ಮುಯ್ಯಿಗೆ ಮುಯ್ಯಿ... ಕಾಂಗ್ರೆಸ್ ಸೇರಿಗೆ ಬಿಜೆಪಿ ಸವ್ವಾಸೇರು!

ಬೆಂಗಳೂರು, ಮಾರ್ಚ್ 13: ಹತ್ತು ಆರೋಪಗಳನ್ನು ಹೊರಿಸಿ ರಾಜ್ಯ ಬಿಜೆಪಿಯನ್ನು ಟ್ವಿಟ್ಟರ್ ನಲ್ಲಿ ತರಾಟೆಗೆ ತೆಗೆದುಕೊಂಡಿದ್ದ ಕಾಂಗ್ರೆಸ್ಸಿಗೆ ಬಿಜೆಪಿ ಪ್ರತ್ಯುತ್ತರ ನೀಡಿದೆ. ಕಾಂಗ್ರೆಸ್ ಸೇರಿಗೆ ಇದು ಬಿಜೆಪಿಯ ಸವ್ವಾಸೇರು!

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

'ನಮೋ' ಎಂದರೆ ನರೇಂದ್ರ ಮೋದಿ ಅಂತಲ್ಲ, 'ನಮಗೆ ಮೋಸ' ಅಂತ ಎಂದಿದ್ದ ಕಾಂಗ್ರೆಸ್, ಅದೇ ಪದವನ್ನಿಟ್ಟುಕೊಂಡು ಬಿಜೆಪಿ ವಿರುದ್ಧ ಟ್ವಿಟ್ಟರ್ ನಲ್ಲಿ ಯುದ್ಧ ಆರಂಭಿಸಿತ್ತು. ರಾಜ್ಯ ಸಭೆಗೆ ಕನ್ನಡೇತರರನ್ನುಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದರಿಂದ ಹಿಡಿದು, ಮಹದಾಯಿ ಹೋರಾಟ, ಕಾವೆರಿ ವಿವಾದ, ಹಿಂದಿ ಹೇರಿಕೆ, ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಇತ್ಯಾದಿ ವಿಷಯಗಳನ್ನು ಮುಂದಿಟ್ಟುಕೊಂಡು ಬಿಜೆಪಿಯ ಕಾಲೆಳೆದಿತ್ತು.

ಈ ಎಲ್ಲ ಆರೋಪಗಳಿಗೂ ಸೂಕ್ತ ಉತ್ತರ ನೀಡಿರುವ ಬಿಜೆಪಿ, ಈಗ ಹಿಟ್ ಅಂಡ್ ರನ್ ರಾಜಕೀಯವಿಲ್ಲ. ಕಾಂಗ್ರೆಸ್ ಮಾಡಿದ ಎಲ್ಲಾ ಬಾಲಿಶ ಆರೋಪಗಳಿಗೂ ನಾವು ಉತ್ತರ ನೀಡುತ್ತೇವೆ ಎಂದು ಬಿಜೆಪಿ ಹೇಳಿದೆ. ಹಾಸ್ಯ ಈಗ ಆರಂಭವಾಗುತ್ತದೆ... ಎಂದು ತಾನೂ 10 ಸಮಜಾಯಿಷಿಗಳನ್ನು ಟ್ವೀಟ್ ಮಾಡಿದೆ.

ಕರ್ನಾಟಕದ ಪರ ಹೋರಾಡಿದ್ದಾರೆ ರಾಜೀವ್ ಚಂದ್ರಶೇಖರ್!

ಕಾಂಗ್ರೆಸ್ ಮೊದಲೇ ಆರೋಪ, 'ಉದ್ಯಮಿ ರಾಜೀವ್ ಚಂದ್ರಶೇಖರ್ ಅವರನ್ನು ರಾಜ್ಯಸಭಾ ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಿಸುವ ಮೂಲಕ ಕನ್ನಡೇತರರಿಗೆ ಆದ್ಯತೆ ನೀಡಿದೆ' ಎಂಬುದು. ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿ, ರಾಜೀವ್ ಚಂದ್ರಶೇಖರ್ ಅವರು ಬೆಂಗಳೂರು ಮತ್ತು ಕರ್ನಾಟಕದ ಪರವಾಗಿ ಹಲವು ಕೆಲಸಗಳನ್ನು ಮಾಡಿದ್ದಾರೆ. ಕಾಂಗ್ರೆಸ್ಸಿನ ಸ್ಟೀಲ್ ಫ್ಲೈ ಓವರ್ ಹಗರಣದ ಸಮಯದಲ್ಲೂ ದನಿ ಎತ್ತಿದ್ದಾರೆ. ಕರ್ನಾಟಕಕ್ಕೆ ರಾಜೀವ್ ಅವರ ಕೊಡುಗೆ ಏನು ಎಂಬ ಪಟ್ಟಿಯನ್ನು ನಾವು ಧೈರ್ಯವಾಗಿ ನೀಡಬಲ್ಲೆವು ಎಂದು ಬಿಜೆಪಿ ಉತ್ತರಿಸಿದೆ.

