ರಾಜಸ್ಥಾನ ರಾಜ್ಯಪಾಲರಿಗೆ ಮನವಿ ಮಾಡಿದ ಮಾಯಾವತಿ
ಜೈಪುರ, ಆಗಸ್ಟ್ 11 : "ಸದ್ಯಕ್ಕೆ ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ ಎಂದು ಅನ್ನಿಸುತ್ತದೆ. ಆದರೆ, ಯಾವಾಗ ಬೇಕಾದರೂ ಮತ್ತೆ ನಾಟಕ ಆರಂಭವಾಗಬಹುದು" ಎಂದು ಬಿಎಸ್ಪಿ ನಾಯಕಿ ಮಾಯಾವತಿ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಮಾಯಾವತಿ, "ನಾನು ರಾಜಸ್ಥಾನದ ರಾಜ್ಯಪಾಲರಿಗೆ ಮನವಿ ಮಾಡುತ್ತೇನೆ. ರಾಜ್ಯದ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನಿಕ ಅಧಿಕಾರವನ್ನು ಅವರು ಚಲಾಯಿಸಬೇಕು" ಎಂದರು.
"ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಸದ್ಯಕ್ಕೆ ಸುಭದ್ರವಾಗಿರಬಹುದು. ಆದರೆ, ಪೈಲೆಟ್ ಮತ್ತು ಗೆಹ್ಲೋಟ್ ನಡುವಿನ ನಾಟಕ ಯಾವಾಗ ಮತ್ತೆ ಆರಂಭವಾಗಲಿದೆ? ಎಂಬುದು ತಿಳಿದಿಲ್ಲ. ಈ ಇಬ್ಬರು ನಾಯಕರ ಆಂತರಿಕ ಕಚ್ಚಾಟದಿಂದಾಗಿ ಜನರ ಕೆಲಸಗಳಿಗೆ ತೊಂದರೆಯಾಗಿದೆ" ಎಂದು ಮಾಯಾವತಿ ದೂರಿದರು.

"ಕೊರೊನಾ ಭೀತಿಯ ಕಾಲದಲ್ಲಿ ಸರ್ಕಾರ ಜನರತ್ತ ಗಮನ ಹರಿಸಬೇಕು. ಸರ್ಕಾರ ಈ ಕುರಿತು ಗಂಭೀರವಾಗಿಲ್ಲ ಎಂದು ಅನ್ನಿಸುತ್ತಿದೆ. ಮುಂದೆಯೂ ಇಬ್ಬರು ನಾಯಕರ ಆಂತರಿಕ ಕಚ್ಚಾಟ ಮತ್ತೆ ಆರಂಭವಾಗಬಹುದು" ಎಂದು ಮಾಯಾವತಿ ತಿಳಿಸಿದರು.
ಸೋಮವಾರ ರಾಜಸ್ಥಾನ ಕಾಂಗ್ರೆಸ್ನಲ್ಲಿ ಮಹತ್ವದ ಬೆಳವಣಿಗೆ ನಡೆದಿತ್ತು. ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಕರೆ ಮಾಡಿ ಮಾತುಕತೆ ನಡೆಸಿದ್ದರು.
ರಾಜಸ್ಥಾನ ಕಾಂಗ್ರೆಸ್ ಬಂಡಾಯ ನಾಯಕ ಸಚಿನ್ ಪೈಲೆಟ್ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಭೇಟಿಯಾಗಿದ್ದರು. ರಾಜ್ಯ ಕಾಂಗ್ರೆಸ್ ಬಿಕ್ಕಟ್ಟಿನ ಕುರಿತು ಚರ್ಚಿಸಲು ಪ್ರಿಯಾಂಕಾ ವಾದ್ರಾ, ಅಹ್ಮದ್ ಪಟೇಲ್ ಮತ್ತು ಕೆ. ಸಿ. ವೇಣುಗೋಪಾಲ್ ಇರುವ ಸಮಿತಿ ರಚನೆ ಮಾಡಿ ಕಾಂಗ್ರೆಸ್ ಆದೇಶ ಹೊರಡಿಸಿತ್ತು.












Click it and Unblock the Notifications