ಮಸೀದಿ ಮುಂದೆ ಹಂದಿಮಾಂಸದ ಸಮಾರಾಧನೆ ನಡೆದ್ರೆ ಸಿಎಂ ಸುಮ್ನಿರ್ತಾರಾ?
ಆಳಂದ, ಕಲಬುರಗಿ ನ 2: ಆಹಾರ ಪದ್ದತಿ ಅವರವರ ವೈಯಕ್ತಿಕ ವಿಚಾರವಾದರೂ, ಜವಾಬ್ದಾರಿಯುತ ಸ್ಥಾನದಲ್ಲಿರುವವರು ತೂಕಬದ್ದವಾಗಿ ಹೇಳಿಕೆ ನೀಡಬೇಕೆಂದು ಉಡುಪಿ ಪೇಜಾವರ ಶ್ರೀಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲಹೆ ನೀಡಿದ್ದಾರೆ.
ಗೋಮಾಂಸ ಇದುವರೆಗೂ ತಿಂದಿಲ್ಲ, ತಿನ್ನಬೇಕು ಅನಿಸಿದರೆ ತಿನ್ನುತ್ತೇನೆ ಎನ್ನುವ ಮುಖ್ಯಮಂತ್ರಿಗಳ ಹೇಳಿಕೆ ನನಗೆ ಬೇಸರ ತಂದಿದೆ. ಮಸೀದಿ ಮುಂದೆ ಹಂದಿಮಾಂಸದ ಸಮಾರಾಧನೆ ನಡೆದರೆ ಮುಖ್ಯಮಂತ್ರಿಗಳು ಸುಮ್ಮನೆ ಇರ್ತಾ ಇದ್ರಾ ಎಂದು ಪೇಜಾವರ ಶ್ರೀಗಳು ಪ್ರಶ್ನಿಸಿದ್ದಾರೆ. (ಗೋಮಾಂಸ ತಿನ್ನಬೇಕೆನಿಸಿದರೆ ತಿನ್ನುತ್ತೇನೆ)
ಸಿಎಂ ಸ್ಥಾನದಲ್ಲಿ ಇರುವವರು ಇತರರ ಓಲೈಕೆಗಾಗಿ ಬಹುಸಂಖ್ಯಾತರ ಭಾವನೆಗೆ ಧಕ್ಕೆ ತರುವಂತಹ ಹೇಳಿಕೆಯನ್ನು ನೀಡಬಾರದು. ಗೋಹತ್ಯೆ ಮತ್ತು ಗೋಮಾಂಸ ಸೇವನೆಯನ್ನು ನಿಷೇಧಿಸಬೇಕು ಎನ್ನುವುದು ಈಗಲೂ ನನ್ನ ನಿಲುವು ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.
ಆಳಂದ ತಾಲ್ಲೂಕು ಧುತ್ತರಗಾಂವ ಹಳ್ಳಿಯಲ್ಲಿ ಶ್ರಮಜೀವಿಗಳ ವೇದಿಕೆ ಹಮ್ಮಿಕೊಂಡಿದ್ದ 'ವ್ಯಸನಮುಕ್ತ ಗ್ರಾಮ ನಿರ್ಮಾಣ ಪಾದಯಾತ್ರೆ'ಗೆ ಶ್ರೀಗಳು ಚಾಲನೆ ನೀಡಿ ಮಾತನಾಡುತ್ತಾ, ನಾವು ಉಪದೇಶವನ್ನಷ್ಟೇ ಮಾಡುತ್ತೇವೆ ಸ್ವೀಕರಿಸುವುದು ಬಿಡುವುದು ಅವರವರಿಗೆ ಬಿಟ್ಟ ವಿಚಾರ ಎಂದು ಶ್ರೀಗಳು ಹೇಳಿದ್ದಾರೆ.
ಭಾನುವಾರ (ನ 1) ಕಲಬುರಗಿ ನಗರದ ದಲಿತ ಕೇರಿಗೆ ಭೇಟಿ ನೀಡಿದ ಪೇಜಾವರ ಶ್ರೀಗಳು, ಹಲವಾರು ದಲಿತ ದಂಪತಿಗಳಿಂದ ಪಾದಪೂಜೆಯನ್ನು ಸ್ವೀಕರಿಸಿದರು.
ಹಂದಿಮಾಂಸವನ್ನೂ ತಿನ್ನುತ್ತೇನೆ, ಸಿದ್ದರಾಮಯ್ಯ: ಮುಂದೆ ಓದಿ..
