ಅಕ್ರಮ ಗಣಿಗಾರಿಕೆಗೆ 40 ಮಂದಿ ಬಲಿ..? ಕಾರ್ಯಾಚರಣೆಗೆ ಪ್ರವಾಹದ ಅಡ್ಡಿ
ಒಂದೊಂದು ಅಕ್ಕಿ ಕಾಳಿಗೂ ಪರಿತಪಿಸುವ ಆಫ್ರಿಕಾದ ಅತ್ಯಂತ ಬಡರಾಷ್ಟ್ರಗಳಲ್ಲಿ ಒಂದಾದ ಜಿಂಬಾಬ್ವೆಯ ಚಿನ್ನದ ಗಣಿ ಘೋರ ದುರಂತಕ್ಕೆ ಸಾಕ್ಷಿಯಾಗಿದೆ. ಜಿಂಬಾಬ್ವೆಯ ಚಿನ್ನದ ಗಣಿಯೊಂದರಲ್ಲಿ ಭೀಕರ ಸ್ಫೋಟ ಸಂಭವಿಸಿ ಸುಮಾರು 40 ಮಂದಿ ಗಣಿಯ ಒಳಗೆ ಸಿಲುಕಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. 2 ದಿನಗಳಿಂದಲೂ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ, ಆದರೆ ಈವರೆಗೂ 40 ಜನರ ಸುಳಿವು ಸಿಕ್ಕಿಲ್ಲ. ಈ ನಡುವೆ ಪ್ರವಾಹ ಕಾರ್ಯಾಚರಣೆಗೆ ಅಡ್ಡಿಯಾಗಿದ್ದು, 40 ಜನರ ಜೀವ ಉಳಿಸುವುದೇ ಸವಾಲಾಗಿದೆ.
ಇದೀಗ 40 ಜನರು ಸಿಲುಕಿರುವ ಗಣಿಯನ್ನು ಅಕ್ರಮ ಗಣಿ ಎನ್ನಲಾಗಿದ್ದು, ಯಾವುದೇ ಮುಂಜಾಗ್ರತೆ ಕೈಗೊಳ್ಳದೆ ಗಣಿಗಾರಿಕೆ ನಡೆಸಿದ್ದೇ ದುರಂತಕ್ಕೆ ಕಾರಣವಾಗಿದೆ. ಜಿಂಬಾಬ್ವೆ ರಾಜಧಾನಿ ಹಾರಾರೆಯಿಂದ ಸುಮಾರು 70 ಕಿ.ಮೀ. ದೂರದಲ್ಲಿರುವ ಚಿನ್ನದ ಗಣಿಯಲ್ಲಿ 2 ದಿನಗಳ ಹಿಂದೆ ಭೀಕರ ಸ್ಫೋಟ ಸಂಭವಿಸಿತ್ತು. ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರೂ 40 ಜನರ ಸುಳಿವು ಇನ್ನೂ ಸಿಗುತ್ತಿಲ್ಲ. ತಮ್ಮವರನ್ನು ಕಾಣದೆ ಸಂತ್ರಸ್ತರ ಕುಟುಂಬಸ್ಥರು ಕಾರ್ಯಾಚರಣೆ ಸ್ಥಳದಲ್ಲೇ ಕಣ್ಣೀರು ಹಾಕುತ್ತಿದ್ದಾರೆ.

