ಸಚಿನ್, ಗೆಹ್ಲೋಟ್ ಇಬ್ಬರೂ ರಾಜಸ್ತಾನ ವಿಧಾನಸಭಾ ಕಣದಲ್ಲಿ; 'ಕೈ' ಚತುರ ನಡೆ
ಸಚಿನ್ ಪೈಲಟ್ ಹಾಗೂ ಅಶೋಕ್ ಗೆಹ್ಲೋಟ್ ಇಬ್ಬರೂ ಡಿಸೆಂಬರ್ 7ರಂದು ನಡೆಯುವ ರಾಜಸ್ತಾನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ. ಈ ಅಂಶವನ್ನು ನವದೆಹಲಿಯಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿ ವೇಳೆ ತಿಳಿಸಿದ್ದಾರೆ. ನಾಯಕತ್ವ ವಿಚಾರದಲ್ಲಿ ಕಾಂಗ್ರೆಸ್ ನೊಳಗೆ ಭಾರೀ ತಿಕ್ಕಾಟ ಇದೆ ಎಂಬ ವರದಿ ಹಿನ್ನೆಲೆಯಲ್ಲಿ ಈ ನಡೆಗೆ ಭಾರೀ ಮಹತ್ವ ಸಿಕ್ಕಿದೆ.
"ನಾವಿಬ್ಬರೂ, ನಾನು ಹಾಗೂ ಸಚಿನ್ ಪೈಲಟ್ ರಾಜಸ್ತಾನ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತೇವೆ" ಎಂದು ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಆ ವೇಳೆ ಅವರ ಪಕ್ಕದಲ್ಲೇ ಸಚಿನ್ ಪೈಲಟ್ ಕೂತಿದ್ದರು.
ಸಚಿನ್ ಮಾತನಾಡಿ, ಕಾಂಗ್ರೆಸ್ ಅಧ್ಯಕ್ಷರಾದ ರಾಹುಲ್ ಗಾಂಧಿ ಸೂಚನೆ ಹಾಗೂ ಗೆಹ್ಲೋಟ್ ಜೀ ಮನವಿ ಮೇರೆಗೆ ಈ ಚುನಾವಣೆಗೆ ಸ್ಪರ್ಧೆ ಮಾಡುವುದಕ್ಕೆ ನಾನು ನಿರ್ಧಾರ ಮಾಡಿದೆ ಎಂದು ಹೇಳಿದ್ದಾರೆ.

ಇವರಿಬ್ಬರನ್ನೂ ರಾಜಸ್ತಾನದಲ್ಲಿ ಕಾಂಗ್ರೆಸ್ ನ ಮುಖ್ಯಮಂತ್ರಿ ಅಭ್ಯರ್ಥಿಗಳು ಎಂದೇ ಬಿಂಬಿಸಲಾಗಿದೆ. ಸದ್ಯಕ್ಕೆ ರಾಜಸ್ತಾನದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದು, ಆಡಳಿತ ವಿರೋಧಿ ಅಲೆ ಕಂಡುಬರುತ್ತಿದೆ. ಅದರ ಲಾಭ ಪಡೆದು, ಗದ್ದುಗೆ ಏರುವ ಲೆಕ್ಕಾಚಾರ ಕಾಂಗ್ರೆಸ್ ನದಾಗಿದೆ.
ಒಂದು ವೇಳೆ ರಾಜಸ್ತಾನದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಏರುವ ಸನ್ನಿವೇಶ ನಿರ್ಮಾಣವಾದರೆ ಆಗ ಇಬ್ಬರ ಮಧ್ಯೆ ಮುಖ್ಯಮಂತ್ರಿ ಹುದ್ದೆಗಾಗಿ ಹಗ್ಗ ಜಗ್ಗಾಟ ಆಗಬಾರದು ಎಂಬ ಕಾರಣಕ್ಕೆ ಪಕ್ಷದಿಂದ ಇಬ್ಬರನ್ನೂ ಕಣಕ್ಕೆ ಇಳಿಸಲಾಗುತ್ತಿದೆ.
ಆದರೆ, ಪಕ್ಷದ ಒಂದು ಗುಂಪಿನವರು ಹೇಳುವುದೇ ಬೇರೆ. ಇಬ್ಬರೂ ಚುನಾವಣೆಗೆ ಸ್ಪರ್ಧೆ ಮಾಡದೆ ಪ್ರಚಾರದ ಜವಾಬ್ದಾರಿಯನ್ನು ಮಾತ್ರ ವಹಿಸಿಕೊಳ್ಳಬೇಕು. ಏಕೆಂದರೆ, ಜನರನ್ನು ಆಕರ್ಷಿಸುವ ಶಕ್ತಿ ಇಬ್ಬರೂ ನಾಯಕರಿಗಿದೆ ಎಂಬ ಭಾವನೆ ಅವರದು.
ಮತ್ತೊಂದು ಗುಂಪಿಗೆ, ಅಶೋಕ್ ಗೆಹ್ಲೋಟ್ ಸರ್ದಾರ್ ಪುರ್ ನಿಂದ ಹಾಗೂ ಸಚಿನ್ ಪೈಲಟ್ ತಾವೀಗ ಸ್ಪರ್ಧೆ ಮಾಡುತ್ತಿರುವ ಅಥವಾ ತಮ್ಮ ತಂದೆಯವರು ಸಂಸದರಾಗಿದ್ದ ಕ್ಷೇತ್ರದ ಪೈಕಿ ಒಂದರಿಂದ ಸ್ಪರ್ಧೆ ಮಾಡಬೇಕು ಎಂಬ ಅಭಿಪ್ರಾಯ ಇದೆ.
ಮಹತ್ವದ ಬೆಳವಣಿಗೆಯೊಂದರಲ್ಲಿ ದೌಸಾದ ಬಿಜೆಪಿ ಸಂಸದರಾದ ಹರೀಶ್ ಮೀನಾ ಕಾಂಗ್ರೆಸ್ ಗೆ ಸೇರ್ಪಡೆ ಆಗಿದ್ದಾರೆ. ಆದರೆ ರಾಜಸ್ತಾನ ಕಾಂಗ್ರೆಸ್ ನಲ್ಲಿ ಒಂದು ವಿಷಯ ಬಲವಾಗಿ ಬೇರೂರಿದೆ. ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ನಿಷ್ಠರು ಎಂಬ ವಿಭಜನೆ ಆಗಿದೆ ಎಂಬ ಚರ್ಚೆ ಜಾರಿಯಲ್ಲಿದೆ. ರಾಜಸ್ತಾನ ವಿಧಾನಸಭೆ ಚುನಾವಣೆ ಫಲಿತಾಂಶ ಡಿಸೆಂಬರ್ 11ರಂದು ಬರಲಿದ್ದು, ಆಗ ಇದು ನಿಜವೋ ಸುಳ್ಳೋ ಎಂಬುದು ಗೊತ್ತಾಗಲಿದೆ.











Click it and Unblock the Notifications