ಬೆಂಗಳೂರು ನಮ್ಮ ಮೆಟ್ರೋ: ಸಂಸದ ತೇಜಸ್ವಿ ಸೂರ್ಯ ಪತ್ರದಿಂದ ಮಧ್ಯಪ್ರವೇಶಿಸಿದ ಕೇಂದ್ರ ಸರ್ಕಾರ, ಮಹತ್ವದ ಆದೇಶ
ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಎದುರಾಗುತ್ತಿರುವ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ತನಿಖೆಗೆ ಮುಂದಾಗಿದೆ. ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಇತ್ತೀಚಿನ ದಿನಗಳಲ್ಲಿ ಎದುರಾಗುತ್ತಿರುವ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಮಧ್ಯ ಪ್ರವೇಶ ಮಾಡಿದೆ.
ಇದೀಗ ಸಂಸದ ತೇಜಸ್ವಿ ಸೂರ್ಯ ಅವರ ಪತ್ರದ ಆಧಾರದ ಮೇಲೆ ಕೇಂದ್ರ ಸರ್ಕಾರವು ಮಹತ್ವದ ಕ್ರಮಕ್ಕೆ ಮುಂದಾಗಿದೆ. ರೈಲು ಸುರಕ್ಷತಾ ಮುಖ್ಯ ಆಯುಕ್ತರು ಕಳೆದ ಮೂರು ವರ್ಷಗಳಲ್ಲಿ ರೈಲು ಸೇವೆಯಲ್ಲಿ ಉಂಟಾದ ಅಡಚಣೆಗಳ ಬಗ್ಗೆ ತನಿಖೆ ನಡೆಸಿ, ತೆಗೆದುಕೊಂಡ ಸರಿಪಡಿಸುವ ಕ್ರಮಗಳ ಕುರಿತು ವರದಿಯನ್ನು ಸಲ್ಲಿಸುವಂತೆ BMRCL ಗೆ ನಿರ್ದೇಶನ ನೀಡಿದ್ದಾರೆ. ಪ್ರಯಾಣಿಕರ ಸುರಕ್ಷತೆ ಮತ್ತು ಅನುಕೂಲತೆಯು BMRCLನ ಅತ್ಯುನ್ನತ ಆದ್ಯತೆಯಾಗಿರಬೇಕು.

ರಾಜ್ಯ ಸರ್ಕಾರವು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಹಾಗೂ ತುರ್ತು ಆದ್ಯತೆಯೊಂದಿಗೆ ಪರಿಗಣಿc ಸಬೇಕು. ನಮ್ಮ ಮೆಟ್ರೋದ ಕಾರ್ಯಾಚರಣೆ ಮತ್ತು ನಿರ್ವಹಣೆಯ ಹೊಣೆ ಹೊತ್ತಿರುವ ಪ್ರಾಧಿಕಾರವಾಗಿ, ಸುರಕ್ಷಿತ, ವಿಶ್ವಾಸಾರ್ಹ ಮತ್ತು ಯಾವುದೇ ಅಡಚಣೆಯಿಲ್ಲದ ಸೇವೆ ಒದಗಿಸುವ ಸಂಪೂರ್ಣ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ. 2024ರಿಂದ ಇದುವರೆಗೆ ವರದಿಯಾಗಿರುವ 20 ಸೇವಾ ಅಡಚಣೆಗಳು ತಕ್ಷಣವೇ ಸರಿಪಡಿಸುವ ಕ್ರಮ ಕೈಗೊಳ್ಳುವ ಅಗತ್ಯವನ್ನು ಸೂಚಿಸುತ್ತವೆ. ವ್ಯವಸ್ಥೆಯಲ್ಲಿರುವ ದೋಷಗಳನ್ನು ಸರಿಪಡಿಸಿ, ಪ್ರಯಾಣಿಕರ ವಿಶ್ವಾಸವನ್ನು ಮರುಸ್ಥಾಪಿಸುವಂತೆ ಬಿಎಂಆರ್ಸಿಎಲ್ಗೆ (BMRCL) ನಾನು ಆಗ್ರಹಿಸುತ್ತೇನೆ ಎಂದು ಸಂಸದ ತೇಜಸ್ವಿ ಸೂರ್ಯ ಅವರು ಸೋಶಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಸರ್ಕಾರದ ಕ್ರಮವೇನು