ಅಷ್ಟೇ ಅಲ್ಲ, ಈ ಕುರಿತು ಮತ್ತಷ್ಟು ಸಮರ್ಥನೆ ನೀಡಿರುವ ಬಿಜೆಪಿ, ರಾಜೀವ್ ಅವರು ಕರ್ನಾಟಕಕ್ಕೆ ಏನು ಮಾಡಿದ್ದಾರೆಂಬ ಪಟ್ಟಿ ನಾವು ನೀಡಬಲ್ಲೆವು. ಆದರೆ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ಕರ್ನಾಟಕಕ್ಕೆ ಏನು ಮಾಡಿದ್ದಾರೆಂದು ಹುಡುಕಲು ನಮ್ಮ ತಂಡ ಆರು ಗಂಟೆ ಹುಡುಕಿದರೂ ಏನೂ ಸಿಗದಿರುವುದು ಕಾಂಗ್ರೆಸ್ಸಿಗೆ ನಾಚಿಕೆ ಗೇಡು! ರಾಜೀವ್ ಚಂದ್ರಶೇಖರ್ ಅವರು ಕೇರಳದಿಂದ ಬಂದವರು ಎಂಬ ಕಾರಣಕ್ಕೆ ಅವರು ಸೂಕ್ತ ಅಭ್ಯರ್ಥಿ ಅಲ್ಲ ಎನ್ನುವುದಾದರೆ ಕಾಂಗ್ರೆಸ್ ಸಚಿವ ಕೆ.ಜೆ.ಜಾರ್ಜ್ ಮತ್ತು ಶಾಸಕ ಹ್ಯಾರಿಸ್ ಸಹ ಕೇರಳದವರು. ಅವರು ರಾಜೀನಾಮೆ ನೀಡಬೇಕಾಗುತ್ತದಲ್ಲವೇ? ಎಂದು ಬಿಜೆಪಿ ಸವಾಲೆಸೆದಿದೆ!

ಸೋನಿಯಾ ಗಾಂಧಿ ಹೇಳಿದ್ದು ನೆನಪಿನಲ್ಲಿವೇ?

ಮಹದಾಯಿ ಕುರಿತು ಕರ್ನಾಟಕ ಬಿಜೆಪಿ ಏನನ್ನೂ ಮಾಡಿಲ್ಲ. ಕೇಂದ್ರದ ಕದತಟ್ಟಿದರೂ ಯಾವುದೇ ಉಪಯೋಗವಾಗಿಲ್ಲ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ತಿಯೆ ನೀಡಿದ ಬಿಜೆಪಿ, ಮಹದಾಯಿ ಕುರಿತು ನಿಮ್ಮ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಮಧಿ ಅವರು ಮಾತನಾಡಿದ್ದು ನೆನಪಿದೆಯೇ ಎಂದು ಪ್ರಶ್ನಿಸಿದೆ. "ಸೋನಿಯಾ ಗಾಂಧಿ ಸಾರ್ವಜನಿಕವಾಗಿಯೇ ಹೇಳಿದ್ದರು, ಮಹದಾಯಿಯ ಒಂದು ಹನಿಯೂ ಕರ್ನಾಟಕಕ್ಕೆ ಸಿಗಬಾರದು" ಎಂದು. ಇದು ಕನ್ನಡ ವಿರೋಧಿ, ಕರ್ನಾಟಕ ವಿರೋಧಿ ಹೇಳಿಕೆಯಲ್ಲವೇ? ಈ ಕುರಿತು ಮಾತನಾಡುವ ಧೈರ್ಯ ನಿಮಗಿದೆಯೇ ಎಂದು ಖಾರವಾಗಿ ಪ್ರಶ್ನಿಸಿದೆ ಬಿಜೆಪಿ.

ಬ್ಯಾಂಕಿಂಗ್ ಪರೀಕ್ಷೆ ಶುರುವಾಗಿದ್ದು 2014 ರಲ್ಲೇ?!

