ಮೋದಿಯವರು ಭಾರತ್ ಮಾತಾಕಿ ಜೈ ಅನ್ನುವುದು ತಪ್ಪೆ? ಹೇಳಿ ರಾಹುಲ್!
ಬೆಂಗಳೂರು, ಡಿಸೆಂಬರ್ 04 : ನೀವು ರೈತರ ವಿರುದ್ಧ ಮಾತಾಡಬೇಡಿ, ದೇಶದ ಬಡಜನತೆಯ ಬಗ್ಗೆ ಸೊಲ್ಲೆತ್ತಬೇಡಿ, ಅಪನಗದೀಕರಣದಿಂದ ಆಗಿರುವ ಸಂಕಷ್ಟದ ಬಗ್ಗೆ ಹೇಳಲೇಬೇಡಿ, ಸೈನಿಕರ ಬಗ್ಗೆ ದನಿಯೆತ್ತಲು ನಿಮಗೆ ಹಕ್ಕೇ ಇಲ್ಲ... ಏನಾದರೂ ಅನ್ನಿ ಪರವಾಗಿಲ್ಲ. ಆದರೆ, 'ಭಾರತ ಮಾತಾಕಿ ಜೈ' ಅನ್ನಬೇಡಿ ಎನ್ನುವುದು ಪ್ರಬುದ್ಧತೆಯ ಲಕ್ಷಣವೆ?
ನಾವು ಪ್ರಸ್ತಾಪಿಸುತ್ತಿರುವ ವ್ಯಕ್ತಿಯ ಬಗ್ಗೆ ಎಷ್ಟೇ ದ್ವೇಷವಿರಬಹುದು, ಎಷ್ಟೇ ಆಕ್ರೋಶವಿರಬಹುದು, ಮಾತಿನಲ್ಲೇ ಸೋಲಿಸಿ ಮೀಸೆ ಮಣ್ಣಾಗಿಸುತ್ತೇನೆ ಎಂಬ ಛಲವಿರಬಹುದು, ಸೈದ್ಧಾಂತಿಕ ಭಿನ್ನಾಭಿಪ್ರಾಯವಿರಬಹುದು. ನಾವಾಡುವ ವ್ಯಂಗ್ಯ, ವಿಡಂಬನೆ, ಸುಟ್ಟುಹಾಕುವ ಕಿಡಿಮಾತಿನ ನಡುವೆಯೂ ಒಂದು ಅರ್ಥವಿರಬೇಕು. ಕೇಳುಗರು ಅಹುದಹುದೆನ್ನಬೇಕು. ಆಗ ನಾವು ಮಾಡುವ ಭಾಷಣಕ್ಕೂ ಒಂದು ಗೌರವವಿರುತ್ತದೆ, ಕೇಳುಗರನ್ನೂ ಗೌರವಿಸಿದಂತಾಗುತ್ತದೆ.
ಭಾಷಣ ಆರಂಭಿಸುತ್ತಲೇ ಮೋದಿ ಗುಣಗಾನ ಶುರು ಮಾಡಿದ ರಾಹುಲ್ ಗಾಂಧಿ
ಇಂಥದೊಂದು ವಿಶಿಷ್ಟಬಗೆಯ ಚರ್ಚೆಗೆ ಕಾಂಗ್ರೆಸ್ ನಾಯಕ ಮತ್ತು ನರೇಂದ್ರ ಮೋದಿಯವರ ಬದ್ಧ ದ್ವೇಷಿ ರಾಹುಲ್ ಗಾಂಧಿಯವರು ರಾಜಸ್ಥಾನದ ಆಳ್ವಾರ್ ನಲ್ಲಿ ಮಂಗಳವಾರ ನಾಂದಿ ಹಾಡಿದ್ದಾರೆ. ಚುನಾವಣಾ ಪ್ರಚಾರದಲ್ಲಿ ವಾಕ್ ಪ್ರಹಾರ ಮಾಡುವುದು, ವಿರೋಧಿಗಳ ತಪ್ಪುಗಳನ್ನು ಎತ್ತಿ ತೋರಿಸುವುದು, ಮಾತಿನಲ್ಲೇ ಮಟ್ಟ ಹಾಕುವುದು... ಎಲ್ಲವೂ ಸಮ್ಮತವೇ. ಯುದ್ಧಕ್ಕೆ ನಿಂತ ಮೇಲೆ ಮಾತಿನ ಈಟಿಗೆ ಹೆದರುವುದುಂಟೆ? ಆದರೆ, 'ಭಾರತ್ ಮಾತಾಕಿ ಜೈ', 'ವಂದೇ ಮಾತರಂ' ಅನ್ನುವುದು ತಪ್ಪೆ? ನೀವೇ ನಿರ್ಧರಿಸಿ.
