'ಕೆಪಿಸಿಸಿ ಅಧ್ಯಕ್ಷ ಡಿಕೆಶಿಯವರೇ ಸಿದ್ದರಾಮಯ್ಯನವರ ಮೌನ ತುಂಬಾ ಅಪಾಯಕಾರಿ'
ಬೆಂಗಳೂರು, ನ 24: ಸದಾ ಒಂದಲ್ಲಾ ಒಂದು ವಿಚಾರಗಳನ್ನು ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಸಮರ ನಡೆಸುವ ಬಿಜೆಪಿ ಮತ್ತು ಕಾಂಗ್ರೆಸ್ಸಿನ ಐಟಿ ಘಟಕ ಈಗ ವಿಧಾನ ಪರಿಷತ್ ಚುನಾವಣೆಯ ವಿಚಾರದಲ್ಲಿ ಟ್ವೀಟ್ ಮೂಲಕ ಕಾಲೆಳೆದುಕೊಳ್ಳುತ್ತಿವೆ.
ಕೊಡಗು ಜಿಲ್ಲೆಯಿಂದ ಪರಿಷತ್ತಿಗೆ ಕಾಂಗ್ರೆಸ್, ಡಾ. ಮಂಥರ್ ಗೌಡ ಅವರಿಗೆ ಟಿಕೆಟ್ ನೀಡಿತ್ತು. ಇವರು, ಬಿಜೆಪಿ ನಾಯಕ ಎ.ಮಂಜು ಅವರ ಪುತ್ರ. ಈ ಕಾರಣಕ್ಕಾಗಿ, ಅವರಿಗೆ ನೀಡಲಾಗಿದ್ದ ಜವಾಬ್ದಾರಿಯನ್ನು ರಾಜ್ಯ ಬಿಜೆಪಿ ಘಟಕ ಹಿಂದಕ್ಕೆ ಪಡೆದಿತ್ತು.
ಅದಕ್ಕೆ ಲೇವಡಿ ಮಾಡಿದ ಕಾಂಗ್ರೆಸ್ಸಿಗೆ ಪ್ರತಿ ಟ್ವೀಟ್ ಮಾಡಿ, ಸಿದ್ದರಾಮಯ್ಯನವರು ಮೌನವಾಗಿದ್ದರೆ ನಿಮಗೆ ತೊಂದರೆ ಕಟ್ಟಿಟ್ಟಬುತ್ತಿ, ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ಉಳಿಸಿಕೊಳ್ಳಿ ಎಂದು ಬಿಜೆಪಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಕಾಲೆಳೆದಿದೆ.
ಬೆಂಗಳೂರು ಸಬ್ ಅರ್ಬನ್ ರೈಲು ವಿಚಾರದಲ್ಲಿ ಟ್ವೀಟ್ ಮಾಡಿರುವ ಕೆಪಿಸಿಸಿ, " ಬಿಜೆಪಿ ಹಳಿ ಇಲ್ಲದ ರೈಲು ಬಿಟ್ಟಿದ್ದೇ ಹೆಚ್ಚು! ಯೋಜನೆ ಪೂರ್ಣಗೊಳಿಸಲು 6 ವರ್ಷಗಳ ಕಾಲಮಿತಿಯಲ್ಲಿ ಯಾವುದೇ ಪ್ರಗತಿ ಇಲ್ಲದೆ ಒಂದು ವರ್ಷ ಕಳೆದುಹೋಗಿದೆ. ಡಬಲ್ ಇಂಜಿನ್ ಸರ್ಕಾರದಲ್ಲಿ ಭಾರಿ ಅಭಿವೃದ್ಧಿಯಾಗುತ್ತದೆ ಎಂದ ಬಿಜೆಪಿಯ ಅಸಲಿತನ ಇದು. ಈ ವಿಳಂಬ ಚುನಾವಣೆಯ ಪಿಆರ್ ಸ್ಟಂಟ್ಗಾಗಿಯೇ?" ಎಂದು ಪ್ರಶ್ನಿಸಿತ್ತು.

ಎ.ಮಂಜು ಅವರ ವಿಚಾರದಲ್ಲಿ ಟ್ವೀಟ್ ಮಾಡಿರುವ ಕೆಪಿಸಿಸಿ ಐಟಿ ಘಟಕ
ಇನ್ನು ಬಿಜೆಪಿ ಮುಖಂಡ ಎ.ಮಂಜು ಅವರ ವಿಚಾರದಲ್ಲಿ ಟ್ವೀಟ್ ಮಾಡಿರುವ ಕೆಪಿಸಿಸಿ ಐಟಿ ಘಟಕ, "ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಂಬಂತೆ ಮಂಥರ್ ಗೌಡ ಕಾಂಗ್ರೆಸ್ನಿಂದ ಸ್ಪರ್ಧಿಸುತ್ತಿರುವುದಕ್ಕೆ ಎ. ಮಂಜು ಅವರ ವಿರುದ್ಧ ಬಿಜೆಪಿಯ ಶಿಸ್ತು ಕ್ರಮ! ಲಖನ್ ಜಾರಕಿಹೊಳಿ ಬಂಡಾಯಕ್ಕೆ ಬಾಲಚಂದ್ರ & ರಮೇಶ್ ಜಾರಕಿಹೊಳಿ ವಿರುದ್ಧವೂ ಇದೇ ಶಿಸ್ತು ಕ್ರಮ ಕೈಗೊಳ್ಳುವ ಧೈರ್ಯವಿದೆಯೇ ಬಿಜೆಪಿಗೆ? ಅಥವಾ ಉತ್ತರನ ಪುರುಷ ಒಲೆಯ ಮುಂದೆ ಮಾತ್ರವೇ?