ಬ್ಯಾಂಕಿಂಗ್ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಮಾಡಿಕೊಡದೆ, ಅರುಣ್ ಜೇಟ್ಲಿಯವರು ಲಕ್ಷಾಂತರ ಕನ್ನಡಿಗರನ್ನು ಉದ್ಯೋಗ ವಂಚಿತರನ್ನಾಗಿ ಮಾಡುತ್ತಿದ್ದಾರೆ ಎಂಬ ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ಪ್ರತಿಕ್ರಿಯಿಸಿದೆ.

"ಬ್ಯಾಂಕಿಂಗ್ ಪರೀಕ್ಷೆಗಳು ಆರಂಭವಾಗಿದ್ದು 2014 ರಲ್ಲೇ? ಕೇಂದ್ರ ದಲ್ಲಿ ನಿಮ್ಮ ಸರ್ಕಾರ ಆಡಳಿತ ನಡೆಸುತ್ತಿದ್ದಾಗ ಏಕೆ ಬ್ಯಾಂಕಿಂಗ್ ಪರೀಕ್ಷೆಯನ್ನು ಕನ್ನಡದಲ್ಲಿ ಆರಂಭಿಸಲಿಲ್ಲ? NEET ಪರೀಕ್ಷೆಗಳನ್ನು ಕನ್ನಡದದಲ್ಲಿ ಬರೆಯಲು ಮೊದಲ ಬಾರಿಗೆ ಅವಕಾಶ ನೀಡಿದ್ದು ಮೋದಿ ಸರ್ಕಾರ ಎಂಬುದು ನೆನಪಿರಲಿ" ಎಂದು ಸಮಜಾಯಿಷಿ ನೀಡಿದೆ ಬಿಜೆಪಿ.

ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಏನನ್ನೆಲ್ಲ ಕೊಟ್ಟಿದೆ ಎಂದು ತಿಳಿಯಿರಿ!

ಕೇಂದ್ರದಲ್ಲಿ ನಿಮ್ಮ ಸರ್ಕಾರ ಯಾವಾಗಿನಿಂದಲೋ ಅಧಿಕಾರದಲ್ಲಿತ್ತು. ಆದರೆ ಕರ್ನಾಟಕಕ್ಕೆ ಎಐಐಎಂಎಸ್, ಐಐಟಿ, ಕೌಶಲ್ಯಾಭಿವೃದ್ಧಿ ವಿಶ್ವವಿದ್ಯಾಲಯ, ಫುಡ್ ಪಾರ್ಕ್ ಮುಂತಾದವನ್ನು ನೀಡುವುದಕ್ಕೆ ಮೋದಿ ಸರ್ಕಾರವೇ ಬರಬೇಕಾಯ್ತು. ಇಷ್ಟೇ ಅಲ್ಲ, ನಿಮ್ಮ ಜಿಹಾದಿ ಸ್ನೇಹಿತರ ಮೇಲೆ ಕಣ್ಣಿಡುವುದಕ್ಕೆ ಮಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ದಳದ ಕಚೇರಿ ತೆರೆಯುವುದಕ್ಕೂ ನಾವು ಕೇಮದ್ರವನ್ನು ಒತ್ತಾಯಿಸುತ್ತಿದ್ದೇವೆ. ಇದ್ಯಾವುದೂ ನಿಮ್ಮ ಕಣ್ಣಿಗೆ ಬಿದ್ದಿಲ್ಲವೇ? ಎಂದು ಬಿಜೆಪಿ ಪ್ರತಿಪ್ರಶ್ನೆ ಕೇಳಿದೆ. ಕರ್ನಾಟಕದಲ್ಲಿದ್ದ ಸಿಆರ್ ಪಿಎಫ್ ಕಚೇರಿಯನ್ನು ಉತ್ತರ ಪ್ರದೇಶಕ್ಕೆ ಸ್ಥಳಾಂತರಿಸಿದ್ದೇಕೆ ಎಂಬ ಕಾಂಗ್ರೆಸ್ ಪ್ರಶ್ನೆಗೆ ಬಿಜೆಪಿ ನೀಡಿದ ಉತ್ತರ ಇದು!

ಮಲತಾಯಿ ಧೋರಣೆ ತೋರುತ್ತಿರುವವರು ಯಾರು?!

