ಕಾಬೂಲ್ನಿಂದ 85 ಭಾರತೀಯರನ್ನು ಹೊತ್ತು ಹೊರಟ ಐಎಎಫ್ ವಿಮಾನ
ಕಾಬೂಲ್, ಆಗಸ್ಟ್ 21: ಅಫ್ಘಾನಿಸ್ತಾನದ ಕಾಬೂಲ್ನಿಂದ 85 ಭಾರತೀಯರನ್ನು ಹೊತ್ತು ಐಎಎಫ್ ವಿಮಾನ ಪ್ರಯಾಣ ಬೆಳೆಸಿದೆ.
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನ್ನು ತಾಲಿಬಾನ್ ವಶಕ್ಕೆ ಪಡೆದ ನಂತರ ಅಲ್ಲಿರುವ ಭಾರತೀಯರನ್ನು ಸ್ಥಳಾಂತರಿಸಲು ಪ್ರಯತ್ನಿಸಲಾಗುತ್ತಿದ್ದು, 85 ಭಾರತೀಯರನ್ನು ಹೊತ್ತ ಭಾರತೀಯ ವಾಯುಪಡೆಯ ಸಿ-130 ಜೆ ವಿಮಾನ ಶನಿವಾರ ಬೆಳಗ್ಗೆ ಕಾಬೂಲ್ನಿಂದ ಪ್ರಯಾಣ ಆರಂಭಿಸಿದೆ.
ಸರ್ಕಾರ ಸಂಘಟಿತ ಪ್ರಯತ್ನದೊಂದಿಗೆ ಭಾರತೀಯ ನಾಗರಿಕರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ವಾಪಸ್ ಕರೆತರುತ್ತಿದೆ. ಕಳೆದ ಸೋಮವಾರ ಕಾಬೂಲ್ ತಾಲಿಬಾನ್ ಉಗ್ರರ ವಶವಾದ ನಂತರ ಭಾರತೀಯ ವಾಯುಪಡೆಯ ಎರಡು ವಿಮಾನಗಳು ಅಮೆರಿಕ ಭದ್ರತಾ ಪಡೆಗಳಿಂದ ಕ್ಲಿಯರೆನ್ಸ್ ಪಡೆದು ಕೆಲ ಪತ್ರಕರ್ತರು, ಐಟಿಬಿಪಿ ಸಿಬ್ಬಂದಿ ಸೇರಿದಂತೆ 180 ಅಧಿಕಾರಿಗಳನ್ನು ಭಾರತಕ್ಕೆ ಕರೆತಂದಿದ್ದವು.

ಕಾಬೂಲ್ನಿಂದ ಟೇಕಾಫ್ ಆದ ವಿಮಾನ ಇಂಧನ ತುಂಬಿಸಿಕೊಳ್ಳುವ ಸಲುವಾಗಿ ತಜಕಿಸ್ತಾನದಲ್ಲಿ ಇಳಿದಿದೆ. ಕಾಬೂಲ್ ನಿಂದ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಭಾರತೀಯ ಅಧಿಕಾರಿಗಳು ನೆರವಾಗುತ್ತಿದ್ದಾರೆ ಎಂದು ಮೂಲಗಳು ಹೇಳಿರುವುದಾಗಿ ಎಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ.
Recommended Video
ಅಫ್ಘಾನಿಸ್ತಾನ ನೆಲವನ್ನು ಬಳಸಿಕೊಳ್ಳಲು ಬೇರೆ ರಾಷ್ಟ್ರಗಳಿಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಹೇಳಿರುವ ತಾಲಿಬಾನ್, ಭಾರತ ಬಯಸುವುದಾದರೆ ಮೂಲಭೂತ ಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸಲಿ ಎಂದು ಅದರ ವಕ್ತಾರ ಸುಹೈಲ್ ಶಹೀನ್ ಹೇಳಿದ್ದಾರೆ.
