ಟ್ರಾಫಿಕ್, ದುಬಾರಿ ಬಾಡಿಗೆ ಇದ್ದರೂ ಜನ ಬೆಂಗಳೂರು ಬಿಡಲ್ಲ ಯಾಕೆ ಗೊತ್ತಾ? ಈ ವೈರಲ್ ವಿಡಿಯೋದಲ್ಲಿದೆ ಅಸಲಿ ಕಾರಣ
ಬೆಂಗಳೂರು ಕೇವಲ ಒಂದು ನಗರವಲ್ಲ, ಇಲ್ಲಿಯ ಜನರಿಗೆ ಅದೊಂದು ಸುಂದರ ಭಾವನೆ. ಭಾರತದ ಸಿಲಿಕಾನ್ ಸಿಟಿ ಎಂದೇ ಕರೆಯಲ್ಪಡುವ ಈ ಊರು ಲಕ್ಷಾಂತರ ಯುವಜನರ ಕನಸಿನ ನಗರಿ. ಇಲ್ಲಿಗೆ ಒಮ್ಮೆ ಬಂದು ನೆಲೆಸಿದವರು ಮತ್ತೆ ತಮ್ಮ ಊರಿಗೆ ಮರಳುವುದು ಬಹಳ ವಿರಳ. ಆದರೆ, ಅದೇ ಸಮಯದಲ್ಲಿ ಬೆಂಗಳೂರಿನ ಟ್ರಾಫಿಕ್ ಹಾಗೂ ಗಗನಕ್ಕೇರುತ್ತಿರುವ ಮನೆ ಬಾಡಿಗೆಯ ಬಗ್ಗೆ ದೂರು ನೀಡುವವರ ಸಂಖ್ಯೆಗೇನೂ ಕಡಿಮೆಯಿಲ್ಲ.
ಹೀಗೆ ನಿರಂತರವಾಗಿ ದೂರುತ್ತಿದ್ದರೂ, ಭೀಕರ ಟ್ರಾಫಿಕ್ ಜ್ಯಾಮ್ನಲ್ಲಿ ಸಿಲುಕಿ ಒದ್ದಾಡುತ್ತಿದ್ದರೂ ಜನರು ಮಾತ್ರ ಈ ನಗರವನ್ನು ಬಿಟ್ಟು ಹೋಗುವುದಿಲ್ಲ. ಇದಕ್ಕೆ ಅಸಲಿ ಕಾರಣವೇನು ಎಂಬುದನ್ನು ವಿವರಿಸುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಮನದಾಳದ ಮಾತಿಗೆ ಕನ್ನಡಿ ಹಿಡಿದಿದೆ.

ಬೆಂಗಳೂರಿನಲ್ಲಿ ಟ್ರಾಫಿಕ್ ಮತ್ತು ದುಬಾರಿ ಬಾಡಿಗೆಯ ಗೋಳು
ಬೆಂಗಳೂರು ಎಂದಾಕ್ಷಣ ಮೊದಲು ನೆನಪಾಗುವುದೇ ಇಲ್ಲಿನ ಬಂಪರ್-ಟು-ಬಂಪರ್ ಟ್ರಾಫಿಕ್ ಜ್ಯಾಮ್. ಇದರ ಜೊತೆಗೆ, ದಿನೇ ದಿನೇ ಹೆಚ್ಚಾಗುತ್ತಿರುವ ಜೀವನ ವೆಚ್ಚ ಹಾಗೂ ದುಬಾರಿ ಮನೆ ಬಾಡಿಗೆ ಸಾಮಾನ್ಯ ಜನರನ್ನ ಸೇರಿದಂತೆ ಐಟಿ ಉದ್ಯೋಗಿಗಳನ್ನೂ ಹೈರಾಣಾಗಿಸುತ್ತಿರುವುದು ಸುಳ್ಳಲ್ಲ.
10 ವರ್ಷಗಳ ಅನುಭವ ಹೊಂದಿರುವ ಸಾಫ್ಟ್ವೇರ್ ಡೆವಲಪರ್ 'ಅಂಕಿತ್ ಸಿಂಪ್ಲಿಫೈಸ್' ಎಂಬುವವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. "ಬೆಂಗಳೂರಿನಲ್ಲಿ ಏನೋ ಒಂದು ವಿಚಿತ್ರವಾದ ಸೆಳೆತವಿದೆ. ಇಲ್ಲಿನ ಟ್ರಾಫಿಕ್ ಮತ್ತು ದುಬಾರಿ ಬಾಡಿಗೆಯ ಬಗ್ಗೆ ದಿನವೂ ದೂರುವ ಜನರು, ಈ ಊರನ್ನು ಬಿಟ್ಟು ಹೋಗಲು ಮಾತ್ರ ಎಂದಿಗೂ ಇಷ್ಟಪಡುವುದಿಲ್ಲ. ಇದಕ್ಕೆ ಕಾರಣ ನಗರದ ಮೇಲಿನ ಪ್ರೀತಿಗಿಂತ ಬೇರೆಯೇ ಇದೆ," ಎಂದು ಅವರು ವಿವರಿಸಿದ್ದಾರೆ.