ಸಂಸದ ತೇಜಸ್ವಿ ಸೂರ್ಯ ಅವರು ಪ್ರಸ್ತಾಪಿಸಿರುವ ವಿಷಯಗಳನ್ನು ಗಮನಿಸಿದ್ದೇವೆ. ಈ ಘಟನೆಯನ್ನು ತನಿಖೆ ಮಾಡಲು ಮತ್ತು ಮೇಲಿನ ಪ್ರಕರಣದಲ್ಲಿ ತೆಗೆದುಕೊಂಡ ಸರಿಪಡಿಸುವ ಕ್ರಮಗಳನ್ನು ಮತ್ತು ಕಳೆದ ಮೂರು ವರ್ಷಗಳಲ್ಲಿ ರೈಲು ಸೇವೆಯ ಅಡಚಣೆಗಳ ಇದೇ ರೀತಿಯ ಘಟನೆಗಳನ್ನು ಸಲ್ಲಿಸಲು MD/BMRCL ಗೆ ಈಗಾಗಲೇ ಸೂಚಿಸಲಾಗಿದೆ. ಇದಲ್ಲದೆ, ಮೆಟ್ರೋ ರೈಲ್ವೆ ವ್ಯವಸ್ಥೆಗಳ ಕಾರ್ಯಾಚರಣೆ ಮತ್ತು ನಿರ್ವಹಣಾ ಅಂಶಗಳ ಪರಿಣಾಮಕಾರಿತ್ವದ ಲೆಕ್ಕಪರಿಶೋಧನೆಗೆ MD/BMRCL ಗೆ ಸೂಚಿಸಲಾಗಿದೆ.
ಮೆಟ್ರೋ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ-2002ರ ಪ್ರಕಾರ, ಮಾನವ ಜೀವಹಾನಿ ಅಥವಾ ಗಂಭೀರ ಗಾಯಗಳಿಗೆ ಕಾರಣವಾಗುವ ಅಪಘಾತಗಳ ಕುರಿತು ಕಡ್ಡಾಯವಾಗಿ ತನಿಖೆ ನಡೆಸುವ ಜವಾಬ್ದಾರಿ ರೈಲ್ವೆ ಸುರಕ್ಷತಾ ಆಯುಕ್ತರ ಮೇಲಿದೆ. ಅಲ್ಲದೆ, ಹೊಸ ಮೆಟ್ರೋ ಮಾರ್ಗಗಳನ್ನು ಸಾರ್ವಜನಿಕ ಸೇವೆಗೆ ತೆರೆಯುವುದು ಹಾಗೂ ಹೊಸ ರೈಲುಗಳನ್ನು ಸೇವೆಗೆ ಪರಿಚಯಿಸುವ ಮೊದಲು ಅವುಗಳ ಸುರಕ್ಷತೆಯನ್ನು ಪರಿಶೀಲಿಸಿ ಅನುಮೋದಿಸುವ ಅಧಿಕಾರವೂ ಆಯುಕ್ತರಿಗೆ ಇದೆ. ಆದರೆ, ಮೆಟ್ರೋ ರೈಲು ವ್ಯವಸ್ಥೆಯ ದೈನಂದಿನ ಕಾರ್ಯಾಚರಣೆ, ನಿರ್ವಹಣೆ ಹಾಗೂ ಸುರಕ್ಷಿತ ಮತ್ತು ವಿಶ್ವಾಸಾರ್ಹ ಸೇವೆ ಒದಗಿಸುವ ಸಂಪೂರ್ಣ ಹೊಣೆಗಾರಿಕೆ ಸಂಬಂಧಿತ ಮೆಟ್ರೋ ರೈಲ್ವೆ ಆಡಳಿತದ ಮೇಲೆಯೇ ಇರುತ್ತದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಅಧೀನದಲ್ಲಿರುವ ರೈಲ್ವೆ ಸುರಕ್ಷತಾ ಆಯೋಗ (CRS)ವು ಸರ್ಕಾರಿ ಆದೇಶ ಮಾಡಿದೆ.