ಯಾರ ವಿರುದ್ಧವೂ ಅಫ್ಘಾನಿಸ್ತಾನ ನೆಲವನ್ನು ಬಳಸಿಕೊಳ್ಳಲು ಯಾವುದೇ ದೇಶಕ್ಕೆ ನಾವು ಬಿಡುವುದಿಲ್ಲ. ಇದು ಸ್ಪಷ್ಟ, ಅಫ್ಘಾನಿಸ್ತಾನದಲ್ಲಿ ಭಾರತ ಹಲವು ಯೋಜನೆಗಳನ್ನು, ನಿರ್ಮಾಣಗಳನ್ನು ಮತ್ತು ಮೂಲಭೂತ ಸೌಕರ್ಯ ಯೋಜನೆಗಳನ್ನು ಮಾಡಿದೆ.
ಭಾರತ ಬಯಸುವುದಾದರೆ ಅಪೂರ್ಣಗೊಂಡಿರುವ ಯೋಜನೆಗಳನ್ನು ಪೂರ್ಣಗೊಳಿಸಲಿ, ಏಕೆಂದರೆ ಯೋಜನೆಗಳು ಜನರ ಪರವಾಗಿದೆ ಎಂದು ವಕ್ತಾರ ಶಹೀನ್ ಪಾಕಿಸ್ತಾನದ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಉರ್ದುವಿನಲ್ಲಿ ಹೇಳಿದ್ದಾರೆ.
ಕಳೆದ ಸೋಮವಾರ ಅಫ್ಘಾನಿಸ್ತಾನವನ್ನು ತಾಲಿಬಾನೀಯರು ವಶಪಡಿಸಿಕೊಂಡ ನಂತರ ಭಾರತ ಬಗ್ಗೆ ನೀಡುತ್ತಿರುವ ಮೊದಲ ಪ್ರತಿಕ್ರಿಯೆ ಇದಾಗಿದೆ.
ಈ ಯೋಜನೆಗಳು ಮುಗಿದ ಬಳಿಕ ಇದರಲ್ಲಿ ಭಾರತದ ಪಾತ್ರವೇನೂ ಇರುವುದಿಲ್ಲ, ನಂತರ ಅದನ್ನು ಕಾಪಾಡಿಕೊಳ್ಳುವುದು ಅಫ್ಘಾನಿಸ್ತಾನಕ್ಕೆ ಬಿಟ್ಟ ವಿಚಾರ ಎಂದು ಕಳೆದ ವಾರ ವಿದೇಶಾಂಗ ಸಚಿವಾಲಯ ಹೇಳಿತ್ತು.
ತಮ್ಮ ಶತ್ರುಗಳು, ಮಿಲಿಟರಿ ಉದ್ದೇಶಕ್ಕಾಗಿ ಅಥವಾ ಬೇರೆ ಯಾವುದೇ ರೀತಿಯ ತಮ್ಮ ಸ್ವ ಹಿತಾಸಕ್ತಿಗೆ ಅಫ್ಘಾನಿಸ್ತಾನ ನೆಲವನ್ನು ಬಳಸಿಕೊಳ್ಳಲು ನೋಡಿದರೆ ಅಂತವರ ಉದ್ದೇಶ ಈಡೇರುವುದಿಲ್ಲ, ತಮ್ಮ ಸಂಘಟನೆ ನೀತಿ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ತಾಲಿಬಾನ್ ವಕ್ತಾರ ಹೇಳಿದ್ದಾರೆ.
