತಿದ್ದರು. ಒಟ್ಟಿನಲ್ಲಿ ಯಡಿಯೂರಪ್ಪನವರ ಭಾಷಣ, ಅಲ್ಲಲ್ಲಿ ಸಿದ್ದರಾಮಯ್ಯನವರ ಆತ್ಮಸಾಕ್ಷಿಯನ್ನು ಕೆಣಕುವಂತೆ ಇದ್ದದ್ದಂತೂ ಹೌದು.