ಕಾಲಿಗೆ ಬಿದ್ದಾದ್ರೂ ಡಿಬಾಸ್ನ ಕರ್ಕೊಂಡು ಬರ್ತಿದ್ದೆ: ಸೋನು ಶ್ರೀನಿವಾಸ್ ಗೌಡ
ಸಾಮಾಜಿಕ ಜಾಲತಾಣಗಳ ಮೂಲಕ ಸದಾ ಸುದ್ದಿಯಲ್ಲಿರುವ ಸೋನು ಶ್ರೀನಿವಾಸ್ ಗೌಡ ಈಗ ಬೆಳ್ಳಿಪರದೆಗೆ ಪಾದಾರ್ಪಣೆ ಮಾಡಿದ್ದಾರೆ. ತಮ್ಮ ಮುಂಬರುವ ಚಿತ್ರ 'ಕೇಕೆ' ಮೂಲಕ ಸ್ಯಾಂಡಲ್ವುಡ್ ಅಂಗಳಕ್ಕೆ ಹೆಜ್ಜೆ ಇಟ್ಟಿರುವ ಸೋನು, ಹೊಸ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಇತ್ತೀಚೆಗಷ್ಟೇ ಅವರ ಹುಟ್ಟುಹಬ್ಬದ ಸಂಭ್ರಮದ ಅಂಗವಾಗಿ ಸಿನಿಮಾದ 'ಗುಂಟೂರು ಅಮ್ಮಾಯಿ' ಎಂಬ ವಿಶೇಷ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಹಾಡಿನ ಬಿಡುಗಡೆ ಸಮಾರಂಭದಲ್ಲಿ ಸೋನು ಗೌಡ ಅವರು ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ ಅವರನ್ನು ನೆನೆದು ಭಾವುಕರಾಗಿದ್ದಾರೆ.
'ಅವರು ಹೊರಗಿದ್ದಿದ್ರೆ ಕಾಲು ಹಿಡಿದಾದ್ರೂ ಕರೆತರುತ್ತಿದ್ದೆ'
ದರ್ಶನ್ ಅವರ ಮೇಲಿರುವ ತಮ್ಮ ಅಪಾರ ಗೌರವ ಮತ್ತು ಅಭಿಮಾನವನ್ನು ವೇದಿಕೆಯಲ್ಲಿ ಹಂಚಿಕೊಂಡ ಸೋನು ಗೌಡ, "ನನಗೆ ದರ್ಶನ್ ಸರ್ ಅಂದರೆ ಪ್ರಾಣ. ಒಂದು ವೇಳೆ ಅವರು ಈಗ ಹೊರಗಡೆ ಇದ್ದಿದ್ದರೆ, ನಾನು ಅವರ ಕೈ-ಕಾಲು ಹಿಡಿದಾದರೂ ಒಪ್ಪಿಸಿ, ನಮ್ಮ ಚಿತ್ರದ ಈ ಹಾಡನ್ನು ಅವರ ಕೈಯಿಂದಲೇ ರಿಲೀಸ್ ಮಾಡಿಸುತ್ತಿದ್ದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ದರ್ಶನ್ ಅವರ ಪ್ರಸ್ತುತ ಪರಿಸ್ಥಿತಿ ನೆನೆದು ಅವರು ಭಾವುಕರಾಗಿದ್ದಾರೆ.

'ಬಳಸಿಕೊಂಡವರು ಈಗ ಕಷ್ಟದಲ್ಲಿದ್ದಾಗ ಬರಲಿಲ್ಲ'
ದರ್ಶನ್ ಅವರ ಕಷ್ಟದ ದಿನಗಳಲ್ಲಿ ಚಿತ್ರರಂಗ ಮತ್ತು ಆಪ್ತರ ನಡೆಗೆ ಸೋನು ಗೌಡ ಅಸಮಾಧಾನ ಹೊರಹಾಕಿದ್ದಾರೆ. ದರ್ಶನ್ ಅವರ ಹೆಸರನ್ನು ಬಳಸಿಕೊಂಡು ಅನೇಕರು ಚಿತ್ರರಂಗದಲ್ಲಿ ಬೆಳೆದರು, ಆದರೆ ಇಂದು ಅವರು ಸಂಕಷ್ಟದಲ್ಲಿದ್ದಾಗ ಯಾರೊಬ್ಬರೂ ಅವರ ಪರ ನಿಲ್ಲುತ್ತಿಲ್ಲ ಎಂದು ಕಿಡಿಕಾರಿದ್ದಾರೆ. ದರ್ಶನ್ ಅವರು ಮುಗ್ಧರು, ಅವರು ಬೇರೆಯವರಿಂದ ಮೋಸ ಹೋಗಿದ್ದಾರೆಯೇ ಹೊರತು ಯಾರಿಗೂ ದ್ರೋಹ ಬಗೆದಿಲ್ಲ ಎಂದು ಸೋನು ನೊಂದು ಮಾತನಾಡಿದ್ದಾರೆ.
