ಅಕ್ಟೋಬರ್ ಒಳಗಷ್ಟೇ ಡಿಕೆಶಿಗೆ ಸಿಎಂ ಯೋಗ, ಇಲ್ಲದಿದ್ರೆ ಸನ್ಯಾಸತ್ವ: ಏನಿದು ಭವಿಷ್ಯವಾಣಿ?
ರಾಜ್ಯ ಕಾಂಗ್ರೆಸ್ನಲ್ಲಿ ಅಧಿಕಾರದ ಹಂಚಿಕೆ, ಸಿಎಂ ಬದಲಾವಣೆ ವಿಚಾರಗಳು ಬೂದಿಮುಚ್ಚಿದ ಕೆಂಡಂತಿವೆ. ಹೈಕಮಾಂಡ್ ಈ ಬಗ್ಗೆ ಆಗಾಗ ವಾರ್ನಿಂಗ್ ಕೊಡುತ್ತಿದ್ದರೂ ಈ ವಿಚಾರಗಳು ಮುನ್ನೆಲೆಗೆ ಬರುತ್ತಲೇ ಇವೆ. ಸಿಎಂ ಬದಲಾವಣೆ ವಿಚಾರವೆಲ್ಲವೂ ಸುಳ್ಳು. ಈ ಬಗ್ಗೆ ಎಲ್ಲರೂ ಬಾಯಿ ಮುಚ್ಚಿಕೊಂಡಿರಬೇಕು ಎಂದು ವಾರ್ನಿಂಗ್ ಆಗಿತ್ತು. ಆದರೆ ಸಿದ್ದರಾಮಯ್ಯ ಅವರು ಸದನದಲ್ಲೇ ಮುಂದಿನ ಬಜೆಟ್ ಕೂಡ ನಾನೇ ಮಂಡಿಸುತ್ತೇನೆ ಎನ್ನುವ ಮೂಲಕ ಮತ್ತೆ ಸಿಎಂ ಬದಲಾವಣೆ ವಿಚಾರಕ್ಕೆ ಬ್ರೇಕ್ ಹಾಕಿದ್ದಾರೆ. ಮತ್ತೊಂದೆಡೆ ಅಕ್ಟೋಬರ್ ವೇಳೆಗೆ ಅಧಿಕಾರ ಹಸ್ತಾಂತರವಾದರೆ ಮಾತ್ರ ಡಿಕೆ ಶಿವಕುಮಾರ್ಗೆ ಸಿಎಂ ಹುದ್ದೆ ಎಂದು ಭವಿಷ್ಯವಾಣಿಯೊಂದು ಕೇಳಿಬಂದಿದೆ.
ಹೌದು, ಸಿಎಂ ರೇಸ್ನಲ್ಲಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು ಈ ವರ್ಷದೊಳಗೆ ಸಿಎಂ ಆಗುತ್ತಾರೆ ಎಂದು ಹಲವು ಭವಿಷ್ಯವಾಣಿ ಕೇಳಿಬಂದಿದೆ. ವಿಪಕ್ಷಗಳು ಕೂಡ ತಲೆ ಮೇಲೆ ಹೊಡೆದಂತೆ ಸಿಎಂ ಕುರ್ಚಿ ಬದಲಾವಣೆ ಬಗ್ಗೆ ಹೇಳಿಕೆ ನೀಡುತ್ತಿವೆ. ಇದೀಗ ಡಿಕೆ ಶಿವಕುಮಾರ್ಗೆ ಅವರು ಅಕ್ಟೋಬರ್ ವೇಳೆಗೆ ಅಧಿಕಾರ ಹಸ್ತಾಂತರವಾದರೆ ಮಾತ್ರ ಸಿಎಂ ಹುದ್ದೆ, ಇಲ್ಲದಿದ್ದರೆ ರಾಜಕೀಯ ಸನ್ಯಾಸತ್ವ ಸ್ವೀಕರಿಸಬೇಕು ಎಂದು ರಾಜಕೀಯ ವಲಯದಲ್ಲಿ ಭವಿಷ್ಯವಾಣಿ ಸದ್ದು ಮಾಡುತ್ತಿದೆ.

