ಯಮುನಾ ನದಿಯ ಮಾಲಿನ್ಯದ ಪ್ರಮಾಣ ದ್ವಿಗುಣ, ಕಾರಣವೇನು?
ನವದೆಹಲಿ, ಜನವರಿ 16: ಕಳೆದ ಎಂಟು ವರ್ಷಗಳಲ್ಲಿ ದೆಹಲಿಯ ಯಮುನಾ ನದಿಯ ಮಾಲಿನ್ಯದ ಹೊರೆ ದ್ವಿಗುಣಗೊಂಡಿದೆ ಎಂದು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ (ಡಿಪಿಸಿಸಿ) ದ ಅಂಕಿ ಅಂಶಗಳನ್ನು ಉಲ್ಲೇಖಿಸಿ ಲೆಫ್ಟಿನೆಂಟಲ್ ಕಚೇರಿಯ ಮೂಲಗಳು ಸೋಮವಾರ ಮಾಹಿತಿ ತಿಳಿಸಿವೆ.
ಡಿಪಿಸಿಸಿ ಮತ್ತು ದೆಹಲಿ ಜಲ ಮಂಡಳಿ (ಡಿಜೆಬಿ) ಶನಿವಾರ ನದಿಯಲ್ಲಿನ ಮಾಲಿನ್ಯದ ಕುರಿತು ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರಿಗೆ ವರದಿಯನ್ನು ನೀಡಿತು. ಯಮುನಾ ನದಿ ಸ್ವಚ್ಛತೆಗಾಗಿ ಜನವರಿ 9ರಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ರಚಿಸಿದ್ದ ಉನ್ನತ ಮಟ್ಟದ ಸಮಿತಿಯ ಮೊದಲ ಸಭೆಗೂ ಮುನ್ನ ನೆಲದ ಪರಿಸ್ಥಿತಿಯನ್ನು ಅವಲೋಕಿಸಲು ಎಲ್ಜಿ ಸಭೆ ಕರೆದಿದ್ದರು. ಸಮಿತಿಯ ನೇತೃತ್ವ ವಹಿಸುವಂತೆ ಹಸಿರು ನ್ಯಾಯಮಂಡಳಿ ದೆಹಲಿ ಎಲ್ಜಿಗೆ ಮನವಿ ಮಾಡಿತ್ತು.
2014ರಿಂದ ಯಮುನಾ ನದಿ ದೆಹಲಿಯನ್ನು ಪ್ರವೇಶಿಸುವ ಪಲ್ಲಾದಲ್ಲಿ (ಪ್ರತಿ ಲೀಟರ್ಗೆ 2 ಮಿಲಿಗ್ರಾಂ) ಜೈವಿಕ ಆಮ್ಲಜನಕದ ಬೇಡಿಕೆ ಮಟ್ಟಗಳು ಕಡಿಮೆ ಮಿತಿಯಲ್ಲಿಯೇ ಇವೆ ಎಂದು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಯ ಅಂಕಿ ಅಂಶಗಳು ತಿಳಿಸಿವೆ. ಜೈವಿಕ ಆಮ್ಲಜನಕದ ಬೇಡಿಕೆ ನೀರಿನ ಗುಣಮಟ್ಟವನ್ನು ನಿರ್ಣಯಿಸಲು ಒಂದು ಪ್ರಮುಖ ನಿಯತಾಂಕವಾಗಿದೆ. ಏರೋಬಿಕ್ ಸೂಕ್ಷ್ಮಾಣು ಜೀವಿಗಳು ನೀರಿನಲ್ಲಿ ಇರುವ ಸಾವಯವ ವಸ್ತುಗಳನ್ನು ಕೊಳೆಯಲು ಅಗತ್ಯವಿರುವ ಆಮ್ಲಜನಕದ ಪ್ರಮಾಣವಾಗಿದೆ. ಜೈವಿಕ ಆಮ್ಲಜನಕದ ಬೇಡಿಕೆ ಮಟ್ಟಗಳು ಪ್ರತಿ ಲೀಟರ್ಗೆ 3 ಮಿಲಿಗ್ರಾಮ್ಗಿಂತ ಕಡಿಮೆ (mg/l) ಉತ್ತಮವೆಂದು ಪರಿಗಣಿಸಲಾಗಿದೆ.

ನದಿಯು ದೆಹಲಿಯಿಂದ ಹೊರಟು ಉತ್ತರ ಪ್ರದೇಶವನ್ನು ಪ್ರವೇಶಿಸುವ ಓಖ್ಲಾ ಬ್ಯಾರೇಜ್ನಲ್ಲಿ ಜೈವಿಕ ಆಮ್ಲಜನಕದ ಬೇಡಿಕೆ ಮಟ್ಟವು 2014 ರಲ್ಲಿ ಪ್ರತಿ ಲೀಟರ್ಗೆ 32 ಮಿಲಿಗ್ರಾಂನಿಂದ 2023 ರಲ್ಲಿ ಪ್ರತಿ ಲೀಟರ್ಗೆ 56 ಮಿಲಿಗ್ರಾಂಗೆ ಏರಿಕೆಯಾಗಿದೆ ಎಂದು ಅಧಿಕೃತ ಮೂಲವು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ ಡೇಟಾವನ್ನು ಉಲ್ಲೇಖಿಸಿದೆ.
ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ ಪ್ರತಿ ತಿಂಗಳು ಪಲ್ಲಾ, ವಜೀರಾಬಾದ್, ಐಎಸ್ಬಿಟಿ ಸೇತುವೆ, ಐಟಿಒ ಸೇತುವೆ, ನಿಜಾಮುದ್ದೀನ್ ಸೇತುವೆ, ಓಖ್ಲಾ ಬ್ಯಾರೇಜ್ನಲ್ಲಿರುವ ಆಗ್ರಾ ಕಾಲುವೆ, ಓಖ್ಲಾ ಬ್ಯಾರೇಜ್ ಮತ್ತು ಅಸ್ಗರ್ಪುರದಲ್ಲಿ ನದಿ ನೀರಿನ ಮಾದರಿಗಳನ್ನು ಸಂಗ್ರಹಿಸುತ್ತದೆ. ಕಳೆದ ಎಂಟು ವರ್ಷಗಳಲ್ಲಿ ನದಿಯಲ್ಲಿನ ಮಾಲಿನ್ಯದ ಹೊರೆ ದ್ವಿಗುಣಗೊಂಡಿದೆ ಎಂದು ಮೂಲಗಳು ತಿಳಿಸಿವೆ.

2014 ರಿಂದ ವರ್ಷದಿಂದ ವರ್ಷಕ್ಕೆ ಮಾಲಿನ್ಯದ ಹೆಚ್ಚಳವು 2019 ರಿಂದ ಸ್ಥಿರವಾಗಿದೆ. ಯಮುನಾ ಕಾಲುವೆಯ ದುರಸ್ತಿಯನ್ನು ಕೈಗೊಳ್ಳುವಾಗ ಹರಿಯಾಣವು ಹತ್ನಿಕುಂಡ್ ಬ್ಯಾರೇಜ್ನಿಂದ ಯಮುನಾ ನದಿಗೆ ಹೆಚ್ಚಿನ ನೀರನ್ನು ಬಿಟ್ಟಾಗ ಮಾಲಿನ್ಯಕಾರಕಗಳು ಹೆಚ್ಚಳವಾಗಲು ಕಾರಣವಾಯಿತು ಎಂದು ತಿಳಿದು ಬಂದಿದೆ.












Click it and Unblock the Notifications