ಸೋನು ಗೌಡ ದರ್ಶನ್ ಪರವಾಗಿ ಮಾತನಾಡುತ್ತಿರುವುದು ಇದೇ ಮೊದಲೇನಲ್ಲ. 2024ರಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರು ಜೈಲು ಪಾಲಾದಾಗಲೂ ಸೋನು ತಮ್ಮ ಯೂಟ್ಯೂಬ್ ಚಾನಲ್ ಮೂಲಕ ದರ್ಶನ್ ಪರವಾಗಿ ಧ್ವನಿ ಎತ್ತಿದ್ದರು. ಆ ಸಮಯದಲ್ಲಿ, "ನಾನು ಡಿ-ಬಾಸ್ ಅಭಿಮಾನಿ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ. ಇಂತಹ ಕಠಿಣ ಸಮಯದಲ್ಲಿ ನಾವೆಲ್ಲರೂ ಅವರ ಬೆನ್ನಿಗೆ ನಿಲ್ಲಬೇಕು" ಎಂದು ಕರೆ ನೀಡಿದ್ದರು. ಅದೇ ಸಂದರ್ಭದಲ್ಲಿ ಮೃತ ರೇಣುಕಾಸ್ವಾಮಿ ಕುಟುಂಬಕ್ಕೂ ಕಾನೂನಾತ್ಮಕವಾಗಿ ನ್ಯಾಯ ಸಿಗಬೇಕು ಎಂದಿದ್ದ ಸೋನು, ದರ್ಶನ್ ಅವರು ಮಾಡಿರುವ ಒಳ್ಳೆಯ ಕೆಲಸಗಳೇ ಅವರ ಕೈ ಹಿಡಿಯಲಿವೆ ಮತ್ತು ಅವರನ್ನು ಈ ಸಂಕಷ್ಟದಿಂದ ಪಾರು ಮಾಡಲಿವೆ ಎಂದಿದ್ದಾರೆ. ಸದ್ಯ ಸೋನು ಅವರ ಈ ಮಾತುಗಳು ಮತ್ತು ಕೇಕೆ ಚಿತ್ರದ ಹೊಸ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.
ಸೋಷಿಯಲ್ ಮೀಡಿಯಾ ರೀಲ್ಸ್ ಹಾಗೂ 'ಬಿಗ್ ಬಾಸ್ ಕನ್ನಡ ಒಟಿಟಿ' ಶೋ ಮೂಲಕ ಕರ್ನಾಟಕದ ಮನೆಮಾತಾಗಿದ್ದ ಸೋನು ಶ್ರೀನಿವಾಸ್ ಗೌಡ, ಈಗ ಬೆಳ್ಳಿಪರದೆಗೂ ಕಾಲಿಟ್ಟಿದ್ದಾರೆ. ಮುಂಬರುವ 'ಕೇಕೆ' ಚಿತ್ರದ 'ಗುಂಟೂರು ಅಮ್ಮಾಯಿ' ಎಂಬ ವಿಶೇಷ ಐಟಂ ಸಾಂಗ್ನಲ್ಲಿ ಅವರು ಹೆಜ್ಜೆ ಹಾಕಿದ್ದು, ಇತ್ತೀಚೆಗೆ ಅವರ ಹುಟ್ಟುಹಬ್ಬದ ಸಂದರ್ಭದಲ್ಲೇ ಈ ಹಾಡನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿತ್ತು. ಈ ಮೂಲಕ ಕೇವಲ ಇನ್ಸ್ಟಾಗ್ರಾಮ್, ಯೂಟ್ಯೂಬ್ಗೆ ಸೀಮಿತವಾಗಿದ್ದ ಸೋನು ಈಗ ಪಕ್ಕಾ ಕಮರ್ಷಿಯಲ್ ನಾಯಕಿಯಾಗಿ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.













Click it and Unblock the Notifications