'ಟೀಕೆಯೇ ನನ್ನ ಆರೋಗ್ಯದ ಗುಟ್ಟು': ಮೋದಿ ಸಂವಾದದ ಪ್ರಮುಖಾಂಶ
Recommended Video

ಲಂಡನ್, ಏಪ್ರಿಲ್ 19: 'ನಿಮ್ಮ ಆರೋಗ್ಯದ ಗುಟ್ಟೇನು?' ಪ್ರಧಾನಿ ನರೇಂದ್ರ ಮೋದಿಯವರನ್ನು ವ್ಯಕ್ತಿಯೊಬ್ಬರು ಹಾಗೆ ಪ್ರಶ್ನಿಸಿದರು. ಈ ಪ್ರಶ್ನೆಗೆ ಪ್ರಧಾನಿ ಮೋದಿ, 'ನಾನು ಪ್ರತಿದಿನ ಎರಡು ಕೆಜಿ ಟೀಕೆಗಳನ್ನು ಸೇವಿಸುತ್ತೇನೆ. ಅದೇ ನನ್ನ ಫಿಟ್ನೆಸ್ ಸೀಕ್ರೇಟ್' ಎಂದು ಮಾರ್ಮಿಕವಾಗಿ ಉತ್ತರಿಸಿದರು.
ಲಂಡನ್ ಪ್ರವಾಸದಲ್ಲಿರುವ ಮೋದಿಯವರು ಲಂಡನ್ನಿನ ವೆಸ್ಟ್ ಮಿನಿಸ್ಟರ್ ಸೆಂಟ್ರಲ್ ಹಾಲ್ ನಲ್ಲಿ 'ಭಾರತ್ ಕೀ ಬಾತ್ ಸಬ್ ಕೆ ಸಾಥ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂವಾದ ಕಾರ್ಯಕ್ರಮದಲ್ಲಿ ಹಲವರು ಕೇಳಿದ ಪ್ರಶ್ನೆಗೆ ಮೋದಿ ಉತ್ತರ ನೀಡಿದರು.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಉದಾಹರಣೆ, ವಿಶೇಷಣ, ಕುಹಕ, ವ್ಯಂಗ್ಯ, ಹಾಸ್ಯ ಎಲ್ಲವುಗಳ ಮಿಶ್ರಣವಾಗಿದ್ದ ಅವರ ಮಾತಿಗೆ ಸೆಂಟ್ರಲ್ ಹಾಲ್ ತುಂಬ ತುಂಬಿದ್ದ ಜನರು ಕರತಾಡನದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವಚನ ಚಳವಳಿಯ ಹರಿಕಾರ ಬಸವಣ್ಣನವರನ್ನು ಸಹ ಮೋದಿಯವರು ನೆನೆದಿದ್ದು ಹೆಮ್ಮೆಯ ವಿಷಯವಾಗಿತ್ತು.
ಪ್ರಧಾನಿ ನರೇಂದ್ರ ಮೋದಿಯವರ ಸಂವಾದ ಕಾರ್ಯಕ್ರಮದ ಕೆಲವು ಪ್ರಮುಖಾಂಶಗಳು ಇಲ್ಲಿವೆ.

ಜನಾಂದೋಲನದಿಂದ ಅಭಿವೃದ್ಧಿ
"ಭಾರತದಲ್ಲಿ ಜನರಿಗೆ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ಮೇಲೆ ನಿರೀಕ್ಷೆಗಳು ಜಾಸ್ತಿ. ಅದಕ್ಕೆ ಕಾರಣ ಜನರು ನಮ್ಮ ಸರ್ಕಾರದ ಮೇಲೆ ಸಾಕಷ್ಟು ವಿಶ್ವಾಸವನ್ನಿಟ್ಟುಕೊಂಡಿರುವುದು. ಮಹಾತ್ಮಾ ಗಾಂಧಿಯವರು ಸ್ವಾತಂತ್ರ್ಯ ಹೋರಾಟವನ್ನು ಜನಾಂದೋಲನವನ್ನಾಗಿಸಿದರು. ಆದರೆ ನಾನು ಅಭಿವೃದ್ಧಿಯನ್ನು ಜನಾಂದೋಲನವನ್ನಾಗಿ ಮಾಡುತ್ತೇನೆ" - ನರೇಂದ್ರ ಮೋದಿ