ಭಾರತ್ ಮಾತಾಕಿ ಜೈ : ರಾಹುಲ್ ವ್ಯಂಗ್ಯ
ರಾಜಸ್ಥಾನದಲ್ಲಿ ಭಾರತೀಯ ಜನತಾ ಪಕ್ಷವನ್ನು ಸದೆಬಡಿದು ಹಾಕಬೇಕೆಂದು ಹುಮ್ಮಸ್ಸಿನಲ್ಲಿ, ಆಳ್ವಾರ್ ನಲ್ಲಿ ಭಾಷಣ ಮಾಡುತ್ತಿದ್ದ ರಾಹುಲ್ ಗಾಂಧಿ ಅವರು, "ನರೇಂದ್ರ ಮೋದಿಯುವರು ಪ್ರತಿ ಭಾಷಣಕ್ಕೂ ಮುನ್ನ 'ಭಾರತ್ ಮಾತಾಕಿ ಜೈ' ಅನ್ನುತ್ತಾರೆ. ಅವರು ಅದರ ಬದಲಾಗಿ, 'ಅಂಬಾನಿಗೆ ಜೈ, ಮೆಹುಲ್ ಚೋಕ್ಸಿಗೆ ಜೈ, ನಿರಾವ್ ಮೋದಿಗೆ ಜೈ, ಲಲಿತ್ ಮೋದಿಗೆ ಜೈ' ಅನ್ನಬೇಕು. ನೀವು ಭಾರತ ಮಾತೆಯ ಬಗ್ಗೆ ಆಡುವುದಾದರೆ, ನಮ್ಮ ರೈತರನ್ನು ಮರೆಯುವುದು ಹೇಗೆ ಸಾಧ್ಯ?" ಎಂದು ಖಾರವಾಗಿ ಪ್ರಶ್ನಿಸಿದ್ದಾರೆ ರಾಹುಲ್ ಗಾಂಧಿ.
ಪ್ರಧಾನಿ ಮೋದಿ, ಕೆಸಿಆರ್, ಓವೈಸಿ ಎಲ್ಲರೂ ಒಂದೇ: ರಾಹುಲ್ ಗಾಂಧಿ
ರಾಹುಲ್ ಗೆ ಮೋದಿಯ ಭರ್ಜರಿ ತಿರುಗೇಟು
ರಾಜಸ್ಥಾನದ ಸಿಕರ್ ಎಂಬ ಊರಿನಲ್ಲಿ ರಾಹುಲ್ ಮಾತಿಗೆ ಇಂದೇ ತಿರುಗೇಟು ನೀಡಿರುವ ನರೇಂದ್ರ ಮೋದಿಯವರು, "ನಾನು ಚುನಾವಣಾ ರ್ಯಾಲಿಗಳಲ್ಲಿ 'ಭಾರತ್ ಮಾತಾಕಿ ಜೈ' ಅನ್ನಬಾರದು ಎಂದು ಕಾಂಗ್ರೆಸ್ (ರಾಹುಲ್ ಗಾಂಧಿ) 'ಫತ್ವಾ' ಹೊರಡಿಸಿದ್ದಾರೆ. ಭಾರತ್ ಮಾತಾಕಿ ಜೈ ಅನ್ನುವ ನನ್ನ ಹಕ್ಕನ್ನು ಅವರು ಹೇಗೆ ಅಲ್ಲಗಳೆಯಲು ಸಾಧ್ಯ? ಹೀಗೆ ಹೇಳಲು ಅವರಿಗೆ ನಿಜಕ್ಕೂ ನಾಚಿಕೆಯಾಗಬೇಕು. ಇದು ತಾಯಿದೇಶದ ಬಗ್ಗೆ ಅವರಿಗೆ ಇರುವ ಅಗೌರವವನ್ನು ತೋರಿಸುತ್ತದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನರೇಂದ್ರ ಮೋದಿ ಮೇಲೆ ರಾಹುಲ್ ಗಾಂಧಿ ಮತ್ತೆ 'ಸರ್ಜಿಕಲ್ ಸ್ಟ್ರೈಕ್'
ಆಯಾ ನೆಲದ ಭಾಷೆಯ ಬಳಕೆ