ಬೆಂಗಳೂರಿನ ಜೀವನ: ಬದಲಾದ ವ್ಯಕ್ತಿತ್ವವೇ ಸೆಳೆತಕ್ಕೆ ಕಾರಣ
ಅಂಕಿತ್ ಅವರ ಪ್ರಕಾರ, ಜನರು ಬೆಂಗಳೂರನ್ನು ಬಿಟ್ಟು ಹೋಗದಿರಲು ಮುಖ್ಯ ಕಾರಣ ಈ ನಗರವಲ್ಲ, ಬದಲಾಗಿ ಇಲ್ಲಿಗೆ ಬಂದ ಮೇಲೆ ಅವರ ಬದುಕಿನಲ್ಲಿ ಆದ ಬದಲಾವಣೆ ಹಾಗೂ ಅವರು ಕಂಡುಕೊಂಡ ತಮ್ಮದೇ ಆದ ಹೊಸ ವ್ಯಕ್ತಿತ್ವ.
ಪ್ರತಿಯೊಬ್ಬರಿಗೂ ಈ ನಗರ ಜೀವನದಲ್ಲಿ ಒಂದು ದೊಡ್ಡ ತಿರುವು ನೀಡಿರುತ್ತದೆ. ಕೆಲವರಿಗೆ ಇದು ಮೊದಲ ಬಾರಿಗೆ ಅತಿ ಹೆಚ್ಚು ಸಂಬಳದ ಕೆಲಸ ಕೊಟ್ಟ ಸ್ಥಳವಾಗಿರಬಹುದು, ಇನ್ನು ಕೆಲವರಿಗೆ ತಮ್ಮದೇ ಆದ ಮೊದಲ ಸ್ಟಾರ್ಟ್ಅಪ್ ಕಟ್ಟಿದ ಜಾಗವಾಗಿರಬಹುದು. ವೃತ್ತಿಜೀವನವನ್ನು ಬದಲಾಯಿಸಿಕೊಂಡು ಆರ್ಥಿಕವಾಗಿ ಸ್ವತಂತ್ರರಾದ ಹೆಮ್ಮೆ ಅವರಲ್ಲಿರುತ್ತದೆ. ಈ ಎಲ್ಲಾ ಸಾಧನೆಗಳು ಮತ್ತು ಭಾವನಾತ್ಮಕ ಬೆಸುಗೆ, ಇಲ್ಲಿನ ದಿನನಿತ್ಯದ ಸಮಸ್ಯೆಗಳನ್ನು ಸಹಿಸಿಕೊಳ್ಳುವಂತೆ ಮಾಡುತ್ತದೆ. ತಮ್ಮ ವೈಯಕ್ತಿಕ ಹಾಗೂ ವೃತ್ತಿಪರ ಬದುಕಿನ ದೊಡ್ಡ ಯಶಸ್ಸು ಸಿಕ್ಕ ಜಾಗವನ್ನು ಬಿಟ್ಟು ಹೋಗಲು ಯಾರಿಗೂ ಮನಸ್ಸಾಗುವುದಿಲ್ಲ ಎಂಬುದು ಅವರ ವಾದ.
ವೈರಲ್ ವಿಡಿಯೋಗೆ ನೆಟ್ಟಿಗರ ಪ್ರತಿಕ್ರಿಯೆ
ಈ ಇನ್ಸ್ಟಾಗ್ರಾಮ್ ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಾವಿರಾರು ಮಂದಿ ಕಾಮೆಂಟ್ಗಳ ಮೂಲಕ ತಮ್ಮದೇ ಆದ ಬೆಂಗಳೂರಿನ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಬಹಳಷ್ಟು ಬಳಕೆದಾರರು ಅಂಕಿತ್ ಅವರ ಮಾತಿಗೆ ದನಿಗೂಡಿಸಿದ್ದು, ಬಾಲ್ಯದಲ್ಲಿ ಕಂಡ ಕನಸುಗಳನ್ನು ನನಸು ಮಾಡಲು ಬೆಂಗಳೂರು ದೊಡ್ಡ ವೇದಿಕೆ ಕಲ್ಪಿಸಿದೆ.
ಹೀಗಾಗಿ ಇಲ್ಲಿನ ಸಣ್ಣಪುಟ್ಟ ಸಮಸ್ಯೆಗಳನ್ನು ಸುಲಭವಾಗಿ ಒಪ್ಪಿಕೊಳ್ಳಬಹುದು ಎಂದಿದ್ದಾರೆ. ಹಲವು ದಶಕಗಳಿಂದ ಇಲ್ಲಿ ನೆಲೆಸಿರುವ ಕೆಲವರು, ಕೇವಲ ಉದ್ಯೋಗಾವಕಾಶ ಮಾತ್ರವಲ್ಲದೆ, ಇಲ್ಲಿನ ಆಹ್ಲಾದಕರ ಹವಾಮಾನ, ರುಚಿಯಾದ ಆಹಾರ, ಸುಶಿಕ್ಷಿತ ಜನವರ್ಗ ಹಾಗೂ ಸ್ಥಳೀಯ ಸಂಪ್ರದಾಯಗಳನ್ನು ಉಳಿಸಿಕೊಂಡು ಹೋಗುವ ರೀತಿ ತಮ್ಮನ್ನು ಆಕರ್ಷಿಸಿದೆ ಎಂದು ಕೊಂಡಾಡಿದ್ದಾರೆ.
ಎಷ್ಟೇ ಮೂಲಸೌಕರ್ಯದ ಕೊರತೆಗಳಿದ್ದರೂ, ಈ ಊರನ್ನು ಬಿಟ್ಟು ಬೇರೆ ಕಡೆ ಜೀವನ ಕಟ್ಟಿಕೊಳ್ಳುವುದನ್ನು ಊಹಿಸಲೂ ಸಾಧ್ಯವಿಲ್ಲ, ಬೆಂಗಳೂರು ನಮ್ಮ "ಎರಡನೇ ಊರು" ಎಂದು ಬಹಳಷ್ಟು ಜನರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.












Click it and Unblock the Notifications