ಎಷ್ಟು ಜನ ಇದ್ದರು ಎಂಬುದೇ ಗೊತ್ತಿಲ್ಲ..!
ಮೊದಲೇ ಅಕ್ರಮ ಗಣಿಗಾರಿಕೆ, ಪರಿಸ್ಥಿತಿ ಹೀಗಿರುವಾಗ ಅಲ್ಲಿ ಎಷ್ಟು ಜನ ಕೆಲಸ ಮಾಡುತ್ತಿದ್ದರು ಎಂಬುದರ ಬಗ್ಗೆ ಗಣಿ ಲೂಟಿಕೋರರು ಲೆಕ್ಕ ಇಡುವುದಿಲ್ಲ. ಹೀಗಾಗಿ ಗಣಿಯ ಒಳಗೆ ಎಷ್ಟು ಜನ ಸಿಲುಕಿದ್ದಾರೆ ಎಂಬುದೇ ಯಕ್ಷಪ್ರಶ್ನೆಯಾಗಿದೆ. ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದು, ಪರಿಹಾರ ಕಾರ್ಯಾಚರಣೆಯನ್ನ ಮುಂದುವರಿಸಿದ್ದಾರೆ. ಆದರೆ ದಿಢೀರ್ ಪ್ರವಾಹ ಬಂದಿದ್ದರಿಂದ, ಗಣಿಯ ಮೇಲಿನ ಭಾಗ ಒದ್ದೆಯಾಗಿದ್ದು, ಈ ಪರಿಸ್ಥಿತಿಯಲ್ಲಿ ಕಾರ್ಯಾಚರಣೆ ನಡೆಸಿದರೆ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ತಾತ್ಕಾಲಿಕವಾಗಿ ಕಾರ್ಯಾಚರಣೆ ನಿಲ್ಲಿಸಲಾಗಿದೆ.
ತುತ್ತು ಅನ್ನಕ್ಕೂ ನರಳಾಡುವ ಜನ
ಇತರ ರಾಷ್ಟ್ರಗಳಂತೆ ಜಿಂಬಾಬ್ವೆ ತನ್ನ ಕಾರ್ಮಿಕರನ್ನು ನಡೆಸಿಕೊಳ್ಳುವುದಿಲ್ಲ. ಏಕೆಂದರೆ ಅಲ್ಲಿನ ಆರ್ಥಿಕ ಪರಿಸ್ಥಿತಿ ಮಣ್ಣು ತಿಂದಿದೆ. ಒಂದೊಂದು ಪೈಸೆಗೂ ಲೆಕ್ಕ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗೆ ಹೇಳುವುದಾದರೆ ಅಲ್ಲಿ ದುಡ್ಡಿಗೆ ಬೆಲೆಯೇ ಇಲ್ಲ. ಡಾಲರ್ ಎದುರು ಕೋಟ್ಯಂತರ ಜಿಂಬಾಬ್ವೆ ಕರೆನ್ಸಿ ನೀಡಬೇಕಿದೆ. ಹೀಗಾಗಿ ಅಲ್ಲಿ ಭಾರಿ ಪ್ರಮಾಣದ ನಿರುದ್ಯೋಗ ಇದ್ದು, ಜನರು ಕೆಲಸ ಸಿಕ್ಕರೆ ಸಾಕಪ್ಪ ಎನ್ನುತ್ತಿದ್ದಾರೆ. ಒಂದೊಂದು ತುತ್ತು ಅನ್ನಕ್ಕೂ ಲೆಕ್ಕಾಚಾರ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಜಿಂಬಾಬ್ವೆಯಲ್ಲಿ ಕಾರ್ಮಿಕರ ಜೀವಕ್ಕೆ ಭದ್ರತೆ ಇಲ್ಲ. ಈ ಹಿಂದೆಯೂ ಹಲವಾರು ಗಣಿ ದುರಂತಗಳು ಸಂಭವಿಸಿದ್ದು, ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ.

ಕುಡಿಯಲು ನೀರು ಸಿಗುತ್ತಿಲ್ಲ
ಒಂದೆಡೆ ಹವಾಮಾನ ವೈಪರಿತ್ಯ, ಮತ್ತೊಂದೆಡೆ ಜಿಂಬಾಬ್ವೆ ಆರ್ಥಿಕತೆ ಧೂಳಿಪಟವಾಗಿರುವುದು ಜನರನ್ನು ಕಂಗಾಲಾಗಿಸಿದೆ. ಕನಿಷ್ಠ ಕುಡಿಯುವ ನೀರಿಗೂ ಪರದಾಡುತ್ತಿದ್ದಾರೆ. ಸರ್ಕಾರಕ್ಕೆ ಈ ಬಗ್ಗೆ ಕಾಳಜಿ ಇದ್ದಂತೆ ಕಾಣುತ್ತಿಲ್ಲ. ಹೀಗಾಗಿಯೇ ಅಡ್ಡದಾರಿಯಲ್ಲಿ ದುಡ್ಡು ಮಾಡಲು ಜನರು ಅಲ್ಲಿನ ಗಣಿ ಸಂಪತ್ತನ್ನು ದೋಚುವ ಕೆಲಸಕ್ಕೆ ಮುಂದಾಗುತ್ತಿದ್ದಾರೆ. ಇದು ಹಲವು ದುರಂತಗಳಿಗೆ ಕಾರಣವಾಗುತ್ತಿದೆ. ಜನರು ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳಲು ಜೀವದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ. ಇನ್ನು ಕುಡಿಯಲು ನೀರು ಬೇಕೆಂದರೆ ಹತ್ತಾರು ಕಿಲೋಮೀಟರ್ ಕ್ರಮಿಸಬೇಕು. ಅಲ್ಲಿ ಸಿಗುವ ಕೊಳಕು ನೀರನ್ನೇ ಕುಡಿಯಬೇಕು, ಬಳಸಬೇಕು. ವಿಶ್ವಸಂಸ್ಥೆ ಕೂಡ ಜಿಂಬಾಬ್ವೆ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಶ್ರೀಮಂತ ರಾಷ್ಟ್ರಗಳ ನೆರವಿಗೆ ಮೊರೆಯಿಟ್ಟಿದೆ.












Click it and Unblock the Notifications