2007-08 ರಲ್ಲಿ ಕೇಂದ್ರ ಕಾಂಗ್ರೆಸ್ ಸರ್ಕಾರ ಕರ್ನಾಟಕಕ್ಕೆ ಕೇವಲ 269 ಕೋಟಿ ರೂ. ಬರಪರಿಹಾರ ನೀಡಿತ್ತು. ಆಗ ನಾವು ಕೇಮದ್ರ ಸರ್ಕಾರದ ಬಳಿ ಬೇಡಿಕೆ ಇಟ್ಟಿದ್ದು, 3941.42 ಕೋಟಿ ರೂ.!2012-13ರಲ್ಲಿ ನಾವು ಬೇಡಿಕೆ ಇಟ್ಟಿದ್ದ 11,489 ಕೋಟಿ ರೂ.ಗೆ ಕೇಂದ್ರ ನೀಡಿದ್ದು ಕೇವಲ 530.29 ಕೋಟಿ ರೂ. ಆದರೆ ಮೋದಿ ಸರ್ಕಾರ, ಆಗಿನ ಕಾಂಗ್ರೆಸ್ ಸರ್ಕಾರ ನೀಡಿದ್ದಕ್ಕಿಂತ ಮೂರುಪಟ್ಟು ಜಾಸ್ತಿ ಬರಪರಿಹಾರ ನೀಡಿದೆ. 3700 ಕ್ಕೂ ಹೆಚ್ಚು ರೈತರು ಸಾಯುತ್ತಿರುವಾಗ ಮುಖ್ಯಮಂತ್ರಿ ನಿದ್ರಿಸುತ್ತಿದ್ದಾರೆ ಎಂದು ಬಿಜೆಪಿ, ಕಾಂಗ್ರೆಸ್ ನ ಕಾಲೆಳೆದಿದೆ. ಬರಪರಿಹಾರ ನೀಡುವಲ್ಲಿ ಕೇಂದ್ರ ಮಲತಾಯಿ ಧೋರಣೆ ತೋರಿಸುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ನೀಡಿದ ಉತ್ತರ ಇದು.

ಕರ್ನಾಟಕ ಧ್ವಜ ಏಕೆ ಬೇಕು?

ಕಳೆದ ಐದು ವರ್ಷಗಳಿಂದ ನೀವು ಕರ್ನಾಟಕವನ್ನು ಕೊಳ್ಳೆಹೊಡೆದು ಕರ್ನಾಟಕದ ಹೆಸರಿಗೆ ಮಸಿಬಳಿದಿದ್ದೀರಿ. ನಿಮ್ಮ ಅಧಿಕಾರಾವಧಿಯಲ್ಲಿ ಕರ್ನಾಟಕದಲ್ಲಿ ಅಪರಾಧ ಪ್ರಕರಣಗಳು ಸಾಕಷ್ಟು ಹೆಚ್ಚಾಗಿವೆ. ನಿಮ್ಮ ಆಡಳಿತ ನೋಡಿದರೆ ಬಿಹಾರ ನೆನಪಾಗುತ್ತದೆ. ರಾಜಕೀಯ ಹತ್ಯೆಯಲ್ಲಂತೂ ನೀವು ಕೇರಳವನ್ನು ಹಿಂದಿಕ್ಕುತ್ತಿದ್ದೀರಿ. ಇಷ್ಟೆಲ್ಲ ಮಾಡಿ, ಈಗ ಪ್ರಾಯಶ್ಚಿತ್ತಕ್ಕೆ ಎಂಬಂತೆ ಕರ್ನಾಟಕ ಧ್ವಜವನ್ನು ಬಿಡುಗಡೆ ಮಾಡುತ್ತಿದ್ದೀರಿ. ಇದು ಸರಿಯೇ ಎಂದು ಬಿಜೆಪಿ ಪ್ರಶ್ನಿಸಿದೆ.