ರಾಜ್ಯ ಬಿಜೆಪಿಯು ಈ ರೀತಿ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಭವಿಷ್ಯವಾಣಿ ಹೇಳಿದೆ. ʼಸಿಎಂ ಸಿದ್ದರಾಮಯ್ಯ ಅವರು ತಮ್ಮ ಬೆಂಬಲಿಗರ ಮೂಲಕ ತಮ್ಮ ಕುರ್ಚಿಯ ನಟ್ಟು-ಬೋಲ್ಟು ಟೈಟ್ ಮಾಡುತ್ತಿದ್ದಾರೆ. ಮುಂದಿನ ಬಾರಿಯೂ ತಾವೇ ಬಜೆಟ್ ಬಜೆಟ್ ಮಂಡಿಸುತ್ತೇನೆ ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿದ್ದಾರೆ ಎಂದು ಹೇಳಿದೆ.
ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಈಗ ರಾಜಕೀಯದಲ್ಲಿ ನಿರ್ಣಾಯಕ ಯುದ್ಧ. ಒಪ್ಪಂದದ ಪ್ರಕಾರ ಅಕ್ಟೋಬರ್ ವೇಳೆಗೆ ಅಧಿಕಾರ ಹಸ್ತಾಂತರವಾದರೆ ಮಾತ್ರ ಸಿಎಂ ಹುದ್ದೆ, ಇಲ್ಲದಿದ್ದರೆ ರಾಜಕೀಯ ಸನ್ಯಾಸತ್ವ ಸ್ವೀಕರಿಸುವ ಸನ್ನಿವೇಶ ಬರಲಿದೆ ಎಂದು ವ್ಯಂಗ್ಯ ಮಾಡಿದೆ. ಸಿದ್ದರಾಮಯ್ಯ ಅವರ ಆಟದ ಮುಂದೆ ಈಗ ಡಿಕೆಶಿ ನಿಸ್ತೇಜರಾಗಿದ್ದಾರೆ. ಡಿಕೆಶಿಗೆ ಸಿಎಂ ಸ್ಥಾನ ಮರೀಚಿಕೆಯಾಗಿದೆ. ಕರ್ನಾಟಕ ಸರ್ಕಾರದ ಆಂತರಿಕ ಕಲಹಗಳು ರಾಜ್ಯದ ಅಭಿವೃದ್ಧಿಗೆ ಹಿನ್ನಡೆ ಉಂಟುಮಾಡುತ್ತಿವೆ ಎಂದೂ ಬಿಜೆಪಿ ವಾಗ್ದಾಳಿ ನಡೆಸಿದೆ.

ಇದೇ ವಿಚಾರವಾಗಿ ಮಾತನಾಡಿರುವ ವಿಪಕ್ಷ ನಾಯಕ ಆರ್.ಅಶೋಕ್, ಮುಖ್ಯಮಂತ್ರಿ ಆಗಲು ತುದಿಗಾಲಿನಲ್ಲಿ ನಿಂತಿರುವ ಡಿಸಿಎಂ ಡಿಕೆ ಶಿವಕುಮಾರ್ ಸಾಹೇಬರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಅವರ ಬಣ ದಿನಕ್ಕೊಂದು ಶಾಕ್ ಕೊಡುತ್ತಲೇ ಇದೆ ಎಂದು ಕುಟುಕಿದ್ದಾರೆ. ಅಧಿಕಾರವನ್ನು ಒದ್ದು ಕಿತ್ತುಕೊಳ್ಳುತ್ತೇನೆ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಅವರ ಆರ್ಭಟಕ್ಕೆ ಕೂಲ್ ಆಗಿಯೇ ಟಕ್ಕರ್ ಕೊಟ್ಟಿರುವ ಸಿಎಂಸಿದ್ದರಾಮಯ್ಯನವರು ಮುಂದಿನ ಬಜೆಟ್ ಕೂಡ ನಾನೇ ಮಂಡಿಸಲಿದ್ದೇನೆ ಎನ್ನುವ ಮೂಲಕ ಅಧಿಕಾರ ಹಂಚಿಕೆ ಪ್ರಹಸನಕ್ಕೆ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ ಎಂದು ಅಶೋಕ್ ಹೇಳಿದ್ದಾರೆ. ಈ ಹಿಂದೆಯೂ ಅಶೋಕ್ ಅವರು ಕಾಂಗ್ರೆಸ್ನಲ್ಲಿ ಸಿಎಂ ಸ್ಥಾನ ಬದಲಾಗುವ ಬಗ್ಗೆ ಭವಿಷ್ಯ ನುಡಿದಿದ್ರು. ಇದೇ ವರ್ಷ ಅವರು ಡಿಕೆಶಿ ಸಿಎಂ ಆಗ್ತಾರೆ ಎಂದೂ ಹೇಳಿದ್ದರು.












Click it and Unblock the Notifications