ಭಾರತ-ಪಾಕಿಸ್ತಾನ ಮಧ್ಯದ ಉದ್ವಿಗ್ನ ಸನ್ನಿವೇಶದಲ್ಲಿ ರದ್ದಾದ ಮದುವೆ
ಬರ್ಮರ್ (ರಾಜಸ್ತಾನ), ಮಾರ್ಚ್ 5: ಅಜ್ಜಿಗೆ ಅರಿವೆ ಚಿಂತೆಯಾದರೆ, ಮೊಮ್ಮಗಳಿಗೆ ಮದುವೆ ಚಿಂತೆ ಅನ್ನೋ ಮಾತೊಂದಿದೆ. ಅಂದರೆ ತಂತಮ್ಮ ದುಃಖಗಳು ತಮಗೆ ದೊಡ್ಡದು ಎಂಬುದನ್ನು ಹೇಳುವುದಕ್ಕೆ ಈ ಮಾತು ಬಳಸುತ್ತಾರೆ. ಈ ವ್ಯಕ್ತಿಯ ಸಮಸ್ಯೆ ಕೂಡ ಅಂಥದ್ದೇ. ಭಾರತದ ಈ ವರ ಮಹಾಶಯನಿಗೆ ಪಾಕಿಸ್ತಾನದ ವಧುವಿನ ಜತೆ ಮಾರ್ಚ್ ಎಂಟಕ್ಕೆ ಮದುವೆ ನಿಗದಿ ಆಗಿತ್ತು.
ಪುಲ್ವಾಮಾ ಉಗ್ರ ದಾಳಿ ನಂತರ ಎರಡೂ ದೇಶಗಳ ಮಧ್ಯೆ ಉದ್ವಿಗ್ನ ಸನ್ನಿವೇಶ ನಿರ್ಮಾಣ ಆಗಿದ್ದರಿಂದ ಮದುವೆ ಮುಂದಕ್ಕೆ ಹೋಗಿದೆ. ರಾಜಸ್ತಾನದ ಬರ್ಮರ್ ಜಿಲ್ಲೆಯ ಖೇಜದ್ ಕಾ ಪಾರ್ ಹಳ್ಳಿಯಾತ ಈ ಮಹೇಂದ್ರ ಸಿಂಗ್. ಕಳೆದ ಶನಿವಾರಕ್ಕೆ ಥಾರ್ ಎಕ್ಸ್ ಪ್ರೆಸ್ ನ ಟಿಕೆಟ್ ಕೂಡ ಬುಕ್ ಮಾಡಿದ್ದರು. ಪಾಕಿಸ್ತಾನದ ಸಿಂಧ್ ಪ್ರಾಂತ್ಯ ಸಿನೋಯಿ ಎಂಬ ಹಳ್ಳಿಯ ಚಗನ್ ಕನ್ವರ್ ಜತೆಗೆ ಮಹೇಂದ್ರ ಸಿಂಗ್ ವಿವಾಹ ಆಗಬೇಕಿತ್ತು.
ಪಾಕಿಸ್ತಾನದ ದ್ರೋಣ್ ಹೊಡೆದುರುಳಿಸಿದ ಸುಖೋಯ್
ರೈಲ್ವೆ ಇಲಾಖೆ ಮಾಹಿತಿ ಪ್ರಕಾರ, ಈ ರೈಲಿನ ಕಾರ್ಯ ಚಟುವಟಿಕೆಯನ್ನೇ ರದ್ದು ಮಾಡಲಾಗಿದೆ. ಎರಡೂ ದೇಶಗಳ ಮಧ್ಯೆ ಉದ್ವಿಗ್ನ ವಾತಾವರಣ ಇರುವುದರಿಂದ ಈ ರೈಲು ಸೇವೆಯನ್ನು ಪಾಕ್ ಅಧಿಕಾರಿಗಳು ರದ್ದು ಮಾಡಿದ್ದಾರೆ. ಅಂದ ಹಾಗೆ ಪಾಕಿಸ್ತಾನದ ಲಾಹೋರ್ ನಿಂದ ಭಾರತದ ಅಟ್ಟಾರಿ ತನಕ ಸೋಮವಾರ ಹಾಗೂ ಗುರುವಾರ ರೈಲು ಸಂಚಾರ ಇತ್ತು.
ಎಎನ್ ಐ ಸುದ್ದಿ ಸಂಸ್ಥೆ ಜತೆಗೆ ಮಾತನಾಡಿರುವ ಮಹೇಂದ್ರ ಸಿಂಗ್, ಪಾಕಿಸ್ತಾನದ ವೀಸಾ ಪಡೆಯುವುದಕ್ಕೆ ಬಹಳ ಕಷ್ಟವಾಯಿತು. ಸಚಿವ ಗಜೇಂದ್ರ ಸಿಂಗ್ ಅವರ ಜತೆ ಮಾತನಾಡಿ ವೀಸಾ ಪಡೆದುಕೊಂಡೆ. ಅದು ಕೂಡ ಅವರ ಕಾರಣಕ್ಕೆ ನಮ್ಮಲ್ಲಿ ಐದು ಜನರಿಗೆ ಮಾತ್ರ ವೀಸಾ ಸಿಕ್ಕಿತು. ನಾವೆಲ್ಲ ತಯಾರಿ ಮಾಡಿದ್ದೆವು. ಸಂಬಂಧಿಕರಿಗೆ ಆಹ್ವಾನ ಪತ್ರಿಕೆ ಕೂಡ ನೀಡಿದ್ದೆವು ಎಂದಿದ್ದಾರೆ.
ಅಂದು ಬಾಲಕೋಟ್ ನಲ್ಲಿ ಏನಾಯ್ತು? ಜೈಷ್ ಮದರಸಾ ವಿದ್ಯಾರ್ಥಿ ಬಿಚ್ಚಿಟ್ಟ ಸತ್ಯ
ಆದರೆ, ಎರಡು ದೇಶಗಳ ಮಧ್ಯೆ ಪರಿಸ್ಥಿತಿ ಸರಿ ಇಲ್ಲದ ಕಾರಣ ವಧುವಿನ ಕಡೆಯವರು ಮಾರ್ಚ್ ಎಂಟರಂದು ನಡೆಯಬೇಕಿರುವ ಮದುವೆಯನ್ನೇ ರದ್ದು ಮಾಡಿದ್ದಾರೆ.