ತಾಲಿಬಾನ್ ಉಗ್ರರೊಂದಿಗೆ ಮಾತುಕತೆ, ಸಂವಹನಕ್ಕೆ ಸಿದ್ಧ ಎಂದು ಭಾರತ ಸರ್ಕಾರ ಈಗಾಗಲೇ ಸೂಚನೆ ನೀಡಿದ್ದರೂ ಕೂಡ ತಾಲಿಬಾನ್ ಒಂದು ಅಧಿಕೃತ ಸಂಘಟನೆಯಾಗಿ ಗುರುತಿಸಿಕೊಳ್ಳಬೇಕು ಎಂದು ಹೇಳಿದೆ. ಅಫ್ಘಾನಿಸ್ತಾನದ 34 ಪ್ರಾಂತ್ಯಗಳಲ್ಲಿ ಅಭಿವೃದ್ಧಿ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ವೃತ್ತಿಪರರನ್ನು ಭಾರತ ಇತ್ತೀಚೆಗೆ ಹಿಂದಕ್ಕೆ ಕರೆಸಿಕೊಂಡಿತ್ತು.
ಈ ಯುದ್ಧಪೀಡಿತ ಅಫ್ಘಾನಿಸ್ತಾನದಲ್ಲಿ ಭಾರತ ಹೂಡಿಕೆ ಮಾಡಿರುವ ಮೊತ್ತ 3 ಬಿಲಿಯನ್ ಡಾಲರ್. ಶಟೂಟ್ ಅಣೆಕಟ್ಟು, ಸಲ್ಮಾ ಅಣೆಕಟ್ಟು, ಅಫ್ಘಾನಿಸ್ತಾನದ ಸಂಸತ್ತು ಮತ್ತು ಹಲವು ರಚನಾತ್ಮಕ ರಸ್ತೆಗಳ ನಿರ್ಮಾಣಕ್ಕೆ ಅಫ್ಘಾನಿಸ್ತಾನ ಭಾರತದ ನೆರವನ್ನು ಪಡೆದಿದೆ.
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ವಶಪಡಿಸಿಕೊಂಡ ಕೆಲವು ದಿನಗಳ ನಂತರ ತಾಲಿಬಾನ್ ಭಾರತದೊಂದಿಗಿನ ಎಲ್ಲಾ ಆಮದು ಮತ್ತು ರಫ್ತುಗಳನ್ನು ನಿಲ್ಲಿಸಿದೆ. ಪಾಕಿಸ್ತಾನದ ಸಾಗಾಣಿಕಾ ಮಾರ್ಗಗಳ ಮೂಲಕ ಸರಕು ಸಾಗಣೆಯನ್ನು ತಾಲಿಬಾನ್ ನಿಲ್ಲಿಸಿದೆ. ಇದೇ ಕಾರಣದಿಂದಲೇ ಅಫ್ಘಾನಿಸ್ತಾನದಿಂದ ರಫ್ತು ಮತ್ತು ಆಮದು ನಿಲ್ಲಿಸಲಾಗಿದೆ ಅಂತಾ ಭಾರತೀಯ ರಫ್ತು ಸಂಸ್ಥೆಯ ಒಕ್ಕೂಟದ ಮಹಾನಿರ್ದೇಶಕ(ಎಫ್ಐಇಒ) ಡಾ.ಅಜಯ್ ಸಹಾಯ್ ಹೇಳಿದ್ದಾರೆ.
ನಾವು ಅಫ್ಘಾನಿಸ್ತಾನದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅಲ್ಲಿಂದ ಆಮದುಗಳು ಪಾಕಿಸ್ತಾನದ ಸಾಗಣೆ ಮಾರ್ಗದ ಮೂಲಕ ಬರುತ್ತವೆ. ಇಲ್ಲಿಯವರೆಗೆ ತಾಲಿಬಾನ್ ಪಾಕಿಸ್ತಾನಕ್ಕೆ ಸರಕು ಸಾಗಣೆಯನ್ನು ನಿಲ್ಲಿಸಿದೆ. ಆದ್ದರಿಂದ ವಾಸ್ತವಿಕವಾಗಿ ಆಮದು ನಿಂತಿದೆ ಎಂದು ಸಹಾಯ್ ತಿಳಿಸಿದ್ದಾರೆ.












Click it and Unblock the Notifications