ಚಂಡಮಾರುತ ಹೊಡೆತಕ್ಕೆ ಹೈಟಿ ದೇಶದಲ್ಲಿ 300ಕ್ಕೂ ಹೆಚ್ಚು ಸಾವು
ಹೈಟಿ , ಅಕ್ಟೋಬರ್ 7: ಮೊದಲ ವರದಿಗಳು ಬರುತ್ತಿವೆ. ಪ್ರವಾಹ, ದುರಂತ, ನದಿಗಳು ಉಕ್ಕಿ ಹರಿಯುತ್ತಿವೆ. ಮನೆಯೊಳಗೆ, ಓಡಾಡುವ ಬೀದಿಗಳಲ್ಲಿ ನೀರೋ ನೀರು. ಮನೆಯ ಛಾವಣಿಗಳು ಹಾರಿಹೋಗಿವೆ. ಇಷ್ಟೆಲ್ಲ ಅನಾಹುತ ಅದ ಮೇಲೆ ಜಾನುವಾರುಗಳು ಬದುಕಿರುವ ಸಾಧ್ಯತೆಗಳು ಎಷ್ಟಿರುತ್ತವೆ ಹೇಳಿ? ಬಡ ದೇಶಗಳ ಪೈಕಿ ಒಂದಾದ ಹೈಟಿಯಲ್ಲಿ ಜನರು ತಮ್ಮ ಹಣೆಬರಹವನ್ನೇ ಹಳಿಯುತ್ತಿದ್ದಾರೆ.
ಮಾಥ್ಯೂಸ್ ಚಂಡಮಾರುತ ತಂದಿರುವ ಅನಾಹುತ ಒಂದೆರಡಲ್ಲ. ಮೂರು ದಿನಗಳ ನಂತರ ಚಂಡಮಾರುತ ಹೈಟಿ ದೇಶವನ್ನು ಅಪ್ಪಳಿಸಿದ್ದು, ಕಳೆದ ಐವತ್ತು ವರ್ಷಗಳಲ್ಲೇ ಭೀಕರವಾಗಿದೆ ಈ ಬಾರಿಯ ಸನ್ನಿವೇಶ. ಸಾವಿನ ಸಂಖ್ಯೆ ಏರುತ್ತಲೇ ಇದೆ.[ಮಾಥ್ಯೂ ಚಂಡಮಾರುತ: 20 ಲಕ್ಷ ಮಂದಿ ಸ್ಥಳಾಂತರ!]

ಮೊದಮೊದಲಿಗೆ ಸರಕಾರವು ಐವರು ಮೃತಪಟ್ಟಿದ್ದಾರೆ ಎಂದು ತಿಳಿಸಿತ್ತು. ಈಗ 300ಕ್ಕೂ ಹೆಚ್ಚು ಮಂದಿ ಮಾಥ್ಯೂ ಚಂಡಮಾರುತದ ಹೊಡೆತಕ್ಕೆ ಮೃತಪಟ್ಟಿದ್ದಾರೆ ಎನ್ನುತ್ತಿದೆ. 2010ರ ಭೂಕಂಪದ ನಂತರ ಈ ದೇಶ ಎದುರಿಸುತ್ತಿರುವ ಭೀಕರ ಪ್ರಾಕೃತಿಕ ವಿಕೋಪ ಇದು.
ಹಳ್ಳಿ, ಪಟ್ಟಣಗಳಲ್ಲಿ ಹಲವು ಅಡಿಗಳ ನೀರು ತುಂಬಿದೆ. ಮನೆಗಳು ರಾಶಿ ಹಾಕಿದ ಮರದಂತಾಗಿವೆ. ಬೆಳೆ ನಷ್ಟದ ಬಗ್ಗೆ ಹೇಳುವುದೇ ಬೇಡ. ಜೆರೆಮಿ ನಗರದಲ್ಲಿ ಶೇ 80ರಷ್ಟು ಮನೆಗಳು ನಾಶವಾಗಿವೆ. ರಕ್ಷಣಾ ಕಾರ್ಯದಲ್ಲಿ ತೊಡಗಿರುವವರು ಹೆಚ್ಚು ಒಳಭಾಗಕ್ಕೆ ಹೋದಂತೆಲ್ಲ ಮೃತ ದೇಹಗಳು ಸಿಗುತ್ತಿವೆ. ಪ್ರವಾಹಕ್ಕೆ ಸಿಲುಕಿದ ಮನೆಗಳು, ಬಡಾವಣೆಗಳಲ್ಲಿ ಸಾವಿನ ರುದ್ರನರ್ತನ.[ಚಿತ್ರಗಳು: ಆಂಧ್ರದಲ್ಲಿ ಭಾರೀ ಮಳೆ ತಂದ ಅವಾಂತರ]

ಗುರುವಾರದವರೆಗೆ ದೇಶದ ದಕ್ಷಿಣ ಭಾಗಕ್ಕೆ ಸಂಪರ್ಕವೇ ಇರಲಿಲ್ಲ. ಫೋನ್ ಲೈನ್ ಗಳು ತುಂಡಾಗಿವೆ. ಸೇತುವೆಗಳು ಕುಸಿದಿವೆ. ಈ ವರೆಗೆ ನಮ್ಗೆ ಸಿಕ್ಕಿರುವುದು ತೀರಾ ಭಾಗಶಃ ನಷ್ಟ ಹಾಗೂ ಸಾವಿನ ಲೆಕ್ಕಾಚಾರ ಎಂದು ಪತ್ರಿಕಾಗೋಷ್ಠಿಯಲ್ಲಿ ಸಚಿವ ಆನಿಕ್ ಜೋಸೆಫ್ ಹೇಳಿದ್ದಾರೆ. ದೇಶದ ಪರ್ವತಗಳಲ್ಲೂ ಸಾವು-ನೋವುಗಳಾಗಿವೆ. ಅಲ್ಲೆಲ್ಲ ತಮ್ಮಷ್ಟಕ್ಕೆ ಬದುಕುತ್ತಿದ್ದ ಸಮುದಾಯದವರ ಪ್ರಾಣಹಾನಿಯಾಗಿದೆ ಎಂದಿದ್ದಾರೆ.












Click it and Unblock the Notifications