ಡಿಕೆಶಿಯವರೇ ಸಿದ್ದರಾಮಯ್ಯನವರ ಮೌನ ತುಂಬಾ ಅಪಾಯಕಾರಿ
ಸಿದ್ದರಾಮಯ್ಯನವರನ್ನು ಉಲ್ಲೇಖಿಸಿ ಬಿಜೆಪಿಯ ಐಟಿ ಶೆಲ್ ಮಾಡಿರುವ ಟ್ವೀಟ್ ಹೀಗಿದೆ, "ಕೆಪಿಸಿಸಿ ಅಧ್ಯಕ್ಷ @DKShivakumar ಅವರೇ, ಸಿದ್ದರಾಮಯ್ಯ ಅವರ ಮೌನ ತುಂಬಾ ಅಪಾಯಕಾರಿ.
ಮುನಿಸಿಕೊಂಡಾಗಲೆಲ್ಲ ಪ್ರಕೃತಿ ಚಿಕಿತ್ಸೆಗೆ ತೆರಳುತ್ತಾರೆ. ಅಲ್ಲಿಂದ ಪ್ರಯೋಗಿಸುವ ರಾಜಕೀಯ ದಾಳ ಯಾರ್ಯಾರ ಬುಡ ಅಲ್ಲಾಡಿಸಿದೆ ಎಂಬುದು ನಿಮಗೆ ನೆನಪಿರಬಹುದಲ್ಲವೇ? ಕೆಪಿಸಿಸಿ ಅಧ್ಯಕ್ಷ ಪಟ್ಟವನ್ನು ಭದ್ರವಾಗಿ ಹಿಡಿದಿಟ್ಟುಕೊಳ್ಳಿ" ಎಂದು ಬಿಜೆಪಿ ಡಿಕೆಶಿಗೆ ವ್ಯಂಗ್ಯವಾಗಿ ಸಲಹೆಯನ್ನು ನೀಡಿದೆ.

ಪದಾಧಿಕಾರಿಗಳ ಪಟ್ಟಿ ಬಿಡುಗಡೆ ವಿಚಾರದಲ್ಲೂ ಡಿಕೆಶಿ ಹಾಗೂ ಸಿದ್ದರಾಮಯ್ಯ ಮನಸ್ತಾಪ
ಮತ್ತೊಂದು ಟ್ವೀಟ್ ಅನ್ನು ಮಾಡಿರುವ ಬಿಜೆಪಿ ರಾಜ್ಯ ಘಟಕದ ಐಟಿ ಘಟಕ, "ಪದಾಧಿಕಾರಿಗಳ ಪಟ್ಟಿ ಬಿಡುಗಡೆ ವಿಚಾರದಲ್ಲೂ ಡಿಕೆಶಿ ಹಾಗೂ ಸಿದ್ದರಾಮಯ್ಯ ಮಧ್ಯೆ ಯುದ್ಧ ನಡೆಯುತ್ತಿದೆ.
ಆದರೆ ಪರಿಷತ್ ಚುನಾವಣೆ ವಿಚಾರದಲ್ಲಿ ಬೇಸರಗೊಂಡಿರುವ ಸಿದ್ದರಾಮಯ್ಯ ಅವರೀಗ ಬೇರೆಯದೇ ಲೆಕ್ಕಾಚಾರದಲ್ಲಿ ತೊಡಗಿದಂತೆ ಕಾಣುತ್ತಿದೆ. ಸಿದ್ದರಾಮಯ್ಯನವರೇ, ನಿಮ್ಮ ಮೌನವು ಬೇರೇನೋ ಸೂಚಿಸುತ್ತಿರುವುದು ನಿಜವಲ್ಲವೇ?" ಎಂದು ಸಿದ್ದರಾಮಯ್ಯನವರನ್ನು ಬಿಜೆಪಿ ಪ್ರಶ್ನಿಸಿದೆ.

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ನಡೆಯುವ ಚುನಾವಣೆ
"ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ನಡೆಯುವ ಚುನಾವಣೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಒಳಜಗಳ ಬಯಲಾಗಿದೆ. ಅಭ್ಯರ್ಥಿ ಆಯ್ಕೆ, ಪ್ರಚಾರ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳಿಂದಲೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ದೂರ ಉಳಿದಿದ್ದಾರೆ. ಏನಿದರರ್ಥ?. ಸಿದ್ದರಾಮಯ್ಯ ಹಾಗೂ ಡಿಕೆಶಿ ಕಾಂಗ್ರೆಸ್ ಪಕ್ಷದ ಎರಡು ಕಣ್ಣು ಇದ್ದಂತೆ ಎಂದು ಪರಮೇಶ್ವರ್ ಅವರು ಇತ್ತೀಚೆಗೆ ಬಣ್ಣಿಸಿದ್ದರು. ಆದರೆ ಪರಿಷತ್ ಚುನಾವಣೆ ಅಭ್ಯರ್ಥಿ ಆಯ್ಕೆಯ ವೇಳೆ ಈ ಎರಡು ಕಣ್ಣುಗಳ ದೃಷ್ಟಿ ಸಾಮರ್ಥ್ಯ ಬಯಲಾಗಿದೆ. ಡಿಕೆಶಿ ನೀಡಿದ ಪಟ್ಟಿಯ ಬಗ್ಗೆ ಸಿದ್ದರಾಮಯ್ಯ ದಿವ್ಯ ಮೌನ ತಳೆದಿರುವುದೇಕೆ?" ಇದು ಬಿಜೆಪಿ ಮಾಡಿರುವ ಟ್ವೀಟ್.












Click it and Unblock the Notifications