ಸಂಸದ ತೇಜಸ್ವಿ ಸೂರ್ಯ ಬರೆದಿದ್ದ ಪತ್ರದಲ್ಲಿ ಏನಿತ್ತು ?
ಜನವರಿ 2024ರಿಂದ ಬೆಂಗಳೂರು ಮೆಟ್ರೋ ಜಾಲದಲ್ಲಿ ಸುಮಾರು 20 ತಾಂತ್ರಿಕ ದೋಷಗಳು ಮತ್ತು ಸೇವಾ ಅಡಚಣೆಗಳು ಸಂಭವಿಸಿವೆ ಎಂದು ವರದಿಯಾಗಿದೆ. ಇದರಲ್ಲಿ ಪರ್ಪಲ್ ಲೈನ್ ಅತಿ ಹೆಚ್ಚು ಘಟನೆಗಳಿಗೆ ಕಾರಣವಾಗಿದೆ. ಇದು ಇನ್ನು ಮುಂದೆ ಪ್ರತ್ಯೇಕ ಸ್ಥಗಿತ ವಿಚಾರ ಅಲ್ಲ. ಇನ್ನು ಮೆಟ್ರೋ ಕಾರ್ಯಾಚರಣೆಗಳ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಕಳವಳಗಳನ್ನು ಹುಟ್ಟುಹಾಕುವ ಮಾದರಿಯನ್ನು ಸೂಚಿಸುತ್ತದೆ. ಮೆಟ್ರೋ ಸುರಕ್ಷತೆ ಮತ್ತು ವ್ಯವಸ್ಥೆಗಳ ಎಂಜಿನಿಯರಿಂಗ್ನ ಹಲವಾರು ತಜ್ಞರೊಂದಿಗೆ ಮಾತನಾಡಿದ್ದೇನೆ ಮತ್ತು ಅವರ ಇನ್ಪುಟ್ಗಳ ಆಧಾರದ ಮೇಲೆ ಶಿಫಾರಸುಗಳ ಗುಂಪನ್ನು ಬಿಎಂಆರ್ಸಿಎಲ್ಗೆ ಬರೆದಿದ್ದೇನೆ ಎಂದು ಈಚೆಗೆ ಕೇಂದ್ರ ಸರ್ಕಾರಕ್ಕೆ ಸಂಸದ ತೇಜಸ್ವಿ ಸೂರ್ಯ ಅವರು ಪತ್ರ ಬರೆದಿದ್ದರು.
ಈ ವಿಷಯದ ಕುರಿತು ಪರಿಶೀಲನೆ ನಡೆಸಿ, ಬಿಎಂಆರ್ಸಿಎಲ್ (BMRCL) ಕಾರ್ಯಾಚರಣೆಯಲ್ಲಿ ಅತ್ಯುನ್ನತ ಸುರಕ್ಷತಾ ಮಾನದಂಡಗಳು ಪಾಲನೆಯಾಗುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ರೈಲ್ವೆ ಸುರಕ್ಷತಾ ಆಯುಕ್ತರಿಗೆ (ದಕ್ಷಿಣ ವಲಯ) ನಾನು ಪತ್ರ ಬರೆದಿದ್ದೇನೆ. ನಮ್ಮ ಮೆಟ್ರೋ ಬಳಸುವ ಪ್ರತಿಯೊಬ್ಬ ಪ್ರಯಾಣಿಕರ ಸುರಕ್ಷತೆ ಅತ್ಯಂತ ಪ್ರಮುಖವಾಗಿದೆ. ಈ ವಿಚಾರದಲ್ಲಿ ಬೆಂಗಳೂರು ಸಂಪೂರ್ಣ ಪಾರದರ್ಶಕತೆ ಹಾಗೂ ಕಟ್ಟುನಿಟ್ಟಿನ ಕ್ರಮಗಳಿಗೆ ಅರ್ಹವಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಅವರು ಹೇಳಿದ್ದರು.












Click it and Unblock the Notifications