ನಾನೂ ಬಡತನದಲ್ಲೇ ಬದುಕಿದವನು!
ಬಡತನದ ಬಗ್ಗೆ ಪ್ರಧಾನಿ ಮೋದಿಯವರಿಗೆ ಗೊತ್ತಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಲವು ಬಾರಿ ಹೇಳಿದ್ದನ್ನು ನೆನಪಿಸಿಕೊಂಡ ಮೋದಿ, "ನಾನು ಬಡತನದ ಬಗ್ಗೆ ಪುಸ್ತಕ ಓದಿ ತಿಳಿದುಕೊಳ್ಳುವ ಅಗತ್ಯವಿಲ್ಲ. ನಾನು ಬಡತನದಲ್ಲೇ ಬದುಕಿದವನು. ಬಡವನಾಗಿರುವುದು ಎಂಥ ಅನುಭವ ಎಮಬುದು ನನಗೆ ಗೊತ್ತು. ಸಮಾಜದ ಹಿಂದುಳಿದ ವರ್ಗದವನಾಗಿರುವುದು ಎಂಥ ಅನುಭವ ಎಂಬುದೂ ನನಗೆ ಗೊತ್ತು. ನಾನು ಬಡವರಿಗಾಗಿ, ಅಶಕ್ತರಿಗಾಗಿ ಕೆಲಸ ಮಾಡಲು ಬಯಸುತ್ತೇನೆ" ಎಂದು ಟಾಂಗ್ ನೀಡಿದರು.

ಬದುಕು ನನಗೆ ಹಲವನ್ನು ಕಲಿಸಿದೆ
"ನಾನು ಪ್ರಧಾನಿಯಾದರೂ ಸಾಮಾನ್ಯ ಮನುಷ್ಯನಾಗಿಯೇ ಇದ್ದೇನೆ. ಅದಕ್ಕೆ ಮುಖ್ಯ ಕಾರಣ, ನನ್ನ ಬಾಲ್ಯ. ನಾನು ಚಿಕ್ಕ ವಯಸ್ಸಿನಿಂದಲೂ ಸಾಕಷ್ಟು ಕಷ್ಟಪಟ್ಟಿದ್ದೇನೆ. ನನ್ನ ಬದುಕು ನನಗೆ ಸಾಕಷ್ಟನ್ನು ಕಲಿಸಿದೆ. ಅದು ನನ್ನ ವೈಯಕ್ತಿಕ ಹೋರಾಟ. ನೀವು 'ರಾಯಲ್ ಪ್ಯಾಲೆಸ್' ಎಂದು ಹೇಳಿದರೆ ಅದು ನನ್ನೊಬ್ಬನ ಬಗ್ಗೆ ಅಲ್ಲ, ಅದು 125 ಭಾರತೀಯರಿಗೆ ಸಂಬಂಧಿಸಿದ್ದು." - ನರೇಂದ್ರ ಮೋದಿ

ಆರೋಗ್ಯದ ಗುಟ್ಟು ಬಿಟ್ಟುಕೊಟ್ಟ ಮೋದಿ
"ಟೀಕೆಗಳು ಪ್ರಜಾಪ್ರಭುತ್ವದ ಆರೋಗ್ಯಕರ ಭಾಗ. ಕಳೆದ 20 ವರ್ಷಗಳಿಂದ ನಾನು ಪ್ರತಿದಿನ ಎರಡು ಕೆಜಿಯಷ್ಟು ಟೀಕೆ ಸೇವಿಸುತ್ತಿದ್ದದೇನೆ. ಇದೇ ನನ್ನ ಆರೋಗ್ಯದ ಗುಟ್ಟು! ನಾನು ಯಾವಾಗಲೂ ಟೀಕೆಗಳನ್ನು ಸ್ವಾಗತಿಸುತ್ತೇನೆ. ನಿಮ್ಮ ಎಲ್ಲಾ ಟೀಕೆಗಳನ್ನು ನಾನು ನನ್ನ ಬದುಕಿನಲ್ಲಿ ಸ್ವೀಕರಿಸಲು ಪ್ರಯತ್ನಿಸುತ್ತೇನೆ. ಟೀಕೆಗಳು ನನಗೆ ಚಿನ್ನದ ಗಣಿ ಇದ್ದಂತೆ"- ನರೇಂದ್ರ ಮೋದಿ