ನಾಡಹಬ್ಬಕ್ಕೆ ದಸರಾಕ್ಕೆ ಅನುದಾನ ನೀಡಲು ಹಿಂದಡಿಯಿಟ್ಟವರು ನೀವು, ವಿಶ್ವ ಕನ್ನಡ ಸಮ್ಮೇಳನ ಆಯೋಜಿಸಲು ಹಣ, ಸಮಯ ಇಲ್ಲ ಎಂದು ಧಿಕ್ಕರಿಸಿದವರು ನೀವು, ನಂತರ ಕನ್ನಡ ವಿರೋಧಿ ಟಿಪ್ಪು ಜಯಂತಿ ಆಚರಿಸಿದರಿ. ಇದನ್ನು ಕನ್ನಡದಮೇಲಿನ ಅಭಿಮಾನ ಎನ್ನಬೇಕೆ? ನಿಮ್ಮ ಅನಾಚಾರಗಳು ಜನರಿಗೆ ತಿಳಿಯುವುದಿಲ್ಲ ಎಂದುಕೊಂಡಿದ್ದೀರಾ? ಎಂದು ಬಿಜೆಪಿ ಪ್ರಶ್ನಿದಿದೆ. ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡಿರುವ ಹೊಸ ಕರ್ನಾಟಕ ಧ್ವಜವನ್ನು ಬಿಜೆಪಿ ವಿರೋಧಿಸುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಇದು ಬಿಜೆಪಿಯ ಪ್ರತ್ಯುತ್ತರ.

ಸತ್ಯ ಕಹಿಯಾಗಿರುತ್ತದೆ!

"ರಿಲಾಯನ್ಸ್ ಜೊತೆ ವ್ಯವಹಾರ ಒಪ್ಪಂದ ಮಾಡಿಕೊಂಡಿದ್ದು ಕೇಮದ್ರ ಸರ್ಕಾರವಲ್ಲ, ರಾಫೆಲ್. ಅಕಸ್ಮಾತ್ ಕಳೆದ ಆರು ದಶಕಗಳಿಂದ ಬಿಜೆಪಿಯೇ ದೇಶದಲ್ಲಿ ಆಡಳಿತ ನಡೆಸುತ್ತಿದ್ದರೆ ಯುದ್ಧ ವಿಮಾನಗಳಿಗಾಗಿ ಫ್ರಾನ್ಸ್, ರಷ್ಯಾದೆದುರು ಕೈಚಾಚುತ್ತಿರಲಿಲ್ಲ. ಇಷ್ಟೊತ್ತಿಗೆ ನಾವೇ ಅವನ್ನು ಬೇರೆ ದೇಶಕ್ಕೆ ರಪ್ತು ಮಾಡುತ್ತಿದ್ದೆವು" ಎಂದು ಬಿಜೆಪಿ ಪ್ರತಿಕ್ರಿಯಿಸಿದೆ. ರಫೆಲ್ ಒಪ್ಪಂದವನ್ನು ಎಚ್ ಎಎಲ್ ಜೊತೆ ಮಾಡಿಕೊಳ್ಳದೆ, ಅಂಬಾನಿ ಜೊತೆ ಮಾಡಿಕೊಂಡು ಉದ್ಯಮಿಗಳಿಗೆ ಮೋದಿ ಸರ್ಕಾರ ಆದ್ಯತೆ ನೀಡುತ್ತಿದೆ ಎಂಬುದು ಕಾಂಗ್ರೆಸ್ ಆರೋಪವಾಗಿತ್ತು.

ರೈತರ ಸಾಲಮನ್ನಾ ಬಗ್ಗೆ

ನಮ್ಮದು ರೈತಸ್ನೇಹಿ ಸರ್ಕಾರ. ಅದಕ್ಕೆಂದೇ ಮಹಅರಾಷ್ಟ್ರ, ಉತ್ತರ ಪ್ರದೇಶಗಳಲ್ಲಿ ರೈತರ ಸಾಲಮನ್ನಾ ಮಾಡಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್ ನ ಸಾಲವನ್ನೂ ಮನ್ನಾ ಮಾಡಿದ್ದೇವೆ. ಆದರೆ ರಾಜ್ಯದಲ್ಲೇಕೆ ಎಲ್ಲ ಸಾಲವನ್ನೂ ಮನ್ನಾ ಮಾಡಿಲ್ಲ. ಇದು ರೈತರ ಬಗೆಗಿನ ನಿಮ್ಮ ನಿಷ್ಕಾಳಜಿಗೆ ಸಾಕ್ಷಿಯಲ್ಲವೇ ಎದು ಬಿಜೆಪಿ ಪ್ರತಿಪ್ರಶ್ನೆ ಕೇಳಿದೆ. "ರಾಜ್ಯ ಸರ್ಕಾರವು 2017 ರಲ್ಲಿ ಒಟ್ಟು 8,165ಕೋಟಿ ರೂ. ಸಾಲಮನ್ನಾ ಮಾಡಿದೆ. ಕೋ ಆಪರೇಟಿವ್ ಬ್ಯಾಂಕ್ ಗಳಲ್ಲಿದ್ದ ರಾಜ್ಯದ ಒಟ್ಟು 22,27,506 ರೈತರ 50,000 ರೂ. ವರೆಗಿನ ಸಾಲಮನ್ನಾ ಆಗಿದೆ. ಇದೇ ನಿಟ್ಟಿನಲ್ಲಿ ರಾಷ್ಟ್ರೀಕೃತ ಹಾಗೂ ವಾಣಿಜ್ಯ ಬ್ಯಾಂಕ್ ಗಳಲ್ಲಿರುವ ರೈತರ ಸಾಲಮನ್ನಾ ಮಾಡಲು ಮೋದಿ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಆರೋಪಿಸಿತ್ತು.

ನಿಮ್ಮದು ಢೋಂಗಿ ಕನ್ನಡ ಪ್ರೇಮ!

ನಿಮ್ಮ ಢೋಂಗಿ ಕನ್ನಡ ಪ್ರೇಮ ನಮ್ಮ ಹಿಂದಿನ ಟ್ವೀಟ್ ಗಳಲ್ಲಿ ಬಯಲುಮಾಡಿದ್ದೇವೆ. ಬಿಜೆಪಿ ಪ್ರಾದೇಶಿಕ ಭಾಷೆಗಳಿಗೆ ಎಂದಿನಿಂದಲೂ ಪ್ರಾಶಸ್ತ್ಯ ನೀಡುತ್ತಲೇ ಬಂದಿದೆ. ದಶಕಗಳ ಕಾಲ ಆಳ್ವಿಕೆ ಮಾಡಿಯೂ ಕೂಡ ಕನ್ನಡ ಭಾಷೆಯಲ್ಲಿ ರೈಲ್ವೆ ಟಿಕೆಟ್ ಮುದ್ರಿಸಲು ವಿಫಲರಾದಿರಿ. ಅದನ್ನು ಕೂಡ ಮಾಡಿದ್ದು ನಮ್ಮ ಮೋದಿ ಸರ್ಕಾರ ಎಂದಿದೆ ಬಿಜೆಪಿ. ಕೇಂದ್ರ ಸರ್ಕಾರ ಬಲವಂತವಾಗಿ ಹಿಂದಿ ಹೇರಿಕೆ ಮಾಡುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ನೀಡಿದ ಪ್ರತಿಕ್ರಿಯೆ ಇದು.

ಕೇಂದ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಕೃತಜ್ಞತೆ ಹೇಳಬೇಕು!

ಕರ್ನಾಟಕದ ಹಿತಾಸಕ್ತಿಯನ್ನು ಬೆಂಬಲಿಸಿಯೇ ಕೇಂದ್ರ ಸರ್ಕಾರ ಕಾವೇರಿ ನಿರ್ವಹಣಾ ಮಂಡಳಿ ಸ್ಥಾಪನೆಯಾಗದಂತೆ ಸುಪ್ರೀಂ ಕೋರ್ಟಿನಲ್ಲಿ ಅಫಿಡವಿಟ್ ಸಲ್ಲಿಸಿತ್ತು. ಇದರಿಂದಾಗಿಯೇ ಸುಪ್ರೀಂ ಕೋರ್ಟಿನಲ್ಲಿ ಕರ್ನಾಟಕ ಸಮರ್ಥವಾಗಿ ವಾದಮಂಡಿಸಲು ಸಾಧ್ಯವಾಯ್ತು. ಅದರ ಫಲವಾಗಿಯೇ ಕರ್ನಾಟಕಕ್ಕೆ ಜಯ ದೊರಕಿತು. ಇದಕ್ಕಾಗಿ ಸಿದ್ದರಾಮಯ್ಯನವರೇ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಹೇಳಬೇಕು ಎಂದು ಬಿಜೆಪಿ ಹೇಳಿದೆ. "ಕನ್ನಡ ನಾಡು, ನುಡಿ ಹಾಗೂ ನೀರಿನ ವಿವಾದಗಳಲ್ಲಿ ಕೊಂಚವೂ ಚಕಾರವೆತ್ತದ ಕರ್ನಾಟಕ ಬಿಜೆಪಿ ಮುಖಂಡರು ಕರ್ನಾಟಕಕ್ಕೆ ಮೋಸ ಮಾಡುತ್ತಲೇ ಇದ್ದಾರೆ!" ಎಂಬ ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ಈ ರೀತಿ ಪ್ರತಿಕ್ರಿಯೆ ನೀಡಿದೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+