ಭಾರತ್ ಮಾತಾಕಿ ಜೈ, ವಂದೇ ಮಾತರಂ ಅನ್ನುವುದರ ಜೊತೆಗೆ, ಆಯಾ ನೆಲದ ಜನರನ್ನು ಆಕರ್ಷಿಸುವ ಉದ್ದೇಶದಿಂದ ಆಯಾ ನೆಲದ ಭಾಷೆಯನ್ನು ಬಳಸಿ ಭಾಷಣವನ್ನು ಆರಂಭಿಸುವುದು ನರೇಂದ್ರ ಮೋದಿಯವರ ಶೈಲಿ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿಯೂ ನರೇಂದ್ರ ಮೋದಿಯವರು ಹೋದಲ್ಲೆಲ್ಲ ಕನ್ನಡದಲ್ಲಿ ಮಾತು ಆರಂಭಿಸುವುದಲ್ಲದೆ, ಅಲ್ಲಿನ ವ್ಯಕ್ತಿಗಳನ್ನು ನೆನೆಸಿಕೊಳ್ಳುವುದು, ಅವರ ಪ್ರೇರಣಾದಾಯಕ ನುಡಿಗಳನ್ನು ಪುನರುಚ್ಚರಿಸುವುದು ಮಾಡಿದ್ದಾರೆ. ಉಚ್ಚಾರಣೆಯಲ್ಲಿ ಹಲವು ಕಡೆ ಏರುಪೇರಾದರೂ ಜನರು ಅದನ್ನು ಪ್ರೀತಿಯಿಂದಲೇ ಸ್ವೀಕರಿಸಿದ್ದಾರೆ. ರಾಹುಲ್ ಗಾಂಧಿ ಅವರು ಕೂಡ ಇದಕ್ಕೆ ಹೊರತಲ್ಲ. ಅವರು ಕನ್ನಡದ ಕಷ್ಟಕರ ನುಡಿಗಳನ್ನು ಆಡುವಾಗಲೂ ಜನರು ಆಡಿಕೊಂಡಿದ್ದಾರೆ, ನಕ್ಕು ಹಗುರಾಗಿದ್ದಾರೆ.
ಹೀಗಾಗಿಯೇ ದೇಶದ್ರೋಹಿಗಳ ಸಂಖ್ಯೆ ಹೆಚ್ಚುತ್ತಿದೆ
ಆದರೆ, ಇಂದು ಭಾರತದಲ್ಲಿ ಇದ್ದುಕೊಂಡೇ, ನಾನು 'ಭಾರತ್ ಮಾತಾಕಿ ಜೈ' ಅನ್ನುವುದಿಲ್ಲ, ನಾನು 'ವಂದೇ ಮಾತರಂ' ಅನ್ನುವುದಿಲ್ಲ ಎನ್ನುವಂಥ ದಾರ್ಷ್ಟ್ಯತೆಯನ್ನು ದೇಶದ್ರೋಹಿಗಳು ಬೆಳೆಸಿಕೊಳ್ಳುತ್ತಿದ್ದಾರೆ. ಯಾರಿಗೂ ಇದನ್ನು ಅನ್ನಲೇಬೇಕೆಂದು ಬಲವಂತ ಮಾಡುವುದು ಸೂಕ್ತ ಅಲ್ಲವಾದರೂ, ಅನ್ನುವವರನ್ನು ತಡೆಯಬೇಕೇಕೆ? ರಾಹುಲ್ ಗಾಂಧಿಯವರು 'ಭಾರತ್ ಮಾತಾಕಿ ಜೈ' ಅನ್ನುವುದರಿಂದ ತಮಗೇ ತಾವು ನಿರ್ಬಂಧ ಹೇರಿಕೊಂಡಂತಾಗಿದೆ. ಇದರ ಬದಲಾಗಿ ಅವರ ಮಾತಲ್ಲಿ ಬರುತ್ತಿರುವುದು ಅದೇ 'ಚೌಕಿದಾರ್ ಚೋರ್ ಹೈ' ಅಂದು ಹೇಳುತ್ತ, ಮೋದಿ ಮಂತ್ರವನ್ನೇ ಜಪಿಸುತ್ತಿದ್ದಾರೆ. ಇದನ್ನೇ ಚಾಲೆಂಜಿಂಗ್ ಆಗಿ ತೆಗೆದುಕೊಂಡಿರುವ ಮೋದಿಯವರು ಒಂದಲ್ಲ ಹತ್ತು ಬಾರಿ ಭಾರತ್ ಮಾತಾಕಿ ಜೈ ಅನ್ನುತ್ತಿದ್ದಾರೆ. ರಾಹುಲ್ ಗಾಂಧಿಯವರು ಕನಿಷ್ಠ ಒಂದು ಬಾರಿಯಾದರೂ 'ಭಾರತ್ ಮಾತಾಕಿ ಜೈ' ಅನ್ನಲಿ.