ಭಗವಾನ್ ಜೊತೆ ಚರ್ಚೆಗೆ ನಾನು ರೆಡಿ
ಮುಖ್ಯಮಂತ್ರಿಗಳ ಹೇಳಿಕೆಯಿಂದ ಹಿಂದೂಗಳಲ್ಲಿ ಮತ್ತಷ್ಟು ಜಾಗೃತಿಯನ್ನುಂಟು ಮಾಡುವುದಂತೂ ಸಹಜ. ಭಗವಾನ್ ವಿಚಾರದಲ್ಲಿ ಈಗಾಗಲೇ ಅವರನ್ನು ಚರ್ಚೆಗೆ ಆಹ್ವಾನಿಸಿದ್ದೇನೆ, ಅವರು ಬಂದರೆ ಬಹಿರಂಗ ಚರ್ಚೆಗೆ ನಾನು ಸಿದ್ದ ಎಂದು ಪೇಜಾವರ ಶ್ರೀಗಳು ಪುನರುಚ್ಚಿಸಿದ್ದಾರೆ.
ಹಂದಿ ಮಾಂಸವನ್ನೂ ತಿನ್ನುತ್ತೇನೆ
ಗೋಮಾಂಸ ವಿಚಾರದಲ್ಲಿ ತನ್ನ ಹೇಳಿಕೆಗೆ ವ್ಯಂಗ್ಯವಾಡಿದ್ದ ಜಗದೀಶ್ ಶೆಟ್ಟರ್ ಅವರಿಗೆ ತಿರುಗೇಟು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಂದಿ ಮಾಂಸವನ್ನೂ ತಿನ್ನೋಣ ಬಿಡಿ. ಈ ಬಿಜೆಪಿಯವರು ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಕೆಲಸವನ್ನು ಮಾಡುತ್ತಿದ್ದಾರೆಂದು ಹೇಳಿದ್ದಾರೆ.
ಜಗದೀಶ್ ಶೆಟ್ಟರ್ ಹೇಳಿದ್ದು
ಇಷ್ಟಪಟ್ಟರೆ ಗೋಮಾಂಸವನ್ನೂ ತಿನ್ನುತ್ತೇನೆ, ಇದನ್ನು ಕೇಳೋಕೆ ಸಂಘ ಪರಿವಾರದವರು ಯಾರು ಎಂದು ಸಿಎಂ ಕಿಡಿಕಾರಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಗೋಮಾಂಸ ತಿನ್ನುವವರಿಗೆ ಹಂದಿ ಮಾಂಸ ತಿನ್ನುವ ಆಸೆ ಇರೋಲ್ವಾ? ಅದನ್ನೂ ಸೇವನೆ ಮಾಡುತ್ತಾರೆ ಎಂದಿದ್ದರು.
ನಾನೂ ಒಬ್ಬ ಹಿಂದೂ
ನಾನೂ ಒಬ್ಬ ಹಿಂದೂ, ಜನರು ಅವರವರ ಇಷ್ಟದಂತೆ ಆಹಾರ ಸೇವನೆ ಮಾಡುತ್ತಾರೆ. ಯಾವ ಆಹಾರ ಸೇವಿಸಬೇಕೆಂದು ಬಿಜೆಪಿಯಿಂದ ಅನುಮತಿ ಪಡೆದು ಆ ಮೇಲೆ ಸ್ವೀಕರಿಸಬೇಕಾ ಎಂದು ಸಚಿವ ಶಿವರಾಜ್ ತಂಗಡಗಿ ಬಿಜೆಪಿ ವಿರುದ್ದ ಹರಿಹಾಯ್ದಿದ್ದಾರೆ.
ಅದಕ್ಕೇ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಜಾಗವಿಲ್ಲ
ಸಸ್ಯಾಹಾರಿಗಳು ಶಾಖಾಹಾರಿಗಳಾಗುತ್ತಿದ್ದಾರೆ. ಅದಕ್ಕೇ ನೋಡಿ, ಯಾವುದೇ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಜನ ತುಂಬಿಕೊಂಡಿರುತ್ತಾರೆಂದು ಚಿತ್ರದುರ್ಗದಲ್ಲಿ ಸಮಾಜ ಕಲ್ಯಾಣ ಸಚಿವ ಎಚ್ ಆಂಜನೇಯ ಹೇಳಿದ್ದಾರೆ.