ಸರ್ಜಿಕಲ್ ಸ್ಟ್ರೈಕ್ ಉತ್ತರ
"ಭಯೋತ್ಪಾದನೆಯನ್ನು ರಫ್ತು ಮಾಡುವ ಪಾಕಿಸ್ತಾನಕ್ಕೆ ಸರ್ಜಿಕಲ್ ಸ್ಟ್ರೈಕ್ ಎಂಬುದು ಒಂದು ಉತ್ತರ. ನಮ್ಮ ಸೈನಿಕರನ್ನು ಅವರು ಹೇಡಿಗಳಂತೆ ಸಾಯಿಸಿದರೆ ನಾವು ಸುಮ್ಮನೆ ಇರುವುದಕ್ಕಾಗುತ್ತದೆಯೇ? ಅದಕ್ಕೇ ಸರ್ಜಿಕಲ್ ಸ್ಟ್ರೈಕ್ ಮೂಲಕ ಉತ್ತರ ನೀಡಿದ್ದೇವೆ. ಒಂದೇ ಒಂದು ಸಣ್ಣ ತಪ್ಪನ್ನೂ ಮಾಡದೆ ನಮ್ಮ ಸೈನಿಕರು ಸರ್ಜಿಕಲ್ ಸ್ಟ್ರೈಕ್ ಅನ್ನು ಯಶಸ್ವಿಗೊಳಿಸಿದರು"- ನರೇಂದ್ರ ಮೋದಿ

ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಅಸಹನೀಯ
"ಅತ್ಯಾಚಾರ ಎಂದರೆ ಅತ್ಯಾಚಾರವೇ! ಅದರಲ್ಲಿ ರಾಜಕೀಯ ಹುಡುಕುವುದು ನಾಚಿಕೆಗೇಡು. ನಮ್ಮ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯವಾದರೆ ಅದನ್ನು ನಾವು ಸಹಿಸುವುದು ಹೇಗೆ? ದೇಶದಲ್ಲಿ ಇತ್ತೀಚೆಗೆ ನಡೆದ ಅತ್ಯಾಚಾರ ಪ್ರಕರಣಗಳನ್ನು ನಾನು ಖಂಡಿಸುತ್ತೇನೆ"- ನರೇಂದ್ರ ಮೋದಿ

ನೆರವಿನ ಹಸ್ತ ಚಾಚುತ್ತಿರುವ ಭಾರತ
"ಭಾರತದ ಬಗೆಗಿನ ಜಗತ್ತಿನ ಅಭಿಪ್ರಾಯ ಬದಲಾಗಿದೆ. ಬೇರೆ ದೇಶಗಳಿಗೆ ಮಾನವೀಯ ನೆರವು ನೀಡುವಲ್ಲಿ ಭಾರತ ಹಿಂದೆ ಬಿದ್ದಿಲ್ಲ, ಯೆಮನ್ ನಲ್ಲಿ ಭಾರತೀಯ ನಾಗರಿಕರನ್ನು ರಕ್ಷಿಸಿದ ನಂತರ ಭಾರತೀಯ ಸೇನೆಯ ಮೇಲೆ ಇಡೀ ಜಗತ್ತಿಗೂ ಉತ್ತಮ ಅಭಿಪ್ರಾಯ ಮೂಡಿದೆ. ರೊಹಿಂಗ್ಯಾಗಳಿಗೂ ಆಹಾರ ಒದಗಿಸುವ ಕೆಲಸವನ್ನು ನಾವು ಮಾಡಿದೆವು. ಯಾರೂ ಹಸಿವಿನಿಂದ ಸಾಯಬಾರದು ಎಂಬುದು ನಮ್ಮ ಕಳಕಳಿ"- ನರೇಂದ್ರ ಮೋದಿ












Click it and Unblock the Notifications